Sunday, December 26, 2010

ಗವಿರಂಗಾಪುರ

ಕೆಲವು ವಾರಗಳ ಹಿಂದೆ ಈ ಬೆಂಗಳೂರೆಂಬ ಮಹಾನಗರವನ್ನು ಬಿಟ್ಟು, ಬಯಲುಸೀಮೆಯ ಹಳ್ಳಿಯೊಂದಕ್ಕೆ ಹೋಗಿದ್ದೆ. ನಮ್ಮ ಮನೆದೇವ್ರುಎಂದು ಪೂಜಿಸುವ ಗವಿರಂಗನಾಥಸ್ವಾಮಿಯ ಮೂಲ ನೆಲೆ, ದೇವಸ್ಥಾನವಿರುವುದು ಗವಿರಂಗಾಪುರದಲ್ಲಿ. ಇಲ್ಲಿನ ಬೆಟ್ಟದ ಮೇಲಿರುವ ಗುಹೆ/ಗವಿಯಲ್ಲಿ ರಂಗ ದೇವರ ಮೂರ್ತಿ ಇರುವುದರಿಂದ ಈ ಹಳ್ಳಿಗೆ ಗವಿರಂಗಾಪುರ ಎಂಬ ಹೆಸರು. ಗವಿಯಲ್ಲಿರುವ ಈ ಮೂರ್ತಿ ಸ್ವಾಭಾವಿಕವಾದ ಉದ್ಭವ ಮೂರ್ತಿ ಎಂಬ ಪ್ರತೀತಿ. ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಎರಡನೇ ಅವತಾರವಾದ, ಕೂರ್ಮಾವತಾರದ (ಆಮೆ ಅವತಾರ) ಪ್ರತಿರೂಪ ಈ ಗವಿರಂಗ.


ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿರುವ ಬಸವನ ಮೂರ್ತಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿತ್ತುಎಂಬ ನಂಬಿಕೆಯಂತೆ, ಇಲ್ಲಿನ ಗವಿರಂಗ ದೇವರ ಮೂರ್ತಿ ಸಹ ಬೆಳೆಯುತ್ತಿದೆ ಎಂಬ ನಂಬಿಕೆ ಇದೆ. ಇಲ್ಲಿನ ಬಹು ಮುಖ್ಯ ವಿಶೇಷತೆ ಎಂದರೆ, ದೇವರ ಬಳಿ ಭಕ್ತರು ’ಹೂ ’ಕೇಳುವ ರೂಢಿ. ಭಕ್ಥರ ಹಾಗೂ ದೇವರ ನಡುವೆಮಾನಸಿಕೆ ಸ್ಥಿತಿಯಲ್ಲಿ ನಡೆಯುವ ಮಾತುಕತೆ. ತಮ್ಮ ಯಾವುದಾದರು ಹೊಸ ಕೆಲಸಗಳನ್ನು ಪ್ರಾರಂಭ ಮಾಡುವ ಮೊದಲುಇಲ್ಲಿಗೆ ಬರುವ ಭಕ್ತರು, ಆ ಕೆಲಸದಿಂದ ತಮಗಾಗುವ ಒಳಿತು, ಕೆಡಕುಗಳನ್ನು ತಿಳಿಯಲು ದೇವರ ಮುಂದೆ ಬೇಡಿಕೆ ಇಟ್ಟು, ಗಂಟೆ ಗಂಟೆಗಟ್ಟಲೆ ಹೂವಿಗಾಗಿ ಕಾಯುತ್ತಾರೆ. ದೇವರ ತನ್ನ ಬಲಗಡೆಯಿಂದ ಹೂವನ್ನು ಕರುಣಿಸಿದರೆ, ಕೆಲಸ ಆಗುವುದೆಂದು, ಒಳಿತೆಂದು, ಎಡಗಡೆಯಿಂದ ಹೂವನ್ನು ಕರುಣಿಸಿದರೆ, ಕೆಲಸ ಆಗದೆಂದು ನಂಬಿಕೆ. ಹೀಗೆ ಭಕ್ತರು ದೇವರ ಬಳಿ ಹೂ ಕೇಳುವುದನ್ನು ನೋಡುವುದೆ ಒಂದು ರೋಚಕತೆ, ಹಾಗೆ ಹೂ ಕೇಳಿ ಜೀವನದಲ್ಲಿ ಒಳಿತು, ಕೆಡುಕುಗಳನ್ನು ಕಂಡವರ ಅನುಭವಗಳನ್ನು ಕೇಳಿದರೆ ದೇವರಲ್ಲಿ ಭಯ-ಭಕ್ತಿ ಮೂಡದೇ ಇರುವುದಿಲ್ಲ.ಏನಾದರಾಗಲಿ, ಆ ದೇವರನ್ನು ಬೆಣ್ಣೆ ಅಲಂಕಾರದಲ್ಲಿ ಹಾಗೂ ಹೂವಿನ ಅಲಂಕಾರದಲ್ಲಿ ನೋಡುವುದೇ ಒಂದು ಖುಷಿ.
ಈ ಗವಿರಂಗಾಪುರ ಇರುವುದು, ಚಿತ್ರದುರ್ಗ ಜಿಲ್ಲೆಯ, ಹೊಸದುರ್ಗ ತಾಲ್ಲೂಕಿನಲ್ಲಿ. ಗವಿರಾಂಗಪುರ ಬಯಲುಸೀಮೆಗೆಉದಾಹರಣೆಯಂತಿರುವ ಒಂದು ಚಿಕ್ಕ ಹಳ್ಳಿ. ಈ ಹಳ್ಳಿಯನ್ನು ನಾನು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿದ್ದೇನೆ, ಈ ಜಾಗದ ಬಗ್ಗೆ ನನ್ನ ಹಿರಿಯರು ಹೇಳಿರುವುದನ್ನುಕೇಳಿದ್ದೇನೆ. ನೆನಪಿನಲ್ಲಿ ಉಳಿಯುವಂತಹ ನನ್ನ ಜೀವನದ ಕೆಲವು ದಿನಗಳನ್ನು ಅಲ್ಲಿ ಕಳೆದಿದ್ದೇನೆ. ಆದರೆ, ಅಂದಿಗೂ, ಇಂದಿಗೂ ಆಗಿರುವ ಹಲವು ಬದಲಾವಣೆಗಳನ್ನ ನೆನೆಸಿಕೊಂಡರೆ ಯಾಕೋ ಒಂದು ರೀತಿಯ ಕಸಿವಿಸಿ ಉಂಟುಮಾಡುತ್ತದೆ; ಕೆಲವೊಮ್ಮೆ ಆ ಜಾಗದಲ್ಲಿನ ಬದಲಾವಣೆಯ ಬಗ್ಗೆಯಾದರೆ, ಇನ್ನೊಮ್ಮೆ ನಮ್ಮ ಜೀವನದಲ್ಲಿನ ಬದಲಾವಣೆಗಳ ಬಗ್ಗೆ.


ದೇವರ ದರ್ಶನಕ್ಕೆ ದೂರದ ಊರುಗಳಿಂದ ಬರುವವರಿಗಾಗಿಯೇಹಲವು ಧರ್ಮ ಛತ್ರಗಳಿವೆ. ಇಲ್ಲಿನ ಯಾವುದೇ ಛತ್ರಗಳಲ್ಲಿ ಇದ್ದರೂ ಒಂದೇ ರೀತಿಯ ಅನುಭವ. ಹೊರಗೆಬಣ ಬಣ ಸುಡುವ ಬಿಸಿಲು, ಅರ್ಧ ಗಂಟೆಗೊಮ್ಮೆ ಬೀಸುವ ಗಾಳಿ ಕೂಡ ಬಿಸಿ, ಬಿಸಿ, ಬೆಚ್ಚಗೆ, ಬಿಸಿಲಿಂದ ದಣಿದ ದೇಹಕ್ಕೆ,ಸುತ್ತಲಿನ ನಿಶ್ಯಬ್ದ, ಪ್ರಶಾಂತವಾದ ವಾತಾವರಣ ಪೂರಕವಾಗಿ ನಿದ್ದೆಯ ಮಂಪರು ಹತ್ತುವಷ್ಟರಲ್ಲಿಯೇ, ದೂರದಿಂದಲೇ ಧೂಳೆಬ್ಬಿಸಿ ಕೊಂಡು, ದೊಡ್ಡದಾಗಿ ಹಾರ್ನ್ ಮಾಡುತ್ತಾ ಬಂದು ನಿಲ್ಲುವ ಖಾಸಗಿ ಬಸ್ಸುಗಳು, ಎಬ್ಬಿಸಿದ ಧೂಳು ಕರಗುವಮುಂಚೆಯೇ, ಒಂದಷ್ಟು ಜನರನ್ನು ಇಳಿಸಿ, ಮತ್ತೊಂದಷ್ಟು ಜನರನ್ನು ಹತ್ತಿಸಿಕೊಂಡು ಅದೇ ದೊಡ್ಡದಾಗಿ ಹಾರ್ನ್ ಮಾಡುತ್ತಾ,ಮತ್ತೆ ಧೂಳೆಬ್ಬಿಸಿಕೊಂಡು ಕ್ಷಣಾರ್ಧದಲ್ಲಿ ಹೊರಟುಬಿಡುತ್ತವೆ. ಮತ್ತದೇ ನಿಶ್ಯಬ್ದ, ಪ್ರಶಾಂತ ವಾತಾವರಣ...ನಿದ್ದೆಯ ಮಂಪರಿನಲ್ಲಿದ್ದವರಿಗೆ, ಬಸ್ಸು ಬಂದು ಹೋಗಿದ್ಡು ಒಂದು ಭ್ರಮೆಯಂತೆ, ಕನಸಂತೆ ಆಗಿಬಿಡುತ್ತಿತ್ತು. ನಗರ ಬದುಕಿನ ಧಾವಂತ, ಗಡಿಬಿಡಿ ಈ ಪರಿಸರದಲ್ಲಿ ಇಲ್ಲದೇ ಇರುವುದರಿಂದ, ಇಲ್ಲಿ ಸಮಯವೇ ಸರಿಯುವುದಿಲ್ಲ. ಸಮಯವೇ ನಿಂತುಹೋಗಿದೆಯೇ ಎಂಬ ಅನುಮಾನ ಕಾಡುತ್ತಿತ್ತು..


ಆದರೆ, ಇತ್ತೀಚಿನ ಕೆಲವು ಬೆಳವಣಿಗೆಗಳ ಬಗ್ಗೆ ಬರೆಯಲೇಬೇಕು. ಇತ್ತೀಚೆಗೆ ಹೆಚ್ಚಾಗಿರುವ ಭಕ್ತ ಜನರಿಂದ ಇಲ್ಲಿಗೆ ಬರುತ್ತಿರುವ ಕಾಣಿಕೆಗಳೂ ಹೆಚ್ಚಾಗಿರಬೇಕು. ದೇವಸ್ಥಾನದ ಜೀರ್ಣೋದ್ದಾರದಹೆಸರಿನಲ್ಲಿ ದೇವಸ್ಥಾನಕ್ಕೆ ಹೈ-ಟೆಕ್ ಟಚ್ ನೀಡಲಾಗುತ್ತಿದೆ. ಹೀಗಾಗಿ, ಮೊದಲಿನ ಹಾಗೆ ಗವಿಯೊಳಗಿದ್ದ ಆ ರಂಗನನ್ನು ನೋಡುವ ಆನಂದ, ಈಗ ಕಣ್ಮರೆಯಾಗುತ್ತಿದೆ ಎನಿಸುತ್ತಿದೆ. ದೇವರ ಗರ್ಭಗುಡಿಯನ್ನು ಕಬ್ಬಿಣದ ಬಾಗಿಲುಗಳಿಂದ ಮುಚ್ಚುವುದು ನನಗೆ ಬ್ಯಾಂಕ್ ಗಳಲ್ಲಿನ ಲಾಕರ್ ನಂತೆ ಕಾಣುತ್ತದೆ. ಅದರ ಜೊತೆಗೇ, ಮನುಷ್ಯನನ್ನು ಸೃಷ್ಟಿಸಿದ ದೇವರೂ ಕೂಡ ಇಂದು ಮನುಷ್ಯನ ಅಂಕುಶದಲ್ಲಿದ್ದಾನಾ ಎಂಬ ಅನುಮಾನವು ಉಂಟಾಗುತ್ತದೆ. ಅಲ್ಲಿನ ವಾತಾವರಣ ವಾಣಿಜ್ಯೀಕರಣವಾಗುತ್ತಿದೆಯೇ ಎಂಬ ಸಂಶಯ ಬೇಸರ ತರುತ್ತಾದರೂ, ತಳ್ಳಿ ಹಾಕುವಂತಿಲ್ಲ. ಅಲ್ಲಿನ ಕಚ್ಚಾ ಮಣ್ಣು ರಸ್ತೆ ಈಗ ಆಗಲವಾಗಿ, ಡಾಂಬರೀಕರಣಗೊಂಡಿದೆ, ಹೆಚ್ಛಿನ ಸ್ಠಳೀಯರ ಬಳಿ ಬೈಕ್ ಗಳಿವೆ, ಹಲವರು ಆಟೋ ಓಡಿಸುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಆಲ್ಲಿನ ಆಟೋ ಸ್ಟ್ಯಾಂಡ್ ನಲ್ಲಿ ಕೇಳುವುದು ಸಹ ಹಿಂದಿ ಚಿತ್ರಗೀತೆಗಳೇ..ಈ ಆಧುನೀಕರಣದ ಬಗ್ಗೆ ನನ್ನ ವಿರೋಧವಿಲ್ಲ, ಆದರೆ, ಈ ರೀತಿಯ ಆಧುನೀಕರಣದ ಅವಶ್ಯವಿದೆಯಾ..?! ಬಸ್ ಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ನನಗೆ, ಅಲ್ಲಿನ ವಾತಾವರಣಕ್ಕು, ಬೆಂಗಳೂರಿನಹೊರವಲಯದ ಬಡಾವಣೆಯೊಂದಕ್ಕು ಯಾವುದೇ ವ್ಯತ್ಯಾಸ ಕಾಣಿಸಲಿಲ್ಲ...ಆ ಹಳ್ಳಿಯಲ್ಲಿ ಬೆಟ್ಟಗುಡ್ಡವಿದೆ ಎಂಬುದನ್ನು ಹೊರತುಪಡಿಸಿ..!!

ಅಷ್ಟೇ ಅಲ್ಲದೆ, ನಮ್ಮಲ್ಲೂ ಹಲವು ಬದಲಾವಣೆಗಳಾಗಿವೆ. ಮೊದಲೆಲ್ಲಾ ಈ ಹಳ್ಲಿಗೆ, ದೇವರ ದರ್ಶನಕ್ಕೆ ಹೋಗಬೇಕಾದಾಗ,ನಾವೆಲ್ಲ ಕುಟುಂಬ ಸಮೇತ ಹೋಗುತ್ತಿದ್ದೆವು. ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅತೆ, ಮಾವ,ಅವರೆಲ್ಲರ ಮಕ್ಕಳು, ಹಿರಿಯರ ಸ್ನೇಹಿತರು, ಹೀಗೆ ಬಹಳ ಜನ ಒಟ್ಟಿಗೆ, ವ್ಯಾನೊ, ಬಸ್ಸೋ ಮಾಡಿಕೊಂಡು ಹೋಗುತ್ತಿದ್ದೆವು.ಮೂರು - ನಾಲ್ಕು ದಿನಗಳ ಕಾಲ ಒಂದು ರೀತಿ ಹಬ್ಬದ ವಾತಾವರಣ ಇರುತ್ತಿತ್ತು. ಆದರೆ ಇತ್ತೀಚೆಗೆ ಹಾಗೆ ನಾವೆಲ್ಲ ಒಟ್ಟಿಗೆ ಹೋದ ನೆನಪೇ ಇಲ್ಲ..!! ಅವರವರ ಅನುಕೂಲಕ್ಕೆ ತಕ್ಕಂತೆ ಹೋಗಿ ಬರುವುದು ರೂಢಿಯಾಗಿಬಿಟ್ಟಿದೆ. ಹಾಗೆ ಹೋದರೂ, ಒಂದು ರಾತ್ರಿ, ಎರಡು ಹಗಲಿಗಿಂತ ಹೆಚ್ಚಾಗಿ ಉಳಿಯುವುದಿಲ್ಲ. ಹಲವು ಬಾರಿ ಒಂದೇ ದಿನದಲ್ಲಿ ಗಡಿಬಿಡಿಯಿಂದ ಹೋಗಿ ಬರುವುದೂ ಉಂಟು...ಕಾಲ ಕಳೆದಂತೆ, ಕುಟುಂಬದ/ಮನುಷ್ಯ ಸಂಬಂಧಗಳಲ್ಲಿ ಉಂಟಾಗಿರುವ ಬಿರುಕುಗಳಿಂದ ಅಂದಿನ ಆತ್ಮೀಯತೆ ಇಂದಿಗೆ ಉಳಿದಿರುವಂತಿಲ್ಲ ಅಥವಾ ಉಳಿಸಿಕೊಳ್ಳಲ್ಲು ನಮಗೇ ಮನಸ್ಸಿಲ್ಲವೋ, ಸಮಯವಿಲ್ಲವೋ..? ಗೊತ್ತಿಲ್ಲ......















Sunday, November 14, 2010

ನವೆಂಬರ್ ೧೩



ಸಂಗೀತಾರವರು ನನಗೆ ಪರಿಚಯವಾಗಿದ್ದು ೩ ವರುಷಗಳ ಹಿಂದೆ; ನಾನು ಹೊಸದಾಗಿ ಕೆಲಸಕ್ಕೆ ಸೇರಿಕೊಂಡಾಗ. ನಾನು ಸೇರಿಕೊಂಡ ಟೀಮ್ ಕೆಲಸ ಮಾಡುವುದು ನೈಟ್ ಶಿಫ್ಟ್ ನಲ್ಲಿ. ಹೊಸಬರಾಗಿದ್ದ ನಮಗೆ ನೈಟ್ ಶಿಫ್ಟ್ ಬಗ್ಗೆ ಇರೊ ಆತಂಕವನ್ನು ದೂರಮಾಡಲಿಕ್ಕೆ ಅವರು ಮೊದಲ ಸಲ ನಮ್ಮ (ನಾನು ಮತ್ತು ನನ್ನೊಂದಿಗೆ ಸೇರಿದ ಇತರರು) ಜೊತೆ ಮಾತಾಡಿದ್ದರು. ಹಾಗೆ ಮಾತಾಡ್ತಾ, ಕೆಲಸದ ಬಗ್ಗೆ, ಟೀಮ್ ಬಗ್ಗೆ, ಟೀಮ್ ನಲ್ಲಿರೋ ಎಲ್ಲರ ಸಹಕಾರದ ಬಗ್ಗೆ, ರಾತ್ರಿ ಸಮಯದಲ್ಲಿ ಜೋರಾಗಿ ಹಾಡುಗಳನ್ನು ಪ್ಲೇ ಮಾಡುತ್ತಾ, ಒಬ್ಬರಿಗೊಬ್ಬರು ತಮಾಷೆ ಮಾಡುತ್ತಾ ಕೆಲಸ ಮಾಡೊದರ ಬಗ್ಗೆ ಹೇಳಿ ನಮ್ಮ ಆತಂಕವನ್ನ ದೂರ ಮಾಡಿದ್ದರು. ಕಂಪನಿಗೆ ಹೋಗೊ ಕ್ಯಾಬ್ ನಲ್ಲಿ ನಾನು ಮತ್ತು ಅವರು, ಇಬ್ಬರೆ ಇದ್ದರೂ ನಾನು ಅವರ ಜೊತೆ ಮಾತೇ ಆಡುತ್ತಿರಲಿಲ್ಲ. ಅವರೇ ಎಷ್ಟೋ ಸಲ ನನ್ನನ್ನ ಮಾತಿಗೆ ಎಳೆಯುತ್ತಿದ್ದರು ಆದರೆ, ಅವರೇ ನನ್ನ ಟ್ರೈನರ್ ಎಂಬ ಭಯದಿಂದ ಅವರು ಕೇಳಿದಕ್ಕಷ್ಟೇ ಉತ್ತರಿಸಿ, ನಾನು ಸುಮ್ಮನಾಗಿ ಬಿಡುತ್ತಿದ್ದೆ. ಅಲ್ಲದೆ, ನನ್ನ ಬಡ ಇಂಗ್ಲೀಷ್ ಸಹ ಇದಕ್ಕೆ ಒಂದು ಕಾರಣವಾಗಿತ್ತು.


ನಾನು ಸೇರಿಕೊಂಡ ಟೀಮ್ ನಲ್ಲಿ, ಅವರು ಅದಾಗಲೇ ೨೧/೨ ವರುಷದಿಂದ ಇದ್ದರು. ನನಗೆ ಮತ್ತು ನನ್ನ ಜೊತೆ ಕೆಲಸಕ್ಕೆ ಸೇರಿದ ಹೊಸಬರಿಗೆ ಅವರೇ ಟ್ರೈನರ್. ನಮಗೆ ಕೆಲಸದ ಬಗ್ಗೆ ತಿಳಿಸಿಕೊಟ್ಟಿದ್ದು, ಕೆಲಸ ಮಾಡುವುದನ್ನು ಕಲಿಸಿಕೊಟ್ಟಿದ್ದು ಸಂಗೀತಾಅವರೇ..!! ಇವತ್ತು ನನ್ನ ಟೀಮಿಗೆ ಹೊಸದಾಗಿ ಬರುವವರಿಗೆ ನಾನು ಟ್ರೈನ್ ಮಾಡುತ್ತಿದ್ದೇನೆಂದರೆ ಅದಕ್ಕೆ ಅವರೇ ಕಾರಣ. ಕೆಲಸದ ವಿಷಯದಲ್ಲಿ ಅಷ್ಟೇ ಅಲ್ಲದೆ, ಇತರ ಹಲವು ವಿಷಯಗಳ ಬಗ್ಗೆ ಅವರೊಂದಿಗೆ ಅನೇಕ ಸಲ ಚರ್ಚಿಸಿದ್ದೇನೆ. ನಿಧಾನವಾಗಿ, ಶಾಂತಿಯಿಂದ ಕುಳಿತು ಯೋಚಿಸಿದರೆ, ಅವರ ಹೇಳುವುದು ನಿಜವೆನಿಸುತ್ತದೆ. ಆದರೆ, ಆತುರದಲ್ಲಿರುವವರು, ಇವರ ಮಾತುಗಳನ್ನು ತಪ್ಪಾಗಿ ಭಾವಿಸಿರುವ ಸಂಗತಿಗಳಿವೆ.


ಸಂಗೀತಾ ಅವರ ಬಗ್ಗೆ ಹೇಳುವಾಗ, ಆಶಿಷ್ ಬಗ್ಗೆ ಹೇಳದೆ ಹೋದರೆ ಮಾತು ಪೂರ್ಣ ಆಗೊದಿಲ್ಲ. ಆಶಿಷ್ ಮತ್ತು ಸಂಗೀತಾ ಇಬ್ಬರು ಒಂದೇ ಟೀಮ್ ಗೆ ಸೇರಿದವರು. ಆಫೀಸ್ ನ ಯಾವುದೇ ಕೆಲಸದಲ್ಲಿ ಇಬ್ಬರೂ ಒಟ್ಟಿಗೇ ಇರುತ್ತಿದ್ದರು. ಮುಂದೆ ಅವರು ಬಾಳ ಸಂಗಾತಿಗಳಾಗಿದ್ದು ಎಲ್ಲರಿಗೂ ಸಂತೋಷದ ವಿಷಯವೇ. ಆಶಿಷ್ ಮೂಲತ: ಆಗ್ರಾದವರು. ಅವರ ಮದುವೆ ನಡೆದದ್ದು ಆಗ್ರಾದಲ್ಲೇ ಮತ್ತು ಅದೇ ಕಾರಣದಿಂದ ನಾನು ವಿಶ್ವವಿಖ್ಯಾತ ತಾಜ್ ಮಹಲ್, ಆಗ್ರಾ ಕೋಟೆ, ಕೃಷ್ಣ ಜನ್ಮಸ್ಥಳ ಮಥುರೆ, ಕುತುಬ್ ಮಿನಾರ್, ರಾಜಧಾನಿ ದೆಹಲಿ ಇವೆಲ್ಲಾ ಸ್ಥಳಗಳಿಗೆ ಹೋಗಿ ಬಂದದ್ದು. ಅಲ್ಲಿವರೆಗೂ ಪುಸ್ತಕದಲ್ಲಿ, ಟಿ.ವಿ.ಯಲ್ಲಿ ನೋಡುತ್ತಾಇದ್ದ ಆ ತಾಜ್ ಮಹಲ್ ಕಟ್ಟಡವನ್ನು ಅಲ್ಲೆ, ಆಗ್ರಾದಲ್ಲೆ ಹೋಗಿ ನೋಡಿದ್ದು ಒಂದು ಅದ್ಬುತ ಅನುಭವ. ಹಾಗಾಗಿ, ನನಗೆ ಈಗಲೂ ತಾಜ್ ಮಹಲ್ ಅಂದರೆ ಯಾವುದೇ ಉತ್ಪ್ರೇಕ್ಷೆ ಇಲ್ಲದೆ ನೆನಪಾಗೋದು ಇದೇ ಸಂಗೀತಾ-ಆಶೀಷ್..!!


ಸಂಗೀತಾ ಅವರ ಬಗ್ಗೆ ಹೀಗೆ ದಿಡೀರ್ ಅಂತ ಬರೆಯೋಕೆ ಕಾರಣ, ಇದೇ ನವೆಂಬರ್ ೧೩ ಅವರ ಹುಟ್ಟುಹಬ್ಬ. ಇತ್ತೀಚೆಗಷ್ಟೇ ಮುದ್ದು ಕಂದನಿಗೆ ಜನ್ಮ ಕೊಟ್ಟಿರುವ ಅವರು ಈಗ ರಜೆಯಲ್ಲಿದ್ದಾರೆ. ಅವರು ಈಗ ಆಫೀಸಿನಲ್ಲಿ ಇರಬೇಕಿತ್ತು ಅಂತ ಎಷ್ಟೋ ಸಲ ನನಗೆ ಅನಿಸಿದೆ. ಆದಷ್ಟು ಬೇಗ ಅವರು ಆಫೀಸ್ ಗೆ ಬರಲಿ.
ಸಂಗೀತಾ ಅವರಿಗೆ, ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು. ಈ ಸಲ ನಿಮ್ಮ ಹುಟ್ಟುಹಬ್ಬಕ್ಕೆ ಮುದ್ದಾದ ಕಂದನೇ ಉಡುಗೊರೆಯಾಗಿ ಬಂದು ನಿಮ್ಮ ಖುಷಿ ಡಬಲ್ ಆಗಿದೆ. ಈ ಖುಷಿ, ಸಂತೋಷ, ನೆಮ್ಮದಿ ಯಾವಾಗಲೂ ಹೀಗೆ ಇರಲಿ... :-)

Saturday, November 6, 2010

ಕನ್ನಡವೇ ಸತ್ಯ, ಕನ್ನಡವೇ ನಿತ್ಯ...!!



"ಗುರು ಇನ್ನು ಎದ್ದಿದ್ದೀರಾ..!! ನಿದ್ದೆ ಮಾಡಿಲ್ಲ್ವ..??!!"- ಹೀಗಂತ ಗೆಳೆಯ ಕೌಶಿಕ್, ನನ್ನ ಮೆಸೇಜ್ ಒಂದಕ್ಕೆ ಪ್ರತಿಕ್ರಿಸಿದ್ದರು.


ಅದಾಗಲೇ ೧೩ ಘಂಟೆಯಾಗಿ, ೩೦ ನಿಮಿಷ ಕಳೆದಿದ್ದರಿಂದ ನವೆಂಬರ್ ೧ ಹಾಜರಾಗಿತ್ತು. ನನ್ನ ಕಂಪನಿ ಕೃಪಾಪೋಷಿತ ಲ್ಯಾಪ್ ಟಾಪ್ ನಲ್ಲಿ, ಆಫೀಸಿನ ಸಣ್ಣಪುಟ್ಟ ಕೆಲಸ ಮಾಡುತ್ತಾ, ಅಣ್ಣಾವ್ರು ಹಾಡಿರುವ ಕನ್ನಡ ನಾಡಿನ ಗೀತೆಗಳನ್ನು ಕೇಳುತ್ತಾ ಕನ್ನಡ ರಾಜ್ಯೋತ್ಸವವನ್ನು ಬರಮಾಡಿಕೊಳ್ಲುತ್ತಿದ್ದೆ. ಈ ಕೆಲಸದ ನಡುವೆ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಗೆಳೆಯರೆಲ್ಲರಿಗೂ ರಾಜ್ಯೋತ್ಸವದ ಶುಭಾಷಯ ಅಂತ ಮೆಸೇಜ್ ಮಾಡಿದ್ದೆ.

ಅದಕ್ಕೆ ಪ್ರತಿಯಾಗಿ, ಕೌಶಿಕ್ "ಗುರು ಇನ್ನು ಎದ್ದಿದ್ದೀರಾ..!! ನಿದ್ದೆ ಮಾಡಿಲ್ಲ್ವ..??!!" ಅಂತ ಉತ್ತರಿಸಿದ್ದರು.

ಕೌಶಿಕ್ ರ ಈ ಮೆಸೇಜ್ ನೋಡಿ ನನಗೆ ಅದೇನನಿಸಿತೊ,

"ನಾವೆಲ್ಲ ಎಚ್ಚರವಾಗಿರೋ ಸಮಯದಲ್ಲಿ ನಿದ್ದೆ ಮಾಡಿದಕ್ಕೆ, ಕನ್ನಡ, ಕರ್ನಾಟಕ ಇವತ್ತು ಈ ಸ್ಥಿತಿ ತಲುಪಿರುವುದು; ಕನ್ನಡ ರಾಜ್ಯೋತ್ಸವದ ಶುಭಾಷಯಗಳು" ಅಂತ ಪ್ರತಿಕ್ರಿಯಿಸಿದ್ದೆ. :-)

ಅದಕ್ಕೆ ಕೌಶಿಕ್ ಸಹ "ಹೌದು, ಹೌದು, ನೀವು ಹೇಳೊದು ಸರಿ" ಅಂತ ಹೇಳಿ ನಕ್ಕು ಸುಮ್ಮನಾಗಿದ್ದರು.

ಆದರೆ, ನನಗೆ ಅಚ್ಚರಿ ಕಾದಿದ್ದು ಮರುದಿನ ಬೆಳಿಗ್ಗೆ ವಿಜಯ ಕರ್ನಾಟಕ ಪತ್ರಿಕೆಯ ’ಬತ್ತಳಿಕೆ’ಯಿಂದ ಪ್ರಕಟವಾಗಿದ್ದ ಈ ವ್ಯಂಗ್ಯ ಚಿತ್ರ ನೋಡಿದಾಗ..!! ಕಳೆದ ರಾತ್ರಿ ನಾನು ಕೌಶಿಕ್ ಮೆಸೇಜ್ ಗೆ ಪ್ರತಿಕ್ರಿಯಿಸಿದ ರೀತಿಗೆ ಸರಿಯಾಗಿ ಹೊಂದಾಣಿಕೆಯಾಗುವಂತೆ ಈ ವ್ಯಂಗ್ಯ ಚಿತ್ರ ಪ್ರಕಟವಾಗಿತ್ತು. ಈ ಚಿತ್ರ ಗಮನಿಸಿ, ವರ್ಷಪೂರ್ತಿ ಕನ್ನಡದ ವಿಷಯದಲ್ಲಿ ನಿದ್ದೆ ಮಾಡೊ ಕನ್ನಡಿಗರು, ಕನ್ನಡ ಸರ್ಕಾರ, ಕನ್ನಡ ಸಂಸ್ಥೆಗಳು, ನವೆಂಬರ್ ಬಂತೆಂದಾಗ ಮಾತ್ರ ಎಚ್ಚರವಾಗಿ ’ಕನ್ನಡ, ಕನ್ನಡ’ ಅಂತ ಬೊಬ್ಬೆ ಹಾಕಿ, ಅರ್ಥವಿಲ್ಲದ ಆಚರಣೆ ಮಾಡಿ ನವೆಂಬರ್ ಮುಗಿವ ಹೊತ್ತಿಗೆ ಮತ್ತೆ ಮಲಗಿಬಿಡುತ್ತಾರೆ. ಹಾಗೆ ಮಲಗುವಾಗ, ಮುಂದಿನ ನವೆಂಬರ್ ಗಷ್ಟೇ ಅಲಾರ್ಮ್ ಇಡುವ ರೂಢಿ. ಅಷ್ಟು ಹೊತ್ತಿಗೆ ಕನ್ನಡ ಮತ್ತಷ್ಟು ಹಳತಾಗಿ, ಅದರ ಮೇಲೆ ಧೂಳು ಕೂತು, ಜೇಡ ಬಲೆ ಕಟ್ಟುತ್ತೆ. ಆ ಬಲೆಯಲ್ಲಿ ಸಿಲುಕಿ ಕನ್ನಡ ನರಳುತ್ತೆ, ಅದರ ಕೂಗು ಮುಂದಿನ ನವೆಂಬರ್ ತನಕ ಗಾಡ ನಿದ್ದೆಯಲ್ಲಿರೋ ಯಾರಿಗೂ ಕೇಳುವುದೇ ಇಲ್ಲ.!! ನರಳಾಟ ಕೇಳಿ, ಸಹಾಯ ಹಸ್ತ ಚಾಚುವವರಿಗೆ ಸಿಗಬೇಕಾದ ಸೌಕರ್ಯ, ಸವಲತ್ತು, ನೆರವು..ಯಾವುದೂ ಸಿಗಲ್ಲ...!! ಇಂಥ ವಿಪರ್ಯಾಸದ ಸ್ಥಿತಿಯಲ್ಲೂ ಸಹ, ಯಾವುದೇ ಪ್ರತಿಫಲ ಬಯಸದೆ, ಕೇವಲ ಕನ್ನಡ ನಾಡು-ನುಡಿ ಅಭಿಮಾನದಿಂದ ಅಲ್ಲೊಮ್ಮೆ, ಇಲ್ಲೊಮ್ಮೆ ಸದಾಕಾಲ ಕನ್ನಡ ಡಿಂಡಿಮವನ್ನು ಬಾರಿಸುತ್ತಿರುವ ನಿಜವಾದ ಕನ್ನಡಾಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು.!! : -)

ಇಂಥ ಒಂದು ಸಮಯೋಚಿತವಾದ ವ್ಯಂಗ್ಯಚಿತ್ರ ಬರೆದ ಚಂದ್ರ ಗಂಗೊಳ್ಳಿ ಯವರಿಗೂ ಹಾಗೂ ಅದನ್ನು ಪ್ರಕಟಿಸಿದ ಕನ್ನಡದ ಹೆಮ್ಮೆಯ ದಿನ ಪತ್ರಿಕೆ ’ವಿಜಯ ಕರ್ನಾಟಕ’ಕ್ಕೂ ವಂದನೆಗಳು.

Sunday, October 31, 2010

Monday, September 27, 2010

ಬೆಳದಿಂಗಳಾಗಿ ಬಾ......!!!


ಬಹಳ ಹಿಂದೆ, ನಾನು ಬರೆಯಲು ಶುರು ಮಾಡಿದಾಗ, ಬರೆದಿದ್ದನ್ನು ಈ-ಪತ್ರಿಕೆಗಳಲ್ಲಿ ಪ್ರಕಟಿಸುವುದನ್ನು ಶುರು ಮಾಡಿದಾಗ ಬರೆದಂತಹ ಲೇಖನ ಇದು. ಈಗ ನನ್ನದೇ ಬ್ಲಾಗ್ ನಲ್ಲಿ, ಈ ನನ್ನ ಬರಹ ಇರಲಿ ಎಂದು ಇದನ್ನು ಇಲ್ಲೂ ಪ್ರಕಟಿಸುತ್ತಿದ್ದೇನೆ. ಈಗಾಗಲೆ ಇದನ್ನು ಓದಿದ್ದರೆ, ನೆನಪು ಮಾಡಿಕೊಳ್ಳುವ ಸಲುವಾಗಿ ಮತ್ತೆ ಓದಬಹುದು...ಇದನ್ನು ಓದಿಯೇ ಇಲ್ಲದಿದ್ದರೆ, ಈಗ ಓದಬಹುದು..:-)


************************************************************************************


ಹಾಯ್ " ಕ್ಯಾಂಟೀನ್ ಚೆಲುವೆ ...." ಹೇಗಿದ್ದೀಯಾ.....??!! ನಿನ್ನನ್ನ ಸರಿಯಾಗಿ ನೋಡಿ ಒಂದು ವಾರ ಆಯಿತು. ಹುಷಾರಾಗಿದ್ದೀ ತಾನೆ...?
ಓಹ್ !! ಇದೇನಿದು ’ಕ್ಯಾಂಟೀನ್ ಚೆಲುವೆ’ ಅಂತ ಕರೀತಿದ್ದೀನಿ ಅಂತ ಆಶ್ಚರ್ಯನಾ......!!!!?? ಒಂದೇ ಒಂದು ಸಲ ನೆನಪಿಸಿಕೊ.
ನಾನು ನಿನ್ನನ್ನ ಮೊದಲ ಸಲ ನೋಡಿದ್ದು ; ಈಗ ಪ್ರತಿದಿನ ನೋಡುತ್ತಿರುವುದು ಅದೇ ಕ್ಯಾಂಟೀನ್ ನಲ್ಲಿ ಅಲ್ವಾ....??!!
ದಿನಾ ಸರಿಯಾದ ಸಮಯಕ್ಕೆ ಕ್ಯಾಂಟೀನ್ ಗೆ ಹೋಗಬೇಕು ಅನ್ನೋ ಆತುರ, ಅಲ್ಲಿಗೆ ಹೋಗಿ ನಿನ್ನ ನೋಡಬೇಕು ಅನ್ನೋ ಮನಪೂರ ಕಾತುರ, ನೋಡಿದಾಗ ಜಿಗಿ ಜಿಗಿ ಅಂತ ಕುಣಿಯೋ ಮನಸ್ಸು; ಸಂತಸದ ನಗು ನಕ್ಕು ಆನಂದಪಡೋ ಹೃದಯ..... ಹೀಗೆ, ಇವಕ್ಕೆಲ್ಲ ಕಾರಣ ಆ ಕ್ಯಾಂಟೀನ್............ ಅಲ್ಲಲ್ಲ, ಅಲ್ಲಿಗೆ ಬರೋ ಚೆಲುವೆ ನೀನು ತಾನೆ ಕಾರಣ. ಅಷ್ಟಕ್ಕು ನನಗೆ ನಿನ್ನ ಹೆಸರು ಕೂಡ ಗೊತ್ತಿಲ್ಲವಲ್ಲ. !! ಅದಕ್ಕೆ ನಿನ್ನ ’ ಕ್ಯಾಂಟೀನ್ ಚೆಲುವೆ ’ ಅಂತ ಕರೆದಿದ್ದು. :-)


ನನಗೆ ಈಗಲೂ ಚೆನ್ನಾಗಿ ನೆನಪಿದೆ. ಅವತ್ತು ಶುಕ್ರವಾರ ; ನನ್ನ ಪಾಲಿಗೆ ’ ಶುಭ ಶುಕ್ರವಾರ ’ ! ಕ್ಯಾಂಟೀನ್ ನಲ್ಲಿ ತಟ್ಟೆ ಹಿಡಿದುಕೊಂಡು, ನಾನು ಕ್ಯೂ ನಲ್ಲಿ ನಿಂತಿದ್ದೆ. ಅದೆಲ್ಲಿಂದಲೋ ನೀನು ಬಂದೆ ; ಬಂದು, ’ಸ್ಪೂನ್ ಇದೆಯಾ ?’ ಅಂತ ಕ್ಯಾಂಟೀನ್ ಕೌಂಟರ್ ಬಾಯ್ ನ ಕೇಳಿದೆ. ನಿನ್ನ ಮುದ್ದಾದ ಅರಗಿಣಿಯಂತ ಮಾತುಗಳನ್ನ ಕೇಳಿ, ನನ್ನ ತಟ್ಟೆಯಲ್ಲಿದ್ದ, ನನಗಾಗಿ ತೆಗೆದುಕೊಂಡಿದ್ದ ಸ್ಪೂನನ್ನು ನಾನು ನಿನಗಾಗಲೇ ಕೊಟ್ಟುಬಿಟ್ಟಿದೆ....!!! ; ನನಗೇ ಗೊತ್ತಿಲ್ಲದೇ..........
ಸ್ಪೂನ್ ತೆಗೆದುಕೊಂಡ ನೀನು, ನಿನ್ನ ಬೊಗಸೆ ಕಣ್ಣುಗಳನ್ನು ಮಿಂಚಂತೆ ಒಮ್ಮೆ ಮಿಟುಕಿಸಿ, ಅರಳು ಮಲ್ಲಿಗೆಯಂಥ ನಗು ಚೆಲ್ಲಿ ಹೋದೆಯಲ್ಲ, ಆಗಲೇ ನನ್ನ ನಾ ಕಳೆದುಕೊಂಡಿದ್ದು.
ಬೆಳಂದಿಗಳ ತಂಗಾಳಿ ತಂಪು ಮೈಯನ್ನೆಲ್ಲಾ ಆವರಿಸಿಕೊಂಡಂತೆ ;
ಅದ್ಯಾವುದೋ ವಿಶಾಲವಾದ ಆಕಾಶದಲ್ಲಿ ಗೊತ್ತು - ಗುರಿಯಿಲ್ಲದೆ ಅಲೆಮಾರಿಯಂತೆ ಹಾರಾಡಿದಂತೆ ;
ಒಂದರ ಹಿಂದೊಂದು ಹರುಷದ ಅಲೆಗಳು ಉಕ್ಕಿ ಉಕ್ಕಿ ಮನದ ತೀರಕ್ಕೆ ಬಂದಪ್ಪಳಿಸಿದಂತೆ.....
’ಮನಸ್ಸು’ ಹೀಗೆ ಸಂತಸದಲ್ಲಿ ತೇಲಾಡುತ್ತಿರುವಾಗಲೇ,
" ಛೇ...!! ಏನ್ ಹುಡ್ಗೀರೋ.... ಒಂದು ಥ್ಯಾಂಕ್ಸ್ ಕೂಡ ಹೇಳಲಿಲ್ಲ.... " ಅಂತ ’ಬುದ್ದಿ ’ ಮನಸ್ಸನ್ನು ಎಚ್ಚರಗೊಳಿಸಿತು.
"ಥ್ಯಾಂಕ್ಸ್ , ಸಾರಿ ,,,,, ಇವೆಲ್ಲ ’ ಬುದ್ದಿ ’ ಗೆ ಗೊತ್ತಿರುವ ಭಾಷೆಗಳಾದರೆ ;
ನಗು, ಅಳು ಮನಸ್ಸಿನ ಭಾಷೆ...... " ಅಂತ ಹೇಳಿ ಮನಸ್ಸು, ಬುದ್ದಿಯ ಬಾಯಿ ಮುಚ್ಚಿಸಿತು.....!!!!


ಅವತ್ತಿನಿಂದ, ಕ್ಯಾಟೀನ್ ಗೆ ಬಂದಾಗಲೆಲ್ಲ ನನ್ನ ಕಣ್ಣುಗಳು ನಿನ್ನನ್ನೇ ಹುಡುಕುತ್ತವೆ. ನೀನು ಸಿಗದೇ ಹೋದಾಗ ಚಡಪಡಿಸುತ್ತವೆ.
ಪ್ರತಿದಿನ ನಾನು ಕ್ಯಾಂಟೀನ್ ಗೆ ಬರೋ ಸಮಯಕ್ಕೆ ಸರಿಯಾಗಿ ನೀನೂ ಬರ್ತೀಯ.... ಅಥವಾ
ನೀನು ಬರೋ ಸಮಯಕ್ಕೆ ನಾನೂ ಬರ್ತೀನಾ...... ? ? !! ಗೊತ್ತಿಲ್ಲ. ಆದ್ರೆ, ಹೀಗಾದಾಗಲೆಲ್ಲ ನನ್ನೊಳಗೆ ಸಂಭ್ರಮಿಸಲಾಗದ ಸಡಗರ. ಅಷ್ಟು ಜನರ ಮಧ್ಯೆ ನಾನು ನಿನ್ನ ಕದ್ದು ಕದ್ದು ನೋಡೋವಾಗ, ಚಕ್ಕನೆ ನೀನು ನನ್ನೆಡೆ ತಿರುಗಿ ನೋಡುತ್ತೀಯಲ್ಲ ಆಗೆಲ್ಲ ಹೇಳಿಕೊಳ್ಳಲಾಗದ ಮುಜುಗರ ಆಗುತ್ತೆ.. ಒಂದಂತೂ ಸತ್ಯ ಕಣೇ ಹುಡುಗಿ, ಕ್ಯಾಂಟೀನ್ ಗೆ ಅಥವಾ ಆಫ್ಹೀಸ್ ಗೆ ನಿನಗಿಂತ ಚೆನ್ನಾಗಿರುವವರು, ಸುಂದರಾಂಗಿಯರು, ಲಲನೆಯರು, ಮಿಟುಕಲಾಡಿಯರು ಬರಬಹುದು. ಆದರೆ, ಅವರ ಬಿಂಕ, ಬಿನ್ನಾಣ ಇವೆಲ್ಲ ಮಾದಕ, ಬರೀ ಮಾದಕ ಅಂತ ತಿಳಿದು ಮನಸ್ಸು ಜಾಗೃತವಾಗಿಬಿಡುತ್ತೆ. ಅದೇ ನಿನ್ನನ್ನು, ನಿನ್ನ ನಗು, ನೋಟ, ನಡೆ, ಹಾವ, ಭಾವ ಇವುಗಳನ್ನಿಲ್ಲ ಕಣ್ತುಂಬಿಕೊಳ್ಳುವ ನನ್ನೀ ಮನಸ್ಸು ಮೋಹಕ, ಮನಮೋಹಕ ಅಂತ ಹೇಳಿ ಹಿರಿ ಹಿರಿ ಹಿಗ್ಗುತ್ತೆ....! ! !
ಹುಡುಗಿ, ನನ್ನೆಡೆಗೆ ನೀ ಚೆಲ್ಲಿದ ಮುತ್ತಿನಂಥ ನಗು ; ಹೃದಯ ಮೀಟಿದ ಮಿಂಚಿನಂಥ ನೋಟ ನನ್ನಲ್ಲಿ ಸದಾ ಹಚ್ಚ ಹಸಿರಾದ ನೆನಪು. ನನ್ನೀ ಮನಸ್ಸಿನಲ್ಲಿ ನೂರಾಸೆಗಳೇನಿಲ್ಲ. ನಿನ್ನ ಪ್ರೇಮ ಕಾಣಿಕೆಯನ್ನು ಮನ ಬಯಸುವುದಿಲ್ಲ.
ಇರುವುದೊಂದೇ ಆಸೆ ; ಬಯಸುವುದೊಂದೇ ಬೇಡಿಕೆ ಪ್ರತಿದಿನ ಕ್ಯಾಂಟೀನ್ ನಲ್ಲಿ ತಪ್ಪದೆ ಸಿಗು.........
ಸಿಗ್ತೀಯಾ ಅಲ್ವಾ............ .... ???????? !!!!!!!!!

Thursday, August 5, 2010



ಮುಗಿಯದಿರಲಿ ಬಂಧನ.......


ಈ ಪ್ರಪಂಚದಲ್ಲಿ ನಿರೀಕ್ಷೆಗಿಂತ ದೊಡ್ಡ ನೋವು ಇನ್ನೊಂದಿಲ್ಲ. ಹೌದು, ನಿರೀಕ್ಷೆಯೇ ಎಲ್ಲ ನೋವಿಗೆ ಕಾರಣ. ಅವತ್ತು ಪ್ರತಿಸಲದಂತೆ ಈ ಸಲ ಕೂಡ ನನ್ನ ಹುಟ್ಟುಹಬ್ಬದಂದು ನಾನು ನಿನ್ನ ಕರೆಗಾಗಿ ಕಾಯುತ್ತಾ ಇದ್ದೆ. ನಿನ್ನ ಒಂದೇ ಒಂದು ಫೋನ್ ಕರೆಗೆ, ಶುಭಾಷಯದ ಮಾತಿಗೆ ನಾನಿಲ್ಲಿ ಕಾದು ಕೂತಿದ್ದಾಗಲೇ, ನೀನು ಅಲ್ಲಿ ಮದುವೆಯ ಸಡಗರದಲ್ಲಿ ಇರಬಹುದು...!!! ನಿನ್ನ ಗೆಳೆಯರಿಗೆ, ನೆಂಟರಿಷ್ಟರಿಗೆಲ್ಲ ಮದುವೆಯ ಕರೆಯೋಲೆಯನ್ನು ಹಂಚುತ್ತಿರಬಹುದು...ನಗುವಿನ ಮುಖವಾಡದೊಂದಿಗೆ, ಮನದೊಳಗಿನ ನೋವು ಯಾರಿಗೂ ಕಾಣದಂತೆ, ತಿಳಿಯದಂತೆ......


ಹೌದು, ನೀನು ಈವಾಗ ಇನ್ನೊಬ್ಬನನ್ನು ಮದುವೆ ಆಗೋಕೆ ಹೊರಟ್ಟಿದ್ದೀಯಾ....ಅಲ್ಲಲ್ಲ, ಈ ಕ್ರೂರ ವಿಧಿ ಹಾಗೆ ಮಾಡಿಸುತ್ತಿದೆ. ನಾನಿಲ್ಲದ ಕನಸನ್ನೂ ಕಾಣದ ನಿನ್ನನ್ನು, ನಾನಿಲ್ಲದ ಬದುಕಿಗೆ ತಳ್ಳುತ್ತಿದೆ. ಪರಿಸ್ಥಿತಿಯ ಕೈಗೊಂಬೆಗಳಾಗಿರುವ ನಾವು ಇದ್ಯಾವುದನ್ನು ಪ್ರಶ್ನಿಸುವ ಸ್ಥಿತಿಯಲ್ಲಿ ಇಲ್ಲ.

ಆದರೆ, ಒಂದು ವಿಷಯ ನೆನಪಿಟ್ಟುಕೋ ಗೆಳತಿ, ನೀನು ಬೇರೆಯವರ ಹೆಂಡತಿ/ಬಾಳ ಸಂಗಾತಿ ಆಗುತ್ತಿರುವ ಈ ಕ್ಷಣದಲ್ಲಿ ಕೂಡಾ ನಾ ನಿನ್ನನ್ನು ಪ್ರೀತಿಸುತ್ತಾ ಇದ್ದೀನಿ. ಇನ್ನು ಮುಂದೆ ಕೂಡ ಪ್ರ್ರೀತಿಸುತ್ತಾ ಇರುತ್ತೇನೆ. ಪ್ರೀತಿಗೆ ಮದುವೆಯೇ ಕೊನೆಯಲ್ಲ. ಪರಿಶುದ್ದ ಪ್ರೀತಿಗೆ ಯಾವುದೇ ಬಂಧದ ಅಡೆತಡೆಯಿಲ್ಲ. ಅದು ಹರಿಯುವ ನೀರಿನಂತೆ; ಸದಾಕಾಲ ಶಾಂತವಾಗಿ ಹರಿಯುತ್ತಲೇ ಇರುತ್ತದೆ. ನೀನು ಬರದೇ ಹೋಗಿದ್ದರೆ, ಈ ಹಾದಿಗೆ, ಹರಿವ ನದಿಗೆ, ಬೀಸುವ ಗಾಳಿಗೆ, ಸುರುಯುವ ಮಳೆಗೆ, ನನ್ನ ಬಾಳಿಗೆ ಅರ್ಥವೇ ಇರುತ್ತಿರಲಿಲ್ಲವೇನೋ... ನೀನು ನನ್ನ ಪ್ರೀತಿಗೆ ’ಹೂಂ’ ಅಂದ ದಿನದಿಂದ ಎದೆಯ ಬಾಗಿಲಲ್ಲಿ ಹೊಂಗನಸುಗಳ ರಂಗೋಲೆ ಬಿಡಿಸುತ್ತಾ ಸಂಭ್ರಮಿಸಿದ್ದೆ.

ಆಗಸದಲ್ಲಿರುವ ಬೆಳ್ಳಿಚುಕ್ಕಿಗಳನ್ನು ಸೇರಿಸಿ, ಸುಂದರವಾದ ಚಿತ್ತಾರ ಬಿಡಿಸುವುದನ್ನು ಆ ದೇವರು ಮರೆತಿದ್ದಾನ..?!! ಗೊತ್ತಿಲ್ಲ. ಆದರೆ, ಪರಸ್ಪರ ಮೆಚ್ಚುವ, ಪ್ರೀತಿ ತುಂಬಿದ ಎರಡು ಹೃದಯಗಳನ್ನು ಸೇರಿಸಲು ಆ ದೇವರು ಖಂಡಿತ ಮರೆತಿದ್ದಾನೆ...ನಮ್ಮಿಬ್ಬರ ಪ್ರೀತಿಗೆ ಯಾವುದೇ ಒಬ್ಬ ವ್ಯಕ್ತಿ ಅಡ್ಡಿಯಾಗಿರುತ್ತಿದ್ದರೂ, ನಾವು ಜೊತೆಯಾಗ ಬಹುದಾಗಿತ್ತು, ಒಟ್ಟಾಗಿ ಬಾಳಬಹುದಾಗಿತ್ತು. ಆದರೆ, ಈ ಜಾತಿ, ಕುಟುಂಬಗಳ ಆಚಾರ-ವಿಚಾರ ಇವುಗಳ ಕಾಲಡಿಗೆ ಸಿಕ್ಕು ನಮ್ಮ ಪ್ರೀತಿ ನಲುಗಿ ಹೋಯಿತು; ಒಂದಿಷ್ಟೂ ಪ್ರತಿರೋಧ ತೋರದೆ... ಎದೆಯ ತುಂಬೆಲ್ಲಾ ಗಾಯ ಮಾಡಿದ ವಿಧಿಯ ಆಟವನ್ನು ನೆನೆ ನೆನೆದು ರಕ್ತ ಕುದಿಯುತ್ತದೆ, ಅದರ ಬೆನ್ನ ಹಿಂದೆಯೆ ನಮ್ಮ ಅಸಹಾಯಕ ಸ್ಥಿತಿ ನೆನೆದು ಮನ ಮರುಗುತಿದೆ....

ನಮ್ಮ ಇಷ್ಟು ದಿನದ ಒಡನಾಟ, ನಾವಾಡಿದ ಮಾತುಗಳು, ನಾವು ಕಳೆದ ಕ್ಷಣಗಳು, ಇವುಗಳನ್ನೆಲ್ಲಾ ಮರೆಯುವುದಾದರೂ ಹೇಗೆ...!?! ಮನದ ಹಿತ್ತಲಲ್ಲಿ ನಮ್ಮೆಲ್ಲಾ ಭಗ್ನ ಕನಸುಗಳನ್ನು ಹೂತಿಡಬಹುದೇ...?! ಕಾಲ ಕಳೆದಂತೆ ಕನಸನ್ನು ಮರೆಯಬಹುದು, ಕಷ್ಟವಾದರೂ ನಿನ್ನನ್ನು ಕಾಣದ ನೋವನ್ನು ಸಹಿಸಬಹುದು. ಆದರೆ, ಅನುಭವ ತಂದ ಪ್ರೀತಿಯನ್ನು, ಪ್ರೀತಿ ತಂದ ನಿನ್ನನ್ನು ಹೇಗೆ ತಾನೆ ಮರೆಯಲಿ....?!!


ಒಂದಂತೂ ನಿಜ ಗೆಳತಿ, ನಾವಿಬ್ಬರೂ ಪರಿಶುದ್ದ ಮನಸ್ಸಿನಿಂದ ಪ್ರಿತಿಸಿದವರು. ದೀಪದ ಹುಳು ಬೆಳಕಿನ ಮೇಲಿನ ಮೋಹದಿಂದ ತನ್ನನ್ನೇ ತಾನು ಸುಟ್ಟುಕೊಳ್ಳುವಂತೆ ಪ್ರೀತಿಯಲ್ಲಿ ಬರೀ ನೋವು, ವೇದನೆ ಇದೆ ಅಂತ ಗೊತ್ತಿದ್ದರೂ ನಾವಿಬ್ಬರು ಪ್ರೀತಿಸಿದೆವು....ಅದುವೇ, ನಿಷ್ಕಲ್ಮಶ, ನಿಸ್ವಾರ್ಥ ಪ್ರೀತಿ ಎಂಬುದು ನನ್ನ ನಂಬಿಕೆ...

ಗೆಳತಿ, ನೀನು ನನಗೆ ಹುಟ್ಟುಹಬ್ಬದ ಶುಭಾಷಯ ತಿಳಿಸದಿರಬಹುದು, ಆದರೆ ನಿನ್ನು ಮದುವೆಗೆ ಶುಭಾಷಯಗಳನ್ನು ಮುಂಚಿತವಾಗಿಯೇ ತಿಳಿಸುತ್ತಿದ್ದೇನೆ...


ಸ್ವರ್ಗದಲ್ಲಿ ನಿಶ್ಚಯವಾಗಿರುವ ಮದುವೆ ನಿಮ್ಮದು,
ಸುಖ, ಶಾಂತಿ, ನೆಮ್ಮದಿಯ ಬಾಳು ನಿಮ್ಮದಾಗಲಿ,
ಪ್ರೀತಿ ತುಂಬಿದ ನಿಮ್ಮ ಸಂಸಾರ ಸ್ವರ್ಗವನ್ನು
ಈ ಭೂಬಿಯ ಮೇಲೆ ನಾವೆಲ್ಲ ಕಾಣುವಂತಾಗಲಿ..


-ಇಂತಿ ನಿನ್ನ ಪ್ರೀತಿಯ....

Wednesday, July 21, 2010

ಅಂದು ನೀ ಹೋದದ್ದನ್ನು ಸರಿಯಾಗಿ ವಿವರಿಸಲು ಒಂದೇ ಒಂದು ಪದ ಸಿಗಲಿಲ್ಲ...


‘ಮುಂಗಾರು ಮಳೆ’, ‘ಗಾಳಿಪಟ’, ‘ಮನಸಾರೆ’ ಚಿತ್ರಗಳ ಮೂಲಕ ಅಪ್ಪಟ ತಾಜಾತನದ, ಅದ್ಭುತ ಹಿಟ್ ಚಿತ್ರಗಳನ್ನು ಕೊಟ್ಟು ಯುವ ಜನಾಂಗವನ್ನು ಮತ್ತೆ ಕನ್ನಡ ಚಿತ್ರಗಳತ್ತ ಸೆಳೆದ ಶ್ರೇಷ್ಠ ನಿರ್ದೇಶಕ ಯೋಗರಾಜ್ ಭಟ್, ಈಗ ಅವರ ಲೇಟೆಸ್ಟ್ ಚಿತ್ರ "ಪಂಚರಂಗಿ" ಯ ಬಿಡುಗಡೆಯ ಗಡಿಬಿಡಿಯಲ್ಲಿದ್ದಾರೆ. ಅಗಾಧ ಪ್ರತಿಭೆಯ, ವಿಕ್ಷಿಪ್ತ ವ್ಯಕ್ತಿತ್ವದ, ತಮ್ಮ ಲೇವಡಿ ಮಾಡುವ ಸಂಭಾಷಣೆಯಿಂದಲೇ ಪ್ರೇಕ್ಷಕರನ್ನು ಸೆಳೆಯುವ ಯೋಗರಾಜ್ ವಿಭಿನ್ನ ಅಭಿವ್ಯಕ್ತಿಯ ಕವಿ, ಕತೆಗಾರ, ಗೀತಕಾರ ಕೂಡ. ಅವರು ಬರೆದಿರುವ ಒಂದು ಪದ್ಯ ಇಲ್ಲಿ ನಿಮಗಾಗಿ.


ಮುಂದುವರಿಯುವುದು...

ನೀನು ಆ ದಿನ ಅಲ್ಲಿ
ಕಂಡಾಗ ಅನಿಸಿದ್ದಿಷ್ಟು.


ಆ ಕಪ್ಪು ಕೈನೆಟಿಕ್ ನಿಮ್ಮಪ್ಪ ಕೊಡಿಸಿರಬೇಕು,
ಆ ನಿವೃತ್ತ ಅಪ್ಪನ ಪೆದ್ದುತನ ನಿನಗೆ ತುಂಬಾ ಇಷ್ಟವಿರಬಹುದು,


ನಿಂಗೊಬ್ಬ ಅಣ್ಣ, ಅವನಿಗೊಂದಿಷ್ಟು ಸಂಬಳ, ಕನಿಷ್ಟ ಎರಡು ಬ್ಯಾಂಕು ಸಾಲಗಳು,
ಒಂದು ಕಿತ್ತ ಅಮರ ಪ್ರೀತಿ, ಒಂದು ಗ್ಯಾಸು ಕೂರಿಸಿದ ಕಾರು ಇದ್ದಿರಬೇಕು...


ಕದ್ದು ಚಿಕನ್ ತಿನ್ನುವ, ಬಿಯರ್ ಕುಡಿವ ತಮ್ಮ ಇದ್ದಿರಬಹುದು...
ಅವನ ಕುಡಿಮೀಸೆ ಕಂಡರೆ ಅದೇನೋ ಸಣ್ಣ ರೇಜಿಗೆ ನಿನಗೆ...


ನಿನ್ನನ್ನು ಕ್ಯಾರೇ ಅನ್ನದ ಒಬ್ಬ ತಂಗಿ ಇದ್ದಾಳೇನೋ... ಅವಳು
ನಿನಗಿಂತ ಎತ್ತರ ಎಂದು ಅವಳು ನಿಂಗಾಗಲ್ಲ... ಅವಳು
ಕನ್ನಡಿ ಮುಂದಿದ್ದರೆ ಅದೇನೋ ಅಸಹನೆ ನಿನಗೆ...


ನಿಮ್ಮಪ್ಪನಿಗೆ ಇದಕ್ಕಿಂತ ಜಾಸ್ತಿ ಮಕ್ಕಳಿರಲಾರರು...
ಅಮ್ಮನಿಗೆ ಸಕ್ರೆ ಖಾಯಿಲೆ, ಇಳಿ ಹೊಟ್ಟೆ... ಹಸಿರು ಕಲರ್
ಸ್ವೆಟರ್‌ನಲ್ಲಿ ಆಕೆ ದಿನಾ ಬೆಳಗ್ಗೆ ಪಾರ್ಕೊಂದರಲ್ಲಿ ಹ್ಹಾ ಹ್ಹಾ ಎನ್ನುತ್ತಿರಬಹುದು...

ಮಗಳಿಗೆ ಅಮೆರಿಕಾ ಕೆಲಸ ಸಿಕ್ಕರೂ ಹೋಗದ ಬಗ್ಗೆ
ಅಮ್ಮ ಅಲ್ಲಿ ಇಲ್ಲಿ ಹೇಳಿದರೆ ನಿನ್ನಲ್ಲಿ ವಾಂತಿಯಂತಹ ತಿರಸ್ಕಾರ...

ಸಾನಿಯಾ ಮಿರ್ಜಾ ನಿನಗಿಷ್ಟವಿಲ್ಲ... ಅವಳಂತೆ
ಮೂಗುತಿ ಹಾಕುವ ಹುಡುಗಿಯರ ಬಗ್ಗೆ ಅಸಡ್ಡೆ ನಿನಗೆ...


ಕನ್ನಡ ಹಾಡುಗಳು ಅಷ್ಟಾಗಿ ಇಷ್ಟವಿಲ್ಲವೋ ಏನೋ...
ಯಾವುದೋ ಹಾಲಿವುಡ್ ನಟ ನಿಂಗಿಷ್ಟ - ಹೆಸರು ತಕ್ಷಣ ನೆನಪಾಗಲ್ಲ...


ಸಲ್ಮಾನ್ ಖಾನ್ ಬಗ್ಗೆ ಒಂಥರಾ ತಿಳಿ ಬೇಸರ... ಸಹೋದ್ಯೋಗಿಯೊಬ್ಬನ
ಬಟ್ಟೆ ಆಯ್ಕೆ ಇಷ್ಟ... ಅವನ ಬಕ್ಕ ಹೃದಯ ಆಗದೇನೋ...
ಯಾವುದೋ ಇಬ್ಬರು ಗಂಡಸರೂ ಅಲ್ಲದ, ಹುಡುಗರೂ ಅಲ್ಲದ,
ಕಾಫಿ ಡೇ ಕಮಂಗಿಗಳು- ಐ ಲವ್ ಯೂ - ಎಂದು ಆರ್ತನಾದ
ಮಾಡದಂತೆ ನೀ ತಡೆಹಿಡಿದಿರಬಹುದು...


ನಿನ್ನ ಪ್ರಿಪೇಯ್ಡ್ ಮೊಬೈಲಿನ ತುಂಬಾ
ಗುಡ್ ಮಾರ‍್ನಿಂಗ್ ಹಾಗೂ ಜೀವನ ಸುಂದರ-
ಎಂಬ ಗೆಳತಿಯರ ಎಸ್ಸೆಮ್ಮೆಸ್ಸುಗಳು...

ಕೆಲವು ಪೋಲಿ ಮೆಸೇಜುಗಳನ್ನು ನೆನಪಿಟ್ಟುಕೊಂಡು ನೀ
ಅಳಿಸಿ ಹಾಕಿರುವೆ...
ಮೊಬೈಲಿನ ಹೆಸರು ಪಟ್ಟಿಯಲ್ಲಿ ಗಂಡಸರಿಗೆಲ್ಲ ಆಡ್ಡನಾಮ...


ವ್ಯಾನಿಟಿಯಲ್ಲೆರಡು ಬಣ್ಣದ ಕ್ಲಿಪ್ಪುಗಳು, ತುಂಡು ಬಿಳಿ ಕರ್ಚೀಪು,
ಸ್ಟೇಫ್ರೀ, ಲಿಪ್‌ಸ್ಟಿಕ್ಕು, ಒಂದೆರಡು ಟೈಲರ್ ರಶೀತಿ,
ಯಾವುದೂಕಳೆಯಬಾರದೆಂದು ಪೇರಿಸಿದ ಚೀಟಿರಾಶಿ, ಬಿಂದಿ ಪ್ಯಾಕೆಟ್ಟು, ದುಂಡುಮುಳ್ಳಿನ
ಬಾಚಣಿಗೆ, ಎಮರ್ಜೆನ್ಸಿ ಐನೂರರ ಅನಾಥ ನೋಟುಗಳು, ಎಟಿಎಮ್ ಕಾರ್ಡು,
ಯಾವ ಖಾಯಿಲೆಗೋ ಗೊತ್ತಿಲ್ಲದ ಹಳದಿ ಬಣ್ಣದ ಮಾತ್ರೆಪಟ್ಟಿ...!


ಯಾವುದಕ್ಕೂ ಒಬ್ಬ ಜೊತೆಗಿದ್ದರೆ ಹೇಗೆಂಬ ಹುಡುಗಾಟ
ಇದೆಅವನ್ಯಾರು ಗೊತ್ತಿಲ್ಲ... ಯಾಕೋ
ಒಮ್ಮೊಮ್ಮೆಎಲ್ಲರೂ ಇಷ್ಟವಾಗಿ ಇಳಿಸಂಜೆಯಷ್ಟೊತ್ತಿಗೆ ಯಾರೂ
ಬಿಲ್‌ಕುಲ್ ಬೇಡವಾಗುವ ಸನ್ಯಾಸಿನಿಯ
ಪೂಸಿನಲ್ಲಿಅದೀನೂ ಸುಖ ಇರಬಹುದು ನಿನಗೆ...!

ನೀನಾಗಿ ಯಾರನ್ನಿಷ್ಟಪಡಲೂ ನಿಂಗಿಷ್ಟವಿಲ್ಲ...
ಯಾರಾದರೂ ನಿನ್ನಿಷ್ಟಪಟ್ಟರೆ
ಕೊಲೆಮಾಡಿಬಿಡುವ ಕೋಪ ನಿಂಗೆ...
ನೀನು ಹೇರ್‌ಬ್ಯಾಂಡ್ ಹಾಕಿಕೊಳ್ಳುವ
ಗತ್ತಿನಲ್ಲಿಮುಚ್ಕೊಂಡು ನಿಮ್ ಕೆಲ್ಸ ನೋಡ್ಕೊಳಿ
-ಎಂಬ ಮುದ್ದು ಸಂದೇಶ...


ಗಾಡಿಯ ಕಿಕ್ ಹೊಡೆವಾಗ ಸೈಬರ್
ಕೆಫೆಯಲ್ಲಿಏನನ್ನೋ ಕದ್ದು ನೋಡಿದ ನೆನಪಿನ ಮುಗ್ಧ ನಗು
ನಾನಿನ್ನೂ ನಿನ್ನ ಬಗ್ಗೆ-ಸಾಕಷ್ಟು ಕಲ್ಪಿಸಿಕೊಳ್ಳುವುದಿತ್ತು
ನಿನ್ನೆಲ್ಲದನ್ನು ಮೀರಿದ ಹೆಣ್ತನದ ನಾಜೂಕನ್ನೆಲ್ಲ
ಬೆದೆಗೆ ಬಂದಂತೆ ಬಣ್ಣಿಸುವ ತೀಟೆಯಿತ್ತು...

ಯಾಮಾರಿ- ಮಳೆನೀರ ಮುಚ್ಚಿಹಿಡಿದ
ಮುಗಿಲಿನ ಮೌನ ನಿನ್ನಲ್ಲಿ -
ಎಂದೆಲ್ಲ ಬರೆದು ನಾ ತುಂಬಾ
ಗಂಭೀರ ಕವಿಯಾಗಿ
ಬಿಡುವ ದುರಂತ ಸಾಧ್ಯತೆ ಇತ್ತು...!


ಅಷ್ಟರಲ್ಲಿ ನೀ ಕೈನೆಟಿಕ್ ಏರಿ ಹೊರಟು ಹೋದೆ.
ಅಂದು ನೀ ಹೋದದ್ದನ್ನು ಸರಿಯಾಗಿ ವಿವರಿಸಲು
ಒಂದೇ ಒಂದು ಪದ ಸಿಗಲಿಲ್ಲ...

ಈ ಕವಿತೆಯಲ್ಲದ್ದನ್ನು ಮುಗಿಸಲು
ಕೊನೆಗೂ ನನಗೊಂದು ಕೊನೆಯ ಸಾಲು ಸಿಗಲಿಲ್ಲ....


-ಯೋಗರಾಜ್ ಭಟ್

Thursday, February 11, 2010

ತಪ್ಪೊಪ್ಪಿಗೆ


ಇತ್ತೀಚೆಗೆ ನನ್ನ ಸಾಕಷ್ಟು ಗೆಳೆಯರು ನನ್ನ ವಿರುದ್ದ ಸಿಟ್ಟು ಮಾಡಿಕೊಂಡಿದ್ದರು. ೨,೩ ದಿನ ನನ್ನ ಬಗ್ಗೆ ಬರೀ ಕಂಪ್ಲೇಂಟ್ ಗಳೇ. ಕಾರಣ ಇಷ್ಟೇ, ನನ್ನ ದಡ್ಡ ತಲೆಗೆ ಕೆಲವೊಂದು ಸಾಲುಗಳು ಹೊಳೆದವು. ಅವುಗಳನ್ನು ಎಸ್ಸೆಮ್ಮೆಸ್ ನಲ್ಲಿ ಎಲ್ಲರೊಂದಿಗೆ ಹಂಚಿಕೊಂಡೆ. ಪ್ರತೀ ಬಾರಿ ನನ್ನ ಬರಹಗಳನ್ನು ಓದಿದ ನಂತರ ಕೇಳುವಂತೆ ಈ ಬಾರಿಯು, "ಈ ಸಾಲುಗಳು ನಿನ್ನ ಸ್ವಂತ: ಅನುಭವದ ಸಾಲುಗಳೇ?" ಎಂದು ಹಲವರು ಕೇಳಿದ್ದರು. ನಾನು ಯಾವುದೋ ಗುಂಗಿನಲ್ಲಿ, "ಯಾರು ಏನೇ ಬರೆದರೂ ಅದಕ್ಕೆ Inspiration ಇದ್ದೇ ಇರುತ್ತೆ" ಅಂತ ಉತ್ತರಿಸಿದ್ದೆ. ಈ ನನ್ನ ಉತ್ತರ ಕೆಲವರಿಗೆ ’ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ’ ಎಂಬಂತೆ ಅನಿಸಿಬಿಟ್ಟಿದೆ. ಅದರಲ್ಲು ಗೆಳೆಯ ಚೇತನ್ ನನ್ನ ಬಗ್ಗೆ ಈ ರೀತಿಯ ವಿಷಯಗಳಲ್ಲಿ ವಾದಕ್ಕಿಳಿದು ಬಿಡುತ್ತಾನೆ. ಅದು ಯಾಕೆ ಹಾಗೆ ?? ಇದು ಯಾಕೆ ಹೀಗೆ?? ಅಂಥ ಒಂದಷ್ಟು ಜನ ನನ್ನ ಗೆಳೆಯರನ್ನ ನನ್ನ ವಿರುದ್ದಾನೇ ಗುಂಪು ಕಟ್ಟುತ್ತಾನೆ. ಈ ಬಾರಿಯು ಇವನು ತನ್ನ ಹಠ ಬಿಡಲಿಲ್ಲ. ಅಸಲಿಗೆ ಅವನ ವಿರೋಧವಿದ್ದದ್ದು, ನಾನು ಅವರೊಡನೆ ಹಂಚಿಕೊಂಡ ಸಾಲುಗಳಿಗಲ್ಲ. ಅವರ ಪ್ರತಿಕ್ರಿಯೆಗೆ ನಾನು ನೀಡಿದ್ದ ಉತ್ತರಕ್ಕೆ. ಹಾಗಾಗಿ, ನಾನು ನೀಡಿದ ಉತ್ತರವನ್ನು ವಾಪಾಸ್ ಪಡೆಯಬೇಕೆಂದು ಅವನ ಹಠವಾಗಿತ್ತು. ಮೆಸೇಜ್ ನಲ್ಲಿ ಗೆಳೆಯರು ನೀಡಿದ ಪ್ರತಿಕ್ರಿಯೆಗೆ ನಾನೂ ಸಹ ಮೆಸೇಜ್ ನಲ್ಲೇ ಉತ್ತರಿಸಿದ್ದಾಗಿದೆ, ಆ ಮೆಸೇಜ್ ಅನ್ನು ಎಲ್ಲರೂ ಓದಿಯಾಗಿದೆ. ಈಗ ಆ ಉತ್ತರವನ್ನು ವಾಪಾಸ್ ಪಡೆಯಬೇಕೆಂದರೆ ಹೇಗೆ?!
ನನ್ನ ಈ ಗೊಂದಲಕ್ಕೆ ಅವನು ಅದಾಗಲೇ ಪರಿಹಾರ ಹುಡುಕಿದ್ದ. ನಾನು ಯಾರೊಂದಿಗೆಲ್ಲಾ ನನ್ನ ಹುಚ್ಚು ತಲೆಯ ಸಾಲುಗಳನ್ನು ಹಂಚಿಕೊಂಡಿದ್ದೇನೊ, ಅವರ ಪ್ರತಿಕ್ರಿಯೆಗಳಿಗೆ ಉತ್ತರಿಸಿದ್ದೆನೋ, ಅವರಿಗೆಲ್ಲ ಮತ್ತೊಂದು ಮೆಸೆಜ್ ಕಳುಹಿಸುವಂತೆ ನನ್ನ ಹಿಂದೆ ಬಿದ್ದ. ಅಷ್ಟೇ ಅಲ್ಲ, ಆ ಮೆಸೆಜ್ ಅನ್ನು ಅವನೇ ಬರೆದುಕೊಟ್ಟ ಹಾಗು ಅವನ ಮುಂದೆಯೇ ನಾನದನ್ನು ಎಲ್ಲರಿಗೂ ಕಳುಹಿಸುವಂತೆ ನೋಡಿಕೊಂಡ...!!!
ಅವನು ಬರೆದುಕೊಟ್ಟ ಮೆಸೆಜ್ ಹೀಗಿತ್ತು...
"ನನ್ನ ಸಣ್ಣ ಕಥೆಗೆ ಪ್ರತಿಕ್ರಿಯಿಸಿದ್ದ ನಿಮಗೆಲ್ಲ ’ಯಾರು ಏನೇ ಬರೆದರೂ ಅದಕ್ಕೆ ಇದ್ದೇ ಇರುತ್ತೆ’ ಅಂತ ನಾನು ಉತ್ತರಿಸಿದ್ದೆ. ಇದರ ಅರ್ಥ, ನನ್ನ ಆ ಸಣ್ಣ ಕಥೆ ನನ್ನ ಸ್ವಂತ ಅನುಭವದ್ದು ಎಂದಲ್ಲ. ಬದಲಿಗೆ, ನಾನು ಮೊದಲಿನಿಂದ ಹೇಳುತ್ತಾ ಬಂದಿರುವಂತೆ, ನನ್ನ ಸುತ್ತಮುತ್ತಲಿನ ಜನ, ಅವರ ಮಾತು, ನಡುವಳಿಕೆಗಳೆ ಹಾಗು ಎಲ್ಲರಿಗೂ ತಿಳಿದಿರುವ ಕೆಲವು ಸಂಗತಿಗಳೇ ನನ್ನ ಬರಹಗಳಿಗೆ ಆಹಾರ ಅಥವಾ ಮುಲ. ಆ ನನ್ನ ಸಣ್ಣ ಕಥೆಯೂ ಇದರಿಂದ ಹೊರತಲ್ಲ. ನಿಮ್ಮ ಪ್ರತಿಕ್ರಿಯೆಗೆ ಹಾಗು ತೋರಿದ ಕಾಳಜಿಗೆ ಧನ್ಯವಾದಗಳು"
ನಾನು ಬರೆದ ಆ ಸಾಲುಗಳಿಗಿಂತ ಉದ್ದವಾಗಿವೆ ಅವನು ಬರೆದುಕೊಟ್ಟ ಈ ತಪ್ಪೊಪ್ಪಿಗೆ ಮೆಸೆಜ್...ಹ್ಹಹ್ಹಹ್ಹ :-)

ಅಷ್ಟಕ್ಕೂ ಈ ಚೇತನ್ ಮತ್ತ್ಯಾರು ಅಲ್ಲ, ನನ್ನ ಆತ್ಮೀಯ ಗೆಳೆಯರ ಬಳಗದ ಖಾಯಂ ಗೆಳೆಯ. ಈತ, ನಾನು ಪ್ರತೀಬಾರಿ ಏನಾದರು ಹೊಸದಾಗಿ ಬರೆದಾಗ, open feedback ಕೊಡುತ್ತಾನೆ. ನನ್ನ ಬರವಣಿಗೆಗೆ ಹೊಸ ಹೊಸ ವಿಷಯಗಳನ್ನು ಕೊಟ್ಟು, ನನ್ನ ಬೆಳವಣಿಗೆಗೆ ಕಾರಣವಾಗುತ್ತಾನೆ :-)

ಹೌದು.... ಇಷ್ಟೇಲ್ಲ ಸರ್ಕಸ್ ಗೆ ಕಾರಣವಾದ ಆ ಸಾಲುಗಳು ಯಾವುದು..?! ಅವು ನನ್ನ ತಲೆಗೆ ಹೇಗೆ ಹೊಳೆದವು...?!

ಬಹುಶ: ಇದು ಎಲ್ಲರಿಗೂ ಗೊತ್ತಿರುವ ಜೋಕ್. ದೂರದ ಊರಿನಲ್ಲಿರುವ ಗಂಡ, ತನ್ನ ಹೆಂಡತಿ ಮೇಲಿನ ಪ್ರೀತಿಯಿಂದ ಹಾಗು ಅಷ್ಟೇ ತುಂಟತನದಿಂದ ಹೆಂಡತಿಗೆ, "ಪ್ರಿಯೆ, ಅನಿವಾರ್ಯ ಕಾರಣಗಳಿಂದ ಈ ತಿಂಗಳ ಸಂಬಳ ಕಳುಹಿಸಲು ಸ್ವಲ್ಪ ತಡವಾಗಲಿದೆ. ಅಲ್ಲಿಯವರೆಗು ನಿನಗೆ ನಿರಾಸೆಯಾಗದಿರಲಿ ಎಂದು 500 ಸಿಹಿಮುತ್ತುಗಳನ್ನು ಕಳುಶಿಸುತ್ತಿದ್ದೇನೆ, ಜೋಪಾನ." ಎಂದು ಪತ್ರ ಬರೆಯುತ್ತಾನೆ. ಅಷ್ಟೇ ತುಂಟತನ ಹಾಗು ಬುದ್ದಿವಂತಿಕೆಯಿಂದ ಆಕೆ, "ನೀವು ಕಳುಹಿಸಿದ 500 ಸಿಹಿಮುತ್ತುಗಳಲ್ಲಿ, 300 ಮುತ್ತುಗಳನ್ನು ಹಾಲಿನವನಿಗೂ, ಉಳಿದ 200 ಮುತ್ತುಗಳನ್ನು ಕೇಬಲ್ ನವನಿಗೂ ಕೊಟ್ಟಿದ್ದೇನೆ.!!!! ನಿಮ್ಮ ಸಂಬಳವನ್ನು ಬೇಗ ಕಳುಹಿಸಿ." ಎಂದು ಪತಿರಾಯನ ಪತ್ರಕ್ಕೆ ಉತ್ತರಿಸುತ್ತಾಳೆ. :-)

ಇದು ಮದುವೆಯಾದವರ ಕಥೆಯಾಯಿತು. ಇನ್ನು ಈಗಷ್ಟೇ ಪ್ರೀತಿಸಲು ಶುರು ಮಾಡಿದ ಯುವ ಜೋಡಿಗಳ ಪಾಡೇನು..?!! ಈಗ ಎಲ್ಲರಿಗೂ ಪತ್ರ ಬರೆಯುವ ಅಭ್ಯಾಸವೇ ಮರೆತುಹೋಗಿದೆ. ಈಗಿನವರ ಪ್ರೀತಿ (ಕೆಲವರ ಹೊರತಾಗಿ) ಮೊಬೈಲ್ ನಂಬರ್ ನಲ್ಲಿ ಹುಟ್ಟಿ, ಎಸ್ಸೆಮ್ಮೆಸ್, ಕಾಲ್ ಗಳಲ್ಲಿ ಬೆಳೆದು, ಮೊಬೈಲ್ ಕರೆನ್ಸಿ ಖಾಲಿಯಾಗುವ ಹೊತ್ತಿಗೆ ಕರಗಿಹೋಗಿ ಬಿಟ್ಟಿರುತ್ತೆ. ಅಂಥದರಲ್ಲಿ, ಈಗಿನವರು ಸಂಗಾತಿಗಳಿಗಾಗಿ ಪತ್ರ ಬರೆಯಲು ಕುಳಿತರೆ, ಏನು ಬರೆಯಬೇಕೆಂದು ತೋಚುವುದೇ ಇಲ್ಲ. ಆದರೂ ಪತ್ರ ಬರೆಯಬೇಕು ಎಂಬ ಹಠದಿಂದ ಎಂಥ ಪತ್ರ ಸಿದ್ದವಾಗಬಹುದು...?!!

ಹೀಗೆ, ಹೆಂಡತಿ ಮೇಲಿನ ಪ್ರೀತಿಯಿಂದ ಪತ್ರದಲ್ಲಿ ಸಿಹಿಮುತ್ತುಗಳನ್ನು ಕಳುಹಿಸುವ ಗಂಡ ಹಾಗೂ ಸಂಗಾತಿಗೆ ಪತ್ರ ಬರೆಯಲು ಕುಳಿತು, ಏನು ಬರೆಯುವುದು ಎಂದು ತಿಳಿಯದೆ ಮೂಕರಾಗುವ ಜೋಡಿಗಳು. ಈ ಎರಡು ಸಂಗತಿಗಳು ನನ್ನ ದಡ್ಡ ತಲೆಯಲ್ಲಿ ಆ ಹೊಸ ಸಾಲುಗಳನ್ನು ಹುಟ್ಟುಹಾಕಿದವು.

"ಒಲವಿನ ಪತ್ರ ಬರೆಯಲು ಕುಳಿತ ನಲ್ಲೆಗೆ, ಅಕ್ಷರಗಳೇ ಮರೆತು ಹೋದವು.

ತಕ್ಷಣವೇ, ಪತ್ರದ ಮೇಲೆ ಮುತ್ತಿನ ಮುದ್ರೆ ಮುಡಿಸಿ ಪೋಸ್ಟ್ ಮಾಡಿದಳು."

ಒಂದೇ ಓದಿಗೆ ಬಹಳ ಆಕರ್ಷಿಸುವ ಈ ಸಾಲುಗಳು ನನಗೇ ಬಹಳ ಖುಷಿಕೊಟ್ಟವು.
ಸರಿ ಇದನ್ನು ಯಾವುದಾದರು ದಿನಪತ್ರಿಕೆಗೆ ಕಳುಹಿಸಿ, ಪ್ರಕಟವಾಗುವಂತೆ ಮಾಡಿ ಆ ನಂತರದಲ್ಲಿ ಗೆಳೆಯರೊಂದಿಗೆ ಹಂಚಿಕೊಳ್ಳೋಣ ಎನಿಸಿತು. ಆದರೆ, ಯಾವ ಪತ್ರಿಕೆಗೆ ಕಳುಹಿಸುವುದು ?!!

ಹಿಂದೊಮ್ಮೆ, ನಾನು ಬಿ.ಕಾಂ ಓದುತ್ತಿರುವಾಗ, ಗೆಳೆಯನೊಬ್ಬ ಕಳುಹಿಸಿದ ಮೆಸೇಜ್ ಒಂದನ್ನು ದಿನಪತ್ರಿಕೆಯೊಂದಕ್ಕೆ ಕಳುಹಿಸಿದ್ದೆ. ಆ ಜೋಕ್ ಪ್ರಕಟವಾಗಿ ಬಹಳ ಜನ ಓದುಗರು ನನಗೆ ಫೋನ್ ಮಾಡಿದ್ದರು. ಈಗಲೂ ಆ ದಿನಪತ್ರಿಕೆಯಲ್ಲಿ ’ದಿನಚರಿ’ ಅಂಕಣದಲ್ಲಿ ಪತ್ರಿಕೆಯವರ ಮೊಬೈಲ್ ನಂಬರ್ ನೀಡಲಾಗುತ್ತದೆ.
ಆ ನಂಬರ್ ಗೆ ಯಾರು ಬೇಕಾದರೂ ಮೆಸೆಜ್ ಕಳುಹಿಸಬಹುದು. ಆಯ್ದ ಕೆಲವು ಜೋಕ್ ಗಳನ್ನೊ, ಸುಭಾಷಿತಗಳನ್ನೋ ಪತ್ರಿಕೆಯವರು ಪ್ರಕಟಿಸುತ್ತಾರೆ. ಹಾಗಾಗಿ, ಅದೇ ನಂಬರ್ ಗೆ ನನ್ನ ಈ ಸಾಲುಗಳನ್ನು ಕಳುಹಿಸಿದ್ದಾಯಿತು.
ಸುಮಾರು ದಿನಗಳಾದರೂ, ನನ್ನ ಮೆಸೆಜ್ ಪ್ರಕಟವಾಗಲೇ ಇಲ್ಲ.!!! ನನ್ನ ಸಾಲುಗಳ ಬಗ್ಗೆ ನನಗಿದ್ದ ನಂಬಿಕೆ ಕಡಿಮೆಯಾಗುತ್ತಾ ಬಂದಿತು. ಹಾಗಾಗಿ ಯಾರೊಂದಿಗೂ ಅದರ ಬಗ್ಗೆ ಹೇಳಿಕೊಳ್ಳಲಿಲ್ಲ. ಕೊನೆಗೊಂದು ದಿನ ನನಗೆ ಆಶ್ಚರ್ಯ ಕಾದಿತ್ತು.

ನನ್ನ ಮೆಸೆಜ್ ಬೇರೊಂದು ಪತ್ರಿಕೆಯಲ್ಲಿ, ಬೇರೆಯವರ ಹೆಸರಿನೊಂದಿಗೆ ಪ್ರಕಟಗೊಂಡಿತ್ತು. ನನ್ನ ಸಾಲುಗಳೊಂದಿಗೆ, ಇತರ ಕೆಲ ಬಿಡಿ ಬಿಡಿ ಸಾಲುಗಳೂ ಸಹ ಪ್ರಕಟಗೊಂಡಿತ್ತು. ಆ ಸಾಲುಗಳೆಲ್ಲ ಯಾರದ್ದೊ...??! ಅವರಿಗೂ ಅಚ್ಚರಿ ಜೊತೆಜೊತೆಗೇ ಕೋಪ ಉಂಟಾಗಿರುತ್ತೆ. ವಾರದ ಹಿಂದಷ್ಟೇ, ಮಾಧ್ಯಮಗಳಲ್ಲಿ ನಡೆಯುವ ಭ್ರಷ್ಟಾಚಾರ, ರಾಜಕೀಯ ಅಂಶಗಳನ್ನು ಒಳಗೊಂಡ ಹಿಂದಿಯ "ರಣ್" ಚಿತ್ರ ನೋಡಿದ್ದ ನನಗೆ, ಈ ವಿಷಯದ ಬಗ್ಗೆ ಯಾವುದೇ ಅಭಿಪ್ರಾಯ ಹುಟ್ಟಲಿಲ್ಲ. ಆದರೆ, ಹೊಸದೊಂದು ಅನುಭವವಾಗಿತ್ತು, ಪಾಠ ಕಲಿತಾಗಿತ್ತು.

ಗೆಳೆಯರೊಂದಿಗೆ ಹಂಚಿಕೊಳ್ಳದೇ ಹಾಗೆ ಇಟ್ಟಿದ್ದ ಸಾಲುಗಳನ್ನು, ಅಂದೇ ಎಲ್ಲರಿಗೂ ಮೆಸೆಜ್ ನಲ್ಲಿ ಕಳುಹಿಸಿದ್ದೇ..!!!

Thursday, January 14, 2010

’ನೈಸ್’ ಸಣ್ಣ ಕಥೆ

ಒಮ್ಮೊಮ್ಮೆ ಹೀಗೆ ಹಾಗುತ್ತೆ. ತಪ್ಪು ಮಾಡಿರುವ ವ್ಯಕ್ತಿ ತನ್ನ ತಪ್ಪನ್ನು ಅರಿತು, ಆ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿ, ಆ ಪ್ರಯತ್ನದಲ್ಲಿ ಯಶಸ್ವಿಯು ಆಗುತ್ತಾನೆ. ಆದರೆ, ಅದ್ಯಾಕೊ ಗೊತ್ತಿಲ್ಲ, ತಪ್ಪು ಮಾಡಿರುವ ವ್ಯಕ್ತಿ ಜೊತೆ ಇರುವವರು ಮಾತ್ರ ತುಂಬಾ ದಿನಗಳ ನಂತರ ಸಹ ಆ ತಪ್ಪನ್ನ ತಮ್ಮ ಪ್ರತಿ ಮಾತಿನಲ್ಲೂ ಹೇಳುತ್ತಿರುತ್ತಾರೆ. ತಪ್ಪು ಮಾಡಿರುವ ವ್ಯಕ್ತಿಗಿಂತ ಇವರೇ ಆ ತಪ್ಪಿನ ಬಗ್ಗೆ ತುಂಬಾ ಚಿಂತೆ ಮಾಡ್ತಾ, ಬಹಳ ಚಡಪಡಿಸುತ್ತಿರುತ್ತಾರೆ. ಈ ರೀತಿಯ ಸನ್ನಿವೇಶವನ್ನು ನಿರೂಪಿಸುವ ಸಣ್ಣಕಥೆಯೊಂದು ಇಲ್ಲಿದೆ:


ಇಬ್ಬರು ಸನ್ಯಾಸಿಗಳು ಜೊತೆಯಲ್ಲಿ ಹೋಗುತ್ತಿದ್ದರು. ಹಾದಿಯ ಮಧ್ಯೆ ತುಂಬಿ ಹರಿಯುವ ನದಿ ಸಿಕ್ಕಿತು. ದಾಟಲು ಸೇತುವೆಯೂ ಇರಲಿಲ್ಲ. ದೋಣಿಯೂ ಇರಲಿಲ್ಲ. ಹಠಯೋಗಿಗಳಾದ ಇಬ್ಬರೂ ನದಿಯನ್ನು

ದಾಟಲು ಸಿದ್ಧರಾದರು. ಆ ಹೊತ್ತಿಗೆ ಹೆಣ್ಣು ಧ್ವನಿಯೊಂದು ಕೇಳಿಸಿತು. ಸುಂದರ ಯುವತಿಯೊಬ್ಬಳು'ನನಗೆ ಈಜು ಗೊತ್ತಿಲ್ಲ. ಆಚೆ ದಡಕ್ಕೆ ಹೋಗಲೇಬೇಕಾಗಿದೆ. ನೀವು ಸಹಾಯ ಮಾಡುತ್ತೀರಾ?' ಎಂದು ಕೇಳುತ್ತಿದ್ದಾಳೆ.

ಇದನ್ನು ಸನ್ಯಾಸಿಗಳಲ್ಲಿ ಒಬ್ಬ 'ಸ್ತ್ರೀ ಸ್ಪರ್ಶದಿಂದ ತಮ್ಮ ಬ್ರಹ್ಮಚರ್ಯ ನಷ್ಟವಾಗಬಹುದು' ಎಂದು ತನ್ನ ಜೊತೆಗಾರನ ಬಳಿ ಅನುಮಾನ ವ್ಯಕ್ತಪಡಿಸಿದ. ಜೊತೆಗಾರ ಇದನ್ನು ಗಮನಕ್ಕೆ ತೆಗೆದುಕೊಳ್ಳದೆ ಆ ಯುವತಿಯನ್ನು ಹೊತ್ತು ನದಿ ದಾಟಿ ಆಕೆಯನ್ನು ಕೆಳಗಿಳಿಸಿದ. ಇದನ್ನು ಕಂಡ ಮತ್ತೊಬ್ಬನಿಗೆ ತಡೆಯಲಾರದಷ್ಟು ಕೋಪ ಬಂತು. ದಾರಿಯದ್ದಕ್ಕೂ ಸ್ತ್ರೀಯನ್ನು ಸ್ಪರ್ಶಿಸುವ ಮೂಲಕ ಮಾಡಿದ ಪಾಪದ ಪರಿಣಾಮಗಳನ್ನೂ ಹೇಳುತ್ತಾ ಹೋದ. ನಿನ್ನ ಸನ್ಯಾಸವೇ ವ್ಯರ್ಥವಾಯಿತು ಎಂದು ದೂಷಿಸಿದ. ಅಂದು ತಡರಾತ್ರಿಯ ತನಕವೂ ಈ ಟೀಕೆಗಳು ಮುಂದುವರಿದವು. ಯಾವ ಟೀಕೆಗೂ ಪ್ರತಿಕ್ರಿಯಿಸದ ಯುವತಿಯನ್ನು ಹೊತ್ತು ನದಿ ದಾಟಿಸಿದ ಸನ್ಯಾಸಿ ಕೊನೆಗೊಮ್ಮೆ ಪ್ರತಿಕ್ರಿಯಿಸಿದ 'ನಾನು ಆಕೆಯನ್ನು ನದಿ ದಾಟಿದ ತಕ್ಷಣ ಕೆಳಗಿಳಿಸಿದೆ. ನೀನಿನ್ನೂ ಅವಳನ್ನು ಹೊತ್ತುಕೊಂಡೇ ಇದ್ದೀಯ...'


ಇತ್ತೀಚೆಗೆ ’ನೈಸ್’ ರಸ್ತೆ ವಿವಾದದ ಸಲುವಾಗಿ ರೈತರ ಪರ (?) ಹೋರಾಟಕ್ಕಿಳಿದಿದ್ದ (ಈ ಹೋರಾಟವು ರಾಜಕೀಯ ತಂತ್ರವಷ್ಟೇ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ) ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಯಡಿಯುರಪ್ಪನವರ ವಿರುದ್ದ ಪ್ರತಿಭಟಿಸುವಾಗ ’ಬ್ಲಡಿ ಬಾಸ್ಟರ್ಡ್’ ಎಂದು ನಿಂದಿಸಿದ್ದು, ರಾಜಕೀಯ ಹಾಗು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು.
ತನ್ನ ತಪ್ಪನ್ನು ಅರಿತು, ತನ್ನ ಹೇಳಿಕೆಯನ್ನು ಗೌಡರು ಹಿಂದಕೆ ಪಡೆದದ್ದೂ ಆಯಿತು. ಆದರೂ, ಮಾಧ್ಯಮದವರು ಮಾತ್ರ ಈ ಸುದ್ದಿಯನ್ನು ಮಾತ್ರ ಇನ್ನೂ ಜೀವಂತವಿರಿಸಿದ್ದಾರೆ.
ಗೌಡರು ಈ ದೇಶದ ಪ್ರಧಾನಿ ಹುದ್ದೆಯಲ್ಲಿದ್ದವರು, ಮೂರು, ನಾಲ್ಕು ದಶಕಗಳ ರಾಜಕೀಯ ಅನುಭವವಿರುವವರು. ಅಂಥವರು ಈ ರೀತಿ ಮಾತಾಡಬಾರದಿತ್ತು. ಆದರೇಕೊ ಸಂಯಮ ಕಳೆದುಕೊಂಡುಬಿಟ್ಟರು. ಈ ಮಾತು ಎಲ್ಲರಿಗೂ ಒಂದು ಪಾಠವಾಗಲಿ ಎಂದು ಮಾಧ್ಯಮಗಳೇಕೆ ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಬಾರದು...??!!