Tuesday, January 15, 2013

ಒಂದಷ್ಟು ಅಚ್ಚರಿ, ಒಂದಿಷ್ಟು ಬೇಸರ ಹಾಗೂ ಒಂದೊಳ್ಳೆ ಪಾಠ


ಮೊನ್ನೆ ದಿನ, ಶನಿವಾರ, ಮಧು, ದೀಪಕ್, ಯೋಗೇಶ್ ಹಾಗೂ ನಾನು, ಅವಿರತದ ೫ನೇ ವಾರ್ಷಿಕೋತ್ಸವದ 'ಹೆಜ್ಜೆ-ಗೆಜ್ಜೆ' ಕಾರ್ಯಕ್ರಮಕ್ಕೆ ಅವಿರತದ ಸದಸ್ಯರನ್ನು ಆಹ್ವಾನಿಸುವ ಕೆಲಸ ನಿಗದಿಪಡಿಸಿಕೊಂಡಿದ್ದೆವು. ಗಿರಿನಗರ, ಶ್ರೀನಗರ, ಹನುಮಂತನಗರ, ಬಸವನಗುಡಿ, ಜಯನಗರದಲ್ಲಿನ ಸುಮಾರು ೧೫ ಜನ ಅವಿರತ ಸದಸ್ಯರ ಮನೆಗೆ ಹೋಗಿ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ನಮ್ಮ ತಂಡದ ಜವಾಬ್ದಾರಿಯಾಗಿತ್ತು. ನಾನು ಸುಮಾರು ೧೦.೨೦ ರ ವೇಳೆಗೆ ಬಸವನಗುಡಿಯ ಹಳ್ಳಿ ತಿಂಡಿ ಹೋಟೆಲ್ ಬಳಿ ದೀಪಕ್ ಹಾಗೂ ಮಧು ಅವರನ್ನು ಸೇರಿಕೊಂಡೆ. ಆನಂತರ, ಜಯನಗರದಲ್ಲಿ ಯೋಗೇಶ್ ಜೊತೆಯಾದರು.

ನನಗೆ ದೀಪಕ್ ಅವರ ಪರಿಚಯವಿತ್ತಾದರೂ, ಭೇಟಿಯಾದ ಸಂದರ್ಭಗಳು ಬಹಳ ಕಡಿಮೆ. ಯೋಗೇಶ್ ಅವರ ಪರಿಚಯ ಚೆನ್ನಾಗಿಯೇ ಇದೆ; ಕೆಲಸದ ಸಲುವಾಗಿ ಆಗಾಗ ಅಮೆರಿಕಾಗೆ ಹೋಗಿ ಬರುವ ಅವರು ಬೆಂಗಳೂರಿನಲ್ಲಿದ್ದಾಗ ಅವಿರತದ ಯಾವುದೇ ಕಾರ್ಯಕ್ರಮವಿದ್ದರೂ ತಪ್ಪದೇ ಹಾಜರಾಗುತ್ತಾರೆ. ಅಲ್ಲದೇ, ಅವಿರತದ ಎರಡು ಪ್ರವಾಸಗಳಿಗೂ ಬಂದಿದ್ದರು. ಮಧುಸೂದನ್ ಅವರ ಪರಿಚಯ ತೀರಾ ತೀರಾ ಕಡಿಮೆ. ಅವಿರತದ ಕಾರ್ಯಕ್ರಮವೊಂದರಲ್ಲಿ ಅವರನ್ನು ನೋಡಿದ್ದ ನೆನಪು ಬಿಟ್ಟರೆ, ಅವರ ಪರಿಚಯ ಅಷ್ಟಾಗಿ ಇರಲಿಲ್ಲ. ಆಹ್ವಾನ ಪತ್ರಿಕೆ ವಿತರಿಸುವ ನಮ್ಮ ತಂಡದ ಉಸ್ತುವಾರಿಯನ್ನು ಮಧು ಅವರಿಗೆ ವಹಿಸಲಾಗಿತ್ತು. ಇವರಿಗೆ ಈ ಪ್ರದೇಶದ ರಸ್ತೆ, ಗಲ್ಲಿಗಳೆಲ್ಲಾ ಚಿರಪರಿಚಿತ!! ನಾವು ಹೋಗಬೇಕಿರುವ ಸದಸ್ಯರಿಗೆ ಕರೆ ಮಾಡಿ, ಅವರ ವಿಳಾಸವನ್ನು ಕೇಳಿ, ಚಿಟಿಕೆ ಹೊಡೆಯುವಷ್ಟರಲ್ಲಿ, ಯಾವುದೇ ಶ್ರಮವಿಲ್ಲದೆ, ಅಲ್ಲಿಗೆ ತಲುಪಲು ಬೇಕಿರುವ ’ರೋಡ್ ಮ್ಯಾಪ್’ ಅನ್ನು ಸಿದ್ದಮಾಡಿಬಿಡುತ್ತಿದ್ದರು!! ನಂತರ ಯಾವುದೇ ಗೊಂದಲವಿಲ್ಲದೆ, ಒಂದು ತಿರುವೂ ಹೆಚ್ಚು-ಕಡಿಮೆ ಮಾಡದೆ ಆ ಮನೆ ತಲುಪಿಸುತ್ತಿದ್ದರು! ಇತರ ಎಲ್ಲಾ ವಾಹನ ಸವಾರರಂತೆ, ಇವರಿಗೂ ಸಿಗ್ನಲ್‍ಗಳಲ್ಲಿ ನಿಲ್ಲುವುದೆಂದರೆ ಇಷ್ಟವಿಲ್ಲ. ಅಲ್ಲದೆ, ಪ್ರತಿನಿತ್ಯ ಇದೇ ಮಾರ್ಗದಲ್ಲಿ ಹೆಚ್ಚಾಗಿ ಓಡಾಡುವುದರಿಂದ, ಸಿಗ್ನಲ್‍ಗಳನ್ನು ತಪ್ಪಿಸಿಕೊಳ್ಳಲು ಒಳದಾರಿಗಳನ್ನು ಕಂಡುಹಿಡಿದುಕೊಳ್ಳುವುದು ಅನಿವಾರ್ಯವಾಯಿತೆಂದು ಹೇಳಿದರು. ಮಾರ್ಗ ಮಧ್ಯೆ, ಖಾಲಿ ಸೈಟುಗಳನ್ನೋ, ಮತ್ತ್ಯಾವುದೋ ಕಟ್ಟಡವನ್ನೋ ನೋಡಿ ಅಚ್ಚರಿ ಹುಟ್ಟುವಂತಹ ಸಂಗತಿಗಳನ್ನು ಹೇಳುತ್ತಿದ್ದರು. ಬೆಂಗಳೂರಿನ ’Shopping Centre' ಅಥವಾ ’Commercial Area' ಅನ್ನುವ ಹೆಗ್ಗಳಿಕೆ, ಎಂ.ಜಿ. ರಸ್ತೆಯಿಂದ ಕೋರಮಂಗಲಕ್ಕೆ ವರ್ಗಾವಣೆಯಾಗಿ ವರ್ಷಗಳೇ ಕಳೆದಿವೆ. ಈಗ ಕೋರಮಂಗಲವೂ ಸಹ ಈ ವಿಷಯದಲ್ಲಿ ’Saturation Point' ತಲುಪುತ್ತಿದೆ ಎನ್ನುವ ವದಂತಿಯ ಹಿನ್ನೆಲೆಯಲ್ಲಿ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಮುಂದಿನ ದಿನಗಳಲ್ಲಿ ಆ ಹೆಗ್ಗಳಿಕೆಯು ಕೋರಮಂಗಲದಿಂದ ಜಯನಗರಕ್ಕೆ ವರ್ಗಾವಣೆಯಾಗುವ ಸಾಧ್ಯತೆಗಳು ಹೆಚ್ಚಿವೆಯಂತೆ ಎಂದು ತಿಳಿಸಿದರು! ಒಂದು ವೇಳೆ ಹಾಗೇನಾದರೂ ಆದರೆ, ಜಯನಗರ ನಾಲ್ಕನೇ ಬ್ಲಾಕ್‍ನಲ್ಲಿ ಈಗಿರುವ ಒಂದು ಆಹ್ಲಾದತೆ, ಸಾಂಪ್ರಾದಾಯಿಕತೆಗೆ ಯಾವುದೇ ತೊಂದರೆ ಆಗದೇ ಇರಲಿ ಎಂದು ಮನ ಬೇಡುತ್ತಿರುವ ವೇಳೆಗೆ, ಜಯನಗರದಲ್ಲಿರುವ ಸಣ್ಣ ಹೋಟೆಲೊಂದರ ದೊಡ್ಡ ಸಾಮರ್ಥ್ಯವನ್ನು ಹೇಳಿ ನಮ್ಮೆಲ್ಲರಿಗೂ ಅಚ್ಚರಿ ಹುಟ್ಟಿಸಿದರು. ತನ್ನ ಹೋಟೆಲ್ ಸುತ್ತ ಇರುವ ಸರ್ಕಾರಿ ಕಛೇರಿಗಳು, ಸರ್ಕಾರಿ ಆದೇಶದಂತೆ ಜಯನಗರದಲ್ಲೇ ಇರುವ ಮತ್ತಷ್ಟು ವ್ಯವಸ್ಥಿತ ಜಾಗಕ್ಕೆ ಸ್ಥಳಾಂತರಗೊಂಡರೆ, ತನ್ನ ವ್ಯಾಪಾರಕ್ಕೆ ಭಾರಿ ಹೊಡೆತ ಬೀಳುತದೆ ಎನ್ನುವ ಕಾರಣಕ್ಕಾಗಿ ಸಾರ್ವಜನಿಕ ಪರವಾದ ಒಂದು ಸರ್ಕಾರಿ ನಿರ್ಧಾರವನ್ನು ತಡೆ ಹಿಡಿದಿರುವುದನ್ನು ಕೇಳಿ ನಿಜಕ್ಕೂ ಆಶ್ಚರ್ಯವಾಯಿತು.

ಹೀಗೆ, ಆಸಕ್ತಿಕರ ಸಂಗತಿಗಳನ್ನು ಹೇಳುತ್ತಾ, ಕೆಲವೊಮ್ಮೆ ವ್ಯಂಗ್ಯ ಮಾಡುತ್ತಾ ಮಧು ಅವರು ದೀಪಕ್ ಅವರಿಗೆ ದಾರಿ ತೋರಿಸುತ್ತಿದ್ದರು. ಮಧು ಅವರ ನಿರ್ದೇಶನದಂತೆ ಕಾರು ಓಡಿಸುತ್ತಿದ್ದ ದೀಪಕ್ ಅವರು, ಶ್ರಮವಾಗದಂತೆ ಕಾರು ಓಡಿಸಲು ಪ್ರಯತ್ನಿಸುತ್ತಿದ್ದರು. ಈಗೀಗ ಕಾರು ಕಲಿಯುತ್ತಿರುವ ದೀಪಕ್ ಅವರಿಗೂ, ಹಾಗೂ ಬೈಕ್ ಕಲಿಯುತ್ತಿರುವ ನನಗೂ ಗಾಡಿ ಓಡಿಸುವ ಬಗ್ಗೆ ಒಂದೇ ರೀತಿಯ ಸಂದೇಹಗಳಿವೆ. :) ’ಸಿಟಿಯಲ್ಲಿ ಗಾಡಿ ಓಡಿಸುವಾಗ, ಸಣ್ನ ಅಂತರದಲ್ಲಿಯೇ ಹಲವು ಬಾರಿ ಗೇರ್ ಬದಲಾಯಿಸಬೇಕಾಗುತ್ತದೆ. ಇದು ಸರಿಯಾ?! ಇದರಿಂದ ಎಂಜಿನ್ನಿಗೆ ತೊಂದರೆಯಾಗುತ್ತದೆಯಾ?! ’, ’ಯಾವ ಸ್ಪೀಡಿನಲ್ಲಿ ಯಾವ ಗೇರ್‌ನಲ್ಲಿ ಓಡಿಸಬೇಕು?’ ಹೀಗೆ ದೀಪಕ್ ಅವರು ಮಧು ಅವರನ್ನು ಕೇಳುತ್ತಿದ್ದ ಪ್ರಶ್ನೆಗಳು ನನ್ನ ಪ್ರಶ್ನೆಗಳೂ ಆಗಿದ್ದವು. ಇದಕ್ಕೆಲ್ಲಾ ಉತ್ತರವಾಗಿ ಮಧು ಅವರು ಹೇಳುತ್ತಿದ್ದ ಮಾತುಗಳು ಕೆಲವು ಅರ್ಥವಾಗುತ್ತಿದ್ದರೆ, ಮತ್ತಷ್ಟು ಅರ್ಥವೇ ಆಗುತ್ತಿರಲಿಲ್ಲ.

ಯಾವುದೇ ಸದಸ್ಯರ ಮನೆಗೆ ಹೋಗುವ ಮೊದಲು, ಅವರ ವಿಳಾಸ ಕೇಳಲು ಅವರಿಗೆ ಕರೆ ಮಾಡುತ್ತಿದ್ದೆವು. ಹೀಗೆ, ಕರೆ ಮಾಡಿದಾಗ, ಪ್ರತಿ ಸದಸ್ಯರೂ, ’ಅಯ್ಯೋ, ನಮ್ಮ ಮನೆ ಕಾರ್ಯಕ್ರಮಕ್ಕೆ ನಾವೇ ಕರೆಸಿಕೊಳ್ಳುವುದೇ?!! ನಾವು ಖಂಡಿತ ಬರುತ್ತೇವೆ’ ಎಂದು ಹೇಳುತ್ತಿದ್ದರು. ಹೀಗೆ ಹೇಳುತ್ತಿದ್ದುದು ಅವಿರತದೆಡೆಗಿನ ಸದಸ್ಯರೆಲ್ಲರ ಪ್ರೀತಿ, ಗೌರವಗಳನ್ನು ತೋರುತ್ತಿತ್ತು. ಅವರಂತೆ, ಅವರ ಮನೆಯವರಿಗೂ ಅವಿರತದ ಕಾರ್ಯಕ್ರಮ ಮನೆ ಕಾರ್ಯಕ್ರಮವೆನಿಸುವಂತೆ ಮಾಡುವ ಸಲುವಾಗಿಯೇ ಈ ಬಾರಿಯ ಕಾರ್ಯಕ್ರಮವನ್ನು ಅವಿರತದ ಸದಸ್ಯರ ಕುಟುಂಬಗಳಿಗಷ್ಟೇ ಮೀಸಲುಮಾಡಲಾಗಿದೆ. ತುಂಬಾ ಜನ ಸದಸ್ಯರ ಮನೆಯಲ್ಲಿ ಅವಿರತ ಮತ್ತದರ ಧ್ಯೇಯೋದ್ದೇಶಗಳ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲವಾದರೂ, ಒಂದು ಕಲ್ಪನೆಯಾದರೂ ಇದೆ. ಆಶ್ಚರ್ಯವೆಂದರೆ, ಐದನೇ ವಾರ್ಷಿಕೋತ್ಸವದ ಕಾರ್ಯಕ್ರಮದ ಬಗ್ಗೆ ಅವರಲ್ಲಿ ಈಗಾಗಲೇ ಒಂದಷ್ಟು ನಿರೀಕ್ಷೆಗಳಿವೆ. ಅದರಲ್ಲೂ ಕೆಲವು ಸದಸ್ಯರು, ಯಾವ ಯಾವ ಕಾರ್ಯಕ್ರಮಗಳಿವೆ?! ಕಾರ್ಯಕ್ರಮಗಳ ಸಿದ್ದತೆ ಹೇಗಿದೆ? ಯಾರು ಯಾವ ಜವಾಬ್ದಾರಿ ವಹಿಸಿಕೊಂಡಿದ್ದಾರೆ? ಎಂದೆಲ್ಲಾ ವಿಚಾರಿಸಿಕೊಂಡರು.

ಸುಮಾರು ಎರಡು-ಮೂರು ತಿಂಗಳ ಹಿಂದೆ, ವಿಜಯನಗರದಲ್ಲಿರುವ ನಟ ಶ್ರೀನಾಥ್ ವಸಿಷ್ಠ ಅವರ ಮನೆಯ ಮಹಡಿಯ ಮೇಲೆ ಅವಿರತದ ಸದಸ್ಯರೆಲ್ಲ ಭೇಟಿಯಾಗಿ ಐದನೇ ವಾರ್ಷಿಕೋತ್ಸವದ ಕಾರ್ಯಕ್ರಮದ ರೂಪು ರೇಷೆಗಳನ್ನು ಚರ್ಚಿಸುತ್ತಾ, ಈ ಬಾರಿಯ ಕಾರ್ಯಕ್ರಮವನ್ನು ಸಾರ್ವಜನಿಕಗೊಳಿಸದೆ, ಕೇವಲ ಸದಸ್ಯರುಗಳೆಲ್ಲಾ ಸೇರುವ ವಾರ್ಷಿಕ ಸಭೆಯಂತೆ ಮಾಡದೆ, ಕಾರ್ಯಕ್ರಮದಲ್ಲಿ ಸದಸ್ಯರ ಕುಟುಂಬದವರನ್ನು ಆಹ್ವಾನಿಸಿ, ಅವರಿಗೂ ಅವಿರತದ ಪರಿಚಯ ಮಾಡಿಕೊಡೋಣ ಎಂದು ತೆಗೆದುಕೊಂಡ ನಿರ್ಧಾರಕ್ಕೆ ಮೊದಲ ಹಂತದ ಪ್ರತಿಕ್ರಿಯೆಗಳನ್ನು ಆಹ್ವಾನ ಪತ್ರಿಕೆ ವಿತರಣೆ ಸಂದರ್ಭದಲ್ಲಿ ಕಂಡು ಬಹಳ ಖುಷಿಯಾಯಿತು. ಇನ್ನೇನಿದ್ದರೂ, ಅವರ ನಿರೀಕ್ಷೆಗಳನ್ನು ತಲುಪುವಂತೆ ನಮ್ಮ ಕಾರ್ಯಕ್ರಮಗಳನ್ನು ಮತ್ತಷ್ಟು ಮುತುವರ್ಜಿಯಿಂದ, ಕಾಳಜಿಯಿಂದ ಪ್ರಸ್ತುತಪಡಿಸುವ ಕಡೆ ನಾವೆಲ್ಲಾ ಗಮನ ಕೊಡಬೇಕಿದೆ.

ಇದೇ ಸಂದರ್ಭದಲ್ಲಿ, ತಿಳಿಯದೆ ನನ್ನಿಂದ ಒಂದು ತಪ್ಪು ನಡೆದು ಹೋಯಿತು. ಯೋಗೇಶ್ ಅವರ ಮನೆಯಲ್ಲಿರುವಾಗ ಅವರ ಶ್ರೀಮತಿಯವರು ನಮಗೆಲ್ಲಾ ಟೀ ಮಾಡಿ ತಂದರು. ಕಾಫೀ, ಟೀ ಅಭ್ಯಾಸ ಇಲ್ಲದ ನಾನು ಎಂದಿನಂತೆ, ’ಕ್ಷಮಿಸಿ, ಮೇಡಮ್..ನಾನು ಟೀ ಕುಡಿಯೋದಿಲ್ಲ’ ಎಂದು ವಿನಯದಿಂದಲೇ, ನಗುತ್ತಾ ಹೇಳಿಬಿಟ್ಟೆ. ಆಗ ಅವರು, ’ಓಹ್, ಸ್ಸಾರಿ...ಹಾಲು ಕೊಡ್ತೀನಿ ಇರಿ’ ಎಂದು ಏನೋ ತಪ್ಪಾದವರಂತೆ, ಕೂಡಲೇ ಅಡುಗೆ ಮನೆ ಕಡೆ ನಡೆದುಬಿಟ್ಟರು. ಕೇವಲ ಒಂದೆರಡು ಸೆಕೆಂಡ್‍ಗಳಲ್ಲಿ ಇದು ನಡೆದುಹೋದರು, ನನಗೂ ನಾನು ಮಾಡಿದ್ದು ಸರಿಯಲ್ಲವೆನಿಸಲು ಅಷ್ಟೇ ಸಮಯ ಸಾಕಾಯಿತು.

ಸ್ನೇಹಿತರು, ಕುಟುಂಬದರು, ಸಂಬಂಧಿಕರು, ಆಫೀಸಿನ ಸಹ್ಯೋದೊಗಿಗಳು, ಹೀಗೆ ಇವರೆಲ್ಲರ ಜೊತೆಗಿನ ಒಡನಾಟ ಪ್ರತಿದಿನ ಇರುವಂತದ್ದು. ಇವರಿಗೆಲ್ಲಾ ನನ್ನ ಅಹಾರಾಭ್ಯಾಸಗಳ ಪರಿಚಯವಿರುತ್ತದೆ. ಹಾಗಾಗಿ, ಇವರಿಗೆಲ್ಲಾ, ನಾನು ಕಾಫೀ, ಟೀ ಕುಡಿಯುವುದಿಲ್ಲ, ಮಾಂಸಾಹಾರಿ ಅಲ್ಲ, ಊಟದ ವಿಚಾರದಲ್ಲಿ ನಾನು ಹೆಚ್ಚಿನ ಆಯ್ಕೆಗಳಿಟ್ಟುಕೊಂಡಿಲ್ಲ ಎಂದು ತಿಳಿದಿದೆ. ಆದ್ದರಿಂದ,ಅವರಲ್ಲಿ ಯಾರಾದರೂ ಒಮ್ಮೊಮ್ಮೆ ’ಟೀ ತಗೊಳ್ಳೊ..’, ’ಕಾಫೀ ಕುಡಿಯೋ’ ಅಂದಾಗ, ’ಇಲ್ಲಪ್ಪಾ, ಟೀ-ಕಾಫೀ ಕುಡಿದು ಅಭ್ಯಾಸವಿಲ್ಲವಲ್ಲ’ ಅಂತ ಹೇಳಿದರೆ ನಡೆಯುತ್ತದೆ. ಅಷ್ಟಕ್ಕೂ, ನಾನು ಕಾಫಿ, ಟೀ ಸೇವನೆಯಿಂದಾಗುವ ಅನಾನುಕೂಲಕ್ಕೆ ಹೆದರಿ ಅದನ್ನು ಸೇವಿಸುದಿಲ್ಲ ಅಂತಲ್ಲ. ಯಾಕೋ ಅಭ್ಯಾಸ ಮಾಡಿಕೊಂಡಿಲ್ಲ ಅಷ್ಟೆ. ಆದರೆ, ಇದ್ಯಾವುದೂ ತಿಳಿಯದೆ, ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವ ಸಲುವಾಗಿ, ವಿಶ್ವಾಸದಿಂದ ಟೀ ಮಾಡಿ ತಂದಾಗ ’ನಾನು ಟೀ ಕುಡಿಯೋದಿಲ್ಲ’ ಅಂತ ಹೇಳಿ ಅವರನ್ನು ಪೇಚಿಗೆ ಸಿಲುಕುವಂತೆ ಮಾಡಿ ತಪ್ಪು ಮಾಡಿಬಿಟ್ಟೆ. :(

ಆ ಕ್ಷಣವೇ, ಇನ್ನು ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು ಎಂದು ನಿರ್ಧರಿಸಿ, ಮನೆಯಿಂದ ಹೊರಬಂದ ನಂತರ ಯೋಗೇಶ್ ಅವರಲ್ಲಿ ನನ್ನ ಮನಸ್ಸಲ್ಲಿನ ತಳಮಳವನ್ನು ಹೇಳಿಕೊಂಡು ಕ್ಷಮೆ ಕೇಳಿದೆ.

ಅಲ್ಲಿಂದ ಮುಂದೆ, ಜಯನಗರದಲ್ಲಿರುವ ವಿಶ್ವನಾಥ್ ಅವರ ಮನೆಗೆ ಹೋದಾಗ, ಅಲ್ಲಿಯೂ ಸಹ ಟೀ ಕೊಟ್ಟರು, ಕುಡಿದೆ. ಅವರ ಅತಿಥಿ ಸತ್ಕಾರಕ್ಕೆ ತೊಡಕಾಗಲಿಲ್ಲ, ನನಗೂ ಸಮಾಧಾನವಾಯಿತು.


Tuesday, January 1, 2013

೨೦೧೨

ನಸಾಗುವುದೇ ಇಲ್ಲವೆಂದು ನಾನು ನೆನೆಸಿದ್ದ ಹಲವು ಕನಸುಗಳು ಅಚ್ಚರಿಯೆನಿಸುವಂತೆ ನನಸಾಗಿ ತಂದ ಖುಷಿಯ ನಡುವೆಯೇ, ನನಸಾಗಲಿ ಎಂದು ಬಯಸಿದ್ದ ಆಪ್ತ ಕನಸೊಂದು ಕರಗಿ ಹೋದಂತಹ ವರ್ಷ ೨೦೧೨!!

೨೦೧೩ ಎಲ್ಲರಿಗೂ ಶುಭ ತರಲಿ.... :)