Tuesday, November 13, 2012

ದೀಪ - ಬೆಳಕು

ನಾನೊಂದು ಪುಟ್ಟ ದೀಪ… ಬೆಳಕ ನೀಡುವುದೇ ನನ್ನ ಕೆಲಸ.

ಸುಡುವುದು ಬತ್ತಿ, ಬಿಸಿಯಾಗುವುದು ಎಣ್ಣೆ, ತಾಪ ಸಹಿಸುವುದೀ ಬಟ್ಟಲು.

ಯಾವುದಕ್ಕೂ ತಕರಾರಿಲ್ಲ ನನಗೆ, ಬೇಸರವೂ ಇಲ್ಲ;

ಎಲ್ಲವನ್ನೂ ಹೀರಿ, ಬೆಳಕ ನೀಡುವುದರಲ್ಲಿ ಖುಷಿ ಇದೆ.

ಬೆಳಕು ಆರದಂತೆ ಜೋಪಾನ ಮಾಡಿಬಿಡಿ ಸಾಕಷ್ಟೇ;

ಇಲ್ಲವಾದರೆ ಯಾರೊಬ್ಬರಿಗೂ ಬದುಕಿನ ಧನ್ಯತೆ ಇಲ್ಲ;

ನಿನ್ನ ನಾ ನೋಡಲಾಗುವುದಿಲ್ಲ…ನಿನಗೆ ನೀನೆ ಕಾಣುವುದೂ ಇಲ್ಲ...

Sunday, November 4, 2012

’31-10-2012, ಬುಧವಾರ - ದುರಂತಗಳ ದಿನ’


ಮುದೊಂದು ದಿನ ಈಗ ನಾನು ಮಾಡುತ್ತಿರುವ ಟಿಪ್ಪಣಿಗಳನ್ನು ನೋಡಿದಾಗ,  31-10-2012, ಬುಧವಾರ, ನನಗೆ ದುರಂತಗಳ ದಿನವೆಂದೇ ನೆನಪಾಗುವುದೇನೋ!! ಹಾಗೆಂದ ಮಾತ್ರಕ್ಕೆ, ಯಾವುದೋ ಸಹಿಸಲಸಾಧ್ಯ ಘಟನೆಯೊಂದು ನಡೆಯಿತೆಂದು ತಿಳಿಯ ಬೇಕಿಲ್ಲ. ಬೆಂಗಳೂರೆಂಬ ಯಂತ್ರಗಳ ನಗರಿಯಲ್ಲಿ, ರಸ್ತೆಗಳನ್ನು ಖಾಲಿ ಬಿಡುವುದೇ ಅಪರಾಧವೇನೋ ಎಂಬಂತೆ, ಸದಾ ರಸ್ತೆ ತುಂಬಿಕೊಂಡಿರುವ ವಾಹನಗಳು, ಹಠಾತ್ತನೆ ರಸ್ತೆಗಿಳಿಯದೇ, ಪಕ್ಕದಲ್ಲಿ ನಿಂತು, ಎಲ್ಲೆಲ್ಲೂ ಖಾಲಿ ಖಾಲಿಯಾದ ರಸ್ತೆಗಳೇ ಕಂಡರೆ, ಇದನ್ನು ದುರಂತವೆನ್ನಬೇಕೋ ಅಥವಾ ಇದರಿಂದ ಸಂತಸ ಪಡಬೇಕೋ..!?!!

ದುರಂತ ಪರಿಸ್ಥಿತಿಯ ನಡುವೆ, ದುರಂತಗಳ ಜೊತೆ ಜೊತೆಗೆ ಸಂತಸ ಅರಳಿದ ದಿನವದು.

ದುರಂತ - ೧
ಅವತ್ತಿನ ದಿನ ’ಸ್ಯಾಂಡಿ’ ಎಂಬ ಪ್ರಚಂಡ ಚಂಡಮಾರುತ ದೂರದ ಅಮೆರಿಕಾದಲ್ಲಿನ ಪೂರ್ವ ಕರಾವಳಿಯಲ್ಲಿ ನಡೆಸಿದ ಅಟ್ಟಹಾಸದಿಂದ ಮಿಲಿಯನ್ ಗಟ್ಟಲೆ ಜನರ ಬದುಕು ಅಸ್ತವ್ಯಸ್ತವಾಗಿ, ಅಪಾರ ಆರ್ಥಿಕ ನಷ್ಟ ಉಂಟಾಗಿತ್ತು. ಈ ಒಂದು ಘಟನೆ, ೨೦೧೨ ರ ಮಹಾಪ್ರಳಯಕ್ಕೆ ಮುನ್ಸೂಚನೆ ಎಂದು ಗುಸು ಗುಸು ಶುರುವಾಗಿತ್ತು.

ದುರಂತ – ೨

ಮಹಾಪ್ರಳಕ್ಕೆ ಮುನ್ಸೂಚನೆ ಎಂಬ ಗುಸು ಗುಸು, ಇನ್ನು ಹಸಿ ಹಸಿಯಾಗಿರುವಾಗಲೇ, ’ಚೆನ್ನೈನಲ್ಲಿ ’ನೀಲಂ’ ಎಂಬ ಮಹಾ ಮಾರುತದ ನಿರೀಕ್ಷೆ; ತೀರ ಪ್ರದೇಶದ ಜನರ ಸ್ಥಳಾಂತರ’ ಎಂಬ ಸುದ್ದಿ.  ಗಂಟೆಗೆ ೯೦ ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿ, ಮಳೆಯಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಚೆನೈನ ವ್ಯವಹಾರಗಳು ಅರ್ಧದಿನಕ್ಕೆ ನಿಂತು ಹೋಗಿವೆ.

ಯಥಾಪ್ರಕಾರ ಚೆನೈನಲ್ಲಿ ಸೈಕ್ಲೋನ್ ಬಂದರೆ, ಬೆಂಗಳೂರಿನಲ್ಲಿ ಮಳೆಯಾಗುವ ಅಭ್ಯಾಸ ಅಂದೂ ಕೂಡ ಮುಂದುವರಿದಿತ್ತು.  ಜೋರಾಗಿ ಸುರಿದು  ಸುಮ್ಮನೆ ನಿಂತುಬಿಡಬಹುದಾದ ಮಳೆಯಾಗಿರಲಿಲ್ಲ ಅದು. ಜಡಿ ಮಳೆ..ಒಮ್ಮೊಮ್ಮೆ ಜೋರು, ಒಮ್ಮೊಮ್ಮೆ ಸಣ್ಣ.

ದುರಂತ – ೩

ಅಂದು ಕುವೆಂಪು ಬರೆದಿರುವ ’ಹಾಳೂರು’ ಎಂಬ ನೀಳ್ಗವಿತೆಯ ಪರಿಚಯವಾಯಿತು. ಈ ನೀಳ್ಗವಿತೆಯಲ್ಲಿ ಕುವೆಂಪುರವರು ಜನ ಹಳ್ಳಿಗಳನ್ನು ತೊರೆದು ಪಟ್ಟಣ ಸೇರುವುದರಿಂದ ಸಮಾಜ, ಸಂಸ್ಕೃತಿಯಲ್ಲಿ ಆಗಿರುವ, ಆಗುತ್ತಿರುವ, ಆಗುವ ಭಯಾನಕ ಬದಲಾವಣೆಗಳನ್ನು ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ. ಸದ್ಯದ ಭಾರತದಲ್ಲಿನ ದುರಂತ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿರುವ ಈ ನೀಳ್ಗವಿತೆ ರಚಿತವಾದದ್ದು ಅಥವಾ ಮೊದಲ ಮುದ್ರಣ ಕಂಡಿದ್ದು ೧೯೨೬ರಲ್ಲಿ!! ಅದರೆ, ಇಂದಿಗೂ ನಾವು ಎಚ್ಚೆತ್ತುಕೊಳ್ಳದೇ ಇರುವುದು ದುರಂತವಲ್ಲವೇ?!

ದುರಂತ – ೪

ಅಂದು ಮೊಟ್ಟಮೊದಲ ಬಾರಿಗೆ ಶೇಕ್ಸ್ ಪಿಯರ್ ನ ನಾಟಕವನ್ನು ನೋಡುವ ಅವಕಾಶವಾಯಿತು. ಆದರೆ, ಅಂದು ನೋಡಿದ ಎರಡೂ ನಾಟಕಗಳು – ಲೇಡಿ ಮ್ಯಾಕ್ ಬೆತ್ ಮತ್ತು ಹ್ಯಾಮ್ಲೆಟ್ – ದುರಂತ ಕಥೆ ಇರುವಂತದ್ದು.!!!

ಉಪ ಸಂಹಾರ:

ನಾಟಕ ನೋಡಿ, ಮನೆಗೆ ಹಿಂದಿರುಗುವಾಗ ದುರಂತಗಳ ಸರಮಾಲೆಯಂತಿರುವ ಆ ದಿನದ ಬಗ್ಗೆ ಯೋಚಿಸುತ್ತಾ ಬರುತ್ತಿದೆ. ಈ ಎರಡೂ ದುರಂತ ನಾಟಕಗಳ ಪರಿಚಯ ನನಗಾಗಿದ್ದು, ಕುವೆಂಪುರವರ ’ಹಾಳೂರು’ ನೀಳ್ಗವಿತೆ ನನಗೆ ಸಿಕ್ಕಿದ್ದು, ದುರಂತ ದಿನ ಎಂದು ಆ ದಿನವನ್ನು ಕರೆಯಬೇಕೆಂದು ಯೋಚನೆ ಮೂಡಿದ್ದು ’ರಂಗ ಶಂಕರ’ ದಲ್ಲಿ. ಈ ’ರಂಗ ಶಂಕರ’ ದ ಹಿಂದಿರುವ ನಮ್ಮ ’ಶಂಕರ’, ಅಂದರೆ ’ಶಂಕರ್ ನಾಗ್’ ನ ಬದುಕಿನ ಅಂತ್ಯ ಕೂಡ ಒಂದು ದುರಂತವೇ…………