Thursday, February 28, 2013

ಅವಿರತ: ೨೦೧೩ ರ ಮುನ್ನೋಟ

ಅನಾಥ ಮಕ್ಕಳಿಗೆ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೆಲೆ ನೀಡುವುದರೊಂದಿಗೆ, ಅವರ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡು ಆ ಮಕ್ಕಳ ಬಾಳಿಗೆ ಒಂದು ನೆಲೆಯನ್ನು ಕರುಣಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ’ನೆಲೆ’ ಎಂಬ ಸ್ವಯಂ ಸೇವಾ ಸಂಸ್ಥೆಯಲ್ಲಿ ನಮ್ಮ ಅವಿರತದ ಸಭೆಯನ್ನು ಆಯೋಜಿಸಲಾಗಿತ್ತು.  ಸದಸ್ಯನಾಗಿ ಸಭೆಗೆ ಹೋದ ನಾನು ಪತ್ರಕರ್ತನ ಪಾತ್ರವನ್ನೂ ವಹಿಸಬೇಕಾಗಿ ಬಂತು.

ಪಕ್ಕಾ ಒಬ್ಬ ಪತ್ರಕರ್ತನಂತೆ ಸಭೆಯಲ್ಲಿ ಭಾಗವಹಿಸಿ, ಆನಂತರ ಅದರ ವರದಿಯನ್ನು ಬರೆದಿರುವಂತದ್ದೇ ’ಅವಿರತ: ೨೦೧೩ ರ ಮುನ್ನೋಟ’ ಎಂಬ ಲೇಖನ.  ಇಲ್ಲಿಯವರೆಗೂ, ಅವಿರತದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅವುಗಳ ಬಗ್ಗೆ ಅನಿಸಿಕೆಯನ್ನು ಬರೆದುಕೊಳ್ಳುತ್ತಿದ್ದ ನನಗೆ, ಭಾನುವಾರದ ಆ ಕಾರ್ಯಕ್ರಮದಂದು,  "ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ನೋಟ್ ಮಾಡಿಕೊಂಡು ಎಲ್ಲರಿಗೂ ಒಂದು ವರದಿ ಕಳಿಸಿಬಿಡು" ಎಂದು ಪುಸ್ತಕ, ಪೆನ್ನು ಕೊಟ್ಟು ಕೂರಿಸಿಬಿಟ್ಟರು.   
ಆಗ ಅನಿವಾರ್ಯವಾಗಿ ಬರೆಯಬೇಕಾದ ಸಂದರ್ಭ ಬಂದೊದಗಿತು.  ಬರೆಯುವುದನ್ನು ಪ್ರೀತಿಸುವ ನಾನು ಸಂತಸದಿಂದಲೇ ಒಪ್ಪಿಕೊಂಡೆ. ಬರೆಯುತ್ತಾ, ಬರೆಯುತ್ತಾ ಒಂದು ತಂಡವಾಗಿ ನಾವು ಹಮ್ಮಿಕೊಳ್ಳಲು ನಿರ್ಧರಿಸಿರುವ ಕಾರ್ಯಕ್ರಮಗಳ ಬಗ್ಗೆ, ಸಭೆಯಲಿ ಹರಿದಾಡಿದ ಯೋಚನಾ ಲಹರಿಯ ಬಗ್ಗೆ ಖುಷಿಯೆನಿಸಿ, ಹೆಮ್ಮೆ ಬೆಳೆಯುತ್ತಾ ಬಂದಿತು.  ಜೊತೆಗೇ, ಮಾಡಬೇಕಾಗಿರುವ ಕೆಲಸಗಳು ಬೆಟ್ಟದಷ್ಟಿವೆ ಎಂಬುದೂ ಅರಿವಾಗುತ್ತಿದೆ.

ಪ್ರೋತ್ಸಾಹ ಕೊಟ್ಟು, ಜವಾಬ್ದಾರಿಯುತ ಕೆಲಸವಹಿಸಿ, ಜೊತೆ ನಿಂತ ಅವಿರತದ ಎಲ್ಲಾ  ಹಿರಿಯರಿಗೂ ವಂದನೆಗಳು.... :) 

ಈ ವರದಿಯನ್ನು ನಾನು ಸಿದ್ದಪಡಿಸುತ್ತೇನೆಂದು ನೆನೆಸಿರಲಿಲ್ಲ...


------------------------------------------------------------------------

ಅವಿರತ: ೨೦೧೩ ರ ಮುನ್ನೋಟ


“ಯಾವುದೇ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಯಶಸ್ಸು ಸಾರ್ವಜನಿಕ ವಲಯದಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿದರೆ, ವೈಯಕ್ತಿಕ ಮಟ್ಟದಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.“ - ಎಂಬ ಮಾತನ್ನು ನಮ್ಮ ಅವಿರತ ತಂಡವು ಚೆನ್ನಾಗಿ ಅರಿತಿರುವುದು ನಿಜವಾಗಲೂ ಸಂತಸದ ವಿಷಯವಾಗಿದೆ. ತಿಂಗಳ ಹಿಂದಷ್ಟೆ, ಐದನೇ ವಾರ್ಷಿಕೋತ್ಸವವನ್ನು ಸಡಗರದಿಂದ ಆಚರಿಸಿಕೊಂಡ ನಮ್ಮ ತಂಡ ಇನ್ನೂ ಅದೇ ಗುಂಗಿನಲ್ಲಿ ಇರುವ ಹೊತ್ತಿನಲ್ಲೇ, ಆ ನೆನಪುಗಳು ನಮ್ಮನ್ನು ವ್ಯಾಪಿಸಿಕೊಂಡು, ನಮ್ಮನ್ನು ಮರೆಮಾಡಿಬಿಡಬಹುದಾದ ಆತಂಕದಿಂದ / ಅಪಾಯದಿಂದ ಪಾರು ಮಾಡಿದ್ದು ಭಾನುವಾರ ನಡೆದ ಅವಿರತದ ಸಭೆ.
ಉತ್ಸಾಹ, ಹುರುಪಿನಿಂದ ಶುರುವಾಗಿ, ಸದಸ್ಯರೆಲ್ಲರ ಮುತುವರ್ಜಿಯಿಂದ, ಸಂಕಲ್ಪದಿಂದ ಇಲ್ಲಿಯವರೆಗೂ ನಡೆದುಕೊಂಡು ಬಂದಿರುವ ತಂಡ ಹಾಗೂ ತಂಡದ ಯೋಜನೆಗಳಿಗೆ ಭವಿಷ್ಯದಲ್ಲಿ ಸುಭದ್ರವಾದ, ಶಾಶ್ವತವಾದ ನೆಲೆಯನ್ನು ಒದಗಿಸುವ ಬಗ್ಗೆ ’ನೆಲೆ’ಯಲ್ಲಿ ಚರ್ಚಿಸಿದ್ದು ಸಂದರ್ಭೋಚಿತವಾಗಿತ್ತು. ಅಶ್ವಥ್ ಸರ್ ಈ ಸಭೆಗೆ ’ನೆಲೆ’ಯನ್ನು ಆರಿಸಿದ್ದರ ಹಿಂದೆ ಹಾಗೂ ಹೆಜ್ಜೆ-ಗೆಜ್ಜೆಯಲ್ಲಿ ಶಶಿ ಸರ್ ಅವಿರತವನ್ನು ಬೆಳೆಯುತ್ತಿರುವ ಮಗುವಿಗೆ ಹೋಲಿಸಿದ್ದರ ಹಿಂದೆ ಯಾವ ಕಾಣದ ಶಕ್ತಿಯ ಕೃಪೆಯಿದೆಯೋ ಕಾಣೆ, ಎಲ್ಲವೂ ಒಂದಕ್ಕೊಂದು ಪೂರ್ವನಿರ್ಧಾರಿತವಾದಂತೆ ಹೊಂದಿಕೊಂಡಿದೆ. :)

ಮಕ್ಕಳ ಕಾರ್ಯಕ್ರಮ, ನೋಟ್ ಬುಕ್ ವಿತರಣೆಯ ಹೊಸ ರೂಪ, ಶಾಶ್ವತ ನಿಧಿ ಸಂಗ್ರಹಣೆಗೆ ವಿವಿಧ ಮಾರ್ಗಗಳು, ವನ ಮಹೋತ್ಸವ, ವೈದ್ಯಕೀಯ ತಪಾಸಣೆ, ಯೋಜನೆಗಳಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ, ಸಾಂಸ್ಕೃತಿಯ ಕಾರ್ಯಕ್ರಮಗಳು, ಮಾಧ್ಯಮ ಮಿತ್ರರ ಸಹಕಾರ, ಹೀಗೆ ಇಷ್ಟೆಲ್ಲಾ ಮಹತ್ವದ ವಿಷಯಗಳು ಸಭೆಯಲ್ಲಿ ತುಂಬಿ, ನಾವು ತಕ್ಷಣ ಕಾರ್ಯೋನ್ಮುಖರಾಗುವುದರ ಅವಶ್ಯಕತೆಯನ್ನು ಪುನ: ಪುನ: ನೆನಪಿಸುತ್ತಿತ್ತು. ಈ ವಿಷಯಗಳ ಬಗ್ಗೆ ಸಭೆಯಲ್ಲಿ ನಡೆದ ಸಂವಾದದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.



ಶಾಶ್ವತ ನಿಧಿ / ಕಾರ್ಪಸ್ ಫಂಡ್:

ಹೆಜ್ಜೆ-ಗೆಜ್ಜೆ ಸಮಯದಿಂದಲೂ ಶಶಿ ಸರ್ ಹಾಗೂ ಇತರ ಹಿರಿಯರು ಅವಿರತದ ಶಾಶ್ವತ ನಿಧಿಯ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದಾರೆ. ಕಾರ್ಯಕ್ರಮದ ದಿನ ಈ ವಿಷಯವನ್ನು ದಾನಿಗಳಿಗೆ ತಿಳಿಸಿ, ಸ್ವಲ್ಪ ಮಟ್ಟಿಗಿನ ನಿಧಿ ಸಂಗ್ರಹಣೆಯೂ ಆಯಿತು. ಆದರೆ, ಈ ಶಾಶ್ವತ ನಿಧಿಯ ಸ್ಥಾಪನೆಯ ಹಿನ್ನೆಲೆ ಏನು? ಇದರ ಸಾಧಕ, ಬಾಧಕಗಳೇನು?! ಇದರ ಅವಶ್ಯಕತೆ ಏನು? ಹೀಗೆ ಇನ್ನಿತರ ವಿಷಯಗಳ ಬಗ್ಗೆ ಎಲ್ಲರಲ್ಲೂ ಸ್ಪಷ್ಟ ಅರಿವು ಮೂಡಿಸಿ, ಎಲ್ಲರೂ ಒಕ್ಕೊರಲಿನಿಂದ ’ಅಹುದಹುದು’ ಎನ್ನುವಂತೆ ವಿಷಯ ಮಂಡಿಸಿದ ರವೀಂದ್ರ ಸರ್‍ಗೆ ಹಾಗೂ ಸಭೆಯಲ್ಲಿಯೇ ಇದರ ಬಗ್ಗೆ ತಮ್ಮ ತಮ್ಮ ತಿಳುವಳಿಕೆಯನ್ನು ಹಂಚಿಕೊಂಡು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು.


-ಶಾಶ್ವತ ನಿಧಿ: ಈ ನಿಧಿಗಾಗಿ ದಾನಿಗಳಿಂದ ಸಂಗ್ರಹಿಸಲಾಗುವ ಹಾಗೂ ಇತರೆ ಯಾವುದೇ ಮೂಲಗಳಿಂದ ಶಾಶ್ವತ ನಿಧಿಗಾಗೆಂದೇ ಬರುವ ಹಣವನ್ನು Fixed Deposit ರೂಪದಲ್ಲಿ ಇಡಲಾಗುವುದು. ಇದರಿಂದ ಬರುವ ಕೇವಲ ಬಡ್ಡಿಯ ಹಣವನ್ನು ಮಾತ್ರ ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸಲಾಗುವುದು, ಬಹು ಮುಖ್ಯವಾಗಿ ಅವಿರತದ ವಾರ್ಷಿಕ ಕಾರ್ಯಕ್ರಮ ’ನೋಟ್ ಪುಸ್ತಕ ವಿತರಣೆ’ಗೆ ಉಪಯೋಗಿಸುವುದಾಗಿ ನಿರ್ಧರಿಸಲಾಗಿದೆ.

- ಈ ಒಟ್ಟು ನಿಧಿಯನ್ನು ಯಾವುದೇ ಸಾಮಾಜಿಕ ಕಾರ್ಯಗಳಿಗಾಗಲಿ ಹಾಗೂ ಕಚೇರಿ ನಿರ್ವಹಣೆಗಾಗಲಿ ಉಪಯೋಗಿಸಲಾಗುವುದಿಲ್ಲ. ಒಂದು ವೇಳೆ, ತುರ್ತು ಪರಿಸ್ಥಿತಿಯಲ್ಲಿ, ಅಂದರೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ (೨೦೧೦ ರ ಉತ್ತರ ಕರ್ನಾಟಕದ ನೆರೆಯನ್ನು ನೆನಪಿಸಿಕೊಳ್ಳಿ) ಈ ನಿಧಿಯಲ್ಲಿನ ಹಣವನ್ನು ಎಲ್ಲ ಸದಸ್ಯರ, ದಾನಿಗಳ ಒಮ್ಮತದೊಂದಿಗೆ ಬಳಸಬಹುದಾಗಿದೆ.

- ಈ ನಿಧಿಯಿಂದ ಬರುವ ವಾರ್ಷಿಕ ಬಡ್ಡಿಯು, ’ನೋಟ್ ಪುಸ್ತಕ ವಿತರಣೆ’ಗೆ ಕನಿಷ್ಟ ಮೊತ್ತದ ಹಣವಾಗಿ ಸಂದಾಯವಾಗಲಿದೆ. ಅದಕ್ಕೂ ಮೀರಿ ಬೇಕಾಗುವ ಮೊತ್ತವನ್ನು ಪ್ರತಿಯೊಂದು ಉಪ ತಂಡವು ಸ್ವಂತವಾಗಿ ಸಂಗ್ರಹಿಸಬೇಕಾಗಿದೆ.

ವರ್ಷಗಳು ಕಳೆದಂತೆ, ಹೆಚ್ಚಾಗುವ ’ನೋಟ್ ಪುಸ್ತಕ ವಿತರಣೆ’ಯ ಖರ್ಚು ಹಾಗೂ ಕಡಿಮೆಯಾಗುವ ಸಾಧ್ಯತೆಯಿರುವ ಬಡ್ಡಿಯ ಹಣ – ಇವೆರಡನ್ನು ಸಮದೂಗಿಸುವುದು ನಮ್ಮ ಮುಂದಿರುವ ಸವಾಲು.

- ಮಾರ್ಚ್, ೨೦೧೫ ರ ವೇಳೆಗೆ ೨೫ ಲಕ್ಷ ರೂಪಾಯಿಗಳ ಶಾಶ್ವತ ನಿಧಿಯನ್ನು ಸಂಗ್ರಹಿಸುವುದು ತಂಡದ ಗುರಿಯಾಗಿದೆ. ಇದಕ್ಕಾಗಿ, ತಂಡದ ಸದಸ್ಯರಿಂದ ಹಾಗೂ ದಾನಿಗಳಿಂದ, ಅವರು ಇಷ್ಟಪಟ್ಟು ಕೊಡಬಯಸುವ ಒಟ್ಟು ಮೊತ್ತದ ಹಣವನ್ನು ಸಣ್ಣ ಸಣ್ಣ ಕಂತಿನ ರೂಪದಲ್ಲಿ ೨೦೧೫ರ ಮಾರ್ಚ್ ವರೆಗೂ ಪ್ರತಿ ತಿಂಗಳು ಸಂಗ್ರಹಿಸುವ ಯೋಜನೆಯನ್ನು ಮಾಡಲಾಗಿದೆ.

- ಅವಿರತವು ಈ ನಿಧಿಯನ್ನು ಹೊಂದುವುದರಿಂದ,

> ಅವಿರತ ವಾರ್ಷಿಕ ಕಾರ್ಯಕ್ರಮವನ್ನು ತಡೆಯಿಲ್ಲದೆ ನಡೆಸಿಕೊಂಡು ಹೋಗಬಹುದಾಗಿದೆ.

> ಕಾರ್ಪೋರೇಟ್ ಸಂಸ್ಥೆಗಳ, ಎಂ.ಎನ್.ಸಿ.ಗಳ ನಂಬಿಕೆ, ವಿಶ್ವಾಸವನ್ನೂ ಗಳಿಸಿ ಆ ಮೂಲಕ ಮತ್ತಷ್ಟು ನಿಧಿಯನ್ನು ಸಂಗ್ರಹಿಸಬಹುದು ಅಥವಾ ಅವರ ಸಹಭಾಗಿತ್ವವನ್ನು ಪಡೆಯಬಹುದು.



ನೋಟ್ ಪುಸ್ತಕ ವಿತರಣೆ: ಒಂದು ಸ್ವವಿಮರ್ಶೆ

ನಮ್ಮ ತಂಡದ ಬಹುಮುಖ್ಯ ವಾರ್ಷಿಕ ಕಾರ್ಯಕ್ರಮವಾದ ’ನೋಟ್ ಪುಸ್ತಕ ವಿತರಣೆ’ ಇಲ್ಲಿಯವರೆಗು ಯಶಸ್ವಿಯಾಗಿ ನಡೆದುಕೊಂಡು ಬಂದಿರುವುದಲ್ಲದೆ, ತನ್ನ ವ್ಯಾಪ್ತಿಯನ್ನೂ ವಿಸ್ತರಿಸಿಕೊಂಡಿದೆ. ಈ ಸಂದರ್ಭದಲ್ಲಿ, ತಂಡದ ಸದಸ್ಯರು ಈ ಕಾರ್ಯಕ್ರಮದ ಬಗ್ಗೆ ಸ್ವವಿಮರ್ಶೆ ನಡೆಸಿ, ತಮ್ಮ ತಮ್ಮ ಭಿನ್ನ ದೃಷ್ಟಿಕೋನವನ್ನು ಸಭೆಯಲ್ಲಿ ಚರ್ಚಿಸಿದ್ದು ಪ್ರಶಂಸಾರ್ಹವಾದದ್ದು. ಈ ನಿಟ್ಟಿನಲ್ಲಿ ಚರ್ಚಿಸಿದ ಎಲ್ಲಾ ಅಂಶಗಳು ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಪರಿಷ್ಕೃತ ರೂಪ ನೀಡುವುದಲ್ಲದೆ, ಈ ಕಾರ್ಯಕ್ರಮವನ್ನು ಶಾಶ್ವತಗೊಳಿಸಿ, ಪರಿಣಾಮಕಾರಿಯಾಗಿಸಬಲ್ಲದು.

- ನೋಟ್ ಪುಸ್ತಕ ವಿತರಣೆಯ ಸಂದರ್ಭದಲ್ಲಿ ಮಾತ್ರ ಸಂಬಂಧಪಟ್ಟ ಶಾಲೆಗಳೊಂದಿಗೆ ಸಂಪರ್ಕವಿಟ್ಟುಕೊಳ್ಳುವ ನಾವು, ನಮ್ಮ ಅಭ್ಯಾಸವನ್ನು ಉತ್ತಮಗೊಳಿಸಕೊಳ್ಳಬೇಕಿದೆ. ಪ್ರತಿ ತಂಡವೂ ತಾನು ಜವಾಬ್ದಾರಿ ವಹಿಸಿಕೊಂಡ ಶಾಲೆಯೊಡನೆ ವರ್ಷಪೂರ್ತಿ ನಿಕಟವಾದ ಸಂಪರ್ಕದಲ್ಲಿದ್ದು, ಅಲ್ಲಿನ ಅವಶ್ಯಕತೆಗಳ ಬಗ್ಗೆ, ನಾವು ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಸಲಹೆ, ಸೂಚನೆಗಳನ್ನು ಪಡೆದು ಅವುಗಳಿಗೆ ಪ್ರತಿಕ್ರಿಯಿಸಬೇಕಾಗಿದೆ.

- ಈಗಾಗಲೇ ನೋಟ್ ಪುಸ್ತಕಗಳ ಅಗತ್ಯವನ್ನು ವೈಜ್ನಾನಿಕವಾಗಿ ಅಭ್ಯಸಿಸಿ, ಅದರ ಅಧಾರದ ಮೇಲೆ ಪುಸ್ತಕ ವಿತರಣೆ ನಡೆಯುತ್ತಿದೆಯಾದರೂ, ನಾವು ಅನುಸರಿಸುತ್ತಿರುವ ಕ್ರಮವನ್ನು ಮತ್ತೊಮ್ಮೆ ಅವಲೋಕಿಸಿಕೊಳ್ಳಬೇಕಿದೆ.

- ಪುಸ್ತಕ ವಿತರಣೆಯ ಉಪಯೋಗ ಪಡೆಯಬೇಕಾಗಿರುವ ಮತ್ತಷ್ಟು ಹೊಸ ಶಾಲೆಗಳನ್ನು ಹಾಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಇದಕ್ಕಾಗಿ, ಈಗಾಗಲೇ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಸದಸ್ಯರು, ಇದರ ಬಗ್ಗೆ ತಮ್ಮ ತಮ್ಮ ಸ್ನೇಹಿತರ ಬಳಗದಲ್ಲಿ ಹಾಗೂ ಸಂಸ್ಥೆಗಳಲ್ಲಿ ಚರ್ಚಿಸಿ ಅವರನ್ನೂ ಕಾರ್ಯಕ್ರಮಕ್ಕೆ ಕರೆತರಬೇಕಾಗಿ ವಿನಂತಿ.

- ಈಗಾಗಲೇ, ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸಹಾಯಕ್ಕೆ ಎದುರುನೋಡುತ್ತಿರುವ ನಿಮ್ಮ ನಿಮ್ಮ ಸ್ನೇಹಿತರ ಬಳಗವನ್ನು ಅವಿರತದ ತೆಕ್ಕೆಗೆ ಸೇರಿಸಿಕೊಳ್ಳಬಹುದಾಗಿದೆ.

-ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅಥವಾ ಅದಕ್ಕೆ ಸಹಾಯ ಮಾಡುವ ಮುನ್ನ, ಸದಸ್ಯರ ಸ್ನೇಹಿತರು ಅಥವಾ ಸಂಸ್ಥೆಯವರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದರೆ, ಅವಿರತ ಅವರನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತದೆ.

- ವಿಕೇಂದ್ರಿಕರಣದಲ್ಲಿ ನಂಬಿಕೆಯಿರುವ ಅಶ್ವಥ್ ಸರ್ ಪ್ರಸ್ತಾಪಿಸಿದ ’ನಮ್ಮ ಶಾಲೆ – ನಮ್ಮ ಹೆಮ್ಮೆ’ ಎಂಬ ವಿಷಯ ಹಾಗೂ ಸತೀಶ್ ಸರ್ ಮತ್ತು ಶಶಿ ಸರ್ ಪ್ರಸ್ತಾಪಿಸಿದ ’ಒಂದು ಕುಟುಂಬ – ಒಂದು ಶಾಲೆ’ ಎಂಬ ವಿಷಯ ಆಸಕ್ತಿಕರವಾಗಿದೆ ಅಷ್ಟೇ ಅಲ್ಲ, ಸರಿಯಾದ ರೀತಿಯಲ್ಲಿ ಇದನ್ನು ಕಾರ್ಯರೂಪಕ್ಕಿಳಿಸಿದರೆ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ.

’ನಮ್ಮ ಶಾಲೆ – ನಮ್ಮ ಹೆಮ್ಮೆ’ – ಒಂದು ಶಾಲೆಯ ಉಸ್ತುವಾರಿ ವಹಿಸಿಕೊಂಡ ಸದಸ್ಯರ ಉಪತಂಡವು, ಪುಸ್ತಕ ವಿತರಣೆಗೆ ಬೇಕಾದ ಖರ್ಚು-ವೆಚ್ಚವನ್ನು ಸ್ವತಂತ್ರವಾಗಿ ಕ್ರೋಢೀಕರಿಸಬೇಕು. ಹೀಗೆ ಮಾಡುವುದರಿಂದ ಶಾಲೆಯ ಸಂಪೂರ್ಣ ಜವಾಬ್ದಾರಿ ತಂಡದ್ದಾಗುತ್ತದೆ. ಅಷ್ಟೇ ಅಲ್ಲ, ಆ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡು, ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಈ ಕಾರ್ಯಕ್ರಮವನ್ನು ನಿಭಾಯಿಸಬಹುದು.

’’ಒಂದು ಕುಟುಂಬ – ಒಂದು ಶಾಲೆ’ – ಆಯಾ ಊರಿನ ಸ್ಥಳೀಯರೂ ಸಹ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸವಂತೆ ಮಾಡುವ ಉದ್ದೇಶವಿರುವ ಯೋಚನೆಯಿದು. ನೋಟ್ ಪುಸ್ತಕ ವಿತರಣೆ ಕೇವಲ ಅವಿರತದ ಕಾರ್ಯವಲ್ಲ, ಇದು ನಿಮ್ಮ ಹಾಗೂ ನಿಮ್ಮ ಊರಿನ ಕಾರ್ಯಕ್ರಮ ಎಂದು ಅರಿವು ಮೂಡಿಸಿ, ಊರಿನ ಕುಟುಂಬದವರೂ ಸಹ ಇದರಲ್ಲಿ ಸಂಪೂರ್ಣ ಅಥವಾ ತಕ್ಕ ಮಟ್ಟಿಗಿನ ಜವಾಬ್ದಾರಿಯನ್ನು ವಹಿಸಿಕೊಳ್ಳಿಸುವುದು.



ವನ ಮಹೋತ್ಸವ / ಗಿಡ ನೆಡುವಿಕೆ:

ನಶಿಸಿಹೋಗುತ್ತಿರುವ ಪರಿಸರ, ಹೆಚ್ಚುತ್ತಿರುವ ಮಾಲಿನ್ಯದ ನಡುವೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿಯ ಧ್ವನಿಯೆತ್ತಿದ ನಮ್ಮ ಡಾಕ್ಟರ್ ಹರ್ಷ ಅವರ ಯೋಜನೆ ಸ್ವಾಗತಾರ್ಹ. ಈಗಾಗಲೇ, ಶಾಲಿಗನೂರಿನಲ್ಲಿ, ಶಾಲೆಯ ಆವರಣದಲ್ಲಿ ನೆಟ್ಟು ಬಂದಿದ್ದ ಗಿಡಗಳೆಲ್ಲಾ ಸೂಕ್ತ ಆರೈಕೆಯಿಲ್ಲದೆ ಸೊರಗಿರುವ ಅಥವಾ ಅಲ್ಲಿನ ಪಶುಗಳಿಗೆ ಆಹಾರವಾಗಿರುವ ಉದಾಹರಣೆಯಿದೆ. ಹೀಗಾಗಿ, ವನ ಮಹೋತ್ಸವದ ಅಂಗವಾಗಿ, ಅವಿರತ ನೆಡುವ ಸಸಿ, ಗಿಡಗಳನ್ನು ಪೋಷಿಸಿ, ಬೆಳೆಸಲು ಸ್ಥಳೀಯರ ಸಹಾಯ ಅತಿಮುಖ್ಯವಾದದು,

ವನ ಮಹೋತ್ಸವ ಎಂಬುದು ಒಂದು ಪ್ರತ್ಯೇಕ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕೋ ಅಥವಾ ನೋಟ್ ಪುಸ್ತಕ ವಿತರಣೆಯ ಸಮಯದಲ್ಲಿ ಪ್ರತಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು, ಅವುಗಳ ಆರೈಕೆಯ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿ ಬರುವುದೋ? ಎಂಬುದು ಈಗ ನಾವೆಲ್ಲ ಉತ್ತರ ಕಂಡುಕೊಳ್ಳಬೇಕಿರುವ ಪ್ರಶ್ನೆ.



ಇತರೆ:

- ನೋಟ್ ಪುಸ್ತಕ ವಿತರಣೆ ಹಾಗೂ ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ಅಗತ್ಯವಾಗಿ ಬೇಕಾಗಿರುವ ಹಣವನ್ನು ಕ್ರೋಢೀಕರಿಸಲು ವಿವಿಧ ಮಾರ್ಗಗಳನ್ನು ಯೋಚಿಸಬೇಕಿದೆ/ಚಿಂತಿಸಬೇಕಿದೆ.

ಉದಾಹರಣೆಗೆ, ದುಡ್ಡನ್ನು ದಾನವಾಗಿ ಕೇಳುವ ಬದಲಿಗೆ, ಮನೆಯಲ್ಲಿನ ಹಳೇ ಪೇಪರ್‍ಗಳನ್ನು ಉಚಿತವಾಗಿ ಪಡೆದು, ಅದನ್ನು ಮಾರಿ, ಅದರಿಂದ ಬರುವ ಹಣವನ್ನು ಶಾಶ್ವತ ನಿಧಿಗೋ ಅಥವಾ ಇತರೆ ಕಾರ್ಯಗಳಿಗೋ ಉಪಯೋಗಿಸಬಹುದು.

ಅಪಾರ್ಟ್‍ಮೆಂಟ್‍ಗಳಲ್ಲಿ ವಾಸಿಸುವ ಸದಸ್ಯರು, ಅಪಾರ್ಟ್‍ಮೆಂಟಿನ ಬೋರ್ಡ್ ಮೀಟಿಂಗ್‍ಗಳಲ್ಲಿ ಅವಿರತದ ಕಾರ್ಯಕ್ರಮದ ಬಗ್ಗೆ ತಿಳಿಸಿ, ನಿಧಿ ಸಂಗ್ರಹಣೆಗೆ ಸಹಾಯ ಮಾಡಬಹುದು. ಇದೇ ರೀತಿ, ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸದಸ್ಯರೂ ಸಹ.

- ಜವಾಬ್ದಾರಿಯುತ ಸಂಸ್ಥೆಯಾಗಿ, ಅರ್ಥಪೂರ್ಣ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡು, ಯಶಸ್ವಿಯಾಗಿ ನಿಭಾಯಿಸುತ್ತಿರುವ ಅವಿರತವನ್ನು Marketing ಮಾಡುವ ಕಡೆ ನಾವೆಲ್ಲ ಗಂಭೀರವಾಗಿ ಯೋಚಿಸಬೇಕು ಎಂಬುದೂ ಸಭೆಯಲ್ಲಿ ಚರ್ಚಿತವಾಯಿತು. ಹಾಗಾಗಿ, ಮುಖ್ಯ ವಿಷಯಗಳ ಕುರಿತು marketing materials ಅನ್ನು ಸಿದ್ದಪಡಿಸಲು ಶ್ರೀನಿಧಿ, ದೀಪಕ್.ಎಂ., ದೀಪಕ್.ಪಿ., ರವಿಚಂದರ್ ಹಾಗೂ ಡಾಕ್ಟರ್ ಹರ್ಷ ಇವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ.

- ಅವಿರತ ತಂಡದ ’ಶ್ರೀ ಕೄಷ್ಣ ಸಂಧಾನ’ ನಾಟಕದ ಪ್ರದರ್ಶನಗಳನ್ನು ಏರ್ಪಡಿಸಿ ಅದರ ಮೂಲಕವೂ ಶಾಶ್ವತ ನಿಧಿಗೆ ಅಥವಾ ನೋಟ್ ಪುಸ್ತಕ ವಿತರಣೆಗೆ ಹಣ ಸಂಗ್ರಹಿಸುವ ಯೋಚನೆಯೂ ಇದೆ.

-೨೦೧೩ರಲ್ಲಿ ಹಮ್ಮಿಕೊಳ್ಳಬೇಕಿರುವ ಕಾರ್ಯಕ್ರಮಗಳ ಪಟ್ಟಿಯೊಂದನ್ನು ಸಿದ್ದಪಡಿಸಬೇಕಿದೆ.

> ಶೈಕ್ಷಣಿಕ ಮಾರ್ಗದರ್ಶನ: ವರ್ಷಕ್ಕೆ ನಾಲ್ಕು ಕಾರ್ಯಾಗಾರವೆಂದು ನಿರ್ಧರಿಸಲಾಗಿದೆ. ಮುಖ್ಯ ತಂಡವು ಕಿರಣ್ ವಾಲಿ, ಜ್ಯೋತಿ, ಅಶ್ವಿನಿ ಹಾಗೂ ರೋಹಿತ್ ಇವರುಗಳನ್ನು ಒಳಗೊಂಡಿದ್ದು, ಕಾರ್ಯಾಗಾರದ ದಿನಾಂಕ, ಸ್ಥಳ ಇವುಗಳನ್ನು ನಿರ್ಧರಿಸಬೇಕಿದೆ.

> ೨೦೧೩ ರಲ್ಲಿ ಹಮ್ಮಿಕೊಳ್ಳಲು ಬಯಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನೂ ಸಿದ್ದಪಡಿಸಬೇಕಿದೆ. ಚಿತ್ರ ಪ್ರದರ್ಶನ,

ನಾಟಕ ಪ್ರದರ್ಶನ, ಸಂಗೀತ ಸಂಜೆ, ಇತರೆ…ಕಾರ್ಯಕ್ರಮ, ಅದರ ದಿನಾಂಕ, ಸ್ಥಳ, ಅತಿಥಿಗಳು, ಕಲಾವಿದರು, ಹೀಗೆ..

> ೨೦೧೩ ರಲ್ಲಿ ಉಚಿತ ವೈದ್ಯಕೀಯ ತಪಾಸಣೆಯನ್ನು ಹಮ್ಮಿಕೊಳ್ಳುವ ಯೋಚನೆಯಿದ್ದು, ಅದರ ಬಗ್ಗೆಯೂ ಸ್ಪಷ್ಟ ಯೋಜನೆಯನ್ನು ತಯಾರಿಸಬೇಕಿದೆ.

> ನಗರದಲ್ಲಿನ ಮಕ್ಕಳಿಗೆ, ಅನಿವಾರ್ಯವಾಗಿ ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ, ಕನ್ನಡ ಭಾಷೆ – ಸಂಸ್ಕೃತಿಯ ಪರಿಚಯ ಮಾಡಿಕೊಟ್ಟು, ಭಾಷೆಯನ್ನು ಅವರಿಗೆ ಆಪ್ತವಾಗಿಸಿ, ಆ ಮೂಲಕ ಅವರಲ್ಲಿ ಕನ್ನಡಾಭಿಮಾನ ಬೆಳೆಸುವಂತಹ ಕಾರ್ಯಕ್ರಮದ ಯೋಚನೆಯೊಂದು ಅಶ್ವಥ್ ಸರ್ ಕಡೆಯಿಂದ ಸ್ಪಷ್ಟ ರೂಪ ಪಡೆಯಬೇಕಿದೆ.,

> ಅವಿರತದ ವೆಬ್‍ಸೈಟ್ ಅನ್ನು ನಿಗದಿತವಾಗಿ update ಮಾಡುತ್ತಾ, ಸಕ್ರಿಯ ಸದಸ್ಯರ ಹೊರತಾಗಿಯೂ ಇತರ ಹಲವು ಸದಸ್ಯರಿಗೂ,ಕಾರ್ಯಕರ್ತರಿಗೂ ಅವಿರತದಲ್ಲಿನ ಆಗು-ಹೋಗುಗಳನ್ನು ತಿಳಿಸುವ ಅವಶ್ಯಕತೆಯಿದೆ.

ಅವಿರತದ ಬ್ಲಾಗ್ ಅನ್ನೂ ಸಹ create ಮಾಡಿ, ಅದರಿಂದ ಆಯ್ದ ಬರಹಗಳನ್ನು ಸೇರಿಸಿ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಪತ್ರಿಕೆಯೊಂದನ್ನೂ / ವಿಶೇಷಾಂಕವನ್ನು ತರುವ ಯೋಚನೆಯನ್ನೂ ಚರ್ಚಿಸಲಾಯಿತು.

> ಮಾಧ್ಯಮ ಮಿತ್ರರೊಂದಿಗೆ ಕೈ ಜೋಡಿಸುವುದರ ಮೂಲಕ ’ಅವಿರತ’ದ ಕಾರ್ಯಕ್ರಮಗಳನ್ನು ಹೆಚ್ಚಿನ ಜನರಿಗೆ ತಲುಪಿಸಿ, ಆ ಮೂಲಕ ಮತ್ತಷ್ಟು ಜನರನ್ನು ಅವಿರತಕ್ಕೆ ಬರಮಾಡಿಕೊಳ್ಳಬಹುದಲ್ಲವೇ? ಎಂಬ ವಿಷಯ ಪ್ರಸ್ತಾಪವಾದುದರಿಂದ ಅದರ ಸವಾಲುಗಳನ್ನು ಚರ್ಚಿಸಿ, ಅವುಗಳನ್ನು ನಿವಾರಿಸುವ ಮಾರ್ಗದ ಹುಡುಕಾಟವಾಗಬೇಕಿದೆ.

> ಇಷ್ಟೆಲ್ಲಾ ಯೋಜನೆಗಳ ನಡುವೆ, ಬಿಡುವು ಮಾಡಿಕೊಂಡು ವರ್ಷದಲ್ಲಿ ಕನಿಷ್ಟ ಒಂದು ಪ್ರವಾಸವನ್ನಾದರೂ ಹಮ್ಮಿಕೊಳ್ಳಲೇಬೇಕು. J

‘Some succeed because they are destined to, but few succeed because they are determined to…’

We, Aviratha, are determined!! J



‘ನೆಲೆ’ಯಲ್ಲಿ ಸಭೆ ಸೇರಿ, ’ನೆಲೆ’ ಕಂಡುಕೊಂಡು ಬೆಳೆಯಲು ನಾವೆಲ್ಲ ಆವಿಷ್ಕರಿಸಿರುವ ಇಷ್ಟೆಲ್ಲಾ ಅಂಶಗಳು, ವಿಷಯಗಳು, ನಮ್ಮ ನಮ್ಮ ಕಾಳಜಿಯ, ಸಾಮರ್ಥ್ಯದ, ಸಂಕಲ್ಪದ, ಪ್ರೀತಿಯ, ಪ್ರತಿಭೆಯ ಬೆಳಕಿನಲ್ಲಿ ರೂಪಾಂತರಗೊಂಡು ಮಾನವೀಯ ಅನುಕಂಪವನ್ನು, ಸಂಸ್ಕೃತಿಯೆಡೆಗಿನ ಅಭಿಮಾನವನ್ನು ಎತ್ತಿಹಿಡಿಯಬೇಕಾಗಿದೆ.

Friday, February 8, 2013

ಒಂದೇ ನಾಣ್ಯದ ಎರಡು ಮುಖಗಳು

ಈ ಚಳಿಗಾಲದ ದಟ್ಟ ಚಳಿಯ ಮುಂಜಾವಿನ ಸವಿ ಸವಿ ನಿದ್ದೆಯಿಂದ ಬಲವಂತವಾಗಿ ಎದ್ದೇಳುವ ಯಾತನೆಯ ಕ್ಷಣದಲ್ಲಿ ಯಾವ ಆಫೀಸು, ಕೆಲಸ, ಮನೆ, ಪ್ರೊಮೋಷನ್, ಪ್ರಾಜೆಕ್ಟು ಬೇಡ, ಇನ್ನು ಸ್ವಲ್ಪ ಹೊತ್ತು ನಿದ್ದೆ ಮಾಡಿದ್ರೆ ಅಷ್ಟೇ ಸಾಕು ಅಂತ ಅನ್ನಿಸಿದ್ರು ಬೇರೆ ವಿಧಿಯಿಲ್ಲದೆ ಎದ್ದು, ನಮಗೆ ನಾವೇ ಸಮಾಧಾನ ಹೇಳಿಕೊಳ್ಳುತ್ತಾ, ಸ್ನಾನದ ಮನೆಗೆ ಹೋಗೋವರೆಗೂ ತೂಕಡಿಸುತ್ತಾ, ಹಾಗೂ, ಹೀಗೂ ಸ್ನಾನ ಮುಗಿಸಿ ರೆಡಿಯಾಗಿ, ಚಳಿಯಲ್ಲಿ ನಡುಗುತ್ತಾ ಮನೆ ಮುಂದೆ ಬಂದು ನಿಲ್ಲುವ ಕ್ಯಾಬ್ ಹತ್ತಿದ ನಂತರ ಸಿಕ್ಕ ಸೀಟ್‍ನಲ್ಲೇ ಎಷ್ಟಾಗುತ್ತೋ ಅಷ್ಟು ನಿದ್ದೆ ಕದಿಯುವ ಪ್ರಯತ್ನಕ್ಕೆ ಕೆಟ್ಟ ರಸ್ತೆಗಳು, ಅನವಶ್ಯಕ ರಸ್ತೆ ಉಬ್ಬುಗಳು ಹಾಗೂ ಕ್ಯಾಬ್ ನಲ್ಲಿರೋ ಸಹೋದ್ಯೋಗಿಗಳ ಮಾತುಗಳು ಅಡ್ಡಿ ಮಾಡಿದರೂ...ಇವುಗಳನ್ನೆಲ್ಲಾ ದಾಟಿ ಇನ್ನೇನು ಸ್ವಲ್ಪ ನಿದ್ದೆ ಕಣ್ಣ್ ಹತ್ತುತ್ತಿದೆ, ಕ್ಯಾಬ್ ಹೀಗೆ ಓಡುತ್ತಾ ಇರಲಿ ಅಂದುಕೊಳ್ಳುತ್ತಿರುವಷ್ಟರಲ್ಲಿ, ಬೆಳಗಿನ ಖಾಲಿ ರಸ್ತೆಯನ್ನು ನೋಡಿ ಹುಚ್ಚು ಕುದುರೆಯಂತೆ ಗಾಡಿ ಓಡಿಸುವ ಕ್ಯಾಬ್ ಡ್ರೈವರ್‍‍ಗಳು, ನಮ್ಮನ್ನು ಆಫೀಸ್‍ಗೆ ತಂದು ಬಿಸಾಡಿಬಿಟ್ಟಾಗ, ಬೇರೆ ದಾರಿಯಿಲ್ಲದೆ, ಕ್ಯಾಬ್‍ನಿಂದ ಇಳಿದು, ಲಿಫ್ಟ್ ಹತ್ತಿ, ಅದರೊಳಗಿನ ಕನ್ನಡಿಯಂತಹ ಬಾಗಿಲಿನಲ್ಲಿ ನಿದ್ದೆ ಬೇಡುತ್ತಿರುವ ನಮ್ಮ ಕಣ್ಣುಗಳನ್ನು ಕಂಡು, ನಾವೇ ಮರುಕ ಪಡುವ ವೇಳೆಗೆ ತೆರೆದುಕೊಳ್ಳುವ ಲಿಫ್ಟ್ ನ ಬಾಗಿಲಿನಿಂದ ಆಕಳಿಸುತ್ತಾ ಹೊರ ಬಂದು ನಮ್ಮ ಐ.ಡಿ.ಕಾರ್ಡ್ ಸ್ವೈಪ್ ಮಾಡಿ ಫ್ಲೋರ್ ಒಳಗೆ ಬರುತ್ತಿರುವಾಗ ಅನ್ನಿಸುತ್ತೆ,


"ಛೆ!! ಈ ಆಫೀಸು ಮನೆಯಿಂದ ಇನ್ನೂ ಸ್ವಲ್ಪ ದೂರ ಇರಬೇಕಿತ್ತು" ಅಂತ.



           ----------------------------------------------------------------

                  
           ----------------------------------------------------------------

ಇವತ್ತು ೧.೧೫ ಕ್ಕೆಲ್ಲಾ ಊಟಕ್ಕೆ ಹೋಗಬೇಕು ಅಂತ ೧೨.೩೦ಕ್ಕೆ ಅಂದುಕೊಂಡು ಎರಡು ಕಾಲು ಗಂಟೆಯಾದರೂ, ಊಟಕ್ಕೆ ಹೋಗಲಾಗದೆ, stay back ಮಾಡೋಕೆ ಇಷ್ಟ ಇಲ್ಲದೆ Team Lead ಕೊಟ್ಟಿರೊ ಕೆಲ್ಸಾನ ಮೊದಲು ಮುಗಿಸಿಕೊಟ್ಟು, to-do list ನಲ್ಲಿ ಎರಡು ಮೂರು ಕೆಲಸಗಳನ್ನು ಬಾಕಿ ಉಳಿಸಿಕೊಂಡು, ಅದ್ಯಾರೋ support team ನವರ ಜೊತೆ office communicator ನಲ್ಲಿ ನಡೆಸುತ್ತಿದ್ದ ಮಾತುಕತೆಯನ್ನು ಅರ್ಧಕ್ಕೆ ನಿಲ್ಲಿಸಿ, ನಾಳೆಯಿಂದ ಆಫೀಸಿನಲ್ಲಿ ಫೇಸ್‍ಬುಕ್ ಕಡಿಮೆ use ಮಾಡಬೇಕು ಅಂತ ಅಂದುಕೊಂಡು, ಸಮಯಕ್ಕೆ ಸರಿಯಾಗಿ log out ಆಗಿ, ಸ್ಕೂಲ್ ಮುಗಿದಾಗ ಮಕ್ಕಳೆಲ್ಲಾ ಖುಷಿಯಾಗಿ ಹೊರಗಡೆ ಓಡಿ ಬರುವಂತೆ, ಆಫೀಸಿನಿಂದ ಹೊರಬಂದು ನಮಗಾಗಿ ಕಾಯುತ್ತಾ ನಿಂತಿರುವ ಕ್ಯಾಬ್ ಹತ್ತಿ ಹೊರಟು, ಕ್ಯಾಬ್ ನಲ್ಲಿರುವವರ ಜೊತೆ ಒಂದಷ್ಟು ಹರಟಿ, ಆಫೀಸಿನ ಒಂದಿಷ್ಟು ಗಾಸಿಪ್‍ಗಳನ್ನು ಹಿಡಿದು ಜಾಲಾಡಿ, ಕೊನೆಗೆ ವಿಷಯ ಖಾಲಿಯಾಗಿ ಮಾತಿಲ್ಲದೆ ಬೋರಾಗಿ, ಕ್ಯಾಬ್ ಡ್ರೈವರ್‍‍ಗೆ ಎಫ್.ಎಂ. ಹಾಕುವುದಕ್ಕೆ ಹೇಳಿ ಅಥವಾ ತಮ್ಮ ಮೊಬೈಲ್ ಫೋನಿನ ಇಯರ್ ಫೋನ್ ಅನ್ನು ಕಿವಿಗೆ ಸಿಕ್ಕಿಸಿಕೊಂಡು ಹಾಡುಗಳನ್ನು ಕೇಳುತ್ತಾ, ಕೇಳುತ್ತಾ... ಹೆಚ್ಚಿದ ಕೆಲಸ, ತಪ್ಪಿದ ಊಟದಿಂದ ಸುಸ್ತಾಗಿ ಅರಿವಿಲ್ಲದೆ ಕಣ್ಣು ಮುಚ್ಚಿ ನಿದ್ದೆಗೆ ಜಾರಿ...ಕೊನೆಗೆ ಬಿಸಿಲ ತಾಪಕ್ಕೆ ಬೆವರಿ ಎಚ್ಚರಾಗಿ, ಗಾಳಿ ಬೀಸಲಿ ಎಂದು ಕಿಟಕಿ ಕೆಳಗಿಳಿಸಿದರೆ, ಹೊರಗೆ ಸಹಿಸಲಸಾಧ್ಯವಾದ ಅದೇ ಧೂಳು, ಹೊಗೆ, ಕಿಕ್ಕಿರಿದ ಟ್ರಾಫಿಕ್ಕು....ಒಳಗೆ ಎಲ್ಲರೂ ಶಿಸ್ತಾಗಿ ತಲೆಯನ್ನು ಕೆಳಗೆ ಹಾಕಿ ಸ್ಪ್ರಿಂಗಿನಂತೆ ಆಡಲು ಬಿಟ್ಟು ನಿದ್ದೆಯಲ್ಲಿ ಕಳೆದುಹೋಗಿದ್ದಾರೆ...’ಮಂಡ್ಯ ಹುಡುಗರ ಹಾರ್ಟು...ಸಕ್ಕರೆಯಂತೆ ಸ್ವೀಟು’ ಎಂದು ಕ್ಯಾಬಿನ ಒಳಗಡೆ ಬರೆಸಿಕೊಂಡಿರುವ ಕ್ಯಾಬ್ ಡ್ರೈವರ್ ಫೋನಿನಲ್ಲಿ ಅದ್ಯಾರೊಂದಿಗೊ ಪಿಸುಗುಡಿತ್ತಿದ್ದಾನೆ...ಹೊರಗೆ ೧೨೯, ೧೨೮, ೧೨೭....ಎಂದು ತೋರಿಸುತ್ತಿರುವ ಸಿಗ್ನಲ್‍ನ ಒಂದೊಂದು ಸೆಕೆಂಡ್ ಕೂಡ ಗಂಟೆಯಂತೆ ಭಾಸವಾಗಿ, ಇನ್ನು ಹೋಗಬೇಕಿರುವ ದಾರಿ, ಸಿಗ್ನಲ್, ಟ್ರಾಫಿಕ್ಕ್ ಅನ್ನು ನೆನೆದು ಅಸಹಾಯಕನಾದಾಗ ಅನ್ನಿಸುತ್ತೆ.....

’ಛೇ!! ಈ ಆಫೀಸು ಮನೆಗೆ ತುಂಬಾ ಹತ್ತಿರದಲ್ಲಿ ಇರಬೇಕಿತ್ತು’ ಅಂತ.