Saturday, August 15, 2015

ನಿಮ್ಮ ಬಾಯಿ ಸುಮ್ಮನಿರಲಿ, ಹೃದಯ ತೆರೆದಿರಲಿ.


ಭಾರತದ ಏಳಿಗೆಗೆ ನಾವು ಮಾಡಬೇಕಾದ ಕಾರ್ಯ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಸ್ವಾಮಿ ವಿವೇಕಾನಂದರು ಹೇಳಿದ ಕೆಲವು ಮಾತುಗಳನ್ನು ಇಲ್ಲಿ ನಿರೂಪಿಸುವ ಪ್ರಯತ್ನ ಮಾಡಿದ್ದೀನಿ.  ಈ ಮಾತುಗಳು ಸ್ವಾತ್ರಂತ್ರ್ಯ ದಿನದ ಈ ಸಂದರ್ಭದಲ್ಲಿ ಕೂಡ ಸೂಕ್ತವೆನಿಸುವುದು ಆಶ್ಚರ್ಯ!
ನನ್ನ ದೇಶಬಾಂಧವರೇ,  ನಮ್ಮ ಮಾತೃಭೂಮಿ ಎಂಬ ಹಡಗು ಸಹಸ್ರಾರು ವರ್ಷಗಳಿಂದಲೂ ಸಂಚರಿಸುತ್ತಿದೆ.  ಇಂದು ಅದು ಎಲ್ಲೋ ಸ್ವಲ್ಪ ಸೋರುತ್ತಿರಬಹುದು; ಅದರ ಯಾವುದೋ ಭಾಗ ಸ್ವಲ್ಪ ಸವೆದು ಹೋಗಿರಬಹುದು. ಬಹುಶ: ನಮ್ಮ ಅಜಾಗರೂಕತೆಯಿಂದಲೇ ಹಡಗು ಶಿಥಿಲವಾಗಿದೆ, ರಂಧ್ರ ಬಿದ್ದಿದೆ.  ಇದನ್ನು ಈಗ ನಿಂದಿಸುವಿರಾ?! ಈ ಜನಾಂಗದ ಹಡಗಿನಲ್ಲಿ, ಅಂದರೆ ನಮ್ಮ ಜನಾಂಗದಲ್ಲಿ ಕುಂದು ಕೊರತೆಗಳಿದ್ದರೆ ನಾವು, ಅದರ ಮಕ್ಕಳು, ಹೋಗಿ ಆ ರಂಧ್ರವನ್ನು ಮುಚ್ಚೋಣ.  ನಮ್ಮ ಹೄದಯದ ರಕ್ತವನ್ನಾದರೂ ಕೊಟ್ಟು ಸಂತೋಷದಿಂದ ಈ ಕಾರ್ಯವನ್ನು ಸಾಧಿಸೋಣ.  ಅವಶ್ಯವಿದ್ದರೆ, ನಮ್ಮ ತಲೆಯನ್ನಾದರೂ ಛೇದಿಸಿ ರಂಧ್ರವನ್ನು ಮುಚ್ಚೋಣ.  ಇದು ನಿಮ್ಮ ಮತ್ತು ನನ್ನ ಪವಿತ್ರ ಕರ್ತವ್ಯ.  ಈ ಅಪಾಯವನ್ನು ನಮ್ಮ ದೇಶದ ಜನರ ಗಮನಕ್ಕೆ ತರೋಣ; ಅವರು ಜಾಗೃತರಾಗಿ ನಮ್ಮ ಸಹಾಯಕ್ಕೆ ಬರಲಿ.  ಜನರಿಗೆ ಅಪಾಯವನ್ನು ಮನಗಾಣಿಸಲು, ಕರ್ತವ್ಯವನ್ನು ನೆನಪಿಸಲು, ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ, ತಾರಸ್ವರದಲ್ಲಿ ಕೂಗುತ್ತಾ ಹೋಗುವೆನು.  ಅವರು ನನ್ನನ್ನು ಕೇಳಲಿಲ್ಲ ಎಂದು ಭಾವಿಸೋಣ.  ಆದರೂ ಅವರನ್ನು ದೂರುವುದಿಲ್ಲ, ಶಪಿಸುವುದಿಲ್ಲ. ಶಾಪ ಮತ್ತು ನಿಂದೆ – ಇವುಗಳಿಂದ ನಾವು ಏನನ್ನೂ ಸಾಧಿಸಲಾರೆವು.  ಇದನ್ನು ನೀವು ಲಕ್ಷ್ಯದಲ್ಲಿಡಿ. ಹಲವು ವರ್ಷಗಳಿಂದ ಹೀಗೇ ಮಾಡಿರುವರು.  ಅದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ.  ಸಹಾನುಭೂತಿಯಿಂದ ಮತ್ತು ಪ್ರೀತಿಯಿಂದ ಮಾತ್ರ ಒಳ್ಳೆಯ ಪರಿಣಾಮ ದೊರಕುವುದು. ನಿಮ್ಮ ಬಾಯಿ ಸುಮ್ಮನಿರಲಿ, ಹೃದಯ ತೆರೆದಿರಲಿ.  ಪ್ರತಿಯೊಂದು ಆತ್ಮದಲ್ಲಿರುವ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಿ.  ಅನಂತರ ನೀವು ಎಷ್ಟೇ ಅಲ್ಪವನ್ನು ಸಾಧಿಸಿದ್ದರೂ ನೀವು ಒಂದು ಮಹಾ ಆದರ್ಶಕ್ಕಾಗಿ ಬಾಳಿ, ದುಡಿದು, ಮಡಿದಿರಿ ಎಂಬ ತೃಪ್ತಿಯಾದರೂ ಇರುತ್ತದೆ.  ಈ ಮಹಾತ್ಕಾರ್ಯವು ಯಾವ ರೀತಿಯಿಂದಲಾದರೂ ಸಿದ್ದಿಸಿದರೂ ಸರಿಯೇ; ಅದರ ಮೇಲೆ ಮಾನವ ಕೋಟಿಯ ಇಂದಿನ ಮತ್ತು ಮುಂದಿನ ಕಲ್ಯಾಣ ನಿಂತಿದೆ.

ಒಂದು ವೇಳೆ, ನೀವು ನನ್ನನ್ನು ಆಲಿಸಿದರೆ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಸಿದ್ದನಾಗಿರುವೆನು.  ನೀವು ಕೇಳದೆ ನನ್ನನ್ನು ಭರತ ಖಂಡದಿಂದ ನೂಕಿದರೂ ನಾನು ಪುನ: ಬಂದು ನಾವೆಲ್ಲಾ ಮುಳುಗುತ್ತಿರುವೆವು ಎಂದು ಹೇಳುವೆನು.  ನಾನು ನಿಮ್ಮ ಸಮೀಪದಲ್ಲಿದ್ದು,ಕಾರ್ಯೋನ್ಮುಖನಾಗಲು ಬಂದಿರುವೆನು. ಪೂರ್ವದಲ್ಲಿ ನಮ್ಮ ದೇಶ ಮಹಾತ್ಕಾರ್ಯಗಳನ್ನು ಸಾಧಿಸುತ್ತು.  ನಾವು ಅದಕ್ಕೂ ಮಿಗಿಲಾದ ಮಹತ್ಕಾರ್ಯಗಳನ್ನು ಮುಂದೆ ಮಾಡದೇ ಇದ್ದರೆ ನಾವೆಲ್ಲಾ ನೀರಿನಲ್ಲಿ ಒಟ್ಟಿಗೆ ಮುಳುಗಿ ಶಾಂತಿಯಿಂದ ಸಾಯಬಲ್ಲೆವೆಂಬ ಸಮಾಧಾನವಾದರೂ ಇರಲಿ.  ಆದರೆ, ಎಂದಿಗೂ ಶಾಪವನ್ನು ಉಚ್ಚರಿಸದೆ ಇರೋಣ.

-ಸ್ವಾಮಿ ವಿವೇಕಾನಂದ

(ಸಂಪಾದನೆ /ನಿರೂಪಣೆ :ರೋಹಿತ್)

Wednesday, March 11, 2015

ಮದುಮಗಳ ದಿಬ್ಬಣದಲ್ಲಿ ಹೊರಟಾಗ....

ಮೊದಲಿಗೇ ತಿಳಿಸಿಬಿಡುತ್ತೇನೆ, ನಾನು ಕಾದಂಬರಿಯನ್ನು ಸಂಪೂರ್ಣವಾಗಿ ಇನ್ನೂ ಓದಿಲ್ಲ.  ಬೆಂಗಳೂರಿನ ಎನ್.ಎಸ್.ಡಿ.ಯಲ್ಲಿ ವಿದ್ಯಾರ್ಥಿಯಾಗಿರುವ ನನ್ನ ಗೆಳೆಯ ’ಮುಂದಿನ ಮಾರ್ಚ್ ಗೆ ಬೆಂಗಳೂರಿನಲ್ಲಿ ಮದುಮಗಳು ನಾಟಕ ಎನ್.ಎಸ್.ಡಿ ಸ್ಟೂಡೆಂಟ್ಸಿಂದ ಇರುತ್ತೆ’ ಅಂತ ತಿಳಿಸಿದ ದಿನವೇ, ’ಅಂಕಿತ ಪುಸ್ತಕ’ಕ್ಕೆ ಹೋಗಿ ಕಾದಂಬರಿಯನ್ನ ತಂದು, ಓದಲು ಶುರುಮಾಡಿದ್ದೆ.  ಆ ನಂತರ, ಟ್ರೆಕ್ಕಿಂಗ್, ಆಫೀಸಿನ ಪ್ರವಾಸ, ನಾಟಕದ ಪ್ರದರ್ಶನ ಎಲ್ಲವೂ ಸಾಲು ಸಾಲಾಗಿ ಬಂದಿದ್ದರಿಂದ ೮ನೇ ಅಧ್ಯಾಯಕ್ಕಿಂತ ಮುಂದೆ ಓದಲು ಸಾಧ್ಯವಾಗಲೇ ಇಲ್ಲ.  ಅಷ್ಟರಲ್ಲಿ ಮದುಮಗಳು ನಾಟಕದ ಪ್ರದರ್ಶನ ಪ್ರಾರಂಭವಾಗಿತ್ತು.  ಅವಿರತದ ಗೆಳೆಯರೆಲ್ಲರು ಸೇರಿ, ಈ ಪ್ರದರ್ಶನ ನಮಗಾಗಿಯೇ ಏರ್ಪಡಿಸಿದ ಖಾಸಗಿ ಪ್ರದರ್ಶನವೇನೋ ಎಂಬಂತೆ ದೊಡ್ಡ ಸಂಖ್ಯೆಯಲ್ಲಿ ಹೊರಟು ನಿಂತಾಗ, ಅದನ್ನು ತಪ್ಪಿಸಿಕೊಳ್ಳುವುದಾದರೂ ಹೇಗೆ?! J  ನಾನೂ ಹೊರಟೆ, ಅಷ್ಟು ದೊಡ್ದ ಜನಸಾಗರದಲ್ಲಿ ಒಂದು ಬಿಂದುವಾಗಿ, ಅದ್ಬುತ ಮಲೆನಾಡನ್ನು ನನ್ನೊಳಗಿನ ಭಾವಲೋಕದಲ್ಲಿ ಇಳಿಸಿಕೊಳ್ಳುವುದಕ್ಕಾಗಿ.


’ಮಲೆನಾಡ ಲೋಕವನೇ ಕಣ್ಣು ಮುಂದೆ ತಂದವಗೆ, ಪಾದಕ್ಕೊಂದು ಪುಷ್ಪವೂ’

ಮಲೆನಾಡು.  ಹೆಸರು ಕೇಳಿದೊಡನೆ ಏನೋ ಒಂದು ರೀತಿಯ ಪುಳಕ.  ಮಹಾ ಸಾಗರದ ಬೃಹತ್ ಅಲೆಗಳಂತೆ ಅನಂತದವರೆಗೂ ವಿಸ್ತರಿಸಿರುವ ಪರ್ವತ ಶ್ರೇಣಿಗಳು, ಸುದೀರ್ಘ ಕಾಲದಿಂದ ಗಂಭೀರ ತಪಸ್ಸಿನಲ್ಲಿರುವಂತೆ ಕಾಣುವ ಬೆಟ್ಟಗಳು, ದಟ್ಟವಾದ ಕಾಡುಗಳು, ಉಕ್ಕಿ ಹರಿವ ತೊರೆ, ನದಿ, ಜಲಪಾತಗಳು, ಅಸಂಖ್ಯ ಪ್ರಾಣಿ-ಪಕ್ಷಿ-ಸಸ್ಯ ಸಂಕುಲಗಳು, ಕಣಿವೆಗಳಲ್ಲಿ, ಬೆಟ್ಟಗಳಲ್ಲಿ ಕಂಗೊಳಿಸುವ ವಿಶಾಲವಾದ ತೋಟ, ಗದ್ದೆಗಳು, ಒಂದೊಂದೇ ಮನೆಯಿರುವ ಊರುಗಳು, ಹೀಗೆ ಎಲ್ಲವೂ ಕಣ್ಮುಂದೆ ಸುಳಿದು, ಒಂದು ಬೆಚ್ಚನೆಯ ಭಾವ ಮೂಡುತ್ತದೆ; ಮನದೊಳಗಿನ ಆ ಖುಷಿ, ನಗುವಾಗಿ ಮುಖದಲ್ಲಿ ಪ್ರತಿಫಲಿಸುತ್ತದೆ.
ಈ ಮನೋಹರವಾದ ಮಲೆನಾಡಿನಲ್ಲಿ ನಡೆಯುವ ಕಥೆಯನ್ನು ಆಡಿ ತೋರಿಸುವುದಕ್ಕೆ, ಕಲಾಗ್ರಾಮದಲ್ಲಿ ಸಿದ್ದವಾಗಿ ನಿಂತ ರಂಗದಲ್ಲಿ ಮಲೆನಾಡಿನ ಸೌಂದರ್ಯವಿದೆ; ನಾಟಕದ ಹಾಡುಗಳಲ್ಲಿ ಮಲೆನಾಡಿನ ಹಕ್ಕಿಗಳ ಕಲರವದ ಮಾಧುರ್ಯವಿದೆ; ಇನ್ನು, ಇಡೀ ರಾತ್ರಿ ಉತ್ಸಾಹ ಕುಗ್ಗದಂತೆ ನಾಟಕ ಆಡಿ ತೋರಿಸುವ ಕಲಾವಿದರಲ್ಲಿ ಹಾಗೂ ತಂಡದವರಲ್ಲಿ ಮಲೆನಾಡಿನ ಜನರ ಔದಾರ್ಯವಿದೆ.

’ಮಲೆಗಳಲ್ಲಿ ಮದುಮಗಳು – ಅಂದ್ರೆ, ಇದೇನು ಲವ್ ಸ್ಟೋರಿನಾ?!’ ಅಂತ ಮೊದಲ ಬಾರಿಗೆ ನಾಟಕ ನೋಡಲು ಬರುತ್ತಿದ್ದ ನನ್ನ ಸ್ನೇಹಿತನೊಬ್ಬ ಕೇಳಿದ್ದ. ಮೇಲ್ನೋಟಕ್ಕೆ ಇದು ಪ್ರೇಮ ಕಥೆಯೇ ಇರಬಹುದು.  ಒಬ್ಬರನ್ನೊಬ್ಬರು ಮೆಚ್ಚಿ, ಪ್ರೀತಿಸಿ, ಮದುವೆಯಾಗಲಿಚ್ಚಿಸುವ ಎರಡು ಜೋಡಿಗಳ ಕಥೆ ಎನಿಸಬಹುದು.  ಆದರೆ, ಈ ಜೋಡಿಗಳ ಪ್ರೇಮ ಕಥೆ ಅಥವಾ ಮದುವೆ ಪ್ರಹಸನವಷ್ಟೇ ಈ ನಾಟಕದ ( ಕಾದಂಬರಿಯ ) ಮುಖ್ಯ ಅಂಶವಲ್ಲ ಎಂಬುದೂ ಅಷ್ಟೇ ಸತ್ಯ.  ಇವತ್ತಿಗೂ ಮಲೆನಾಡಿನ ಹಲವಾರು ಜಾಗಗಳಿಗೆ ಪ್ರವಾಸಕ್ಕಾಗಿಯೋ, ಚಾರಣಕ್ಕಾಗಿಯೋ ಹೋಗುವ ನಾವೆಲ್ಲ ಅಲ್ಲಿನ ನಿಗೂಢತೆಯನ್ನು, ಅಲ್ಲಿನ ದೈನಂದಿನ ಬದುಕಿಗೆ ಇರುವ ಸವಾಲುಗಳನ್ನು ನೆನೆದು, ’ಅಬ್ಬಾ! ಇಲ್ಲಿ ಜನ ಹೇಗೆ ಜೀವನ ಮಾಡುತ್ತಾರೇ?!” ಎಂದು ಆಶ್ಚರ್ಯಪಡುತ್ತಾ ಹುಬ್ಬೇರಿಸುತ್ತೇವೆ.  ಸೌಲಭ್ಯಗಳು, ಅನುಕೂಲಗಳು ದೊರೆತಿರುವ ಆಧುನಿಕ ಕಾಲದ ಈ ದಿನಗಳಲ್ಲೂ  ನಾವು ಹೀಗೆ ಅಚ್ಚರಿಪಡುವಂತಾದರೆ, ಹಿಂದಿನ ಕಾಲದಲ್ಲಿ – ಅಂದರೆ ನೂರಾರು ವರ್ಷಗಳ ಹಿಂದಿನ ಕಥೆ ಏನು?!  ಈ ನಿಟ್ಟಿನಲ್ಲಿ ಯೋಚಿಸಿದಾಗ ಮಲೆಗಳಲ್ಲಿ ಮದುಮಗಳು ನಾಟಕದ ಕ್ಯಾನ್ವಾಸ್ ಬಹಳ ದೊಡ್ಡದು.  ೧೯ನೇ ಶತಮಾನದ ಕೊನೆಯಲ್ಲಿ, ೨೦ನೇ ಶತಮಾನದ ಆರಂಭದಲ್ಲಿ ನಡೆಯುವ ಈ ಕಥೆಯಲ್ಲಿ, ಸಮಾಜದ ವಿವಿಧ ವರ್ಗಗಳ ಪರಿಚಯ, ಅವುಗಳ ನಡುವಿನ ಸಂಬಂಧ, ಆಚರಣೆಯಲ್ಲಿದ್ದ ಮೂಢನಂಬಿಕೆಗಳು, ದೇವರು, ದೈಯ್ಯ, ಭೂತಾರಾಧನೆ ಆಚರಣೆಗಳು, ಜಾತಿಪದ್ದತಿ, ಆರ್ಥಿಕ ವ್ಯವಸ್ಥೆ, ಕ್ರೈಸ್ತ ಮಿಷನರಿಗಳ ಮತಾಂತರ ಕಾರ್ಯಾಚರಣೆ, ಕೌಟುಂಬಿಕ ಕಲಹಗಳು, ಬೇಟೆ, ಆಳುಗಳನ್ನು ಆಸ್ತಿಗಳೆಂದು ಭಾವಿಸುವ ಪರಿ, ಗಂಡಿನ ದಬ್ಬಾಳಿಕೆ, ಹೆಣ್ಣಿನ ಅಸಹಾಯಕತೆ, ಸಹಬಾಳ್ವೆ, ಬದಲಾಗುತ್ತಿದ್ದ ಕಾಲದಲ್ಲಿ ಚಿಗುರೊಡೆದ ವಿಚಾರಮತಿ ಧೋರಣೆ, ಹೀಗೆ ಹತ್ತು ಹಲವು ಅಂಶಗಳು ಸೇರಿಕೊಂಡು ಅಂದಿನ ಮಲೆಸೀಮೆಯ ವ್ಯವಸ್ಥೆಯನ್ನೂ, ಜನ-ಜೀವನದ ಸ್ಥಿತಿಗತಿಗಳನ್ನು ಇಂದಿನ ಪ್ರೇಕ್ಷಕರೆದುರಿಗೆ ವಿವರವಾಗಿ ಪ್ರಸ್ತುತಪಡಿಸುವುದರಲ್ಲೇ ಈ ನಾಟಕದ ವೈಶಾಲ್ಯತೆಯಿದೆ ಎಂದು ತಿಳಿಯಬಹುದು.


ನಮ್ಮ ಆಯಸ್ಸಿಗಿಂತ ಮೊದಲೇ, ನಾವು ಹೇಳ್ತಿದ್ದ ಪುರಾಣಗಳ ಆಯಸ್ಸು ಮುಗ್ದೋಗ್ಯಾದೆ.  ಜನಕ್ಕೆ ಬೇಕಾದ ಕತೆ ನಮ್ಮ ಹತ್ತಿರ ಇಲ್ಲಾ ಸ್ವಾಮಿ ನಾವೇನ್ಮಾಡೋಣಾ’

ಊರೂರು ತಿರುಗುತ್ತಾ, ಪುರಾಣವನ್ನು, ಕಥೆಗಳನ್ನು ಹೇಳುತ್ತಾ, ಹಾಡುತ್ತಾ, ಜನರಿಂದ ಅನ್ನದ ಭಿಕ್ಷೆಪಡೆದು ಜೀವನ ನಡೆಸುವ ಜೋಗಿಗಳು, ತಮ್ಮ ಈ ಕುಲ ಕಸುಬನ್ನು ಬಿಟ್ಟು, ಮುಂದಿನ ದಾರಿ ಹುಡುಕುವ ಯೋಚನೆಯಲ್ಲಿ ಕಂಗಾಲಾಗಿರುತ್ತಾರೆ.  ತಲತಲಾಂತರದಿಂದ ಇವರು ಹೇಳುತ್ತಾ ಬಂದಿರುವ ಕಥೆಗಳನ್ನು, ಪುರಾಣವನ್ನು ಕೇಳಲು ಇವತ್ತಿನ ಕಾಲದಲ್ಲಿ ಯಾರಿಗೂ ಆಸಕ್ತಿಯೂ ಇಲ್ಲ, ಪುರುಸೊತ್ತು ಇಲ್ಲ. ಹೇಳಲು, ಕಥೆ ಕಟ್ಟಿ ಹಾಡಲು ಇವರಿಗೆ ಬೇರೆ ಕಥೆಯೂ ಗೊತ್ತಿಲ್ಲ.  ಈ ಸಮಯದಲ್ಲಿ, ಗೋಸಾಯಿಗಳು- ಕೃಷ್ಣ ಪರಮಾತ್ಮನ ಭಕ್ತರು- ಒಂದು ಉಂಗುರವನ್ನು ಭಿಕ್ಷೆಯಾಗಿ ನೀಡುತ್ತಾ ’ಈ ಉಂಗುರದಾಗೆ ಲೋಕಕ್ಕೆ ಬೇಕಾದ ಕತೆ ಇದೆ’ ಎಂದು ಹೇಳಿ ಹೊರಡುತ್ತಾರೆ.  ಹೀಗೆ ಆ ಉಂಗುರದ ಮೂಲಕ ಮಲೆನಾಡಿನ ಕತೆ ತೆರೆದುಕೊಳ್ಳುತ್ತದೆ.
ಅಲ್ಲಿಂದೀಚೆಗೆ ಜೋಗಿಗಳಲ್ಲೇ ಕೆಲವರು ಕತೆಯ ಪಾತ್ರಗಳಾದರೆ, ಉಳಿದವರು ಸೂತ್ರಧಾರರಾಗುತ್ತಾರೆ.
ಜೋಗಿಗಳಂತೆಯೆ, ಕಥೆ ಹೇಳುತ್ತಾ, ಹಾಡುತ್ತಾ ಜೀವನ ನಡೆಸುವವರು, ಹೆಳವರು, ಕೊರವಂಜಿಗಳು, ಸುಡುಗಾಡು ಸಿದ್ದರು, ನಾಟಕದ ವಿವಿಧ ಹಂತದಲ್ಲಿ ಈ ಉಂಗುರವು ಜೋಗಿಗಳಿಂದ ಹೆಳವರಿಗೆ, ಹೆಳವರಿಂದ ಸುಡುಗಾಡು ಸಿದ್ದರಿಗೆ ಹಸ್ತಾಂತರವಾಗುತ್ತಾ, ಅವರಿಗೂ ಕಥೆ ಹೇಳುವ ಅವಕಾಶ ಕೊಟ್ಟು ಅವರ ಜೀವನವನ್ನೂ ಕಾಯುತ್ತದೆ. 

ಪ್ರಸ್ತುತ ಕಾಲ ದಿಂದ, ನೂರು-ನೂರಿಪ್ಪತ್ತು ವರ್ಷಗಳ ಹಿಂದಿನ ಕಾಲದ ಕತೆಯನ್ನು ಹೇಳಲು ಬೇಕಾದ ’Transition’ ಗಾಗಿ ನಾಟಕಕಾರರು ಜಾಣ್ಮೆಯಿಂದ ಈ ತಂತ್ರವನ್ನು ಬಳಸಿದ್ದಾರೆ.  ಮೊಬೈಲ್, ಕಂಪ್ಯೂಟರ್, ವಾಟ್ಸಪ್ ಕಾಲದಲ್ಲಿ ಜೋಗಿಗಳಿಗೆ ಸಿಕ್ಕ ಈ ಕತೆ ಅವರ ಕುಲಕಸುಬನ್ನು ಮುಂದುವರೆಸಿ, ಜೀವನ ನಡೆಸುವ ಭರವಸೆ ಹುಟ್ಟುಹಾಕಿದರೆ, ಜೋಗಿಗಳಂತೆಯೇ ಕಂಗಾಲಾಗಿರುವ ಪ್ರೇಕ್ಷಕರಿಗೆ ತಮ್ಮ ನಿನ್ನೆಯನ್ನು ತಿಳಿಸುವುದರ ಮೂಲಕ, ನಾಳೆಯನ್ನು ರೂಪಿಸಿಕೊಳ್ಳುವ ಅವಕಾಶವನ್ನು ಕೊಡುತ್ತದೆ.

 
 
’ಅವರ್ ಬಿಟ್ಟ್ ಇವರ್ ಬಿಟ್ಟ್ ಅವರ್ಯಾರು’

ನಾಟಕದ ಮೊದಲ ರಂಗದ ಭಾಗ, ಪಾತ್ರಗಳ ಪರಿಚಯಕ್ಕೂ, ನಾಟಕ ಪ್ರಾರಂಭವಾಗುವ ವೇಳೆಗೆ ಕತೆಯಲ್ಲಿದ್ದ ಪರಿಸ್ಥಿತಿಯನ್ನು ಅರಿಯುವುದಕ್ಕೂ ಮೀಸಲಾಗಿದೆ ಎಂದು ತಿಳಿಯಬಹುದು.  ಹಾಗಾಗಿ, ಇಲ್ಲಿ ಪಾತ್ರಗಳ ಸಂಭಾಷಣೆಯನ್ನೂ, ಸೂತ್ರಧಾರಿಗಳಾಗಿ ಬರುವ ಜೋಗಿಗಳ ವಿವರಣೆಯನ್ನೂ ಗಮನವಿಟ್ಟು ಕೇಳಬೇಕು.  ತಪ್ಪಿದರೆ, ಮುಂದಿನ ರಂಗಗಳಲ್ಲಿ ಆಗುವ ಸನ್ನಿವೇಶಗಳನ್ನು ತಿಳಿಯಲು ಕಷ್ಟವಾಗುತ್ತದೆ.  ನಾಟಕದ ತುಂಬಾ ಹಲವಾರು ಪಾತ್ರಗಳು ಬರುವುದರಿಂದ ಹಾಗೂ ಈ ಪಾತ್ರಗಳು, ಕುಟುಂಬಗಳು ತಮ್ಮ ತಮ್ಮಲ್ಲೇ ಹೆಣ್ಣನ್ನು-ಗಂಡನ್ನು ಕೊಟ್ಟು ತಂದು ಮಾಡಿರುವುದರಿಂದ ಇಲ್ಲಿನ ಸಂಬಂಧಗಳು ಜಟಿಲವಾದಂತೆ ತೋರುತ್ತದೆ.
ಯಾರು, ಯಾರ ಮನೆಯ ಆಳು?! ಯಾವ ಒಡೆಯ ಯಾವ ಹಳ್ಳಿಯವನು, ಯಾವ ಪೈಕಿಯವನು? ಮತ್ತೊಂದು ಹಳ್ಳಿಯ ಒಡೆಯ ಇವನಿಗೆ ಒಕ್ಕಲೋ, ಗೆಳೆಯನೋ, ವೈರಿಯೋ?! ಹೀಗೆ ಇವುಗಳನ್ನು ತಿಳಿಯದ ಹೊರತು ನಾಟಕ ಸಲೀಸಾಗಿ ನಮ್ಮಲ್ಲಿಳಿಯುವುದಿಲ್ಲ.
ಗದ್ದೆಯ ಕೆಲಸವೆಂದರೆ ನಿರಾಸಕ್ತರಾಗಿ ಇರುವ, ಆದರೆ ಬೇಟೆ ಎಂದೊಡನೆ ಅತ್ಯುತ್ಸಾಹದಿಂದ ಓಡಿ ಬರುವ ಆಳುಗಳು, ತಿಮ್ಮಿಯನ್ನು ಮದುವೆಯಾಗಲೇ ಬೇಕೆಂದು ಹೊರಡುವ ಗುತ್ತಿ, ಗುತ್ತಿಯನ್ನು ಬಿಡದೆ ಸದಾ ಸ್ವಾಮಿನಿಷ್ಠೆಯಿಂದ ಹಿಂಬಾಲಿಸುವ ಅವನ ’ಹುಲಿಯಾ’,  ಸೊಸೆಯನ್ನು ’ಸೀರುಡಿಕೆ’ ಮಾಡಿಕೊಟ್ಟು ನೆಲೆಕಂಡುಕೊಳ್ಳವ ಧೂರ್ತ ಯೋಚನೆಯ ನಾಗತ್ತೆ, ಸಾಲಗಾರ ವೆಂಕ್ಟಪ್ಪನಾಯ್ಕ, ಕಳೆದು ಹೋದ ಹಿರಿಯ ಮಗನನ್ನು ನೆನೆಯುತ್ತಾ ಕೊರಗುವ ಸುಬ್ಬಣ್ಣ ಹೆಗ್ಗಡೆ, ಬ್ರಾಹ್ಮಣರಂತೆ ಮಡಿ-ಮೈಲಿಗೆ ಎಂದು ಶುರುಮಾಡಿರುವ ಶಂಕರ ಹೆಗ್ಗಡೆ, ಅಂತಕ್ಕ ಸೆಟ್ಟಿ, ಅವಳ ಮಗಳು ಕಾವೇರಿ, ಬೈಸಿಕಲ್ಲನ್ನು ಒಂದು ಚಮತ್ಕಾರವೆಂಬಂತೆ ತೋರಿಸಿ ಮರಳು ಮಾಡಿ, ಮತಾಂತರಕ್ಕೆ ಯತ್ನಿಸುವ ಪಾದ್ರಿ, ಅವನಿಗೆ ಜೊತೆಯಾಗಿ ನಿಂತ ದೇವಯ್ಯ, ಆಗಷ್ಟೇ ಮದುವೆಯಾಗಿರುವ ಮುಗ್ದ-ಪ್ರಬುದ್ದ ಜೋಡಿ ಐತ-ಪೀಂಚಲು, ತಾನು ಪ್ರೀತಿಸುತ್ತಿರುವ ಚಿನ್ನವ್ವಳನ್ನು ಸಿಂಭಾವಿಯ ಭರಮೈ ಹೆಗಡೆಯವರಿಗೆ ಮದುವೆ ಮಾಡಿಕೊಡುವ ವಿಷಯ ತಿಳಿದು ಆತಂಕಗೊಳ್ಳುವ ಮುಕುಂದಯ್ಯ. ಹೀಗೆ ಎಲ್ಲರೂ, ಎಲ್ಲ ಸನ್ನಿವೇಶವೂ ಸ್ವಾರಸ್ಯಕರವಾಗಿ ಮೂಡಿಬಂದು, ಮುಂದಿನ ಅಂಕಗಳಿಗೆ ಪ್ರೇಕ್ಷಕರನ್ನ ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗುತ್ತದೆ.
ಮುಂದಿನ ಅಂಕಗಳಲ್ಲಿ ಕುತೂಹಲಕಾರಿಯಾಗಿ ಸಾಗುವ ನಾಟಕ, ಅಲ್ಲಲ್ಲಿ ವ್ಯವಸ್ಥೆಯ ವಿಡಂಬನೆ ಮಾಡುತ್ತಾ, ಫಿಲಾಸಫಿಯನ್ನು ಹೇಳುತ್ತಾ, ವೆಂಕಟ್ಟಪ್ಪನಾಯ್ಕ-ನಾಗತ್ತೆಯ ಸಂಚನ್ನೂ, ಚೀಂಕ್ರನ ಕಿರಾತಕತನವನ್ನೂ ಬಯಲುಗೊಳಿಸುತ್ತಾ, ಹೆಗ್ಗಡೆಗಳ, ಗೌಡರ ಮನೆಯ ಕೌಟುಂಬಿಕ ಕಥೆಯನ್ನು ಮತ್ತಷ್ಟು ವಿವರಗೊಳಿಸುತ್ತಾ ಸಾಗಿ, ಕೊನೆಗೆ ಜೋಡಿಗಳಿಬ್ಬರೂ,ಎಲ್ಲಾ ಸವಾಲುಗಳನ್ನು ಎದುರಿಸಿ, ತಾವು ಇಚ್ಚಿಸಿದಂತೆ ತಮ್ಮ ಬದುಕ ಕಟ್ಟಿಕೊಳ್ಳಲು ಪ್ರಾರಂಭಿಸುವ ವೇಳೆಗೆ ನಾಟಕ ಅಂತ್ಯಗೊಳ್ಳುತ್ತದೆ

 

“’ಮದುವೆ ಆದ ಮೇಲೆ ನೀನೀಗ ದೊಡ್ಡ ಹೆಗ್ಗಡ್ತಿ ಆಗಿಬಿಟ್ಟಿದ್ದೀಯಾ!”
ಒಮ್ಮೆ, ಐತ ಹಾಗೂ ಪೀಂಚಲು ಏಕಾಂತದಲ್ಲಿ ಏಡಿ ಹಿಡಿಯುವಲ್ಲಿ ಮಗ್ನರಾಗಿದ್ದಾಗ ಅಲ್ಲಿಗೆ ಅಚಾನಾಕ್ಕಾಗಿ ಬರುವ ಮುಕುಂದಯ್ಯ, ಐತನ ಕೈಯಲ್ಲಿ ಹೊಂಬಾಳೆಯಿರುವುದನ್ನು ಗಮನಿಸಿ, ’ಎಲ್ಲಿತ್ತೋ ಹೊಂಬಾಳೆ?! ಬಿದ್ದಿತ್ತೋ ಅಥವಾ ಮರ ಹತ್ತಿ ಉದುರಿಸಿದ್ದೋ?’ ಎಂದು ಕೇಳುತ್ತಾನೆ. ಆಗ ಐತ ಭಯದಿಂದ, “ಬಿದ್ದಿತ್ತು...” ಎಂದು ತಡವರಿಸಿದರೆ,  ಪೀಂಚಲು, ಧೈರ್ಯದಿಂದ, ’ಇಲ್ಲಯ್ಯ, ಹತ್ತಿ ತೆಗೆದದ್ದು’ ಎನ್ನುತ್ತಾಳೆ.  ಅದಕ್ಕೆ ಮುಕುಂದಯ್ಯ, “ಯಾರು ಹತ್ತಿದ್ದು?  ನೀನೋ...ಅವನೋ...” ಎಂದು ಕೇಳಲು, ಪೀಂಚಲು, “ಅಯ್ಯಾ...ನಾನ್ಯಾಕಾ ಹತ್ತಲಿ.  ಅವನೇ ಹತ್ತಿ ಕುಯ್ದುದ್ದು’ ಎಂದುತ್ತರಿಸುತ್ತಾಳೆ.
ಆಗ ಮುಕುಂದಯ್ಯ, ’ಅಲ್ವೇ, ಮೊದಲೆಲ್ಲಾ ನೀನೇ ಮರ ಹತ್ತಿ ಹೊಂಬಾಳೆ ತೆಗೆದುಕೊಡುತ್ತಾ ಇದ್ದೆ ನಮಗೆಲ್ಲಾ?!
ಮದ್ವೆ ಆದ್ಮೇಲೆ ನೀನೀಗ ದೊಡ್ಡ ಹೆಗ್ಗಡ್ತಿ ಆಗಿಬಿಟ್ಟಿದ್ದೀಯಾ’ ಎನ್ನುತ್ತಾನೆ.

ಈ ಮಾತು ಪೀಂಚಲುವನ್ನು ತಮಾಷೆಮಾಡಲು ಹೇಳಲಾಗಿದೆ ಎಂದೆನಿಸಿದರೂ, ನಾಟಕದಲ್ಲಿ ಪೀಂಚಲು ನಿಜ ಅರ್ಥದಲ್ಲಿ ಹೆಗ್ಗಡತಿಯೇ ಆಗಿ ತೋರುತ್ತಾಳೆ.  ಯಾರೊಂದಿಗೆ, ಯಾವ ಸಂದರ್ಭದಲ್ಲಿ ಹೇಗೆ ವ್ಯವಹರಿಸಬೇಕೆಂಬ ಅವಳ ಪ್ರಬುದ್ದತೆಯೇ ಇದಕ್ಕೆ ಸಾಕ್ಷಿ.  ಈಕೆ ಮುಕುಂದಯ್ಯನ ತೋಟದಾಳು. ಹಾಗೆಂದು, ಈಕೆ ಭಯದಿಂದ ಮುಕುಂದಯ್ಯ-ಚಿನ್ನಮ್ಮನಿಗೆ ಸಹಾಯ ಮಾಡುವಂತೆ ತೋರುವುದೇ ಇಲ್ಲ.  ಅಲ್ಲಿ, ತುಳುನಾಡಿನಿಂದ ಬಂದ ಅಂತಕ್ಕ ಸೆಟ್ಟಿ ಹಾಗೂ ಕಾವೇರಿಯನ್ನು ಸುಬ್ಬಣ್ಣ ಹೆಗ್ಗಡೆ ತಮ್ಮ ಒಕ್ಕಲಿನವರಂತೆ ಕಾಣುತ್ತಿದ್ದರೆ, ಇಲ್ಲಿ, ಪೀಂಚಲು ಮುಕುಂದಯ್ಯ-ಚಿನ್ನಮ್ಮನನ್ನು ತನ್ನ ಒಕ್ಕಲಿನವರಂತೆ ಕಂಡು ಅವರಿಗೆ ಸಹಾಯ ಮಾಡುತ್ತಿರುತ್ತಾಳೆ.
ಪ್ರೀತಿಯ ಗಂಡ ಐತನಿಗೆ ಗೊತ್ತಾಗದಂತೆ ಹೂವಳ್ಳಿಗೆ ಕದ್ದು ಬಂದು ಚಿನ್ನಮ್ಮನಿಗೆ ಮುಕುಂದಯ್ಯನ ಬಗ್ಗೆ ತಿಳಿಸುತ್ತಾಳೆ, ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಓಡಿ ಬಂದ ತಿಮ್ಮಿ ಹಾಗೂ ಗುತ್ತಿಗೆ ತನ್ನ ಮನೆಯಲ್ಲೇ ಆಶ್ರಯ ನೀಡುತ್ತಾಳೆ, ಅತ್ತ ಕಡೆ ಮುಕುಂದಯ್ಯ-ಚಿನ್ನಮ್ಮ ಹೊಸ ಬಾಳನ್ನು ಆರಂಭಿಸುವಾಗ ಐತನ ಜೊತೆ ಕೂಡಿ ಅವರಿಬ್ಬರಿಗೆ ಆಸರೆಯಾಗಿ ನಿಲ್ಲುವ ಮನಸ್ಸು ಮಾಡುತ್ತಾಳೆ

ಮತ್ತೊಂದು ಅಂಶವನ್ನು ಗಮನಿಸಲೇ ಬೇಕು.  ತಿಮ್ಮಿ ಹಾಗೂ ಗುತ್ತಿ ಒಬ್ಬರನ್ನೊಬ್ಬರು ಪ್ರೀತಿಸಿರುತ್ತಾರೆ.  ತಿಮ್ಮಿಯ ಅಪ್ಪನ ಆಸೆಬುರುಕತನಕ್ಕೆ, ಮೂರ್ಖತನಕ್ಕೆ ಮಗಳ ಬದುಕು ಹಾಳಾಗುವುದನ್ನು ಸಹಿಸದ ತಿಮ್ಮಿಯ ಅವ್ವ ಸೇಸಿಯು ತಿಮ್ಮಿಯನ್ನು ಗುತ್ತಿಯೊಡನೆ ತಾನೇ ಖುದ್ದಾಗಿ ಕಳುಹಿಸಿಕೊಡುತ್ತಾಳೆ.  ತಿಮ್ಮಿ ಕಾಣೆಯಾಗಿರುವ ಸಂಗತಿ ತಿಮ್ಮಿಯ ಅಪ್ಪ ದೊಡ್ಡಬೀರನಿಗೆ ಗೊತ್ತಾದಾಗಲೂ, ತನಗೆ ಏನೂ ಗೊತ್ತೇ ಇಲ್ಲವೆಂಬಂತೆ ನಟಿಸುತ್ತಾಳೆ. 

ಆದರೆ, ಚಿನ್ನಮ್ಮ ಎಳೆಯ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ನತದೃಷ್ಟೆ.  ತಂದೆಯಾದ ವೆಂಕ್ಟಪ್ಪನಾಯ್ಕ ತನ್ನ ಮಗಳ ವಯಸ್ಸಿನ ನಾಗಕ್ಕಳ ಜೊತೆ ಕೂಡಿಕೆಗೆ ಹವಣಿಸುತ್ತಿರುವಾಗ, ಚಿನ್ನಮ್ಮಳಿಗೆ ಇವನಲ್ಲಿ ತಾಯಿಯಾದರೂ ಹೇಗೆ ಕಾಣಬೇಕು?!
ಇವಳ ಯೋಗಕ್ಷೇಮಗಳನ್ನು ನೋಡಿಕೊಂಡಿದ್ದವಳು ಇವಳ ಅಜ್ಜಿ ಹಾಗೂ ಜೊತೆಯಾಗಿದ್ದವಳು ನಾಗಕ್ಕ ಮಾತ್ರ.  ಆದರೆ, ಚಿನ್ನಮ್ಮಳನ್ನು ಮುಕುಂದಯ್ಯನೊಂದಿಗೆ ಸೇರಿಸುವಲ್ಲಿ ಪೀಂಚಲು ಥೇಟ್ ಚಿನ್ನಮ್ಮಳ ತಾಯಿಯಂತೆಯೇ ಕಾಣುತ್ತಾಳೆ. 
ತನ್ನ ಹಾಗೂ ಮುಕುಂದ ಭಾವನ ಮದುವೆಗೆ ಎದುರಾಗುತ್ತಿರುವ ಸವಾಲುಗಳಿಂದ ಅಧೀರಳಾಗುವ ಚಿನ್ನಮ್ಮಳನ್ನು ಕಂಡು, ಪೀಂಚಲು, “ಹೆದರಬ್ಯಾಡಿ ಚಿನ್ನಕ್ಕ.  ನೋಡಾನ.  ದ್ಯಾವರಿದ್ದಾನೆ! ಒಂದು ವ್ಯಾಳೆ ಕೈಮೀರ್ತು ಅಂದ್ರೆ ನಾವೆಲ್ಲಾ ಇಲ್ಲೇನು?!”
ಎಂದು ಹೇಳುವಾಗಲೂ,
ಹಾಗೂ
ಮುಂದೆ, ಚಿನ್ನಮ್ಮ ತನ್ನ ಹೂವಳ್ಳಿಯ ಮನೆ ಬಿಟ್ಟು ಪೀಂಚಲುವಿನ ಜೊತೆಯಲ್ಲಿರುವಾಗ, ಪೀಂಚಲು ತನ್ನ ಹಾಗೂ ಐತನ ದಾಂಪತ್ಯದ ಬಗ್ಗೆ ಹೇಳುತ್ತಾ, ಸಂಸಾರದ ಬಗ್ಗೆ ತಿಳಿಸಿಕೊಡುವಾಗಲಂತೂ ಪೀಂಚಲು ಚಿನ್ನಮ್ಮಳ ತಾಯಿಯೇ ಆಗಿರುತ್ತಾಳೆ.
 

“ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ”

ಈ ಕಥೆ ನಡೆಯುತ್ತಿರುವುದು ನೂರು-ನೂರಿಪ್ಪತ್ತು ವರ್ಷಗಳ ಹಿಂದೆ; ಜಾತಿ ಪದ್ದತಿಯೆಂಬುದು ಗಾಢವಾಗಿ ಬೇರುಬಿಟ್ಟಿದ್ದ ಸಮಯ.  ಆಗ ಅಸ್ಪ್ರುಶ್ಯತೆಯೂ ಇತ್ತು ಎಂಬುದನ್ನ ಬಿಡಿಸಿ ಬೇರೆ ಹೇಳಬೇಕಿಲ್ಲವೆನಿಸುತ್ತದೆ.  ಹೊಲೆಯರೆಂಬುವರ ಶ್ರಮದಿಂದ ಗದ್ದೆಯಲ್ಲಿ ಬೆಳೆದು ಬಂದ ಭತ್ತವನ್ನು ಪಡೆಯುತ್ತಿದ್ದ, ಅದರ ಅನ್ನವನ್ನು ತಿನ್ನುತ್ತಿದ್ದ ಮೇಲ್ಜಾತಿಯವರೆಂದು ಕರೆಸಿಕೊಳ್ಳುತ್ತಿದವರು, ಅದೇ ಹೊಲೆಯರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ.  ನಾಟಕದ ಪೂರ್ತಿ ಆಗಾಗ ಈ ಅಂಶ ಎದ್ದು ಕಾಣಿಸುತ್ತದೆ.  ಗುತ್ತಿ ತಾನು ತಂದ ಪತ್ರವನ್ನು ಸುಬ್ಬಣ್ಣ ಹೆಗ್ಗಡೆಯವರಿಗೆ ಕೊಡುವಾಗ, ಕಣ್ಣಾಪಂಡಿತ ಗುತ್ತಿಗೆ ಮದ್ದನ್ನು, ಅಂತ್ರವನ್ನು ಕೊಡುವಾಗ, ಹೊಲೆಯರೆಲ್ಲರೂ ಹಂದಿ ಬೇಟೆಯಾಡುವ ಸಂದರ್ಭದಲ್ಲಿ ಶಂಕರ ಹೆಗ್ಗಡೆ ಮನೆ ಮುಂದಿನ ತುಳಸಿ ಕಟ್ಟೆಯನ್ನು ಬೀಳಿಸಿದಾಗ, ದೇವಮ್ಮ ತನ್ನ ಮನೆಗೆ ಬಂದ ಪಾದ್ರಿಗೆ ಊಟಕ್ಕೆ ಬಡಿಸಲು ಪಾತ್ರೆಯನ್ನು ಅವಳ ಮನೆಯಾಳಿಗೆ ಕೊಟ್ಟಾಗ, ಹೀಗೆ ನಾಟಕದುದ್ದಕ್ಕೂ ಇದು ಕಾಣಿಸುತ್ತಾ ಹೋಗುತ್ತದೆ. 
ವಿಶೇಷವೆಂದರೆ, ಈ ರೀತಿಯ ಧೋರಣೆ ಕೇವಲ ಮೇಲ್ಜಾತಿಯವರೆಂದೆನಿಸಿಕೊಂಡಿದ್ದ ಹೆಗ್ಗಡೆಯವರ, ಗೌಡರ ಮನೆಯವರಲ್ಲಿ ಮಾತ್ರವಲ್ಲ, ಹೊಲೆಯರಲ್ಲೂ ಇತ್ತು ಎನ್ನುವುದು.  ಉದಾಹರಣೆಗೆ, ದೇವಯ್ಯನ ಮನೆಗೆ ಪಾದ್ರಿ ಜೀವರತ್ನನನ್ನು ಊಟಕ್ಕೆಂದು ಕರೆತಂದಾಗ, ಅವನಿಗೆ ಊಟ ಬಡಿಸುವ ದೇವಯ್ಯನ ಮನೆ ಆಳು ಸಹ, ಆ ಪಾದ್ರಿಯನ್ನು ಮುಟ್ಟಿಸಿಕೊಳ್ಳದಂತೆಯೇ ದೂರದಿಂದ ಊಟ ಬಡಿಸುತ್ತಾನೆ.  ಮತ್ತೊಂದು ಕಡೆ, ಸಾಬಿ ಅಜೀಜು ಹೊಲೆಯರ ಕೇರಿಗೆ ಹೋದಾಗ, ದೊಡ್ಡಬೀರ ’ನಮ್ಮ ಜಾತಿ ಕೆಟ್ಟು ಹೋಗ್ತದೆ, ನಮಗೂ ದೇವರು, ದಿಂಡರು ಅವ್ರೆ, ನೀವು ನಮ್ಮ ಕೇರಿಗೆ ಬರಬ್ಯಾಡ್ರಿ’ ಅಂತ ಕಿರುಚಾಡಿರುತ್ತಾನೆ.

ಆದರೆ, ಈ ರೀತಿಯ ಧೋರಣೆ ನಮಗೆ ಐತ-ಮುಕುಂದಯ್ಯ, ಪೀಂಚಲು-ಚಿನ್ನಕ್ಕರಲ್ಲಿ ಕಾಣುವುದಿಲ್ಲ. ಪೀಂಚಲು ತಾನು ತಂದ ಸುದ್ದಿಯನ್ನು ಗುಟ್ಟಾಗಿ ತಿಳಿಸಲು ಚಿನ್ನಕ್ಕನ ಕೈಯನ್ನು ಹಿಡಿದು ಪಕ್ಕಕ್ಕೆ ಎಳೆದಾಗಲೂ, ಚಿನ್ನಕ್ಕ ಹೂವಳ್ಳಿ ಬಿಟ್ಟು ಬಂದಾದ ಮೇಲೆ ಪೀಂಚಲುವಿನ ಜೊತೆಯಿರುವಾಗಲೂ, ಮುಕುಂದಯ್ಯ ಐತನೊಂದಿಗೆ ಮಾತನಾಡುವಾಗಲಿ ಅವರಿಗೆ ಈ ವಿಷಯ ಭಾದಿಸಿದಂತೆ ಕಾಣುವುದಿಲ್ಲ.  ಅತ್ತ ಕಡೆ, ದೇವಯ್ಯ ನಮ್ಮಲ್ಲಿರುವ ಮೂಢ ಆಚರಣೆಗಳನ್ನು ನಿಲ್ಲಿಸಬೇಕು ಎಂದು ಉತ್ಸಾಹಿಯಾಗಿ, ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರೈಸ್ತ ಮತದೆಡೆಗೆ ನೋಡುತ್ತಿರುತ್ತಾನೆ.  ಇತ್ತ ಕಡೆ, ಮುಕುಂದಯ್ಯ ಹಾಗೂ ಚಿನ್ನಕ್ಕ, ಅವರ ನಡುವೆಯೇ ಇರುವ ಪ್ರೀತಿ-ಸ್ನೇಹಗಳನ್ನು ಗುರುತಿಸುತ್ತಾ, ಅಡೆ-ತಡೆಗಳನ್ನು ಮೀರುತ್ತಾ ಉಳಿದವರಿಗೆ ಮಾದರಿಯಾಗಿರುತ್ತಾರೆ; 
ದೂರದ ದೇಶದಲ್ಲಿ ನಿಂತು, ಭಾರತದ ವೇದಾಂತದ ಸಾರವನ್ನು ಇಡೀ ಜಗತ್ತಿಗೇ ಸಾರಿದ ವಿವೇಕಾನಂದರ ಮಾತಿನಂತೆ.

 

“ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದೂ ಅಲ್ಲ ವ್ಯರ್ಥ”
ನಾಟಕದ ಉದ್ದಕ್ಕೂ ಗುತ್ತಿಯ ಜೊತೆಗೇ ಇರುವ ಆತನ ನಾಯಿ ಹುಲಿಯಾ, ಗುತ್ತಿ ತನ್ನ ಹೊಸ ಬದುಕನ್ನ ಪ್ರಾರಂಭಿಸುವ ಮುನ್ನ ಅವನಿಂದ ದೂರಾಗುತ್ತದೆ. 
ಬಹು ಮುಖ್ಯ ಸಂದರ್ಭಗಳಲ್ಲಿ ಇಬ್ಬರೂ ಜೋಡಿಗಳಿಗೆ ಆಶ್ರಯ ನೀಡುವುದು ಹುಲಿಕಲ್ಲ್ ನೆತ್ತಿ ಎಂಬ ಜಾಗ.
ಹೀಗೆ ಕೆಲವು ವಿಷಯಗಳು ಕೇವಲ ರೋಚಕತೆಗಾಗಿಯೋ, ಸಾಹಸಕ್ಕಾಗಿಯೋ ಅಲ್ಲದೇ, ಯಾವುದೋ ಮುಖ್ಯ ವಿಷಯವೊಂದರ ಹೋಲಿಕೆಯಾಗಿರಬಹುದಾ?! ಗೊತ್ತಿಲ್ಲ.

ಮೊದಲೇ ಹೇಳಿದಂತೆ ಇದು ಕೇವಲ ಮದುವೆಯ ಕಥೆಯಲ್ಲ.  ಆದರೆ, ಇಲ್ಲಿ, ಆಗಷ್ಟೇ ಮದುವೆಯಾಗಿ ಹೊಸ ಜೀವನದ ಸುಖ-ಸಂತೋಷಗಳನ್ನು ಕಾಣುತ್ತಿರುವ ಪೀಂಚಲು ಇದ್ದಾಳೆ, ತಾವು ಇಷ್ಟಪಟ್ಟವರೊಂದಿಗೆ ಮದುವೆಯಾಗ ಬಯಸುವ ಚಿನ್ನಕ್ಕ ಹಾಗೂ ತಿಮ್ಮಿ ಇದ್ದಾರೆ, ಮದುವೆಯಾಗಿ ಮಗುವನ್ನು ಪಡೆಯದೆ, ಗಂಡನನ್ನು ಕಳೆದುಕೊಂಡು, ನಾಗತ್ತೆಯ ಹುನ್ನಾರಕ್ಕೆ ಬಲಿಯಾದ ನಾಗಕ್ಕ ಇದ್ದಾಳೆ, ಕಾಣೆಯಾದ ಗಂಡನ ನೆನೆಪಿನಲ್ಲಿ ಮಗನ ಜೊತೆ ದಿನ ನೂಕುತ್ತಿರುವ ರಂಗಮ್ಮ ಇದ್ದಾಳೆ, ಮದುವೆಯಾಗಿ ಗಂಡನೊಂದಿಗೆ ಸುಖ ಜೀವನ ನಡೆಸಬೇಕಿದ್ದ ಕಾವೇರಿ, ಮೋಸಕ್ಕೆ ಬಲಿಯಾಗುತ್ತಾಳೆ, ಮದುವೆ ಗಂಡಿಗಾಗಿ ಕಾದಿರುವ ಮಂಜಮ್ಮಳಿದ್ದಾಳೆ. ಮದುವೆಯಾಗದೇ ಉಳಿದಿರುವ ಲಕ್ಕಮ್ಮಳಿದ್ದಾಳೆ, ಮಕ್ಕಳಾಗಿಲ್ಲವೆಂಬ ಕಾರಣಕ್ಕಾಗಿ ವಯಸ್ಸಾಗಿರುವ ತನ್ನ ಗಂಡನಿಗೆ ಮತ್ತೊಂದು ಮದುವೆ ಮಾಡಿಸಲು ಸಿದ್ದವಿರುವ ಜಕ್ಕಮ್ಮಳಿದ್ದಾಳೆ. ಈ ಎಲ್ಲಾ ಗಟ್ಟಿಗಿತ್ತಿಯರಿಂದಾಗಿ ಕಾದಂಬರಿಗೆ ಮಲೆಗಳಲ್ಲಿ ಮದುಮಗಳು ಎಂದು ಶೀರ್ಷಿಕೆ ಆಯಿತೇ?! ಗೊತ್ತಿಲ್ಲ.

ಕಾದಂಬರಿ ಓದಿದಾಗಲಾದರೂ ಅಥವಾ ಬಲ್ಲವರಿಂದ ತಿಳಿದಾದರೂ ಇವುಗಳನ್ನು ಕಂಡುಕೊಳ್ಳಲು ಸಾಧ್ಯವೋ? ಪ್ರಯತ್ನಿಸಬೇಕು J 

 

“ನೀರೆಲ್ಲವೂ ತೀರ್ಥ; ತೀರ್ಥವೂ ನೀರೇ”
ಮದುಮಗಳು ನಾಟಕವನ್ನು ನೋಡಿದ ಯಾರೋ ಒಬ್ಬರೂ, ’ಅರೆ! ಕುವೆಂಪುರವರ ಈ ಕಾದಂಬರಿಯೂ ಮದುಮಕ್ಕಳ ಬಗ್ಗೆ, ಮದುವೆ ಬಗ್ಗೆ ಇದೆ, ಇವತ್ತಿನ ಕನ್ನಡ ಸೀರಿಯಲ್‍ಗಳೂ ಸಹ ಯುವ ಜೋಡಿಗಳ ಮದುವೆ ಬಗ್ಗೆ, ಕುಟುಂಬ ಕಲಹಗಳ ಬಗ್ಗೆಯೇ ಇದೆ!’ ಎಂದು ಹರಟುತ್ತಿದ್ದರು.
 
 
 

Tuesday, March 10, 2015

ಬರೆಯುವೆ ಖುಷಿಯಾಗಿ.....


ಆಶ್ಚರ್ಯವಾಗುತ್ತಿದೆ!  ೨೦೧೪ ರಲ್ಲಿ ನನ್ನ ಬ್ಲಾಗ್ ನಲ್ಲಿ ಒಂದೂ ಪೋಸ್ಟ್ ಇಲ್ಲ!!  ಹಾಗಂತ ೨೦೧೪ ರಲ್ಲಿ ನಾನೇನನ್ನೂ ಬರೆದೇ ಇಲ್ಲ ಎಂದಲ್ಲ.  ಒಂದೆರಡು ಅನುವಾದ, ವರದಿ, ಕಾರ್ಯಕ್ರಮಗಳ ಸುತ್ತೋಲೆ, ನಿರೂಪಣಾ ಸ್ಕ್ರಿಪ್ಟ್, ಅನುಭವ ಕಥನ, ಎರಡು ನಾಟಕಗಳ ರಚನೆ, ಹೀಗೆ ಕೆಲವು ವಿಷಯಗಳ ಕುರಿತು ಬರೆದಿದ್ದೇನೆ.  ಆದರೆ, ಬ್ಲಾಗಿನಲ್ಲಿ ಪೋಸ್ಟ್ ಮಾಡಲು ಆಗಿಲ್ಲ.  ಗೊತ್ತಿದೆ, ಕಾರಣಗಳನ್ನು ಕೊಡುವುದು ಸಮಂಜಸವಲ್ಲ.  ಹೊಸ ವರ್ಷದ ಆರಂಭಕ್ಕೇ ಆಫೀಸಿನಲ್ಲಿ ಹೊಸ ಹುದ್ದೆ, ಕಾಲಿಡುತ್ತಿದ್ದಂತೆ ಅತಿ ಕ್ಲಿಷ್ಟಕರವಾದ ಪ್ರಾಜೆಕ್ಟ್, ಒಬ್ಬನೇ ಇದನ್ನು ನಿಭಾಯಿಸಬೇಕಾದ ಅನಿವಾರ್ಯತೆ, ದಿನ ನಿತ್ಯ ಕನಿಷ್ಠ ೧೨ ಘಂಟೆಗಳ ಕಾಲ ಆಫೀಸಿನ ಕೆಲಸಕ್ಕೆ ವಿನಿಯೋಗವಾಗುತ್ತಿದ್ದ ಪರಿಸ್ಥಿತಿ.  ಇನ್ನು ಆಫೀಸಿನ ಹೊರಗೆ,  ಹೊಸ ನಾಟಕಗಳ ತಾಲೀಮು, ಹಳೆ ನಾಟಕದ ಭರ್ಜರಿ ಮರು ಪ್ರದರ್ಶನಗಳು, ಅವಿರತ ದ ಕಾರ್ಯಕ್ರಮಗಳು, ಹೀಗೆ ಸಾಲು ಸಾಲು ಚಟುವಟಿಕೆಗಳು, ’ಎಲ್ಲಿಯಾದರೂ ಸಮಯ ಸಾಲ ಸಿಗುವುದೆ?’ ಎಂದು ಅಲೆದಾಡುವ ಹಾಗೆ ಮಾಡಿದ್ದವು.  ಜೊತೆಗೆ, ಜುಲೈ ನಂತರ ಹೊಸ ಡಿ.ಎಸ್.ಎಲ್.ಆರ್ ಕ್ಯಾಮೆರ ಕೊರಳನ್ನಲಂಕರಿಸಿದ್ದರಿಂದ ಅದರ ಕಲಿಕೆಗೂ ಒಂದಷ್ಟು ಸಮಯವನ್ನು ವಿನಿಯೋಗಿಸ ಬೇಕಾಗಿತ್ತು; ಕನಸೊಂದು ನನಸಾಗಿ ಕೈಯಲ್ಲಿ ಕುಳಿತು, ’ಮುಂದೇನು?’ ಎಂದು ಕೇಳುವಾಗ, ಉತ್ತರಿಸದೆ ಸುಮ್ಮನಿರಲಾಗುತ್ತದೆಯೇ?!

ನನ್ನೆಲ್ಲಾ ಖುಷಿ, ತೃಪ್ತಿ, ಈ ರೀತಿಯ ಚಟುವಟುಕೆ, ಕಲಿಕೆ, ಕಾರ್ಯಕ್ರಮ, ಕೆಲಸಗಳಲ್ಲೇ ಇರುವುದರಿಂದ, ೨೦೧೪ನೇ ವರ್ಷದಲ್ಲಿನ ನನ್ನ ಜೀವನದ ಬಗ್ಗೆ ನನ್ನಲ್ಲಿ ಯಾವುದೇ ದೂರುಗಳಿಲ್ಲ; ಬದಲಿಗೆ ಬಹಳ ಸಮಾಧಾನವಿದೆ.   :-)

Tuesday, December 31, 2013

’ಕಳವು’ – ’ಕಳ್ಳರನ್ನೆಲ್ಲಾ ಜೈಲಿಗೆ ಹಾಕೋದಾದ್ರೆ, ಭೂಮಿಗೇ ಬೇಲಿ ಹಾಕಬೇಕಲ್ಲವಾ?’


“ಇವೊತ್ತ್ ರಾತ್ರಿ ಪಂಚಾಯ್ತಿ ಕಟ್ಟೆ ತಾವ ನ್ಯಾಯಾ ತೀರ್ಮಾನ ಐತೆ, ಎಲ್ಲಾ ಮನೆಯಿಂದಾನೂ ಒಬ್ಬೊಬ್ಬರು ಬರಬೇಕ್ರಪ್ಪೋ...” ಅಂತ ಸುದ್ದಿ ಕೊಟ್ಟ ಹಾಗೆ, ರಾತ್ರಿ ಆಗುತ್ತಿದ್ದಂತೆ ಇಡೀ ಹಳ್ಳಿಯೇ ಪಂಚಾಯಿತಿ ಕಟ್ಟೆ ಬಳಿ ಸೇರಿದೆ. ನಿನ್ನೆ ರಾತ್ರಿ ರಂಗಮ್ಮನ ಎಮ್ಮೆ ಕಳುವಾಗಿದೆ ಊರಕಳ್ಳ ಎನಿಸಿಕೊಂಡಿರುವ ಪಟ್ಲನನ್ನು ಹುಡುಕಿ ತಂದು ಪಂಚಾಯ್ತಿ ಕಟ್ಟೆ ಬಳಿಯ ಕಂಬಕ್ಕೆ ಕಟ್ಟಿ ಹಾಕಿದ್ದಾರೆ.

-------------------------------

ರಂಗಮ್ಮಳದು ಬಿರುಕುಬಿಟ್ಟಂತ ಸಂಸಾರ. ಅವಳ ಕಣ್ಣಿನಲ್ಲಿ ಎಂದೋ ನಾಲಾಯಕ್ ಎನಿಸಿಕೊಂಡ ಗಂಡ ಪುಟ್ಟಲಾಯ್ರಿ ಊರೂರು ಅಲೆಯುತ್ತಾ, ನಾಟಕಗಳಲ್ಲಿ ಅಭಿನಯಿಸುತ್ತಾ ಕಾಲ ಕಳೆಯುತ್ತಿದ್ದಾನೆ. ಇವನಿಗೆ ಮನೆ, ಮಡದಿ, ಮಗನ ಯೋಚನೆಯಿಲ್ಲ. ಗಂಡನಿಂದ ದೂರಾಗಿ, ತಾಯಿ, ತಂಗಿ, ಮಗನೊಡನೆ ಜೀವನ ನಡೆಸುತ್ತಿರುವ ರಂಗಮ್ಮಳೇ ಗಂಡು ದಿಕ್ಕಿಲ್ಲದ ಆ ಮನೆಗೆ ಆಸರೆ. ಅವಳಿಗೆ ಆಸರೆಯಾಗಿದ್ದ, ತಾಯಿಸಮಾನವಾದ ಅವಳ ಮನೆಯ ಎಮ್ಮೆ ಒಂದು ರಾತ್ರಿ ದಿಢೀರನೆ ಕಳುವಾಗುತ್ತದೆ. ಹೀಗೆ ಕಳುವಾಗಿರುವ ಎಮ್ಮೆಯ ಹುಡುಕಾಟದೊಂದಿಗೆ ಆರಂಭವಾಗುವ ಕಥೆ ಪಂಚಾಯಿತಿ ಕಟ್ಟೆಯ ಬಳಿಗೆ ಬರುವ ವೇಳೆಗೆ ಪ್ರೇಕ್ಷಕರಲ್ಲಿ ಸಾಕಷ್ಟು ಪ್ರಶ್ನೆಗಳೆದ್ದಿರುತ್ತವೆ, ಕಳುವಾಗಿರುವುದು ಎಮ್ಮೆ ಮಾತ್ರಾನ? ಕಳಕೊಂಡಿರುವುದು ರಂಗಮ್ಮ ಮತ್ತು ಅವಳ ಮನೆಯವರು ಮಾತ್ರಾನ? ಅಸಲಿಗೆ, ಕಳೆದುಕೊಳ್ಳುವುದು ಎಂದರೆ ಏನು? ಯಾವುದನ್ನ? ಹೊರಗಿನದಾ ಅಥವಾ ಒಳಗಿನದಾ? ಕಳೆದುಕೊಂಡದ್ದು ಸಿಗುವುದೇ? ಕದ್ದವನಿಗೆ ಶಿಕ್ಷೆಯಾಗುವುದೇ? ನಿಜವಾದ ಕಳ್ಳ ಪಟ್ಲ ಒಬ್ಬನೇನಾ?

ಹೀಗೆ, ’ಪುಟಗೋಸಿ’ ಎಮ್ಮೆಯೊಂದರ ಕಳವು ಊರಿನ ಇತರರ ಮನೆ, ಮನ, ದೇಹದಲ್ಲಾದ ಕಳವುಗಳ ಬಗ್ಗೆ ತಿಳಿಸುತ್ತಾ, ಕಳೆದುಕೊಂಡವರ ನೋವನ್ನು ದಾಟಿಸುತ್ತಾ, ಕಳವಿನ ಬಗ್ಗೆ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತೆ, ಯೋಚಿಸುವಂತೆ ಮಾಡುತ್ತದೆ.

.ಈ ನಡುವೆ, ಗೌಡನ ಮನೆಯ ಬಂಗಾರದೊಡವೆ ಯಾವುದೇ ಆಯಾಸವಿಲ್ಲದೆ ಕಳ್ಳನ ಕೈ ಸೇರುವ ಸನ್ನಿವೇಶ; ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋಗಲು ಪ್ರಯತ್ನಿಸುವ ಗೌಡನ ಮಗಳ ಪ್ರಕರಣ; ಪುಟ್ಟಲಾಯ್ರಿಯ ಯೌವ್ವನದ ಕರಾಳ ಇತಿಹಾಸ; ಮದುವೆ ವಿಷಯದಲ್ಲಿ ರಂಗಮ್ಮಳಿಗಾದ ಮೋಸ, ದೌರ್ಜನ್ಯ; ತಿಪ್ಪೆಯ ಬಳಿ ಸಿಕ್ಕ ಚಿನ್ನದ ಜಡೆಬಿಲ್ಲೆಯನ್ನು, ತಾನು ಕಷ್ಟದಲ್ಲಿದ್ದರೂ ಕಳೆದುಕೊಂಡವರಿಗೇ ಹಿಂದಿರುಗಿಸುವ ರತ್ನಮ್ಮಳ ಆಸೆ ಸತ್ತ ಬದುಕು; ಜಮೀನಿನ ವಿಚಾರವಾಗಿ ಹೊಂಚು ಹಾಕುತ್ತ ಕೂರುವ ಗೌಡನ ಸಂಕಟ; ಎಮ್ಮೆ ಕಳೆದುಕೊಂಡ ರಂಗಮ್ಮನ ತಾಯಿಯ ನೋವು, ಆ ನೋವಿಗೆ ಸ್ಪಂದಿಸುವ ಊರ ಜನ, ಹೀಗೆ ಇವುಗಳಿಗೆಲ್ಲಾ ಪ್ರೇಕ್ಷಕ ಸಾಕ್ಷಿಯಾಗುತ್ತಾನೆ.

ಇಲ್ಲಿ ’ಕಳವು’ ಎಂಬುದಕ್ಕೆ ಜಾತಿ ಭೇದವಿಲ್ಲ. ಎಲ್ಲರೂ ಒಂದಲ್ಲೊಂದು ವಿಷಯದಲ್ಲಿ ಕಳವಾಗಲ್ಪಟ್ಟವರೇ. ಆದ್ದರಿಂದ ಇಲ್ಲಿ ಎಲ್ಲರೂ ಒಂದೇ ಕುಲದವರು. ’ಕಳವು’ ವಿಷಯವನ್ನು ಮಾನವೀಯ ನೆಲೆಯಲ್ಲಿ – ಅಂದರ ವೈಯಕ್ತಿಕ ಹಾಗೂ ಸಂಬಂಧಗಳ ಮಟ್ಟದಲ್ಲಿ – ಚರ್ಚಿಸಿರುವುದರಿಂದ ಇಲ್ಲಿನ ಹಳ್ಳಿಯಲ್ಲಿ ಜಾತಿ ರಾಜಕಾರಣವಾಗಲಿ, ಗಲಾಟೆಯಾಗಲಿ ಇಲ್ಲ.

ಹಾಗೆಯೇ, ಗಂಡು-ಹೆಣ್ಣು, ಹಿರಿಯ-ಕಿರಿಯ ಎಂಬ ಭೇದವಿಲ್ಲದೆ ಎಲ್ಲರೂ ಕಳವಾಗಲ್ಪಟ್ಟವರೇ. ಒಬ್ಬೊಬ್ಬರ ಕಳವು ಒಂದೊಂದು ರೀತಿ. ರಂಗಮ್ಮನ ಮನೆಯ ಎಮ್ಮೆಯ ಕಳವು ನಿಗೂಢವಾದರೆ, ಗೌಡನ ಮನೆಯ ಕಳವು ಗುಟ್ಟು; ಪುಟ್ಟಲಾಯ್ರಿಯ ಗುಟ್ಟು ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪದಂತೆ. ಅಂಜನ ಹಾಕಿ, ಎಮ್ಮೆ ಕದ್ದ ಕಳ್ಳನನ್ನು ತೋರಿಸಲು ರಂಗಮ್ಮನ ಮನೆಗೆ ಬರುವ ಆಚಾರಿಯದು ಹಗಲು ದರೋಡೆ!! ಆದರೂ, ಅವನಿಗೆ ಶಿಕ್ಷೆಯಿಲ್ಲ, ಆ ಕಳುವಿನ ಬಗ್ಗೆ ಯಾರಿಗೂ ಅರಿವಿಲ್ಲ, ನೋವಿಲ್ಲ. ಅಲ್ಲದೇ, ಬೇರೆಯವರ ವಸ್ತು ಕಳೆದು ಹೋದಾಗ, ಅಂಜನ ಹಾಕಿ ಕಳ್ಳನ ಮಾಹಿತಿ ಕೊಡುವ ನಾಟಕವಾಡುವ ಆಚಾರಿಗೆ ತನ್ನ ಮನೆಯಲ್ಲಾದ ಕಳ್ಳತನಕ್ಕೂ ಪಟ್ಲನೇ ಕಾರಣವಿರಬಹುದೋ ಏನೋ ಎಂದು ಅನುಮಾನಿಸುವುದು ಪರಿಸ್ಥಿತಿಯ ವ್ಯಂಗ್ಯ.


ಮನೆಯ ಬಂಗಾರದ ಒಡವೆಯಂತಿದ್ದ ಎಮ್ಮೆ ಕಳುವಾಗಿರುವುದು ರಂಗಮ್ಮನಿಗೆ ನೋವು ತಂದರೆ, ಬಂಗಾರದ ಒಡವೆ ಕಳುವಾದರೂ, ಮಗಳ ವಿಷಯದಲ್ಲಿ ಮಾನ ಉಳಿಯಿತಲ್ಲ ಎಂಬ ಸಮಾಧಾನ ಗೌಡನಿಗೆ; ಕನಸುಗಳೇ ಕಳುವಾದ ಜೀವನ ರತ್ನಮ್ಮಳಿಗೆ ಕಷ್ಟವಾದರೆ; ಯಾವುದೇ ತಪ್ಪಿಲ್ಲದೆಯೂ ತನ್ನ ಸಂತಾನ ಭಾಗ್ಯ ಕಳೆದುಕೊಂಡ ಪುಟ್ಟ ಲಾಯ್ರಿಗೆ ಅವಮಾನದ/ಹಿಂಜರಿಕೆಯ ಭಯ. ಹೀಗೆ, ಅವರವರ ಪರಿಸ್ಥಿತಿ, ಅಂತಸ್ತಿಗೆ ತಕ್ಕಂತೆ ಕಳುವಿನಿಂದಾಗುವ ಪರಿಣಾಮವೂ, ಅದನ್ನೆದುರಿಸುವ ಬಗೆಯೂ ಇಲ್ಲಿ ಭಿನ್ನ. ಎಲ್ಲ ಪಾತ್ರಗಳಿಂದಲೂ ಸಮಾಂತರ ದೂರ ಕಾಯ್ದುಕೊಂಡಂತಿರುವ ’ಐಡಿಯಾ’ ಪಾತ್ರವೊಂದೇ ಇಲ್ಲಿ ತಟಸ್ಥ!!

-------------------------------

ನ್ಯಾಯ ಹೇಳುವ ಸ್ಥಾನದಲ್ಲಿರುವ ಗೌಡನಿಗೆ ಕಳೆದುಕೊಂಡವರ ನೋವು ತಿಳಿಯುವುದಾ? ಕಳ್ಳತನದ ಆರೋಪ ಹೊತ್ತಿರುವ ಪಟ್ಲನ ಗತಿ ಏನು? ಕಳೆದುಕೊಂಡಿರುವವರ ಪ್ರತಿನಿಧಿಯಂತಿರುವ ರಂಗಮ್ಮನ ನೋವು ನೀಗುವುದೇ? ನ್ಯಾಯಕ್ಕಾಗಿ ಅವಳು ಹಠ ಹಿಡಿಯುವಳೇ? ಅಥವಾ ರಗಳೆ ಬೇಡವೆಂದು ನೋವ ನುಂಗುವಳೇ? ಗೊತ್ತಿಲ್ಲ. ಈ ’ಕಳವು’ ವಿಷಯವನ್ನು ’ಇದು ಹೀಗೆ’ ಎಂದು ಖಡಾಖಂಡಿತವಾಗಿ ನಿರ್ಧರಿಸಿ ಹೇಳಲಾಗದೆಯೋ ಅಥವಾ ಪ್ರೇಕ್ಷಕರ ವಿವೇಕಕ್ಕೋ ಬಿಟ್ಟು ಕೊಡುತ್ತಾ ಚಿತ್ರ ಕೊನೆಯಾಗುವುದು ನಿಜಕ್ಕೂ ಸಮರ್ಥನೀಯವಾಗಿದೆ ಎನಿಸುತ್ತದೆ.

ಥಿಯೇಟರಿನಿಂದ ಹೊರ ಬರುವಾಗ, ನನಗೇ ಗೊತ್ತಿಲ್ಲದೆ ’ಮಠ’ ಚಿತ್ರದ ಹಾಡಿನ ಸಾಲೊಂದು ಮನದಲ್ಲಿ ಗುನುಗುನಿಸುತ್ತಿತ್ತು!!



****************



ಈ ರೀತಿಯ ಸಂಪೂರ್ಣ ನಮ್ಮ ಮಣ್ಣಿನ ಸೊಗಡಿನ, ದೇಸಿತನದ ಕಥೆಯನ್ನು ಚಿತ್ರಮಾಡಲು ಮುಂದಾದ ಇಡೀ ಚಿತ್ರತಂಡಕ್ಕೆ ಶುಭಾಶಯಗಳನ್ನು, ಮೆಚ್ಚುಗೆಯನ್ನು ತಿಳಿಸಲೇಬೇಕು. ಕಥೆಯಲ್ಲಿರುವ ಸೂಕ್ಷ್ಮತೆಯನ್ನು, ಸಂಕೀರ್ಣತೆಗಳನ್ನು ತೆರೆಯ ಮೇಲೆ ನಿರೂಪಿಸುವಲ್ಲಿ ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಚಿತ್ರಕ್ಕಾಗಿ ಆಯ್ದುಕೊಂಡ ಜಾಗ, ಹಳ್ಳಿ, ಪ್ರತಿ ದೃಶ್ಯದ ಫ್ರೇಮ್, ಇವೆಲ್ಲವೂ ಫ್ರೆಶ್ ಎನಿಸುವಂತಿದೆ. ಕೆಲವು ಕಡೆ ಚಿತ್ರವನ್ನು ಮತ್ತಷ್ಟು ಸುಂದರಗೊಳಿಸಬಹುದಿತ್ತು ಎಂದೆನಿಸದರೂ, ಅದನ್ನು ಮಾಡಲಾಗದೇ ಇದ್ದುದ್ದಕ್ಕೆ ಹಲವು ಕಾರಣಗಳಿರಬಹುದು. ರಂಗಮ್ಮನ ಮನೆಯ ಎಮ್ಮೆಯ ಪುರಾಣವನ್ನು ಹರಿಕಥೆಯ ರೂಪದಲ್ಲಿ ನಿರೂಪಿಸುವಾಗ ಅಲ್ಲಿ ರಂಗಮ್ಮನ ಮನೆಯವರೇ ಪಾತ್ರಧಾರಿಗಳಾದದ್ದು ಯಾಕೋ ಸರಿ ಕಾಣಲಿಲ್ಲವೆನಿಸುತ್ತದೆ. ಪಾತ್ರಗಳ ಎಮೋಷನ್, ಸನ್ನಿವೇಶದ ಮೂಡ್ ಅನ್ನು ಅರೆ ಕ್ಷಣ ಘಾಸಿಗೊಳಿಸಿತೆ? ಎನಿಸುತ್ತದೆ. ’ಐಡಿಯಾ’ ಪಾತ್ರದಿಂದ ಅದು ಹಾಸ್ಯವೆನಿಸಿ ಚಿತ್ರ ನೋಡಿಸಿಕೊಂಡು ಹೋಗುತ್ತದೆ.

ಕೆಲವು ದಿನಗಳ ಹಿಂದೆ ’ಜಟ್ಟ’ ಒಂದು ಸೆನ್ಸೇಶನ್ ಸೃಷ್ಟಿಸಿತ್ತು. ಇತ್ತೀಚೆಗಷ್ಟೇ ’ತಲ್ಲಣ’ ಎಂಬ ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸಿತ್ತು. ಈಗ ’ಕಳವು’ ಅದೇ ದಾರಿಯಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ’ನಮ್ಮ’ ಸಿನಿಮಾಗಳ, ವರ್ತಮಾನ ಜೀವನದೊಡನೆ ಅನುಸಂಧಾನ ನಡೆಸುವ ಚಿತ್ರಗಳು ತಯಾರಾಗುವ ಕಾಲ ಬರುತ್ತಿರುವುದರ ಸೂಚನೆ ಇದೇ ಆದರೆ ಬಹಳಾನೇ ಸಂತೋಷ..........

Saturday, November 16, 2013

ಸ್ನೇಹ






ಬನ್ನಿ, ಹೀಗೇ ಸುಮ್ಮನೆ
ಒಂದರೆ ಘಳಿಗೆ ಧ್ಯಾನಿಸೋಣ



ಧುತ್ತೆಂದು ಎದುರಾಗುವ
ವೈರುಧ್ಯ, ವ್ಯಥೆ, ಗೊಂದಲ,
ಯಾತನೆಗಳ ದಾಳಿಗೆ
ಬದುಕು ಮುದುಡಿ ಹೋಗುವಾಗ,



ಆಸಕ್ತಿಯಿಂದ, ಕಾಳಜಿಯಿಂದ
ಬುದ್ದಿಗೆ ವಿವೇಕ ತುಂಬಿ,
ಭಾವಾವೇಶಕ್ಕೆ ತಡೆ ಹಾಕಿ,
ಹೊಸ ಚೈತನ್ಯ ತಂದು,



ಮನಸ್ಸನ್ನು ಹಗುರಾಗಿಸಿ,
ಬದುಕ ಅರಳಿಸುವ
ಶಕ್ತಿ, ಕಲೆ ಇರುವುದು
ಸ್ನೇಹಕ್ಕೇ ಅಲ್ಲವೇ..?!

Friday, November 1, 2013

ಶಪಥ




'ಇದು ನನ್ನ ಶಪಥ'
ಅವನು ಮತ್ತೊಮ್ಮೆ ಶಪಥ ಮಾಡಿದ್ದಾನೆ;
ನೂರಾ ಎಂಟನೇ ಬಾರಿ.
ಹೊಸ ಬದುಕು ಪ್ರಾರಂಭಿಸಲು
ಹೊಸದೇನನ್ನೋ ಸಾಧಿಸಲು


ದಿನ ಕಳೆದಂತೆ, ಮತ್ತದೇ
ಹೊಂದಾಣಿಕೆಗಳು, ಸಲಹೆಗಳು;    
ಪರರ ಆದೇಶಗಳು, ಒತ್ತಾಯಗಳು
ನೂಕುತ್ತಿವೆ ನಿರಾಸೆಯ ಕಡಲಿಗೆ,    
ವಿನಾಶದ ಸುಖಕ್ಕೆ.


ಅನಿಸುತ್ತಿದೆ,

ವಿಧಿಯೂ ಶಪಥ ಮಾಡಿರಬೇಕು;
ಅವನ ವಿರುದ್ದ!!

Sunday, September 29, 2013

ದೌಲತ್ತಾಬಾದಿನ ಕೋಟೆ




ತರುಣ ಕಾವಲುಗಾರ:

ಎಷ್ಟು ಎತ್ತರವಾಗಿದೆ ಈ ಕೋಟೆ! ಛೆ, ತಲೆ ಗಿರ್ರ ಎನಿಸುತ್ತದೆ ನೋಡು...ಮತ್ತು, ಅದೋ ಅಲ್ಲಿ ಬೆಳ್ಳಗೆ ಕಾಣುತ್ತಿರುವುದು ದೌಲತ್ತಾಬಾದಿನಿಂದ ದಿಲ್ಲಿಗೆ ಹೋಗುವ ದಾರಿಯಲ್ಲವೇನು?!




ಮಧ್ಯವಯಸ್ಸಿನ ಕಾವಲುಗಾರ:

ಹೂಂ




ತರುಣ ಕಾವಲುಗಾರ:

ಎಂಥಾ ಕೋಟೆ! ಮೊನ್ನೆ ಯಾರೋ ಹೇಳುತ್ತಿದ್ದರು ವಿದೇಶ ಪ್ರವಾಸಿಗರೆಲ್ಲಾ ಎನ್ನುತ್ತಾರಂತೆ, ದೌಲತ್ತಾಬಾದದ ಕೋಟೆಯಂಥ ಕೋಟೆ ಜಗತ್ತಿನಲ್ಲೇ ಇಲ್ಲ. ಈ ಕೋಟೆ ಯಾವ ಸೈನ್ಯಕ್ಕೂ ಬೀಳುವುದಿಲ್ಲ ಎಂದು.




ಮಧ್ಯವಯಸ್ಸಿನ ಕಾವಲುಗಾರ:

ನಿಜ. ಆದರೆ ಕೋಟೆ ಎಷ್ಟು ಗಟ್ಟಿಯಾಗಿದ್ದರೇನು, ಎತ್ತರವಾಗಿದ್ದರೇನು. ಕುಸಿದರೆ ಒಳಗಿನ ಕುಚೋದ್ಯದಿಂದಲೇ ಕುಸಿಯಬೇಕದು. ನೆಲಕ್ಕಂಟಿಕೊಂಡಿರುವ ಜೀವ ನಾವು.
 
ದೃಶ್ಯ ೮
'ತುಘಲಕ್' ನಾಟಕ
- ಗಿರೀಶ್ ಕಾರ್ನಾಡ್


Monday, August 12, 2013

‘ನಿರುತ್ತರ’ ದೆಡೆಗೆ



ಬಸ್ಸಿನ ಕೊನೆ ಸಾಲಿನ ಕಿಟಕಿ ಪಕ್ಕದ ಸೀಟಿನಲ್ಲಿ ಕೂತು, ಆಗಷ್ಟೇ ನಿದ್ದೆಯಿಂದ ಎಚ್ಚರವಾಗುತ್ತಿದ್ದ ನನ್ನ ಕಣ್ಣಿಗೆ ’ಶ್ರೀ ದುರ್ಗಾ ಶಕ್ತಿ ಚಿಕನ್ ಸೆಂಟರ್, ಕೆ.ಎಂ. ರಸ್ತೆ, ಮೂಡಿಗೆರೆ’ ಎಂಬ ಬೋರ್ಡ್ ನೋಡಿದ್ದೇ ಆಶ್ಚರ್ಯವಾಗಿ, ನಿದ್ದೆ ಎಗರಿ ಹೋಯಿತು. ’ಅರೆ! ಇದೇನಿದು ನಾನು ಮೂಡಿಗೆರೆಯಲ್ಲಿ ಇದ್ದೇನೆ’ ಎಂದು ಗೊಂದಲಗೊಂಡರೂ, ಹಿಂದೆಯೇ ದೊಡ್ಡ ಖುಷಿಯೊಂದು ನಗುವಾಗಿ ಮುಖದ ಮೇಲೆ ಮೂಡಿತ್ತು. ಇದು ಕನಸೇ?! ಎಂದು ಸಣ್ಣಗೆ ಸಂಶಯವುಂಟಾಗಿ ಕೈ ಚಿವುಟಿಕೊಂಡು, ’ಅಲ್ಲ’ ಎಂದು ಖಚಿತಪಡಿಸಿಕೊಂಡ ಮೇಲೆ, ಆ ಸಣ್ಣ ಕಿಟಕಿಯಿಂದಲೇ ಸಾಧ್ಯವಾದಷ್ಟು ಮೂಡಿಗೆರೆಯನ್ನು ಕಣ್ತುಂಬಿಕೊಂಡೆ. ಕಣ್ಣು, ತೇಜಸ್ವಿಯವರ ಕತೆಗಳಲ್ಲಿ ಬರುವ ಮೂಡಿಗೆರೆಯ, ಮುನ್ಸಿಪಾಲಿಟಿ ಕಚೇರಿ, ಆಸ್ಪತ್ರೆ, ಸ್ಕೂಲು ಇವುಗಳು ಕಾಣಬಹುದೇನೋ ಎಂದು ಹುಡುಕಾಟ ಶುರುಮಾಡಿದ್ದರೆ, ಮನಸ್ಸು, ’ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದಲ್ಲಿ ಬರುವ ’ನಿರುತ್ತರ’ ಗೇಟನ್ನು ಕಾಣಲು ಹಪಹಪಿಸುತ್ತಿತ್ತು. ಬೆಳಗ್ಗೆ ಕುಪ್ಪಳಿಗೆ ಭೇಟಿ ನೀಡಿ, ಅಲ್ಲಿಂದ ಸಂಜೆ ೪ ರ ಹೊತ್ತಿಗೆ ಮೂಡಿಗೆರೆಗೆ ಬಂದು ರಾಜೇಶ್ವರಿ ಯವರನ್ನು ಭೇಟಿ ಮಾಡುವ ಯೋಜನೆ ನಮ್ಮದಾಗಿತ್ತು. ರಾಜೇಶ್ವರಿಯವರಿಗೂ ಈ ವಿಷಯ ತಿಳಿಸಿ, ಮೂರು-ನಾಲ್ಕು ದಿನಗಳ ಹಿಂದೆಯೆ ಅವರ ಒಪ್ಪಿಗೆ ಪಡೆದಿದ್ದೆವೂ ಸಹ. ಆದರೆ, ಕಾರಣಾಂತರಗಳಿಂದ ಕುಪ್ಪಳಿಯಲ್ಲೇ ನಾವು ನಮಗೇ ಅರಿವಿಲ್ಲದೆ ಹೆಚ್ಚಿನ ಸಮಯ ಕಳೆದುದರಿಂದ, ಅಮ್ಮಡಿ ಮುಖಾಂತರ ಊಟ ಮುಗಿಸಿ ಹೊರಡುವಾಗಲೇ ಸಮಯ ೪.೩೦ ಆಗಿತ್ತು. ಕುಪ್ಪಳಿಯಿಂದ ಮೂಡಿಗೆರೆಗೆ ೮೨ ಕಿ.ಮೀ ದೂರ. ಸುರಿಯುತ್ತಿದ್ದ ಮಳೆ ಹಾಗೂ ಸಾಗಬೇಕಾದ ಘಾಟಿ ರಸ್ತೆಯನ್ನು ಗಮನಿಸಿದರೆ ಮೂಡಿಗೆರೆಗೆ ತಲುಪುವ ಹೊತ್ತಿಗೆ ೭ ಘಂಟೆ ಆಗಬಹುದು ಎಂದು ಅಂದಾಜಿಸಿ, ಆ ವೇಳೆಯಲ್ಲಿ ಇಷ್ಟು ಜನ (ನಾವೂ ಒಟ್ಟು ೨೯ ಜನರಿದ್ದೆವು) ಒಟ್ಟಿಗೆ ಹೋಗಿ ರಾಜೇಶ್ವರಿಯವರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಯೋಚಿಸಿ, ’ನಿರುತ್ತರ’ಕ್ಕೆ ಭೇಟಿ ನೀಡುವ ನಮ್ಮ ಯೋಜನೆಯನ್ನು ಕೈಬಿಡುವುದೆಂದು ನಿರ್ಧಾರ ಮಾಡಿದೆವು. ಅಲ್ಲಿಗೇ ನಿರುತ್ತರಕ್ಕೆ ಹೋಗಬೇಕೆನ್ನುವ ನನ್ನ ಕನಸು ಮೂರನೇ ಬಾರಿಯೂ ಮಣ್ಣಾಯಿತೆಂದೆನಿಸಿ, ಪ್ರಯಾಣದಲ್ಲಿ ಯಾವುದೇ ಕುತೂಹಲ ಉಳಿಯದೆ ಬೇಸರದಲ್ಲಿ ಕಣ್ಣು ಮುಚ್ಚಿದವನಿಗೆ ನಿದ್ದೆ ಹತ್ತಿತ್ತು. ಈ ನಡುವೆ, ಹಿರಿಯ ಗೆಳೆಯರಾದ ಸತೀಶ್, ರಾಜೇಶ್ವರಿಯವರಿಗೆ ಫೋನ್ ಮಾಡಿ, ಬರಲಾಗುತ್ತಿಲ್ಲ ಎಂಬ ವಿಷಯವನ್ನು ಕಾರಣ ಸಹಿತ ವಿವರಿಸಿದ್ದಾರೆ. ಆದರೆ, ರಾಜೇಶ್ವರಿಯವರು, ’ಅಯ್ಯೋ..ಪರವಾಗಿಲ್ಲ ಬನ್ನಿ. ನನಗೇನೂ ತೊಂದರೆಯಿಲ್ಲ. ಬರುವುದೇ ಖುಷಿ’ ಎಂದು ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ನಿದ್ದೆ ಮಾಡುತ್ತಿದ್ದ ನನಗೆ ಈ ವಿಷಯ ಗೊತ್ತಿಲ್ಲ. ಹಾಗಾಗಿ, ಎಚ್ಚರಾದಾಗ ಮೂಡಿಗೆರೆ ಎಂದು ನೋಡಿದ ತಕ್ಷಣ ಆಶ್ಚರ್ಯವಾಯಿತು. ಬಸ್ಸು ’ನಿರುತ್ತರ’ ಗೇಟಿನ ಬಳಿ ಬಂದು ನಿಂತಾಗ ಮನಸ್ಸು ಖುಷಿಯಿಂದ ಕುಣಿದಾಡುತ್ತಿತ್ತು. ಕನಸೊಂದು ನನಸಾದಾಗ ಮೂಡುವ ಖುಷಿಯಲ್ಲ ಅದು. ಕನಸು ನನಸಾಗುವ ಅವಕಾಶವೊಂದು ಕೈ ತಪ್ಪಿಹೋದ ಬೇಸರದ ಹಿಂದೆಯೇ, ಆ ಕೂಡಲೇ ಮತ್ತೊಂದು ಅವಕಾಶ ಕೈ ಹಿಡಿದು, ಕನಸು ನನಸಾಗುವುದಿದೆಯಲ್ಲ, ಆ ರೀತಿಯ ಖುಷಿಯದು. ಅದರ ಸಂಭ್ರಮ, ಸಡಗರವೇ ಬೇರೆ.

ಕೊನೆಗೂ ಮೂಡಿಗೆರೆಯ ’ನಿರುತ್ತರ’ ಮನೆಯ ಗೇಟು ದಾಟಿ ಒಳ ಹೋಗುವಾಗ ೭ ಘಂಟೆಯಾಗಿತ್ತು. ಸುತ್ತಲಿನ ಗಿಡ ಮರಗಳು ಭಯ ಹುಟ್ಟಿಸುವ ರೂಪ ತಾಳುವ ಸಮಯವದು. ಗಾಢಾಂಧಕಾರ ಆವರಿಸುತ್ತಿತ್ತು. ಅಷ್ಟೊತ್ತಿಗಾಗಲೇ ಬೆಳಗಿನಿಂದ ಆಲಸಿಗಳಂತೆ ಬಿದ್ದುಕೊಂಡು, ಕತ್ತಲಾಗುತ್ತಿದ್ದಂತೆ ತಮ್ಮ ಇರುವಿಕೆಯನ್ನು ಸಾರಿ ಸಾರಿ ಹೇಳುವ ಹುಳ ಹುಪ್ಪಟೆಗಳು, ನಿಶಾಚಾರಿಗಳು ಕಾರ್ಯಪ್ರವೃತ್ತವಾಗಿ ವಿಚಿತ್ರವಾದ ಕೀರು ದನಿಯಿಂದ ತಡೆದು ತಡೆದು ಕೂಗುತ್ತಾ, ತಾಳಬದ್ದವಾಗಿ ಸದ್ದು ಮಾಡುತ್ತಿದ್ದವು. ಎರಡು ದಿನಗಳಿಂದ ಬಿಡದೆ ಸುರಿಯುತ್ತಿದ್ದ ಮಳೆ ಯಾವ ಕಾರಣಕ್ಕೋ ಏನೋ ಸ್ವಲ್ಪ ಕಾಲ ವಿರಾಮ ಘೋಷಿಸಿದೆ ಎನಿಸಿದರೂ, ಮೋಡಗಳು ದಟ್ಟವಾಗಿದ್ದವು. ಜೌಗು ನೆಲ, ನೀರು ನಿಂತ ಸಣ್ಣ ಸಣ್ಣ ಹಳ್ಳಗಳು, ಅಲ್ಲೇ ಹರಿದಾಡಿ ಹೋಗುವ ಸಾಧ್ಯತೆಯಿರುವ ಹಾವುಗಳ ಭಯ, ರಕ್ತ ಹೀರುವ ಜಿಗಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ.. ಇವುಗಳ ನಡುವೆ ಮೆಲ್ಲ ಬೀಸುತ್ತಿದ್ದ ತಣ್ಣನೆಯ ಗಾಳಿ, ಚಳಿ ನಮಗ್ಯಾರಿಗೂ ತಟ್ಟಲೇ ಇಲ್ಲ. ಪ್ರಕೃತಿಯ ನಿಗೂಢತೆಯನ್ನು ಅನ್ವೇಷಿಸ ಹೊರಟ ’ಸದಾ ಕುತೂಹಲಿ’ಯ ಮನೆಗೆ ಭೇಟಿ ನೀಡುವಾಗ ಇದಕ್ಕಿಂತಲೂ ಸೊಗಸಾದ, ಸೂಕ್ತವಾದ ಸ್ವಾಗತ, ಪರಿಸರ ಬೇಕೆ?







’ಅಲೆಮಾರಿಯ ಅಂಡಮಾನ್’ ಕೃತಿಯ ಒಂದು ಸಣ್ಣ ಭಾಗ ನಮಗೆ ಹೈಸ್ಕೂಲಿನಲ್ಲಿ ಪಠ್ಯವಾಗಿತ್ತು. ಅಲ್ಲಿಂದ ತೇಜಸ್ವಿಯವರ ಹುಚ್ಚಿಗೆ ಬಿದ್ದವನು ನಾನು. ಮುಂದೆ ಕಾಲೇಜಿಗೆ ಸೇರಿದಾಗ ಕುತೂಹಲ ತಣಿಯಲು ತೇಜಸ್ವಿಯವರ ಮಿಲೇನಿಯಂ ಸರಣಿಯನ್ನು ಓದಿ, ಗೆಳೆಯರ ಮುಂದೆಲ್ಲ ಪ್ರಪಂಚದ ವಿಸ್ಮಯಗಳ ಬಗ್ಗೆ ಹೇಳುತ್ತಾ ಫೋಸು ಕೊಡುತ್ತಿದ್ದೆ.

ಅದೊಮ್ಮೆ, ನಾವು ೪ ಜನ ಗೆಳೆಯರು ಮಂಗಳೂರಿಗೆ ಹೋಗುತ್ತಿದ್ದಾಗ ದಾರಿ ಬದಿ ’ಮೂಡುಬಿದಿರೆ – ೧೨ ಕಿ.ಮೀ.’ ಎಂಬ ಮೈಲಿಗಲ್ಲನ್ನು ನೋಡಿ, ಗೆಳೆಯರಿಗೆಲ್ಲಾ ಬಲವಂತ ಮಾಡಿ ಗಾಡಿಯನ್ನು ಮೂಡುಬಿದಿರೆ ಕಡೆ ತಿರುಗಿಸಿ, ಮೂಡುಬಿದಿರೆಯೆಲ್ಲಾ ಸುತ್ತಾಡಿಸಿದ್ದೆ; ತೇಜಸ್ವಿಯವರ ಮನೆ ಹುಡುಕುತ್ತಾ!!!! ಹೌದು, ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿನ ತೇಜಸ್ವಿ ಮನೆಯನ್ನು, ಮಂಗಳೂರಿನ ಮೂಡುಬಿದಿರೆಯಲ್ಲಿ ಹುಡುಕಾಡಿದ ಮಹಾನ್ ಸಾಹಸಿ ನಾನು! ಅಲ್ಲಿನ ಪೋಸ್ಟಾಫೀಸ್ ಹಾಗೂ ಪೋಲೀಸ್ ಸ್ಟೇಷನ್ ಹೊರತು ಪಡಿಸಿ, ಎಲ್ಲಾ ಕಡೆ ’ಸರ್, ಇಲ್ಲಿ ತೇಜಸ್ವಿ ಅವರ ಮನೆ ಎಲ್ಲಿದೆ?’ ಅಂತ ಕೇಳುತ್ತಾ ತಿರುಗಾಡಿದ್ದೆ. ನನ್ನ ಪ್ರಶ್ನೆ ಕೇಳಿದ ಎಲ್ಲರೂ, ’ತೇಜಸ್ವಿಯಾ? ಅಡ್ರೆಸ್ಸ್ ಉಂಟಾ?’ ಎಂದು ನನ್ನನ್ನೇ ಪ್ರಶ್ನೆ ಕೇಳಿದ್ದರು. ’ತೇಜಸ್ವಿಯಂತ ವ್ಯಕ್ತಿ ಬಗ್ಗೆ ಗೊತ್ತಿಲ್ಲದ ಜನ!!’ ಅಂತ ನನಗೆ ನಾನೇ ಅವರನ್ನು ಬೈಯ್ದುಕೊಂಡಿದ್ದೆ. ಆ ನಂತರ ನನ್ನ ಕನ್ನಡ ಮೇಷ್ಟ್ರಿಗೆ ಫೋನ್ ಮಾಡಿ, ಅದು ಮೂಡುಬಿದಿರೆಯಲ್ಲ, ಮೂಡಿಗೆರೆಯೆಂದು ತಿಳಿದು, ಗೆಳೆಯರ ಮುಂದೆ ನಗೆಪಾಟಲಿಗೆ ಈಡಾಗಿದ್ದೆ. ಆ ನಂತರದಲ್ಲಿ ಅವರ ಕೃತಿಗಳನ್ನು ಹೆಚ್ಚು ಹೆಚ್ಚು ಓದಿದಷ್ಟು ಅವರು ಬಹಳ ಇಷ್ಟವಾಗತೊಡಗಿದರು. ಅವರ ಓದುಗರನೇಕರು ಮೂಡಿಗೆರೆಯ ಅವರ ಮನೆಗೆ ಭೇಟಿ ನೀಡಿ ಬಂದುದರ ಬಗ್ಗೆ ಹೇಳುಕೊಳ್ಳುವುದನ್ನು ಓದಿದಾಗ, ಕೇಳಿದಾಗ ಅವರ ಮನೆಗೊಮ್ಮೆ ಭೇಟಿ ನೀಡಬೇಕು ಎಂಬ ಆಸೆ ಬೆಳೆಯುತ್ತಾ ಬಂದಿತು. ಕೃತಿಗಳನ್ನು ಓದಿದ ಮಾತ್ರಕ್ಕೆ ಲೇಖಕರ ಮನೆಗೆ ಭೇಟಿ ನೀಡಬೇಕೆಂದೆನಿಸುವುದೇ?! ಗೊತ್ತಿಲ್ಲ. ಆದರೆ, ನನ್ನ ಈ ಕನಸಿಗೆ ಬಲವಾದ ಕಾರಣವೆಂದರೆ, ’ಚಿಗುರಿದ ಕನಸು’ ಕಾದಂಬರಿಯನ್ನು ಹಾಗೂ ಚಲನಚಿತ್ರವನ್ನು ಬಹಳವಾಗಿ ಇಷ್ಟಪಡುವ ನನಗೆ, ಆ ಕಥೆಯಲ್ಲಿ ಬರುವ ಶಂಕರನ ಪಾತ್ರದ ಜೀವಂತ ಉದಾಹರಣೆಯಂತೆ ತೇಜಸ್ವಿಯವರು ಕಂಡರು. ಕಥೆಯಲ್ಲಿನ ಶಂಕರ ಸಂಬಂಧಗಳ ನಂಟು ಉಳಿಸಿಕೊಳ್ಳುವ ಹಂಬಲದಿಂದ ನಗರದಿಂದ ಹಳ್ಳಿಗೆ ಬಂದರೆ, ತೇಜಸ್ವಿಯವರೂ ಸಹ ಪ್ರಕೃತಿಯೊಡನೆ ಸಂಬಂಧ ಬೆಸೆದುಕೊಳ್ಳುವುದಕ್ಕೋ, ಬೆರಗುಗೊಳಿಸಲಿಕ್ಕೋ ಏನೋ ನಗರದಿಂದ ಹಳ್ಳಿಗೆ ಹೋಗಿ ಬದುಕಿ ಬೆಳೆದವರು. ಅವರ ಬದುಕಿನ ಈ ನಿರ್ಧಾರ, ನಡೆಯೇ ನನಗೆ ಯಾವಾಗಲೂ ಸ್ಪೂರ್ತಿ ಹಾಗೂ ಅಚ್ಚರಿ ಹುಟ್ಟಿಸುವಂತದ್ದು.

ಈ ಹಿಂದೆ ಮೂಡಿಗೆರೆಯ ಮುಖಾಂತರವಾಗಿ ಎರಡು ಬಾರಿ ಹಾದುಹೋಗುವ ಸಂದರ್ಭ ಬಂದಾಗಲೂ, ಸಮಾನ ಮನಸ್ಕರಿಲ್ಲದೆ ಅಲ್ಲಿಗೆ ಭೇಟಿ ನೀಡಲು ಆಗಲೇ ಇಲ್ಲ. ಇಂತಹ ಯೋಚನೆಗಳು, ನೆನಪುಗಳು ನನ್ನ ಮನಸ್ಸಿನಲ್ಲಿ ಒಂದರ ಹಿಂದೊಂದರಂತೆ ಮೂಡಿ ಮರೆಯಾಗುತ್ತಿರುವಾಗಲೇ, ಅವರದೇ ನೆಲದಲ್ಲಿ ಸಂಭ್ರಮಿಸುತ್ತಾ ನಡೆದು ತೋಟದ ನಡುವಿನ ಮನೆಯನ್ನು ತಲುಪಿದಾಗ ಕಂಡದ್ದು ನಮ್ಮ ತಂಡದವರನ್ನು ನಗು ಮೊಗದಿಂದ, ಸಂತೋಷದಿಂದ ಬರಮಾಡಿಕೊಳ್ಳುತ್ತಿದ್ದ ರಾಜೇಶ್ವರಿ ತೇಜಸ್ವಿಯವರು.



ದಟ್ಟವಾದ ಗಿಡ ಮರಗಳ ಸಮೂಹದಲ್ಲಿ ಹುದುಗಿರುವಂತೆ ತೋರುವ ಆ ಮನೆಯಲ್ಲೀಗ ಜನಜಾತ್ರೆ. ಹೌದು! ಜಾತ್ರೆ, ಜನಜಾತ್ರೆ, ಯಾಕೆಂದರೆ ನಾವು ಒಟ್ಟು ೨೯ ಜನ ಹೋಗಿದ್ದೆವು!! ದಿನದ ಬಿಡುವಿಲ್ಲದ ಕೆಲಸಗಳ ನಂತರ ಸಂಜೆಯ ಹೊತ್ತಲ್ಲಿ ವಿರಮಿಸುತ್ತಲೋ, ಓದುತ್ತಲೋ ಆರಾಮವಾಗಿ ಕಳೆಯ ಬಹುದಾದರೂ, ರಾಜೇಶ್ವರಿಯವರು ನಮ್ಮ ಭೇಟಿಗೆ ಒಪ್ಪಿದ್ದರು. ಪ್ರತಿಯೊಬ್ಬರನ್ನೂ ಬಹಳ ಆತ್ಮೀಯವಾಗಿ, ನಗುಮೊಗದಿಂದ ಬರಮಾಡಿಕೊಂಡರು. ಒಳ ಹೋದ ನಾನು ಕೆಲವು ಸೆಕೆಂಡ್ ಗಳ ಕಾಲ ಆಶ್ಚರ್ಯ ಸ್ತಂಭಿತನಾದೆ. ಆಲಂಕಾರಿಕ, ಆಡಂಬರದ ವಸ್ತುಗಳಿಂದ ಅಚ್ಚುಕಟ್ಟಾದ ಗೋಡೌನ್ ನಂತಿರದ ಸರಳವಾದ ಮನೆಯದು. ಒಂದೆರಡು ಕುರ್ಚಿಗಳು ಹಾಗೂ ತೇಜಸ್ವಿಯವರ ದೊಡ್ಡದೊಂದು ಫೋಟೋವಷ್ಟೇ ಅಲ್ಲಿನ ಅಲಂಕಾರ. ಅಲ್ಲೇ ನಾವೆಲ್ಲಾ ಓತಪ್ರೋತವಾಗಿ ಶಿಸ್ತಿನಿಂದ ಕುಳಿತೆವು, ರಾಜೇಶ್ವರಿಯವರು ತೇಜಸ್ವಿಯವರ ದೊಡ್ಡ ಫೋಟೋದ ಪಕ್ಕ ಕುರ್ಚಿಯಲ್ಲಿ ಕುಳಿತು ನಮ್ಮೆಲ್ಲರ ಹೆಸರನ್ನು, ವೃತ್ತಿಯನ್ನು ಕೇಳಿ ಪರಿಚಯ ಮಾಡಿಕೊಂಡರು. ಆ ಸಮಯದಲ್ಲೇ ಒಂದಷ್ಟು ಜಾಣತನ ತೋರಿ, ತಮಾಷೆ ಮಾಡಿ, ನಮ್ಮಲ್ಲಿದ್ದ ಆತಂಕವನ್ನು ದೂರ ಮಾಡಿದರು.

ಆ ನಂತರ, ಅಲ್ಲಿ ಸುರಿದಿದ್ದು ನೆನಪಿನ ಮಳೆ, ಹರಿದಿದ್ದು ಖುಷಿಯ ಹೊಳೆ. ಕೆಲವು ನೆನಪುಗಳ ತುಂತುರು;



ನಾಯಿಗುತ್ತಿ – ಗುತ್ತಿನಾಯಿ

ನಮ್ಮೊಂದಿಗೆ ಕೆವೈಎನ್ (ಕೆ.ವೈ.ನಾರಾಯಣ ಸ್ವಾಮಿ) ಮೇಷ್ಟ್ರು ಇದ್ದಿದ್ದರಿಂದ ಮಾತು ಸಹಜವಾಗಿ, ’ಮಲೆಗಳಲ್ಲಿ ಮದುಮಗಳು’ ನಾಟಕದ ಮುಖಾಂತರವಾಗಿ ಶುರುವಾಯಿತು. ಮೈಸೂರಿನಲ್ಲಿ ಮಾತ್ರ ಈ ನಾಟಕದ ಪ್ರದರ್ಶನವನ್ನು ನೋಡಿರುವ ರಾಜೇಶ್ವರಿಯವರಿಗೆ ಇಡೀ ನಾಟಕದಲ್ಲಿ ಇಷ್ಟವಾದ ದೃಶ್ಯವೆಂದರೆ, ಗುತ್ತಿ ಹಾಗೂ ನಾಯಿ ಬೇರ್ಪಡುವ ದೃಶ್ಯವಂತೆ. ಆ ದೃಶ್ಯ ಮೈಸೂರಿನ ಪ್ರದರ್ಶನದಲ್ಲಿ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿತ್ತು. ಆದರೆ, ಬೆಂಗಳೂರಿನಲ್ಲಿ ಆ ದೃಶ್ಯವನ್ನು ಕಡಿತಗೊಳಿಸಲಾಗಿದೆಯೆಂದು ಎರಡೂ ಕಡೆ ನಾಟಕ ನೋಡಿದ್ದ ಅವರ ಮಕ್ಕಳು ಅವರಿಗೆ ಹೇಳಿದ್ದರಂತೆ.



ಕಾಫೀಪುಡಿ ಕಥೆ:

ಒಮ್ಮೆ ಶಿವರಾಮ ಕಾರಂತರು ಇವರ ಮನೆಗೆ ಬಂದು, ಹೊರಡುವಾಗ ಕಾರಂತರಿಗೆ ಇಷ್ಟವಾದ ಕಾಫೀ ಪುಡಿಯನ್ನು ಕೊಡಲು ರಾಜೇಶ್ವರಿಯವರು ಮರೆತುಬಿಟ್ಟರಂತೆ. ಮರೆವಿನಿಂದ ಪೇಚಾಡಿಕೊಂಡ ರಾಜೇಶ್ವರಿಯವರು, ಮರುದಿನವೇ ಕಾಫೀ ಪುಡಿಯನ್ನು ಕೊರಿಯರ್ ಮೂಲಕ ಕಳುಹಿಸಿದ್ದಾರೆ. ಆ ನಂತರ ಕಾರಂತರ ಪತ್ರ ಬಂದಿದೆ – ’ಅಮ್ಮಾ, ನೀನು ಕಳುಹಿಸಿಕೊಟ್ಟ ಕಾಫೀ ಪುಡಿಯನ್ನು ಉಪಯೋಗಿಸಲು ನಾನು ಹೊಸದಾಗಿ ಒಂದು ಹಸುವನ್ನೇ ಖರೀದಿಸಬೇಕು!!’



ಜಸ್ಟ್ ಮಿಸ್!!!

ಅದು ತೇಜಸ್ವಿಯವರು ಬೇಟೆ, ಬೇಟೆ ಎಂದು ಹುಚ್ಚತ್ತಿಸಿಕೊಂಡಿದ್ದ ದಿನಗಳು. ಅಂಥಾ ದಿನಗಳಲ್ಲೇ ಇವರ ಕೈಗೆ ಹೊಸದೊಂದು ರೈಫಲ್ ಬಂದು ಸೇರಿದೆ. ಅದನ್ನು ತೆಗೆದುಕೊಂಡು ಬೇಟೆಗೆಂದು ಹೊರಟವರು, ಎಷ್ಟೋ ಹೊತ್ತಿನ ಬಳಿಕ ಕಾಡಿನಲ್ಲಿ ಹೊಂಚು ಹಾಕಿ, ಸಂಚು ಮಾಡಿ ಹಂದಿಯೊಂದನ್ನು ಹೊಡೆಯುವ ಸಲುವಾಗಿ ಗುಂಡು ಹಾರಿಸಿದ್ದಾರೆ. ಹಾಗೆ ಅವರ ಆ ಹೊಸ ಬಂದೂಕಿನಿಂದ ಚಿಮ್ಮಿದ ಗುಂಡು, ತೇಜಸ್ವಿಯವರ ಮನೆಯ ರೂಮಿನ ಕಿಟಕಿಯನ್ನು ಸೀಳಿ, ಕಿಟಕಿ ಪಕ್ಕದ ಕನ್ನಡಿಯ ಮುಂದೆ ನಿಂತು ತಲೆ ಬಾಚಿಕೊಳ್ಳುತ್ತಿದ್ದ ರಾಜೇಶ್ವರಿಯವರ ಪಕ್ಕದಲ್ಲೇ ಹಾದುಹೋಗಿದೆ! ಇದನ್ನು ಕೇಳಿದ ನಾವೆಲ್ಲರೂ ಒಂದು ಕ್ಷಣ ಸ್ತಬ್ದರಾಗಿಬಿಟ್ಟೆವು!!



ಸಿತಾರ್ ತೇಜಸ್ವಿ

ಒಮ್ಮೆ ತೇಜಸ್ವಿಯವರು ಸೈಕಲ್ ತುಳಿಯುತ್ತಾ ಬರುತ್ತಿರುವಾಗ ರಸ್ತೆ ಬದಿಯಲ್ಲಿರುವ ಅಂಗಡಿಯೊಂದರ ಮುಂದೆ ಅಚಾನಕ್ ಆಗಿ ಸೈಕಲ್ ನಿಲ್ಲಿಸಿ, ಸ್ಟಾಂಡ್ ಹಾಕಿ, ಆ ಅಂಗಡಿಯ ರೇಡಿಯೋದಲ್ಲಿ ಬರುತ್ತಿದ್ದ ಸಂಗೀತವನ್ನು ಕೇಳುತ್ತಾ ನಿಂತು ಬಿಟ್ಟರಂತೆ. ಆ ನಂತರದಲ್ಲಿ, ಆ ಸಂಗೀತದಲ್ಲಿ ಬಳಸಿದ ಉಪಕರಣ ಯಾವುದೆಂದು ಪತ್ತೆ ಮಾಡಿ, ಅದನ್ನು ನುಡಿಸಲು ಕಲಿಯಬೇಕೆಂದು ನಿರ್ಧರಿಸಿಯೇಬಿಟ್ಟರು. ಆ ಸಂಗೀತ ಉಪಕರಣವೇ ಸಿತಾರ್! ಇವರ ಸಿತಾರ್ ಕಲಿಯುವ ಹಾಗೂ ಅದರ ಅಭ್ಯಾಸ ಮಾಡುವ ರೀತಿ ಹೇಗಿತ್ತೆಂದರೆ, ಹಗಲು-ರಾತ್ರಿಯೆನ್ನದೆ ಅಭ್ಯಾಸ ನಿರತರಾಗಿದ್ದ ತೇಜಸ್ವಿಯವರ ಬಳಿ ಒಮ್ಮೆ ಕುವೆಂಪುರವರು ಬಂದು 'ನನಗೆ ಮೌನವೇ ಸಂಗೀತ' ಎಂದು ಹೇಳಿದ್ದನ್ನು ನಮ್ಮೊಂದಿಗೆ ಹಂಚಿಕೊಂಡಾಗಲಂತೂ ಕ್ಷಣಕಾಲ ಅಲ್ಲಿ ನಗುವೇ ಮಾತಾಗಿತ್ತು.



ಹೀಗೆ, ಕಾರಂತರ ಕೊನೆಯ ಭೇಟಿ, ಕುವೆಂಪುರವರು ಅವರನ್ನು 'ಅಕ್ಕಾ' ಎಂದು ಕರೆಯುತ್ತಿದ್ದುದನ್ನು, ಮೈಸೂರಿನ 'ಉದಯರವಿ' ಮನೆಗೆ ಒಂದು ಆಟೋದಲ್ಲಿ ತುಂಬುವಷ್ಟು ಸಾಮಾನುಗಳನ್ನು ಇವರೊಬ್ಬರೇ ತೆಗೆದುಕೊಂಡು ಹೋಗುತ್ತಿದ್ದುದನ್ನು, ಕುವೆಂಪುರವರ ಕೊನೆಯ ದಿನಗಳಲ್ಲಿ, ಮೈಸೂರಿನಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದುದನ್ನು, ತೇಜಸ್ವಿಯವರು ಮೈಸೂರಿನ ಪ್ರೆಸ್ ಮಾರಿ, ಮೂಡಿಗೆರೆಯ ಕಾಡಿನಲ್ಲಿ ಬಂದಿರುವ ನಿರ್ಧಾರ ತೆಗೆದುಕೊಂಡಿದ್ದರ ಬಗ್ಗೆ, ’ನಿರುತ್ತರ’ ಎಂದು ಹೆಸರಿಟ್ಟಿದ್ದರ ಬಗ್ಗೆ, ತೇಜಸ್ವಿಯವರೊಮ್ಮೆ ಇವರಿಗೆ, 'ನನ್ನ ಬೆನ್ನಿಗೆ ಚೂರಿ ಹಾಕಿಬಿಟ್ಟೆಯಲ್ಲ' ಎಂದು ಹೇಳಿದ್ದರ ಬಗ್ಗೆ, ತೇಜಸ್ವಿ ಮತ್ತವರ ಮಕ್ಕಳ ನಡುವಿನ ಬಾಂಧವ್ಯದ ಬಗ್ಗೆ, ಕಳೆದು ಹೋಗಿರುವ ಪತ್ರವೊಂದನ್ನು ಇನ್ನೂ ಹುಡುಕುತ್ತಿರುವ ಬಗ್ಗೆ, ಅಲ್ಲಿ ಉತ್ತರಾಖಂಡದಲ್ಲಿ ಪ್ರವಾಹವಾಗುತ್ತಿರುವ ಸಂದರ್ಭದಲ್ಲೇ, ಇವರ ಮಗಳು ಲೇಹ್ -ಲಡಾಕ್ ಗೆ ಹೋಗಿದ್ದಾಗಿನ ಇವರ ಆತಂಕದ ಬಗ್ಗೆ, ಇವರ ಮನೆಯಲ್ಲಿ ಸದ್ಯಕ್ಕೆ ಇರುವ ನಾಯಿಯ ಬಗ್ಗೆ, ಹೀಗೆ ಹತ್ತು ಹಲವು ಸಂಗತಿಗಳನ್ನು ನಮ್ಮೊಡನೆ ಹಂಚಿಕೊಂಡರು. ಇವುಗಳಲ್ಲಿ ಹಲವು ಸಂಗತಿಗಳ ಬಗ್ಗೆ ಈಗಾಗಲೇ ಲೇಖನಗಳಲ್ಲಿ ಹಾಗೂ 'ನನ್ನ ತೇಜಸ್ವಿ' ಪುಸ್ತಕದಲ್ಲಿ ಬರೆದಿದ್ದೇನಲ್ಲ ಎಂದು ಅವರು ಹೇಳಿದರೂ, ನಾವೆಲ್ಲ ನಿಮ್ಮ ಮಾತುಗಳಲ್ಲೇ ಅವುಗಳನ್ನು ಕೇಳಬೇಕು ಎಂದು ಆಸೆ ಪಟ್ಟಾಗ ಇಲ್ಲವೆಂದನ್ನಲಿಲ್ಲ.



ಆನಂತರ ನಮ್ಮನ್ನೆಲ್ಲಾ ಮನೆಯ ಮೇಲಿನ ಕೋಣೆಗೆ ಕರೆದುಕೊಂಡು ಹೋಗಿ, ಅಲ್ಲೇ ಕಿಟಕಿಯೊಂದಕ್ಕೆ ಸಣ್ಣದೊಂದು ತೂತು ಮಾಡಿ ನೇತು ಹಾಕಿರುವ ಕಪ್ಪು ಬಟ್ಟೆಯನ್ನು ತೋರಿಸುತ್ತಾ, 'ಅದು ಅವರು ಫೋಟೋ ತೆಗೆಯೋದಕ್ಕೆ ಅಂತ ಮಾಡಿಕೊಂಡಿದ್ದರು' ಎಂದು ಹೇಳಿದರು. ತೇಜಸ್ವಿಯವರ ಸಂಗ್ರಹಾಲಯಕ್ಕೆ ನಡೆಸುತ್ತಿರುವ ತಯಾರಿಯ ಬಗ್ಗೆ ತಿಳಿಸಿದರು, ಅವರು ತೆಗೆಯುತ್ತಿದ್ದ ಫೋಟೋಗಳನ್ನು ಸಂಸ್ಕರಿಸುವ ಸಣ್ಣ ಮೆಷಿನ್ ಒಂದನ್ನೂ ಹಾಗೂ ಫೋಟೋಗಳನ್ನು ತೋರಿಸಿದರು. ಹೀಗೆ, ಇಷ್ಟೆಲ್ಲಾ ಅಚ್ಚರಿ, ಸಂತಸಗಳ ನಡುವೆ ಉಲ್ಲಾಸದಿಂದ ಓಡಾಡಿಕೊಂಡಿದ್ದ ನಮಗೆ ಸಮಯ ಉರುಳಿದ್ದೇ ಗೊತ್ತಾಗಲಿಲ್ಲ.



ಹೊರಡಲು ಸಿದ್ದವಾದಾಗಲೇ ನಮಗೆ ಗೊತ್ತಾಗಿದ್ದು, ಮಳೆಯೂ ಸಹ ನಮ್ಮೊಡನೆ ರಾಜೇಶ್ವರಿಯವರ ಮಾತು ಕೇಳಲು ಇಳಿದುಬಿಟ್ಟಿದೆ ಎಂದು. ಆದರೆ, ನಮಗೆ ಅದರ ಅರಿವೇ ಇರಲಿಲ್ಲ. ಅವರೊಂದಿಗೆ ಮನೆಯ ವರಾಂಡದಲ್ಲಿ ಒಂದು ಗ್ರೂಪ್ ಪೋಟೋ ತೆಗೆಸಿಕೊಂಡು, ನಾವೆಲ್ಲ ತೆಗೆದುಕೊಂಡು ಹೋಗಿದ್ದ ಪೋಂಚೋಸ್ ಧರಿಸಿ, ಕೊಡೆಗಳನ್ನು ತೆರೆದು ಮಳೆಯಲ್ಲಿಯೇ ಹೊರಟೆವು.



'ಅಮ್ಮಾ ಬರುತ್ತೇನೆ' ಎಂದು ಹೇಳಿ ಕೊನೆಯವನಾಗಿ ಹೊರಟು, ಸ್ವಲ್ಪ ದೂರ ಬಂದು ನಿಂತು, ಹಿಂತಿರುಗಿ ನೋಡಿ ನನಗೆ ನಾನೇ ಹೇಳಿಕೊಂಡೆ, 'ಇವರ ಅರಿವು, ತಿಳುವಳಿಕೆ ಎಷ್ಟು ಅಗಾಧವೋ, ಅಂತೆಯೇ ಎಷ್ಟು ಸರಳ!'

ಅಲ್ಲಿಗೆ ಹೋಗಿದ್ದಾಗ ನನಗೊಂದು ಬಗೆಯ ಆನಂದವಿತ್ತು. ನಾನು ಕೇಳಬೇಕೆಂದು ಕೊಂಡಿದ್ದ ಪ್ರಶ್ನೆಗಳು ಈಗಲೂ ಹಾಗೇ ಉಳಿದುಕೊಂಡಿವೆ; ನಿರುತ್ತರ!! ಆದರೂ, ಯಾವುದೋ ಒಂದು ಸತ್ಪ್ರೇರಣೆಯೊಂದಿಗೆ ಹಿಂದಿರುಗಿದೆ.....ಮತ್ತೊಮ್ಮೆ ಅಲ್ಲಿಗೆ ಹೋಗುವ ನಿರ್ಧಾರದೊಂದಿಗೆ.

Tuesday, April 30, 2013

ಗೆಳತಿಯ ಹುಟ್ಟುಹಬ್ಬಕ್ಕೆ........


ಕೆಟ್ಟ ಕತ್ತಲ ನ೦ತರ ಮೂಡಿದ

'ಅರುಣೋ'ದಯದ ಮೋಹಕತೆಯ

ಸವಿಯುತ್ತಿರುವ ನಿನಗೆ,

ಈ ಮೊದಲ ಹುಟ್ಟುಹಬ್ಬ

ಕನಸಿಗಿಂತ ಸುಂದರವಾದ, ನಿರಂತರ

ವಿಸ್ಮಯ,ಅಚ್ಚರಿ,ಸಂತಸ ತರಲಿ :)


ಹುಟ್ಟುಹಬ್ಬದ ಶುಭಾಶಯಗಳು.... :)



(ಸೌಮ್ಯ - ಅರುಣ್ ಮದುವೆಯ ನಂತರದ ಮೊದಲ ಹುಟ್ಟುಹಬ್ಬ)

Monday, April 29, 2013

ಮದುಮಗಳ ಗುಂಗಿನಲ್ಲಿ......

ಸುಮಾರು ಒಂದು ತಿಂಗಳಿನಿಂದ ಕಾಯ್ದಿಟ್ಟುಕೊಂಡಿದ್ದ ಕುತೂಹಲ ಮೊನ್ನೆ, ಶನಿವಾರ, ತಣಿಯಿತು; ಅದರ ಹಿಂದೆಯೇ ಮತ್ತೊಂದು ಕಾತುರವು ಹುಟ್ಟಿಕೊಂಡಿದೆ. ಅದೇನೆಂದರೆ, ಈ 'ಮಲೆಗಳಲ್ಲಿ ಮದುಮಗಳು' ನಾಟಕವನ್ನು ಮತ್ತೊಂದು ಬಾರಿ ನೋಡಿಬಿಡಬೇಕು ಎಂದು!! ಹೌದು, ಈ ಮದುಮಗಳ ವೈಶಿಷ್ಟ್ಯವೇ ಅಂಥದ್ದು. ಮೊದಲು ಇದ್ದ ಕುತೂಹಲಕ್ಕೂ, ಈಗ ಹುಟ್ಟಿಕೊಂಡಿರುವ ಕಾತುರಕ್ಕೂ ಸಾಕಷ್ಟು ಕಾರಣಗಳಿವೆ.



ಕನ್ನಡ ಸಾಹಿತ್ಯಲೋಕದ, ಕವಿ ಕುವೆಂಪುರವರ ಮಹಾನ್ ಕಾದಂಬರಿ 'ಮಲೆಗಳಲ್ಲಿ ಮದುಮಗಳು' ಈ ನಾಟಕದ ಕಥಾವಸ್ತು ಎಂಬುದು ಮೊದಲ ಅಚ್ಚರಿಗೆ ಕಾರಣವಾದರೂ, ಕುತುಹೂಲ ಹುಟ್ಟಿಸಿದ್ದು ಈ ನಾಟಕವನ್ನು ಪ್ರಸ್ತುತ ಪಡಿಸುತ್ತಿರುವ ರೀತಿಗೆ. ಇತರೆ ನಾಟಕಗಳಂತೆ ಇಲ್ಲಿ ವೇದಿಕೆಯ / ರಂಗದ ಮೇಲೆ ಮಲೆನಾಡಿನ ಸೆಟ್ ಹಾಕಿಲ್ಲ. ಬದಲಿಗೆ, ಕಲ್ಲು, ಮಣ್ಣು, ಗಿಡ, ಮರವಿರುವ ಬಯಲಿನಲ್ಲಿ ಅಗತ್ಯಕ್ಕೆ ತಕ್ಕಂತೆ ಜಾಗವನ್ನು ಒಪ್ಪ ಓರಣ ಮಾಡಿ, ಮಲೆನಾಡಿನ ಸಣ್ಣ ಹಳ್ಳಿಯ, ತೋಟದ ಒಂದು ಭಾಗದ ತದ್ರೂಪವನ್ನೇ ಸೃಷ್ಟಿಸಿ ಅದನ್ನೇ ರಂಗಸ್ಥಳವನ್ನಾಗಿಸಿರುವುದು ಇದರ ವೈಶಿಷ್ಟ್ಯ.

 

ಇದೇ ರೀತಿ ಸಿದ್ದಗೊಂಡ ನಾಲ್ಕು ವಿವಿಧ ರಂಗಸ್ಥಳಗಳಲ್ಲಿ ನಾಟಕ ಸರದಿಯಲ್ಲಿ ಸಾಗುವುದನ್ನು ನೋಡುವಾಗ ನಮಗೆ ಸಿಗುವ 'ಫೀಲ್' ನಿಜಕ್ಕೂ ವಿಭಿನ್ನವಾದದ್ದು. ಮಲೆನಾಡಿನಲ್ಲಿ ತೋಟದ ಕಡೆ, ಕೇರಿಯ ಕಡೆ ಸುತ್ತಾಡಲು ಹೋದಾಗ, ಯಾರೋ ಕಿತ್ತಾಡುತ್ತಿರುವುದನ್ನು, ಮಾತನಾಡುತ್ತಿರುವುದನ್ನು, ಬೇಡಿಕೊಳ್ಳುತ್ತಿರುವುದನ್ನು ಮರೆಯಲ್ಲಿ ನಿಂತು ನೋಡಿದಂತೆ :)


ಇನ್ನು, ೭೫೦-೮೦೦ ಪುಟಗಳಷ್ಟು ಮಹಾ ಕಾದಂಬರಿಯನ್ನು , ಇಡೀ ರಾತ್ರಿ ೯ ಗಂಟೆಗಳ ಕಾಲ ನಾಟಕ ಮಾಡುತ್ತಾರೆ ಎಂದಾಗ,ಅಚ್ಚರಿಯ ಜೊತೆ, ಅನುಮಾನವೂ ನುಸುಳಿ ಬಂತು. ರಾತ್ರಿ ನಿದ್ದೆಗೆಟ್ಟು ಅಭ್ಯಾಸವಿಲ್ಲದ, ಹೆಚ್ಚೆಂದರೆ ರಾತ್ರಿ ೧ ರ ತನಕ ನಿದ್ದೆಯನ್ನು ಮುಂದೂಡ ಬಹುದಾದ ನಾನು ಬೆಳಿಗ್ಗೆ ೫.೩೦ರ ತನಕ ನಿದ್ದೆ ಬಿಟ್ಟು, ಎದ್ದು ಕೂತು ನಾಟಕ ನೋಡಬಲ್ಲೆನೆ, ನಾಟಕ ಬೋರ್ ಎನಿಸಿಬಿಟ್ಟರೆ ಅಥವಾ ಕಥಾವಸ್ತು ತುಂಬಾ 'ಹೆವಿ' ಎನಿಸಿ, ಆಸಕ್ತಿ ಜಾರಿ ಹೋದರೆ ಎಂದೆಲ್ಲ ಅನಿಸಿತ್ತು. (ನಾನು ಕಾದಂಬರಿಯನ್ನು ಓದಿಲ್ಲ) ನಾಟಕದ ಪ್ರದರ್ಶನ ಮುಗಿಯುವ ವೇಳೆಗೆ ಈ ಎಲ್ಲಾ ಅನುಮಾನಗಳು ಕೊಚ್ಚಿಕೊಂಡು ಹೋಗಿದ್ದವು.

ಇಲ್ಲಿ ಮಲೆನಾಡ ಪರಿಸರದ ಚಿತ್ರಣವಿದೆ, ಮುಗ್ದ, ಪ್ರಬುದ್ದ, ಬದ್ದ ಪ್ರೇಮಿಗಳ ಕಥೆಯಿದೆ, ವ್ಯವಸ್ಥೆಯ ವಿರುದ್ದದ ವ್ಯಂಗ್ಯವಿದೆ, ಆಚರಣೆಯಲ್ಲಿದ್ದ,ಈಗಲೂ ಇರುವ ಮೂಢಾಚಾರದ ಅಣಕವಿದೆ, ಹಾಸ್ಯವಿದೆ, ಕಳೆದು ಹೋದ ಮಗನ ಬರುವಿಕೆಗೆ ಕಾಯುವ ತಂದೆಯ ನೋವಿದೆ, ಮನುಷ್ಯ ಸಹಜವಾದ ಆಸೆ, ದುರಾಸೆ, ರಾಜಕೀಯದ ದರ್ಶನವಿದೆ, ಹೀಗೆ ಸಾಕಷ್ಟು ಆಸಕ್ತಿಕರ ವಿಷಯಗಳು ನಮ್ಮನ್ನು ಹಿಡಿದಿಡಬಲ್ಲವು. ಎಷ್ಟರ ಮಟ್ಟಿಗೆ ಎಂದರೆ, ಒಂದು ರಂಗಸ್ಥಳದಲ್ಲಿ ಪ್ರದರ್ಶನ ಮುಗಿದು, ಮತ್ತೊಂದು ಕಡೆ ನಾಟಕ ಮುಂದುವರಿಯುವುದು ಎಂದಾಗ, ಅಲ್ಲಿ ಸರಿಯಾದ ಜಾಗ ಹಿಡಿಯಲು ಓಡುತ್ತಿದ್ದೆ. ನನ್ನ ನಿದ್ದೆಯು ಓಡಿಹೋಗಿ, ಅದೆಲ್ಲೋ ಕಳೆದು ಹೋಗಿತ್ತು.


ವಿಶಿಷ್ಟವಾದ ರಂಗಭೂಮಿ, ವಿಸ್ತೃತವಾದ ಕಥೆ, ಇವುಗಳನ್ನು ಸಮರ್ಪಕವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಕಲಾವಿದರ ಶ್ರಮ ನಿಜಕ್ಕೂ ಅಭಿನಂದನಾರ್ಹ. ಉತ್ತರದ ಗುಲ್ಬರ್ಗಾದಿಂದ, ದಕ್ಷಿಣದ ಚಾಮರಾಜನಗರದಂದ ಆಯ್ದ ಸುಮಾರು ೭೫ ಜನ ಕಲಾವಿದರು ಇದಕ್ಕಾಗಿ ಒಂದೂವರೆ ತಿಂಗಳು ಶ್ರಮಿಸಿ, ಪ್ರತಿಯೊಬ್ಬರೂ ಕನಿಷ್ಟ ೩ ಪಾತ್ರಗಳನ್ನು ನಿಭಾಯಿಸಿರುವುದು ಆಶ್ಚರ್ಯಕರ. ನಾಟಕ ಪ್ರಾರಂಭವಾಗಿ, ನಾಟಕದ ಕೊನೆಯ ಸಂಭಾಷಣೆ ಮುಗಿಸಿ, ಪ್ರೇಕ್ಷಕರಿಗೆ ವಂದನೆ ಸಲ್ಲಿಸುವವರೆಗೂ ಕಲಾವಿದರ ಹುಮ್ಮಸ್ಸು (ಎನರ್ಜಿ) ಒಂದೇ ಮಟ್ಟದಲ್ಲಿತ್ತು; ಎಲ್ಲಿಯೂ ಕಡಿಮೆಯಾದ ನೆನಪೇ ಇಲ್ಲ!! ಈ ಹುಮ್ಮಸ್ಸಿನ ಅಭಿನಯವೂ ಎಲ್ಲಿಯೂ ಕೃತಕವೆನಿಸದೆ, ಸಾಕಷ್ಟು ಸಹಜವಾಗಿರುವುದರಿಂದಲೇ, ನಾಯಿಗತ್ತಿ, ತಿಮ್ಮಿ, ಐತ, ಪೀಂಚಲು, ಮುಕುಂದ, ಚಿನ್ನು, ಸುಬ್ಬಣ್ಣ ಹೆಗಡೆ, ಕಾವೇರಿ, ಅಂತಕ್ಕ, ಸೇರೆಗಾರ ಇವರೆಲ್ಲಾ ನಾಟಕದ ಸಮಯದಲ್ಲೂ ಹಾಗೂ ನಾಟಕದ ನಂತರವೂ ನಿಮ್ಮನ್ನು ಹಿಡಿದಿಟ್ಟಿರುತ್ತಾರೆ. ಏನೂ ಸಂಭಾಷಣೆಯೇ ಇಲ್ಲದ, ಕೇವಲ ಅಭಿನಯದಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ 'ಗುತ್ತಿ ನಾಯಿ' ಯನ್ನು ನಾವು ನೋಡಿಯೇ ಎಂಜಾಯ್ ಮಾಡಬೇಕು.



ಇಷ್ಟು ದಿನ, ಸಿನಿಮಾ ಲೋಕದಲ್ಲಿ ಕಾಣೆಯಾಗಿದ್ದ ಹಂಸಲೇಖ, ಮದುಮಗಳಿಗಾಗಿ ಅದ್ಬುತವೆನಿಸುವಂತಹ ಸಂಗೀತ ಸಂಯೋಜಿಸಿ ತಮ್ಮ ದೇಸಿತನವನ್ನು ಪರಿಚಯಿಸಿದ್ದಾರೆ. ೪೨ ಹಾಡುಗಳಲ್ಲಿ ಯಾವೊಂದು ಹಾಡೂ ಬೋರ್ ಹೊಡೆಸಲಿಲ್ಲ. ನಾಟಕದ ಓಟಕ್ಕೆ ಪೂರಕವಾಗಿ ಬಂದು ಹೋಗುವ ಹಾಡುಗಳು ಎಷ್ಟರ ಮಟ್ಟಿಗೆ ಸೆಳೆಯುತ್ತವೆ ಎಂದರೆ, ನಾಟಕದ ನಂತರವೂ ಹಾಡುಗಳನ್ನು ಗುನುಗುನಿಸದೇ ಇರಲಾಗುತ್ತಿಲ್ಲ.



ಒಟ್ಟಿನಲ್ಲಿ, ಈ ಅಪರೂಪದ, ಅಪೂರ್ವ ಅನುಭವವನ್ನು ನಮ್ಮದಾಗಿಸಿಕೊಳ್ಳಲು ನಾವು ಮಾಡಬೇಕಿರುವುದು ಎರಡೇ ಕೆಲಸ.

-ಒಂದು, ಮುಂಗಡವಾಗಿ ಟಿಕೇಟ್ ಕಾಯ್ದಿರಿಸುವುದು.

-ಎರಡು, ನಿಗದಿತ ದಿನ ಪ್ರದರ್ಶನದ ವೇಳೆಗೆ ಸರಿಯಾಗಿ ಹೋಗಿ ಕುಳಿತುಕೊಳ್ಳುವುದು.

ಆನಂತರ ನಮ್ಮ ನಿದ್ದೆಯನ್ನು ಮಾಯವಾಗಿಸುವ, ಆಸಕ್ತಿಯನ್ನು ಕೆರಳಿಸುವ ಒಂದು ಮಾಯಾ ಮೋಡಿಗೆ ನಮಗೆ ಗೊತ್ತಿಲ್ಲದೇ ಒಳಗಾಗುತ್ತೇವೆ. ನಾಟಕ ಮುಗಿಯುವ ವೇಳೆಗೆ ನಮಗೇ ಅಚ್ಚರಿಯಾಗುತ್ತದೆ; ವಿಶಿಷ್ಟ ಅನುಭವವೊಂದು ನಮ್ಮ ಕೈ ಹಿಡಿದಿರುತ್ತದೆ. ತಂಡದ ಶ್ರಮ ಹಾಗೂ ಶ್ರದ್ದೆ ನಮ್ಮನ್ನು ಮೂಕರನ್ನಾಗಿಸುತ್ತದೆ.

ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತಾರ ಮಾಡಿತೋರಿಸಿದ ನಾಟಕಕ್ಕೆ ಜೈ!!

'ಬರಲಾಗಲಿಲ್ಲ, ' ಎಂದು ಹೇಳದೆ,

ಹತ್ತಾರು ಕಾರಣಗಳ ಹುಡುಕದೆ,

ಸಮಯ ಬಿಡುವು ಮಾಡಿಕೊಂಡು ಹೋಗಿಬನ್ನಿ;

ಮಲೆನಾಡ'ಮದುಮಗಳು' ನಿಮ್ಮೂರಿಗೇ ಬಂದಿರುವಾಗ

ಹೋಗದೆ ತಪ್ಪಿಸಿಕೊಳ್ಳುವುದು ಸರಿಯಲ್ಲ...

ಪೋಷಕರಾಗಿ ಹೋಗಿ ಹರಸಿ, ಹರ್ಷಿಸಿ ಬನ್ನಿ;

ಪುಟ್ಟಪ್ಪನ ಕನಸಿನ ಪುಟ್ಟ ಮಗಳ ಸೋದರ ಮಾವ

ಬಸು ಮತ್ತವರ ತಂಡಕ್ಕೆ ಖುಷಿ ತನ್ನಿ








Saturday, April 20, 2013

ಮಾರೀ ಕಾಡು - ಯುಗಾದಿ - ಶ್ರೀ ಕೃಷ್ಣ ಸಂಧಾನ

ಈಚಿನ ದಿನಗಳಲ್ಲಿ ಬರೆಯುವುದಕ್ಕೆ ಸಾಧ್ಯವೇ ಆಗಿರಲಿಲ್ಲ. ಸಾಧ್ಯವೇ ಆಗಿರಲಿಲ್ಲ ಎನ್ನುವುದಕ್ಕಿಂತ, ನನ್ನ ಎಲ್ಲಾ ಸಮಯವನ್ನು ನಾಟಕಕ್ಕೆ ಮೀಸಲಿಟ್ಟಿದ್ದೆ ಎನ್ನುವುದೇ ಸರಿ. ಬೆಳಿಗ್ಗೆ ೪.೩೦ಕ್ಕೆ ನನ್ನ ದಿನಚರಿ ಪ್ರಾರಂಭವಾಗುತ್ತಿತ್ತು. ೫.೩೦ರ ವೇಳೆಗೆ, ಕಂಪೆನಿಯ ಗಾಡಿ ಬಂದು, ೬.೩೦ರ ವೇಳೆಗೆ ಆಫೀಸು ತಲುಪಿ, ೩.೩೦ರ ಹೊತ್ತಿಗೆ ಹೇಗಾದರೂ ಸರಿ (ಹಲವು ಬಾರಿ ಊಟ ತಪ್ಪಿಸಿಕೊಂಡಾದರೂ ಸರಿ) ಕೆಲಸ ಮುಗಿಸಿ ಅಥವಾ ಉಳಿದದ್ದನ್ನು ಮಾರನೇ ದಿನಕ್ಕೆ ಮುಂದೂಡಿ, ಆಫೀಸಿನಿಂದ ಹೊರಟರೆ ಮನೆ ತಲುಪುವ ವೇಳೆಗೆ ೫ ಆಗುತ್ತಿತ್ತು. ಮನೆಗೆ ಬಂದು ಕಂಪೆನಿಯ ಲ್ಯಾಪ್ ಟಾಪ್ ಅನ್ನು ಮನೆಯಲ್ಲಿರಿಸಿ, ವೀರೇಶ್ (ನಾಟಕದ ಗೆಳೆಯ) ಬರುವ ವೇಳೆಗೆ ರೆಡಿಯಾಗಿ, ೫.೪೫ ರ ವೇಳೆಗೆ ದಯಾನಂದ್ ಸಾಗರ್ ಕಾಲೇಜ್ ಬಳಿ ಇರುವ ಕೆ.ವಿ.ಸುಬ್ಬಣ್ಣ ಆಪ್ತ ರಂಗ ಮಂದಿರ ತಲುಪಿ, ೧೫-೨೦ ನಿಮಿಷ ವ್ಯಾಯಾಮ ಮಾಡಿ, ಆ ನಂತರ ನಮ್ಮ 'ಮಾರೀಕಾಡು' ನಾಟಕದ ತಾಲೀಮಿನಲ್ಲಿ ತೊಡಗಿಕೊಳ್ಳುತ್ತಿದ್ದೆವು. ಸೂರಿ ಸರ್ ನಿರ್ದೇಶನದಲ್ಲಿ ಆಸಕ್ತಿಕರವಾಗಿ ೮.೩೦ ರ ತನಕ ತಾಲೀಮು ನಡೆಯುತ್ತಿತ್ತು.  ಅಲ್ಲಿಂದ ಅರ್ಧ ಗಂಟೆಗಳ ಕಾಲ ನಾಟಕದ ಹುಡುಗರ ಜೊತೆ ಹರಟೆ. ೯ ಕ್ಕೆ ಅಲ್ಲಿಂದ ಹೊರಟು ಮನೆ ತಲುಪಿ ಊಟ ಮಾಡಿ, ರೂಮ್ ಸೇರಿದರೆ ಓದುತ್ತಿದ್ದದ್ದು ಕೂಡ ನಾಟಕಗಳನ್ನೇ; ೧೧ ರ ತನಕ. ಆ ನಂತರ ನಿದ್ದೆ. (ವಾರಾಂತ್ಯದಲ್ಲಿ ಬಿಡುವಾದರೂ, ಸಂಪೂರ್ಣ ಸಮಯವನ್ನು ಒಂದು ಪುಸ್ತಕ ರೂಪುಗೊಳಿಸುವ ಕಾರ್ಯಕ್ಕೆ ಮೀಸಲಿಡುತ್ತಿದ್ದೆ)  ಹೀಗೆ, ಸತತ ಒಂದೂವರೆ ತಿಂಗಳು 'ಮಾರೀಕಾಡು' ನಾಟಕಕ್ಕೆ ತಯಾರಾಗಿದ್ದು. ಆ ತಯಾರಿಯ ನಡುವೆ ಬಿಡುವು ದೊರೆತರೆ, ಸಮಯ ಕಳೆಯುತ್ತಿದ್ದದ್ದು ಕೂಡ ರಂಗ ಶಂಕರದಲ್ಲಿ ನಡೆಯುತ್ತಿದ್ದ ಇತರೆ ನಾಟಕಗಳನ್ನು ನೋಡಿಯೇ ಹೊರತು, ಯಾವುದೇ ಸಿನಿಮಾ, ಔತಣ ಕೂಟಗಳಲ್ಲಲ್ಲ. ಈ ಸಮಯದಲ್ಲೇ ನಾಟಕದ ಸೂಕ್ಷ್ಮತೆಗಳ ಬಗ್ಗೆ, ಅಭಿನಯದ ಬಗ್ಗೆ, ರಂಗ ವಿನ್ಯಾಸದ ಬಗ್ಗೆ, ಹೀಗೆ ಒಬ್ಬ ಸಾಮಾನ್ಯ ಪ್ರೇಕ್ಷಕನ ತಿಳುವಳಿಕೆಗೂ ಮೀರಿ ಇರುವಂತಹ ನಾಟಕದ ಇತರೆ ಆಯಾಮಗಳ ಬಗ್ಗೆ ನನ್ನ ಅರಿವಿನ ಬಾಗಿಲು ತೆರೆದುಕೊಂಡದ್ದು. ಆ ಗ್ರಹಿಕೆಯನ್ನು ವಿವರವಾಗಿ ಬರೆಯುವ ಆಸೆಯಿದೆ. ನನ್ನ ನೆನಪಿನ ದಾಖಲೆಗಾಗಿಯಾದರೂ ಬರೆಯಲೇ ಬೇಕು. :)

ಆ ನಾಟಕ ಮುಗಿದ ಕೂಡಲೇ, ನಮ್ಮ 'ಅವಿರತ' ದ ನಾಟಕ 'ಶ್ರೀ ಕೃಷ್ಣ ಸಂಧಾನ' ನಾಟಕದ ತಯಾರಿ!! ಆದರೆ, ನಿಗದಿಪಡಿಸಿದಂತೆ, 'ಶ್ರೀ ಕೃಷ್ಣ  ಸಂಧಾನ' ನಾಟಕದ ಪ್ರದರ್ಶನವಾಗಲಿಲ್ಲ. ಶ್ರೀ ರಾಮ ಸೇನೆ, ಹಿಂದೂ ಜಾಗರಣಾ ವೇದಿಕೆ, ಹೀಗೆ ಸ್ವಯಂಘೋಷಿತ ಧರ್ಮೋದ್ದಾರಕರ ಅರ್ಥಹೀನ ದಾಂಧಲೆಯ ಕಾರಣ ನಮ್ಮ ನಾಟಕ ಪ್ರದರ್ಶನವನ್ನು ಮುಂದೂಡ ಬೇಕಾಯಿತು.  ನಾಟಕದ ಉದ್ದೇಶ, ಅದರ ಹಿನ್ನೆಲೆಯನ್ನು ತಿಳಿದುಕೊಳ್ಳುವಷ್ಟು ತಾಳ್ಮೆ ತೋರದವರ ಅವಿವೇಕಿತನಕ್ಕೆ ನಮ್ಮೆಲ್ಲರ ಶ್ರಮ ವ್ಯರ್ಥವಾಯಿತು.  ಸತ್ಯ ತಿಳಿದುಕೊಳ್ಳುವ ಪ್ರಯತ್ನಪಡಲೂ ಸಾಧ್ಯವಾಗದ ದುರ್ಬಲ ಜನರೆದುರು ವೈಚಾರಿಕತೆಗೆ ಅವಕಾಶವಿಲ್ಲ ಎಂದು ಅರಿತ ಅವಿರತ ನಮ್ಮ ಆತ್ಮಾಭಿಮಾನವೂ ಉಳಿದು, ಬೆಳೆಯುವಂತೆ; ಅವರ ತಿಕ್ಕಲುತನವನ್ನೂ ತಿರಸ್ಕರಿಸುವಂತೆ  ತಕ್ಕ ತೀರ್ಮಾನವನ್ನು ತೆಗೆದುಕೊಂಡು, ನಾಟಕ ಪ್ರದರ್ಶನವನ್ನು ಮುಂದೂಡಿತು.



ಆನಂತರವಷ್ಟೆ, ಬರೆಯಲು ಸಮಯ ಮಾಡಿಕೊಂಡದ್ದು. ಆಗ ಬರೆದ ಸಾಲುಗಳೇ ಇವು.... ಚುಟುಕಾಗಿವೆ....        
 
 
ಕಂಬಾರರ 'ಮಾರೀಕಾಡು'
 
ಶಂಕರನ ರಂಗದ ಮೇಲೆ

 'ಸೂರೀ ಕಾಡು' ಆಗುವ ವೇಳೆಗೆ

ಬರಡು ಮರಗಳಂತಿದ್ದ ನಮ್ಮಲ್ಲಿ

ಹಸಿರು ಚಿಗುರೊಡೆಯುವ

ಖುಷಿ ಮೂಡಿತ್ತು.                                                                                                                                                                               ----------------------------------------------------------------------            
ಮಾವು ಚಿಗುರುವ ಕಾಲದ ಹಬ್ಬಕ್ಕೆ,

ಸಿಹಿ - ಕಹಿಯ ಜೊತೆಗೆ,

     ಮುಪ್ಪಾಗದ ಮರದ ಹುಳಿಯನ್ನು

ಚಪ್ಪರಿಸುವಂತೆ ಮಾಡಿ,

'ಏನಿದು ಸರ್?' ಎಂದು ಕೇಳಿದರೆ,

ತುಂಟನಂತೆ ಕಣ್ಣೊಡೆದು, ತುಟಿಯಂಚಿನಲಿ ನಕ್ಕರು

ನಮ್ಮ ಸೂರಿ ಸರ್ರು...
 
(ರಂಗ ಶಂಕರದಲ್ಲಿ ಸೂರಿ ಸರ್ ರೂಪಿಸಿದ್ದ ರಂಗ ಯುಗಾದಿಯ ಕುರಿತಾಗಿ) 
  -----------------------------------------------------------------------------
 
ಬೇರನ್ನು ಮರೆತು, ರೆಂಬೆಯನ್ನಷ್ಟೇ ಪರೀಕ್ಷಿಸುವವರನ್ನು

ಅವಿವೇಕಿಗಳೆನ್ನದೆ ವಿಧಿಯಿಲ್ಲ:


'ಕಟ್ಟುವುದು ಕಷ್ಟ, ಮೆಟ್ಟುವುದು ಸುಲಭ' ಎಂದರಿತ

ವಿಚಾರಿಗಳು ಎಡವಲು ಸಾಧ್ಯವಿಲ್ಲ! :)
 
 



ರಾಮ...ರಾಮ....

ಸೇನಾನಿಗಳಿವರಲ್ಲ; ಜಾಗೃತಿ ಮೂಡಿಸುವುದಿಲ್ಲ.
 
ವಿಚಾರ ಕೇಳುವಷ್ಟು ತಾಳ್ಮೆಯಿಲ್ಲ,

ಆಲೋಚಿಸುವಷ್ಟು ವಿವೇಕಿಗಳಲ್ಲ;

ಮೂಲ ತಿಳಿಸದ ಮುಖಹೇಡಿಗಳ ಸಂದೇಶಕ್ಕೆ

ವ್ಯಾಘ್ರರಾಗುವ ಇವರು

ನಮ್ಮೊಳಗೇ ಇರುವ ಪ್ರತಿಗಾಮಿಗಳು;

ಸಂಸ್ಕೃತಿಯ ವಿಸ್ತಾರಕ್ಕೆ, ಸಹಬಾಳ್ವೆಯ ಸಾಕಾರಕ್ಕೆ

ಅಡ್ಡಿ ಮಾಡುತ್ತಿರುವ ಸಂಕುಚಿತ ಮನಗಳು

Thursday, February 28, 2013

ಅವಿರತ: ೨೦೧೩ ರ ಮುನ್ನೋಟ

ಅನಾಥ ಮಕ್ಕಳಿಗೆ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೆಲೆ ನೀಡುವುದರೊಂದಿಗೆ, ಅವರ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡು ಆ ಮಕ್ಕಳ ಬಾಳಿಗೆ ಒಂದು ನೆಲೆಯನ್ನು ಕರುಣಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ’ನೆಲೆ’ ಎಂಬ ಸ್ವಯಂ ಸೇವಾ ಸಂಸ್ಥೆಯಲ್ಲಿ ನಮ್ಮ ಅವಿರತದ ಸಭೆಯನ್ನು ಆಯೋಜಿಸಲಾಗಿತ್ತು.  ಸದಸ್ಯನಾಗಿ ಸಭೆಗೆ ಹೋದ ನಾನು ಪತ್ರಕರ್ತನ ಪಾತ್ರವನ್ನೂ ವಹಿಸಬೇಕಾಗಿ ಬಂತು.

ಪಕ್ಕಾ ಒಬ್ಬ ಪತ್ರಕರ್ತನಂತೆ ಸಭೆಯಲ್ಲಿ ಭಾಗವಹಿಸಿ, ಆನಂತರ ಅದರ ವರದಿಯನ್ನು ಬರೆದಿರುವಂತದ್ದೇ ’ಅವಿರತ: ೨೦೧೩ ರ ಮುನ್ನೋಟ’ ಎಂಬ ಲೇಖನ.  ಇಲ್ಲಿಯವರೆಗೂ, ಅವಿರತದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅವುಗಳ ಬಗ್ಗೆ ಅನಿಸಿಕೆಯನ್ನು ಬರೆದುಕೊಳ್ಳುತ್ತಿದ್ದ ನನಗೆ, ಭಾನುವಾರದ ಆ ಕಾರ್ಯಕ್ರಮದಂದು,  "ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ನೋಟ್ ಮಾಡಿಕೊಂಡು ಎಲ್ಲರಿಗೂ ಒಂದು ವರದಿ ಕಳಿಸಿಬಿಡು" ಎಂದು ಪುಸ್ತಕ, ಪೆನ್ನು ಕೊಟ್ಟು ಕೂರಿಸಿಬಿಟ್ಟರು.   
ಆಗ ಅನಿವಾರ್ಯವಾಗಿ ಬರೆಯಬೇಕಾದ ಸಂದರ್ಭ ಬಂದೊದಗಿತು.  ಬರೆಯುವುದನ್ನು ಪ್ರೀತಿಸುವ ನಾನು ಸಂತಸದಿಂದಲೇ ಒಪ್ಪಿಕೊಂಡೆ. ಬರೆಯುತ್ತಾ, ಬರೆಯುತ್ತಾ ಒಂದು ತಂಡವಾಗಿ ನಾವು ಹಮ್ಮಿಕೊಳ್ಳಲು ನಿರ್ಧರಿಸಿರುವ ಕಾರ್ಯಕ್ರಮಗಳ ಬಗ್ಗೆ, ಸಭೆಯಲಿ ಹರಿದಾಡಿದ ಯೋಚನಾ ಲಹರಿಯ ಬಗ್ಗೆ ಖುಷಿಯೆನಿಸಿ, ಹೆಮ್ಮೆ ಬೆಳೆಯುತ್ತಾ ಬಂದಿತು.  ಜೊತೆಗೇ, ಮಾಡಬೇಕಾಗಿರುವ ಕೆಲಸಗಳು ಬೆಟ್ಟದಷ್ಟಿವೆ ಎಂಬುದೂ ಅರಿವಾಗುತ್ತಿದೆ.

ಪ್ರೋತ್ಸಾಹ ಕೊಟ್ಟು, ಜವಾಬ್ದಾರಿಯುತ ಕೆಲಸವಹಿಸಿ, ಜೊತೆ ನಿಂತ ಅವಿರತದ ಎಲ್ಲಾ  ಹಿರಿಯರಿಗೂ ವಂದನೆಗಳು.... :) 

ಈ ವರದಿಯನ್ನು ನಾನು ಸಿದ್ದಪಡಿಸುತ್ತೇನೆಂದು ನೆನೆಸಿರಲಿಲ್ಲ...


------------------------------------------------------------------------

ಅವಿರತ: ೨೦೧೩ ರ ಮುನ್ನೋಟ


“ಯಾವುದೇ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಯಶಸ್ಸು ಸಾರ್ವಜನಿಕ ವಲಯದಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿದರೆ, ವೈಯಕ್ತಿಕ ಮಟ್ಟದಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.“ - ಎಂಬ ಮಾತನ್ನು ನಮ್ಮ ಅವಿರತ ತಂಡವು ಚೆನ್ನಾಗಿ ಅರಿತಿರುವುದು ನಿಜವಾಗಲೂ ಸಂತಸದ ವಿಷಯವಾಗಿದೆ. ತಿಂಗಳ ಹಿಂದಷ್ಟೆ, ಐದನೇ ವಾರ್ಷಿಕೋತ್ಸವವನ್ನು ಸಡಗರದಿಂದ ಆಚರಿಸಿಕೊಂಡ ನಮ್ಮ ತಂಡ ಇನ್ನೂ ಅದೇ ಗುಂಗಿನಲ್ಲಿ ಇರುವ ಹೊತ್ತಿನಲ್ಲೇ, ಆ ನೆನಪುಗಳು ನಮ್ಮನ್ನು ವ್ಯಾಪಿಸಿಕೊಂಡು, ನಮ್ಮನ್ನು ಮರೆಮಾಡಿಬಿಡಬಹುದಾದ ಆತಂಕದಿಂದ / ಅಪಾಯದಿಂದ ಪಾರು ಮಾಡಿದ್ದು ಭಾನುವಾರ ನಡೆದ ಅವಿರತದ ಸಭೆ.
ಉತ್ಸಾಹ, ಹುರುಪಿನಿಂದ ಶುರುವಾಗಿ, ಸದಸ್ಯರೆಲ್ಲರ ಮುತುವರ್ಜಿಯಿಂದ, ಸಂಕಲ್ಪದಿಂದ ಇಲ್ಲಿಯವರೆಗೂ ನಡೆದುಕೊಂಡು ಬಂದಿರುವ ತಂಡ ಹಾಗೂ ತಂಡದ ಯೋಜನೆಗಳಿಗೆ ಭವಿಷ್ಯದಲ್ಲಿ ಸುಭದ್ರವಾದ, ಶಾಶ್ವತವಾದ ನೆಲೆಯನ್ನು ಒದಗಿಸುವ ಬಗ್ಗೆ ’ನೆಲೆ’ಯಲ್ಲಿ ಚರ್ಚಿಸಿದ್ದು ಸಂದರ್ಭೋಚಿತವಾಗಿತ್ತು. ಅಶ್ವಥ್ ಸರ್ ಈ ಸಭೆಗೆ ’ನೆಲೆ’ಯನ್ನು ಆರಿಸಿದ್ದರ ಹಿಂದೆ ಹಾಗೂ ಹೆಜ್ಜೆ-ಗೆಜ್ಜೆಯಲ್ಲಿ ಶಶಿ ಸರ್ ಅವಿರತವನ್ನು ಬೆಳೆಯುತ್ತಿರುವ ಮಗುವಿಗೆ ಹೋಲಿಸಿದ್ದರ ಹಿಂದೆ ಯಾವ ಕಾಣದ ಶಕ್ತಿಯ ಕೃಪೆಯಿದೆಯೋ ಕಾಣೆ, ಎಲ್ಲವೂ ಒಂದಕ್ಕೊಂದು ಪೂರ್ವನಿರ್ಧಾರಿತವಾದಂತೆ ಹೊಂದಿಕೊಂಡಿದೆ. :)

ಮಕ್ಕಳ ಕಾರ್ಯಕ್ರಮ, ನೋಟ್ ಬುಕ್ ವಿತರಣೆಯ ಹೊಸ ರೂಪ, ಶಾಶ್ವತ ನಿಧಿ ಸಂಗ್ರಹಣೆಗೆ ವಿವಿಧ ಮಾರ್ಗಗಳು, ವನ ಮಹೋತ್ಸವ, ವೈದ್ಯಕೀಯ ತಪಾಸಣೆ, ಯೋಜನೆಗಳಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ, ಸಾಂಸ್ಕೃತಿಯ ಕಾರ್ಯಕ್ರಮಗಳು, ಮಾಧ್ಯಮ ಮಿತ್ರರ ಸಹಕಾರ, ಹೀಗೆ ಇಷ್ಟೆಲ್ಲಾ ಮಹತ್ವದ ವಿಷಯಗಳು ಸಭೆಯಲ್ಲಿ ತುಂಬಿ, ನಾವು ತಕ್ಷಣ ಕಾರ್ಯೋನ್ಮುಖರಾಗುವುದರ ಅವಶ್ಯಕತೆಯನ್ನು ಪುನ: ಪುನ: ನೆನಪಿಸುತ್ತಿತ್ತು. ಈ ವಿಷಯಗಳ ಬಗ್ಗೆ ಸಭೆಯಲ್ಲಿ ನಡೆದ ಸಂವಾದದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.



ಶಾಶ್ವತ ನಿಧಿ / ಕಾರ್ಪಸ್ ಫಂಡ್:

ಹೆಜ್ಜೆ-ಗೆಜ್ಜೆ ಸಮಯದಿಂದಲೂ ಶಶಿ ಸರ್ ಹಾಗೂ ಇತರ ಹಿರಿಯರು ಅವಿರತದ ಶಾಶ್ವತ ನಿಧಿಯ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದಾರೆ. ಕಾರ್ಯಕ್ರಮದ ದಿನ ಈ ವಿಷಯವನ್ನು ದಾನಿಗಳಿಗೆ ತಿಳಿಸಿ, ಸ್ವಲ್ಪ ಮಟ್ಟಿಗಿನ ನಿಧಿ ಸಂಗ್ರಹಣೆಯೂ ಆಯಿತು. ಆದರೆ, ಈ ಶಾಶ್ವತ ನಿಧಿಯ ಸ್ಥಾಪನೆಯ ಹಿನ್ನೆಲೆ ಏನು? ಇದರ ಸಾಧಕ, ಬಾಧಕಗಳೇನು?! ಇದರ ಅವಶ್ಯಕತೆ ಏನು? ಹೀಗೆ ಇನ್ನಿತರ ವಿಷಯಗಳ ಬಗ್ಗೆ ಎಲ್ಲರಲ್ಲೂ ಸ್ಪಷ್ಟ ಅರಿವು ಮೂಡಿಸಿ, ಎಲ್ಲರೂ ಒಕ್ಕೊರಲಿನಿಂದ ’ಅಹುದಹುದು’ ಎನ್ನುವಂತೆ ವಿಷಯ ಮಂಡಿಸಿದ ರವೀಂದ್ರ ಸರ್‍ಗೆ ಹಾಗೂ ಸಭೆಯಲ್ಲಿಯೇ ಇದರ ಬಗ್ಗೆ ತಮ್ಮ ತಮ್ಮ ತಿಳುವಳಿಕೆಯನ್ನು ಹಂಚಿಕೊಂಡು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು.


-ಶಾಶ್ವತ ನಿಧಿ: ಈ ನಿಧಿಗಾಗಿ ದಾನಿಗಳಿಂದ ಸಂಗ್ರಹಿಸಲಾಗುವ ಹಾಗೂ ಇತರೆ ಯಾವುದೇ ಮೂಲಗಳಿಂದ ಶಾಶ್ವತ ನಿಧಿಗಾಗೆಂದೇ ಬರುವ ಹಣವನ್ನು Fixed Deposit ರೂಪದಲ್ಲಿ ಇಡಲಾಗುವುದು. ಇದರಿಂದ ಬರುವ ಕೇವಲ ಬಡ್ಡಿಯ ಹಣವನ್ನು ಮಾತ್ರ ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸಲಾಗುವುದು, ಬಹು ಮುಖ್ಯವಾಗಿ ಅವಿರತದ ವಾರ್ಷಿಕ ಕಾರ್ಯಕ್ರಮ ’ನೋಟ್ ಪುಸ್ತಕ ವಿತರಣೆ’ಗೆ ಉಪಯೋಗಿಸುವುದಾಗಿ ನಿರ್ಧರಿಸಲಾಗಿದೆ.

- ಈ ಒಟ್ಟು ನಿಧಿಯನ್ನು ಯಾವುದೇ ಸಾಮಾಜಿಕ ಕಾರ್ಯಗಳಿಗಾಗಲಿ ಹಾಗೂ ಕಚೇರಿ ನಿರ್ವಹಣೆಗಾಗಲಿ ಉಪಯೋಗಿಸಲಾಗುವುದಿಲ್ಲ. ಒಂದು ವೇಳೆ, ತುರ್ತು ಪರಿಸ್ಥಿತಿಯಲ್ಲಿ, ಅಂದರೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ (೨೦೧೦ ರ ಉತ್ತರ ಕರ್ನಾಟಕದ ನೆರೆಯನ್ನು ನೆನಪಿಸಿಕೊಳ್ಳಿ) ಈ ನಿಧಿಯಲ್ಲಿನ ಹಣವನ್ನು ಎಲ್ಲ ಸದಸ್ಯರ, ದಾನಿಗಳ ಒಮ್ಮತದೊಂದಿಗೆ ಬಳಸಬಹುದಾಗಿದೆ.

- ಈ ನಿಧಿಯಿಂದ ಬರುವ ವಾರ್ಷಿಕ ಬಡ್ಡಿಯು, ’ನೋಟ್ ಪುಸ್ತಕ ವಿತರಣೆ’ಗೆ ಕನಿಷ್ಟ ಮೊತ್ತದ ಹಣವಾಗಿ ಸಂದಾಯವಾಗಲಿದೆ. ಅದಕ್ಕೂ ಮೀರಿ ಬೇಕಾಗುವ ಮೊತ್ತವನ್ನು ಪ್ರತಿಯೊಂದು ಉಪ ತಂಡವು ಸ್ವಂತವಾಗಿ ಸಂಗ್ರಹಿಸಬೇಕಾಗಿದೆ.

ವರ್ಷಗಳು ಕಳೆದಂತೆ, ಹೆಚ್ಚಾಗುವ ’ನೋಟ್ ಪುಸ್ತಕ ವಿತರಣೆ’ಯ ಖರ್ಚು ಹಾಗೂ ಕಡಿಮೆಯಾಗುವ ಸಾಧ್ಯತೆಯಿರುವ ಬಡ್ಡಿಯ ಹಣ – ಇವೆರಡನ್ನು ಸಮದೂಗಿಸುವುದು ನಮ್ಮ ಮುಂದಿರುವ ಸವಾಲು.

- ಮಾರ್ಚ್, ೨೦೧೫ ರ ವೇಳೆಗೆ ೨೫ ಲಕ್ಷ ರೂಪಾಯಿಗಳ ಶಾಶ್ವತ ನಿಧಿಯನ್ನು ಸಂಗ್ರಹಿಸುವುದು ತಂಡದ ಗುರಿಯಾಗಿದೆ. ಇದಕ್ಕಾಗಿ, ತಂಡದ ಸದಸ್ಯರಿಂದ ಹಾಗೂ ದಾನಿಗಳಿಂದ, ಅವರು ಇಷ್ಟಪಟ್ಟು ಕೊಡಬಯಸುವ ಒಟ್ಟು ಮೊತ್ತದ ಹಣವನ್ನು ಸಣ್ಣ ಸಣ್ಣ ಕಂತಿನ ರೂಪದಲ್ಲಿ ೨೦೧೫ರ ಮಾರ್ಚ್ ವರೆಗೂ ಪ್ರತಿ ತಿಂಗಳು ಸಂಗ್ರಹಿಸುವ ಯೋಜನೆಯನ್ನು ಮಾಡಲಾಗಿದೆ.

- ಅವಿರತವು ಈ ನಿಧಿಯನ್ನು ಹೊಂದುವುದರಿಂದ,

> ಅವಿರತ ವಾರ್ಷಿಕ ಕಾರ್ಯಕ್ರಮವನ್ನು ತಡೆಯಿಲ್ಲದೆ ನಡೆಸಿಕೊಂಡು ಹೋಗಬಹುದಾಗಿದೆ.

> ಕಾರ್ಪೋರೇಟ್ ಸಂಸ್ಥೆಗಳ, ಎಂ.ಎನ್.ಸಿ.ಗಳ ನಂಬಿಕೆ, ವಿಶ್ವಾಸವನ್ನೂ ಗಳಿಸಿ ಆ ಮೂಲಕ ಮತ್ತಷ್ಟು ನಿಧಿಯನ್ನು ಸಂಗ್ರಹಿಸಬಹುದು ಅಥವಾ ಅವರ ಸಹಭಾಗಿತ್ವವನ್ನು ಪಡೆಯಬಹುದು.



ನೋಟ್ ಪುಸ್ತಕ ವಿತರಣೆ: ಒಂದು ಸ್ವವಿಮರ್ಶೆ

ನಮ್ಮ ತಂಡದ ಬಹುಮುಖ್ಯ ವಾರ್ಷಿಕ ಕಾರ್ಯಕ್ರಮವಾದ ’ನೋಟ್ ಪುಸ್ತಕ ವಿತರಣೆ’ ಇಲ್ಲಿಯವರೆಗು ಯಶಸ್ವಿಯಾಗಿ ನಡೆದುಕೊಂಡು ಬಂದಿರುವುದಲ್ಲದೆ, ತನ್ನ ವ್ಯಾಪ್ತಿಯನ್ನೂ ವಿಸ್ತರಿಸಿಕೊಂಡಿದೆ. ಈ ಸಂದರ್ಭದಲ್ಲಿ, ತಂಡದ ಸದಸ್ಯರು ಈ ಕಾರ್ಯಕ್ರಮದ ಬಗ್ಗೆ ಸ್ವವಿಮರ್ಶೆ ನಡೆಸಿ, ತಮ್ಮ ತಮ್ಮ ಭಿನ್ನ ದೃಷ್ಟಿಕೋನವನ್ನು ಸಭೆಯಲ್ಲಿ ಚರ್ಚಿಸಿದ್ದು ಪ್ರಶಂಸಾರ್ಹವಾದದ್ದು. ಈ ನಿಟ್ಟಿನಲ್ಲಿ ಚರ್ಚಿಸಿದ ಎಲ್ಲಾ ಅಂಶಗಳು ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಪರಿಷ್ಕೃತ ರೂಪ ನೀಡುವುದಲ್ಲದೆ, ಈ ಕಾರ್ಯಕ್ರಮವನ್ನು ಶಾಶ್ವತಗೊಳಿಸಿ, ಪರಿಣಾಮಕಾರಿಯಾಗಿಸಬಲ್ಲದು.

- ನೋಟ್ ಪುಸ್ತಕ ವಿತರಣೆಯ ಸಂದರ್ಭದಲ್ಲಿ ಮಾತ್ರ ಸಂಬಂಧಪಟ್ಟ ಶಾಲೆಗಳೊಂದಿಗೆ ಸಂಪರ್ಕವಿಟ್ಟುಕೊಳ್ಳುವ ನಾವು, ನಮ್ಮ ಅಭ್ಯಾಸವನ್ನು ಉತ್ತಮಗೊಳಿಸಕೊಳ್ಳಬೇಕಿದೆ. ಪ್ರತಿ ತಂಡವೂ ತಾನು ಜವಾಬ್ದಾರಿ ವಹಿಸಿಕೊಂಡ ಶಾಲೆಯೊಡನೆ ವರ್ಷಪೂರ್ತಿ ನಿಕಟವಾದ ಸಂಪರ್ಕದಲ್ಲಿದ್ದು, ಅಲ್ಲಿನ ಅವಶ್ಯಕತೆಗಳ ಬಗ್ಗೆ, ನಾವು ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಸಲಹೆ, ಸೂಚನೆಗಳನ್ನು ಪಡೆದು ಅವುಗಳಿಗೆ ಪ್ರತಿಕ್ರಿಯಿಸಬೇಕಾಗಿದೆ.

- ಈಗಾಗಲೇ ನೋಟ್ ಪುಸ್ತಕಗಳ ಅಗತ್ಯವನ್ನು ವೈಜ್ನಾನಿಕವಾಗಿ ಅಭ್ಯಸಿಸಿ, ಅದರ ಅಧಾರದ ಮೇಲೆ ಪುಸ್ತಕ ವಿತರಣೆ ನಡೆಯುತ್ತಿದೆಯಾದರೂ, ನಾವು ಅನುಸರಿಸುತ್ತಿರುವ ಕ್ರಮವನ್ನು ಮತ್ತೊಮ್ಮೆ ಅವಲೋಕಿಸಿಕೊಳ್ಳಬೇಕಿದೆ.

- ಪುಸ್ತಕ ವಿತರಣೆಯ ಉಪಯೋಗ ಪಡೆಯಬೇಕಾಗಿರುವ ಮತ್ತಷ್ಟು ಹೊಸ ಶಾಲೆಗಳನ್ನು ಹಾಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಇದಕ್ಕಾಗಿ, ಈಗಾಗಲೇ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಸದಸ್ಯರು, ಇದರ ಬಗ್ಗೆ ತಮ್ಮ ತಮ್ಮ ಸ್ನೇಹಿತರ ಬಳಗದಲ್ಲಿ ಹಾಗೂ ಸಂಸ್ಥೆಗಳಲ್ಲಿ ಚರ್ಚಿಸಿ ಅವರನ್ನೂ ಕಾರ್ಯಕ್ರಮಕ್ಕೆ ಕರೆತರಬೇಕಾಗಿ ವಿನಂತಿ.

- ಈಗಾಗಲೇ, ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸಹಾಯಕ್ಕೆ ಎದುರುನೋಡುತ್ತಿರುವ ನಿಮ್ಮ ನಿಮ್ಮ ಸ್ನೇಹಿತರ ಬಳಗವನ್ನು ಅವಿರತದ ತೆಕ್ಕೆಗೆ ಸೇರಿಸಿಕೊಳ್ಳಬಹುದಾಗಿದೆ.

-ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅಥವಾ ಅದಕ್ಕೆ ಸಹಾಯ ಮಾಡುವ ಮುನ್ನ, ಸದಸ್ಯರ ಸ್ನೇಹಿತರು ಅಥವಾ ಸಂಸ್ಥೆಯವರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದರೆ, ಅವಿರತ ಅವರನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತದೆ.

- ವಿಕೇಂದ್ರಿಕರಣದಲ್ಲಿ ನಂಬಿಕೆಯಿರುವ ಅಶ್ವಥ್ ಸರ್ ಪ್ರಸ್ತಾಪಿಸಿದ ’ನಮ್ಮ ಶಾಲೆ – ನಮ್ಮ ಹೆಮ್ಮೆ’ ಎಂಬ ವಿಷಯ ಹಾಗೂ ಸತೀಶ್ ಸರ್ ಮತ್ತು ಶಶಿ ಸರ್ ಪ್ರಸ್ತಾಪಿಸಿದ ’ಒಂದು ಕುಟುಂಬ – ಒಂದು ಶಾಲೆ’ ಎಂಬ ವಿಷಯ ಆಸಕ್ತಿಕರವಾಗಿದೆ ಅಷ್ಟೇ ಅಲ್ಲ, ಸರಿಯಾದ ರೀತಿಯಲ್ಲಿ ಇದನ್ನು ಕಾರ್ಯರೂಪಕ್ಕಿಳಿಸಿದರೆ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ.

’ನಮ್ಮ ಶಾಲೆ – ನಮ್ಮ ಹೆಮ್ಮೆ’ – ಒಂದು ಶಾಲೆಯ ಉಸ್ತುವಾರಿ ವಹಿಸಿಕೊಂಡ ಸದಸ್ಯರ ಉಪತಂಡವು, ಪುಸ್ತಕ ವಿತರಣೆಗೆ ಬೇಕಾದ ಖರ್ಚು-ವೆಚ್ಚವನ್ನು ಸ್ವತಂತ್ರವಾಗಿ ಕ್ರೋಢೀಕರಿಸಬೇಕು. ಹೀಗೆ ಮಾಡುವುದರಿಂದ ಶಾಲೆಯ ಸಂಪೂರ್ಣ ಜವಾಬ್ದಾರಿ ತಂಡದ್ದಾಗುತ್ತದೆ. ಅಷ್ಟೇ ಅಲ್ಲ, ಆ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡು, ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಈ ಕಾರ್ಯಕ್ರಮವನ್ನು ನಿಭಾಯಿಸಬಹುದು.

’’ಒಂದು ಕುಟುಂಬ – ಒಂದು ಶಾಲೆ’ – ಆಯಾ ಊರಿನ ಸ್ಥಳೀಯರೂ ಸಹ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸವಂತೆ ಮಾಡುವ ಉದ್ದೇಶವಿರುವ ಯೋಚನೆಯಿದು. ನೋಟ್ ಪುಸ್ತಕ ವಿತರಣೆ ಕೇವಲ ಅವಿರತದ ಕಾರ್ಯವಲ್ಲ, ಇದು ನಿಮ್ಮ ಹಾಗೂ ನಿಮ್ಮ ಊರಿನ ಕಾರ್ಯಕ್ರಮ ಎಂದು ಅರಿವು ಮೂಡಿಸಿ, ಊರಿನ ಕುಟುಂಬದವರೂ ಸಹ ಇದರಲ್ಲಿ ಸಂಪೂರ್ಣ ಅಥವಾ ತಕ್ಕ ಮಟ್ಟಿಗಿನ ಜವಾಬ್ದಾರಿಯನ್ನು ವಹಿಸಿಕೊಳ್ಳಿಸುವುದು.



ವನ ಮಹೋತ್ಸವ / ಗಿಡ ನೆಡುವಿಕೆ:

ನಶಿಸಿಹೋಗುತ್ತಿರುವ ಪರಿಸರ, ಹೆಚ್ಚುತ್ತಿರುವ ಮಾಲಿನ್ಯದ ನಡುವೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿಯ ಧ್ವನಿಯೆತ್ತಿದ ನಮ್ಮ ಡಾಕ್ಟರ್ ಹರ್ಷ ಅವರ ಯೋಜನೆ ಸ್ವಾಗತಾರ್ಹ. ಈಗಾಗಲೇ, ಶಾಲಿಗನೂರಿನಲ್ಲಿ, ಶಾಲೆಯ ಆವರಣದಲ್ಲಿ ನೆಟ್ಟು ಬಂದಿದ್ದ ಗಿಡಗಳೆಲ್ಲಾ ಸೂಕ್ತ ಆರೈಕೆಯಿಲ್ಲದೆ ಸೊರಗಿರುವ ಅಥವಾ ಅಲ್ಲಿನ ಪಶುಗಳಿಗೆ ಆಹಾರವಾಗಿರುವ ಉದಾಹರಣೆಯಿದೆ. ಹೀಗಾಗಿ, ವನ ಮಹೋತ್ಸವದ ಅಂಗವಾಗಿ, ಅವಿರತ ನೆಡುವ ಸಸಿ, ಗಿಡಗಳನ್ನು ಪೋಷಿಸಿ, ಬೆಳೆಸಲು ಸ್ಥಳೀಯರ ಸಹಾಯ ಅತಿಮುಖ್ಯವಾದದು,

ವನ ಮಹೋತ್ಸವ ಎಂಬುದು ಒಂದು ಪ್ರತ್ಯೇಕ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕೋ ಅಥವಾ ನೋಟ್ ಪುಸ್ತಕ ವಿತರಣೆಯ ಸಮಯದಲ್ಲಿ ಪ್ರತಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು, ಅವುಗಳ ಆರೈಕೆಯ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿ ಬರುವುದೋ? ಎಂಬುದು ಈಗ ನಾವೆಲ್ಲ ಉತ್ತರ ಕಂಡುಕೊಳ್ಳಬೇಕಿರುವ ಪ್ರಶ್ನೆ.



ಇತರೆ:

- ನೋಟ್ ಪುಸ್ತಕ ವಿತರಣೆ ಹಾಗೂ ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ಅಗತ್ಯವಾಗಿ ಬೇಕಾಗಿರುವ ಹಣವನ್ನು ಕ್ರೋಢೀಕರಿಸಲು ವಿವಿಧ ಮಾರ್ಗಗಳನ್ನು ಯೋಚಿಸಬೇಕಿದೆ/ಚಿಂತಿಸಬೇಕಿದೆ.

ಉದಾಹರಣೆಗೆ, ದುಡ್ಡನ್ನು ದಾನವಾಗಿ ಕೇಳುವ ಬದಲಿಗೆ, ಮನೆಯಲ್ಲಿನ ಹಳೇ ಪೇಪರ್‍ಗಳನ್ನು ಉಚಿತವಾಗಿ ಪಡೆದು, ಅದನ್ನು ಮಾರಿ, ಅದರಿಂದ ಬರುವ ಹಣವನ್ನು ಶಾಶ್ವತ ನಿಧಿಗೋ ಅಥವಾ ಇತರೆ ಕಾರ್ಯಗಳಿಗೋ ಉಪಯೋಗಿಸಬಹುದು.

ಅಪಾರ್ಟ್‍ಮೆಂಟ್‍ಗಳಲ್ಲಿ ವಾಸಿಸುವ ಸದಸ್ಯರು, ಅಪಾರ್ಟ್‍ಮೆಂಟಿನ ಬೋರ್ಡ್ ಮೀಟಿಂಗ್‍ಗಳಲ್ಲಿ ಅವಿರತದ ಕಾರ್ಯಕ್ರಮದ ಬಗ್ಗೆ ತಿಳಿಸಿ, ನಿಧಿ ಸಂಗ್ರಹಣೆಗೆ ಸಹಾಯ ಮಾಡಬಹುದು. ಇದೇ ರೀತಿ, ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸದಸ್ಯರೂ ಸಹ.

- ಜವಾಬ್ದಾರಿಯುತ ಸಂಸ್ಥೆಯಾಗಿ, ಅರ್ಥಪೂರ್ಣ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡು, ಯಶಸ್ವಿಯಾಗಿ ನಿಭಾಯಿಸುತ್ತಿರುವ ಅವಿರತವನ್ನು Marketing ಮಾಡುವ ಕಡೆ ನಾವೆಲ್ಲ ಗಂಭೀರವಾಗಿ ಯೋಚಿಸಬೇಕು ಎಂಬುದೂ ಸಭೆಯಲ್ಲಿ ಚರ್ಚಿತವಾಯಿತು. ಹಾಗಾಗಿ, ಮುಖ್ಯ ವಿಷಯಗಳ ಕುರಿತು marketing materials ಅನ್ನು ಸಿದ್ದಪಡಿಸಲು ಶ್ರೀನಿಧಿ, ದೀಪಕ್.ಎಂ., ದೀಪಕ್.ಪಿ., ರವಿಚಂದರ್ ಹಾಗೂ ಡಾಕ್ಟರ್ ಹರ್ಷ ಇವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ.

- ಅವಿರತ ತಂಡದ ’ಶ್ರೀ ಕೄಷ್ಣ ಸಂಧಾನ’ ನಾಟಕದ ಪ್ರದರ್ಶನಗಳನ್ನು ಏರ್ಪಡಿಸಿ ಅದರ ಮೂಲಕವೂ ಶಾಶ್ವತ ನಿಧಿಗೆ ಅಥವಾ ನೋಟ್ ಪುಸ್ತಕ ವಿತರಣೆಗೆ ಹಣ ಸಂಗ್ರಹಿಸುವ ಯೋಚನೆಯೂ ಇದೆ.

-೨೦೧೩ರಲ್ಲಿ ಹಮ್ಮಿಕೊಳ್ಳಬೇಕಿರುವ ಕಾರ್ಯಕ್ರಮಗಳ ಪಟ್ಟಿಯೊಂದನ್ನು ಸಿದ್ದಪಡಿಸಬೇಕಿದೆ.

> ಶೈಕ್ಷಣಿಕ ಮಾರ್ಗದರ್ಶನ: ವರ್ಷಕ್ಕೆ ನಾಲ್ಕು ಕಾರ್ಯಾಗಾರವೆಂದು ನಿರ್ಧರಿಸಲಾಗಿದೆ. ಮುಖ್ಯ ತಂಡವು ಕಿರಣ್ ವಾಲಿ, ಜ್ಯೋತಿ, ಅಶ್ವಿನಿ ಹಾಗೂ ರೋಹಿತ್ ಇವರುಗಳನ್ನು ಒಳಗೊಂಡಿದ್ದು, ಕಾರ್ಯಾಗಾರದ ದಿನಾಂಕ, ಸ್ಥಳ ಇವುಗಳನ್ನು ನಿರ್ಧರಿಸಬೇಕಿದೆ.

> ೨೦೧೩ ರಲ್ಲಿ ಹಮ್ಮಿಕೊಳ್ಳಲು ಬಯಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನೂ ಸಿದ್ದಪಡಿಸಬೇಕಿದೆ. ಚಿತ್ರ ಪ್ರದರ್ಶನ,

ನಾಟಕ ಪ್ರದರ್ಶನ, ಸಂಗೀತ ಸಂಜೆ, ಇತರೆ…ಕಾರ್ಯಕ್ರಮ, ಅದರ ದಿನಾಂಕ, ಸ್ಥಳ, ಅತಿಥಿಗಳು, ಕಲಾವಿದರು, ಹೀಗೆ..

> ೨೦೧೩ ರಲ್ಲಿ ಉಚಿತ ವೈದ್ಯಕೀಯ ತಪಾಸಣೆಯನ್ನು ಹಮ್ಮಿಕೊಳ್ಳುವ ಯೋಚನೆಯಿದ್ದು, ಅದರ ಬಗ್ಗೆಯೂ ಸ್ಪಷ್ಟ ಯೋಜನೆಯನ್ನು ತಯಾರಿಸಬೇಕಿದೆ.

> ನಗರದಲ್ಲಿನ ಮಕ್ಕಳಿಗೆ, ಅನಿವಾರ್ಯವಾಗಿ ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ, ಕನ್ನಡ ಭಾಷೆ – ಸಂಸ್ಕೃತಿಯ ಪರಿಚಯ ಮಾಡಿಕೊಟ್ಟು, ಭಾಷೆಯನ್ನು ಅವರಿಗೆ ಆಪ್ತವಾಗಿಸಿ, ಆ ಮೂಲಕ ಅವರಲ್ಲಿ ಕನ್ನಡಾಭಿಮಾನ ಬೆಳೆಸುವಂತಹ ಕಾರ್ಯಕ್ರಮದ ಯೋಚನೆಯೊಂದು ಅಶ್ವಥ್ ಸರ್ ಕಡೆಯಿಂದ ಸ್ಪಷ್ಟ ರೂಪ ಪಡೆಯಬೇಕಿದೆ.,

> ಅವಿರತದ ವೆಬ್‍ಸೈಟ್ ಅನ್ನು ನಿಗದಿತವಾಗಿ update ಮಾಡುತ್ತಾ, ಸಕ್ರಿಯ ಸದಸ್ಯರ ಹೊರತಾಗಿಯೂ ಇತರ ಹಲವು ಸದಸ್ಯರಿಗೂ,ಕಾರ್ಯಕರ್ತರಿಗೂ ಅವಿರತದಲ್ಲಿನ ಆಗು-ಹೋಗುಗಳನ್ನು ತಿಳಿಸುವ ಅವಶ್ಯಕತೆಯಿದೆ.

ಅವಿರತದ ಬ್ಲಾಗ್ ಅನ್ನೂ ಸಹ create ಮಾಡಿ, ಅದರಿಂದ ಆಯ್ದ ಬರಹಗಳನ್ನು ಸೇರಿಸಿ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಪತ್ರಿಕೆಯೊಂದನ್ನೂ / ವಿಶೇಷಾಂಕವನ್ನು ತರುವ ಯೋಚನೆಯನ್ನೂ ಚರ್ಚಿಸಲಾಯಿತು.

> ಮಾಧ್ಯಮ ಮಿತ್ರರೊಂದಿಗೆ ಕೈ ಜೋಡಿಸುವುದರ ಮೂಲಕ ’ಅವಿರತ’ದ ಕಾರ್ಯಕ್ರಮಗಳನ್ನು ಹೆಚ್ಚಿನ ಜನರಿಗೆ ತಲುಪಿಸಿ, ಆ ಮೂಲಕ ಮತ್ತಷ್ಟು ಜನರನ್ನು ಅವಿರತಕ್ಕೆ ಬರಮಾಡಿಕೊಳ್ಳಬಹುದಲ್ಲವೇ? ಎಂಬ ವಿಷಯ ಪ್ರಸ್ತಾಪವಾದುದರಿಂದ ಅದರ ಸವಾಲುಗಳನ್ನು ಚರ್ಚಿಸಿ, ಅವುಗಳನ್ನು ನಿವಾರಿಸುವ ಮಾರ್ಗದ ಹುಡುಕಾಟವಾಗಬೇಕಿದೆ.

> ಇಷ್ಟೆಲ್ಲಾ ಯೋಜನೆಗಳ ನಡುವೆ, ಬಿಡುವು ಮಾಡಿಕೊಂಡು ವರ್ಷದಲ್ಲಿ ಕನಿಷ್ಟ ಒಂದು ಪ್ರವಾಸವನ್ನಾದರೂ ಹಮ್ಮಿಕೊಳ್ಳಲೇಬೇಕು. J

‘Some succeed because they are destined to, but few succeed because they are determined to…’

We, Aviratha, are determined!! J



‘ನೆಲೆ’ಯಲ್ಲಿ ಸಭೆ ಸೇರಿ, ’ನೆಲೆ’ ಕಂಡುಕೊಂಡು ಬೆಳೆಯಲು ನಾವೆಲ್ಲ ಆವಿಷ್ಕರಿಸಿರುವ ಇಷ್ಟೆಲ್ಲಾ ಅಂಶಗಳು, ವಿಷಯಗಳು, ನಮ್ಮ ನಮ್ಮ ಕಾಳಜಿಯ, ಸಾಮರ್ಥ್ಯದ, ಸಂಕಲ್ಪದ, ಪ್ರೀತಿಯ, ಪ್ರತಿಭೆಯ ಬೆಳಕಿನಲ್ಲಿ ರೂಪಾಂತರಗೊಂಡು ಮಾನವೀಯ ಅನುಕಂಪವನ್ನು, ಸಂಸ್ಕೃತಿಯೆಡೆಗಿನ ಅಭಿಮಾನವನ್ನು ಎತ್ತಿಹಿಡಿಯಬೇಕಾಗಿದೆ.