Saturday, April 20, 2013

ಮಾರೀ ಕಾಡು - ಯುಗಾದಿ - ಶ್ರೀ ಕೃಷ್ಣ ಸಂಧಾನ

ಈಚಿನ ದಿನಗಳಲ್ಲಿ ಬರೆಯುವುದಕ್ಕೆ ಸಾಧ್ಯವೇ ಆಗಿರಲಿಲ್ಲ. ಸಾಧ್ಯವೇ ಆಗಿರಲಿಲ್ಲ ಎನ್ನುವುದಕ್ಕಿಂತ, ನನ್ನ ಎಲ್ಲಾ ಸಮಯವನ್ನು ನಾಟಕಕ್ಕೆ ಮೀಸಲಿಟ್ಟಿದ್ದೆ ಎನ್ನುವುದೇ ಸರಿ. ಬೆಳಿಗ್ಗೆ ೪.೩೦ಕ್ಕೆ ನನ್ನ ದಿನಚರಿ ಪ್ರಾರಂಭವಾಗುತ್ತಿತ್ತು. ೫.೩೦ರ ವೇಳೆಗೆ, ಕಂಪೆನಿಯ ಗಾಡಿ ಬಂದು, ೬.೩೦ರ ವೇಳೆಗೆ ಆಫೀಸು ತಲುಪಿ, ೩.೩೦ರ ಹೊತ್ತಿಗೆ ಹೇಗಾದರೂ ಸರಿ (ಹಲವು ಬಾರಿ ಊಟ ತಪ್ಪಿಸಿಕೊಂಡಾದರೂ ಸರಿ) ಕೆಲಸ ಮುಗಿಸಿ ಅಥವಾ ಉಳಿದದ್ದನ್ನು ಮಾರನೇ ದಿನಕ್ಕೆ ಮುಂದೂಡಿ, ಆಫೀಸಿನಿಂದ ಹೊರಟರೆ ಮನೆ ತಲುಪುವ ವೇಳೆಗೆ ೫ ಆಗುತ್ತಿತ್ತು. ಮನೆಗೆ ಬಂದು ಕಂಪೆನಿಯ ಲ್ಯಾಪ್ ಟಾಪ್ ಅನ್ನು ಮನೆಯಲ್ಲಿರಿಸಿ, ವೀರೇಶ್ (ನಾಟಕದ ಗೆಳೆಯ) ಬರುವ ವೇಳೆಗೆ ರೆಡಿಯಾಗಿ, ೫.೪೫ ರ ವೇಳೆಗೆ ದಯಾನಂದ್ ಸಾಗರ್ ಕಾಲೇಜ್ ಬಳಿ ಇರುವ ಕೆ.ವಿ.ಸುಬ್ಬಣ್ಣ ಆಪ್ತ ರಂಗ ಮಂದಿರ ತಲುಪಿ, ೧೫-೨೦ ನಿಮಿಷ ವ್ಯಾಯಾಮ ಮಾಡಿ, ಆ ನಂತರ ನಮ್ಮ 'ಮಾರೀಕಾಡು' ನಾಟಕದ ತಾಲೀಮಿನಲ್ಲಿ ತೊಡಗಿಕೊಳ್ಳುತ್ತಿದ್ದೆವು. ಸೂರಿ ಸರ್ ನಿರ್ದೇಶನದಲ್ಲಿ ಆಸಕ್ತಿಕರವಾಗಿ ೮.೩೦ ರ ತನಕ ತಾಲೀಮು ನಡೆಯುತ್ತಿತ್ತು.  ಅಲ್ಲಿಂದ ಅರ್ಧ ಗಂಟೆಗಳ ಕಾಲ ನಾಟಕದ ಹುಡುಗರ ಜೊತೆ ಹರಟೆ. ೯ ಕ್ಕೆ ಅಲ್ಲಿಂದ ಹೊರಟು ಮನೆ ತಲುಪಿ ಊಟ ಮಾಡಿ, ರೂಮ್ ಸೇರಿದರೆ ಓದುತ್ತಿದ್ದದ್ದು ಕೂಡ ನಾಟಕಗಳನ್ನೇ; ೧೧ ರ ತನಕ. ಆ ನಂತರ ನಿದ್ದೆ. (ವಾರಾಂತ್ಯದಲ್ಲಿ ಬಿಡುವಾದರೂ, ಸಂಪೂರ್ಣ ಸಮಯವನ್ನು ಒಂದು ಪುಸ್ತಕ ರೂಪುಗೊಳಿಸುವ ಕಾರ್ಯಕ್ಕೆ ಮೀಸಲಿಡುತ್ತಿದ್ದೆ)  ಹೀಗೆ, ಸತತ ಒಂದೂವರೆ ತಿಂಗಳು 'ಮಾರೀಕಾಡು' ನಾಟಕಕ್ಕೆ ತಯಾರಾಗಿದ್ದು. ಆ ತಯಾರಿಯ ನಡುವೆ ಬಿಡುವು ದೊರೆತರೆ, ಸಮಯ ಕಳೆಯುತ್ತಿದ್ದದ್ದು ಕೂಡ ರಂಗ ಶಂಕರದಲ್ಲಿ ನಡೆಯುತ್ತಿದ್ದ ಇತರೆ ನಾಟಕಗಳನ್ನು ನೋಡಿಯೇ ಹೊರತು, ಯಾವುದೇ ಸಿನಿಮಾ, ಔತಣ ಕೂಟಗಳಲ್ಲಲ್ಲ. ಈ ಸಮಯದಲ್ಲೇ ನಾಟಕದ ಸೂಕ್ಷ್ಮತೆಗಳ ಬಗ್ಗೆ, ಅಭಿನಯದ ಬಗ್ಗೆ, ರಂಗ ವಿನ್ಯಾಸದ ಬಗ್ಗೆ, ಹೀಗೆ ಒಬ್ಬ ಸಾಮಾನ್ಯ ಪ್ರೇಕ್ಷಕನ ತಿಳುವಳಿಕೆಗೂ ಮೀರಿ ಇರುವಂತಹ ನಾಟಕದ ಇತರೆ ಆಯಾಮಗಳ ಬಗ್ಗೆ ನನ್ನ ಅರಿವಿನ ಬಾಗಿಲು ತೆರೆದುಕೊಂಡದ್ದು. ಆ ಗ್ರಹಿಕೆಯನ್ನು ವಿವರವಾಗಿ ಬರೆಯುವ ಆಸೆಯಿದೆ. ನನ್ನ ನೆನಪಿನ ದಾಖಲೆಗಾಗಿಯಾದರೂ ಬರೆಯಲೇ ಬೇಕು. :)

ಆ ನಾಟಕ ಮುಗಿದ ಕೂಡಲೇ, ನಮ್ಮ 'ಅವಿರತ' ದ ನಾಟಕ 'ಶ್ರೀ ಕೃಷ್ಣ ಸಂಧಾನ' ನಾಟಕದ ತಯಾರಿ!! ಆದರೆ, ನಿಗದಿಪಡಿಸಿದಂತೆ, 'ಶ್ರೀ ಕೃಷ್ಣ  ಸಂಧಾನ' ನಾಟಕದ ಪ್ರದರ್ಶನವಾಗಲಿಲ್ಲ. ಶ್ರೀ ರಾಮ ಸೇನೆ, ಹಿಂದೂ ಜಾಗರಣಾ ವೇದಿಕೆ, ಹೀಗೆ ಸ್ವಯಂಘೋಷಿತ ಧರ್ಮೋದ್ದಾರಕರ ಅರ್ಥಹೀನ ದಾಂಧಲೆಯ ಕಾರಣ ನಮ್ಮ ನಾಟಕ ಪ್ರದರ್ಶನವನ್ನು ಮುಂದೂಡ ಬೇಕಾಯಿತು.  ನಾಟಕದ ಉದ್ದೇಶ, ಅದರ ಹಿನ್ನೆಲೆಯನ್ನು ತಿಳಿದುಕೊಳ್ಳುವಷ್ಟು ತಾಳ್ಮೆ ತೋರದವರ ಅವಿವೇಕಿತನಕ್ಕೆ ನಮ್ಮೆಲ್ಲರ ಶ್ರಮ ವ್ಯರ್ಥವಾಯಿತು.  ಸತ್ಯ ತಿಳಿದುಕೊಳ್ಳುವ ಪ್ರಯತ್ನಪಡಲೂ ಸಾಧ್ಯವಾಗದ ದುರ್ಬಲ ಜನರೆದುರು ವೈಚಾರಿಕತೆಗೆ ಅವಕಾಶವಿಲ್ಲ ಎಂದು ಅರಿತ ಅವಿರತ ನಮ್ಮ ಆತ್ಮಾಭಿಮಾನವೂ ಉಳಿದು, ಬೆಳೆಯುವಂತೆ; ಅವರ ತಿಕ್ಕಲುತನವನ್ನೂ ತಿರಸ್ಕರಿಸುವಂತೆ  ತಕ್ಕ ತೀರ್ಮಾನವನ್ನು ತೆಗೆದುಕೊಂಡು, ನಾಟಕ ಪ್ರದರ್ಶನವನ್ನು ಮುಂದೂಡಿತು.



ಆನಂತರವಷ್ಟೆ, ಬರೆಯಲು ಸಮಯ ಮಾಡಿಕೊಂಡದ್ದು. ಆಗ ಬರೆದ ಸಾಲುಗಳೇ ಇವು.... ಚುಟುಕಾಗಿವೆ....        
 
 
ಕಂಬಾರರ 'ಮಾರೀಕಾಡು'
 
ಶಂಕರನ ರಂಗದ ಮೇಲೆ

 'ಸೂರೀ ಕಾಡು' ಆಗುವ ವೇಳೆಗೆ

ಬರಡು ಮರಗಳಂತಿದ್ದ ನಮ್ಮಲ್ಲಿ

ಹಸಿರು ಚಿಗುರೊಡೆಯುವ

ಖುಷಿ ಮೂಡಿತ್ತು.                                                                                                                                                                               ----------------------------------------------------------------------            
ಮಾವು ಚಿಗುರುವ ಕಾಲದ ಹಬ್ಬಕ್ಕೆ,

ಸಿಹಿ - ಕಹಿಯ ಜೊತೆಗೆ,

     ಮುಪ್ಪಾಗದ ಮರದ ಹುಳಿಯನ್ನು

ಚಪ್ಪರಿಸುವಂತೆ ಮಾಡಿ,

'ಏನಿದು ಸರ್?' ಎಂದು ಕೇಳಿದರೆ,

ತುಂಟನಂತೆ ಕಣ್ಣೊಡೆದು, ತುಟಿಯಂಚಿನಲಿ ನಕ್ಕರು

ನಮ್ಮ ಸೂರಿ ಸರ್ರು...
 
(ರಂಗ ಶಂಕರದಲ್ಲಿ ಸೂರಿ ಸರ್ ರೂಪಿಸಿದ್ದ ರಂಗ ಯುಗಾದಿಯ ಕುರಿತಾಗಿ) 
  -----------------------------------------------------------------------------
 
ಬೇರನ್ನು ಮರೆತು, ರೆಂಬೆಯನ್ನಷ್ಟೇ ಪರೀಕ್ಷಿಸುವವರನ್ನು

ಅವಿವೇಕಿಗಳೆನ್ನದೆ ವಿಧಿಯಿಲ್ಲ:


'ಕಟ್ಟುವುದು ಕಷ್ಟ, ಮೆಟ್ಟುವುದು ಸುಲಭ' ಎಂದರಿತ

ವಿಚಾರಿಗಳು ಎಡವಲು ಸಾಧ್ಯವಿಲ್ಲ! :)
 
 



ರಾಮ...ರಾಮ....

ಸೇನಾನಿಗಳಿವರಲ್ಲ; ಜಾಗೃತಿ ಮೂಡಿಸುವುದಿಲ್ಲ.
 
ವಿಚಾರ ಕೇಳುವಷ್ಟು ತಾಳ್ಮೆಯಿಲ್ಲ,

ಆಲೋಚಿಸುವಷ್ಟು ವಿವೇಕಿಗಳಲ್ಲ;

ಮೂಲ ತಿಳಿಸದ ಮುಖಹೇಡಿಗಳ ಸಂದೇಶಕ್ಕೆ

ವ್ಯಾಘ್ರರಾಗುವ ಇವರು

ನಮ್ಮೊಳಗೇ ಇರುವ ಪ್ರತಿಗಾಮಿಗಳು;

ಸಂಸ್ಕೃತಿಯ ವಿಸ್ತಾರಕ್ಕೆ, ಸಹಬಾಳ್ವೆಯ ಸಾಕಾರಕ್ಕೆ

ಅಡ್ಡಿ ಮಾಡುತ್ತಿರುವ ಸಂಕುಚಿತ ಮನಗಳು

No comments:

Post a Comment