Thursday, August 5, 2010



ಮುಗಿಯದಿರಲಿ ಬಂಧನ.......


ಈ ಪ್ರಪಂಚದಲ್ಲಿ ನಿರೀಕ್ಷೆಗಿಂತ ದೊಡ್ಡ ನೋವು ಇನ್ನೊಂದಿಲ್ಲ. ಹೌದು, ನಿರೀಕ್ಷೆಯೇ ಎಲ್ಲ ನೋವಿಗೆ ಕಾರಣ. ಅವತ್ತು ಪ್ರತಿಸಲದಂತೆ ಈ ಸಲ ಕೂಡ ನನ್ನ ಹುಟ್ಟುಹಬ್ಬದಂದು ನಾನು ನಿನ್ನ ಕರೆಗಾಗಿ ಕಾಯುತ್ತಾ ಇದ್ದೆ. ನಿನ್ನ ಒಂದೇ ಒಂದು ಫೋನ್ ಕರೆಗೆ, ಶುಭಾಷಯದ ಮಾತಿಗೆ ನಾನಿಲ್ಲಿ ಕಾದು ಕೂತಿದ್ದಾಗಲೇ, ನೀನು ಅಲ್ಲಿ ಮದುವೆಯ ಸಡಗರದಲ್ಲಿ ಇರಬಹುದು...!!! ನಿನ್ನ ಗೆಳೆಯರಿಗೆ, ನೆಂಟರಿಷ್ಟರಿಗೆಲ್ಲ ಮದುವೆಯ ಕರೆಯೋಲೆಯನ್ನು ಹಂಚುತ್ತಿರಬಹುದು...ನಗುವಿನ ಮುಖವಾಡದೊಂದಿಗೆ, ಮನದೊಳಗಿನ ನೋವು ಯಾರಿಗೂ ಕಾಣದಂತೆ, ತಿಳಿಯದಂತೆ......


ಹೌದು, ನೀನು ಈವಾಗ ಇನ್ನೊಬ್ಬನನ್ನು ಮದುವೆ ಆಗೋಕೆ ಹೊರಟ್ಟಿದ್ದೀಯಾ....ಅಲ್ಲಲ್ಲ, ಈ ಕ್ರೂರ ವಿಧಿ ಹಾಗೆ ಮಾಡಿಸುತ್ತಿದೆ. ನಾನಿಲ್ಲದ ಕನಸನ್ನೂ ಕಾಣದ ನಿನ್ನನ್ನು, ನಾನಿಲ್ಲದ ಬದುಕಿಗೆ ತಳ್ಳುತ್ತಿದೆ. ಪರಿಸ್ಥಿತಿಯ ಕೈಗೊಂಬೆಗಳಾಗಿರುವ ನಾವು ಇದ್ಯಾವುದನ್ನು ಪ್ರಶ್ನಿಸುವ ಸ್ಥಿತಿಯಲ್ಲಿ ಇಲ್ಲ.

ಆದರೆ, ಒಂದು ವಿಷಯ ನೆನಪಿಟ್ಟುಕೋ ಗೆಳತಿ, ನೀನು ಬೇರೆಯವರ ಹೆಂಡತಿ/ಬಾಳ ಸಂಗಾತಿ ಆಗುತ್ತಿರುವ ಈ ಕ್ಷಣದಲ್ಲಿ ಕೂಡಾ ನಾ ನಿನ್ನನ್ನು ಪ್ರೀತಿಸುತ್ತಾ ಇದ್ದೀನಿ. ಇನ್ನು ಮುಂದೆ ಕೂಡ ಪ್ರ್ರೀತಿಸುತ್ತಾ ಇರುತ್ತೇನೆ. ಪ್ರೀತಿಗೆ ಮದುವೆಯೇ ಕೊನೆಯಲ್ಲ. ಪರಿಶುದ್ದ ಪ್ರೀತಿಗೆ ಯಾವುದೇ ಬಂಧದ ಅಡೆತಡೆಯಿಲ್ಲ. ಅದು ಹರಿಯುವ ನೀರಿನಂತೆ; ಸದಾಕಾಲ ಶಾಂತವಾಗಿ ಹರಿಯುತ್ತಲೇ ಇರುತ್ತದೆ. ನೀನು ಬರದೇ ಹೋಗಿದ್ದರೆ, ಈ ಹಾದಿಗೆ, ಹರಿವ ನದಿಗೆ, ಬೀಸುವ ಗಾಳಿಗೆ, ಸುರುಯುವ ಮಳೆಗೆ, ನನ್ನ ಬಾಳಿಗೆ ಅರ್ಥವೇ ಇರುತ್ತಿರಲಿಲ್ಲವೇನೋ... ನೀನು ನನ್ನ ಪ್ರೀತಿಗೆ ’ಹೂಂ’ ಅಂದ ದಿನದಿಂದ ಎದೆಯ ಬಾಗಿಲಲ್ಲಿ ಹೊಂಗನಸುಗಳ ರಂಗೋಲೆ ಬಿಡಿಸುತ್ತಾ ಸಂಭ್ರಮಿಸಿದ್ದೆ.

ಆಗಸದಲ್ಲಿರುವ ಬೆಳ್ಳಿಚುಕ್ಕಿಗಳನ್ನು ಸೇರಿಸಿ, ಸುಂದರವಾದ ಚಿತ್ತಾರ ಬಿಡಿಸುವುದನ್ನು ಆ ದೇವರು ಮರೆತಿದ್ದಾನ..?!! ಗೊತ್ತಿಲ್ಲ. ಆದರೆ, ಪರಸ್ಪರ ಮೆಚ್ಚುವ, ಪ್ರೀತಿ ತುಂಬಿದ ಎರಡು ಹೃದಯಗಳನ್ನು ಸೇರಿಸಲು ಆ ದೇವರು ಖಂಡಿತ ಮರೆತಿದ್ದಾನೆ...ನಮ್ಮಿಬ್ಬರ ಪ್ರೀತಿಗೆ ಯಾವುದೇ ಒಬ್ಬ ವ್ಯಕ್ತಿ ಅಡ್ಡಿಯಾಗಿರುತ್ತಿದ್ದರೂ, ನಾವು ಜೊತೆಯಾಗ ಬಹುದಾಗಿತ್ತು, ಒಟ್ಟಾಗಿ ಬಾಳಬಹುದಾಗಿತ್ತು. ಆದರೆ, ಈ ಜಾತಿ, ಕುಟುಂಬಗಳ ಆಚಾರ-ವಿಚಾರ ಇವುಗಳ ಕಾಲಡಿಗೆ ಸಿಕ್ಕು ನಮ್ಮ ಪ್ರೀತಿ ನಲುಗಿ ಹೋಯಿತು; ಒಂದಿಷ್ಟೂ ಪ್ರತಿರೋಧ ತೋರದೆ... ಎದೆಯ ತುಂಬೆಲ್ಲಾ ಗಾಯ ಮಾಡಿದ ವಿಧಿಯ ಆಟವನ್ನು ನೆನೆ ನೆನೆದು ರಕ್ತ ಕುದಿಯುತ್ತದೆ, ಅದರ ಬೆನ್ನ ಹಿಂದೆಯೆ ನಮ್ಮ ಅಸಹಾಯಕ ಸ್ಥಿತಿ ನೆನೆದು ಮನ ಮರುಗುತಿದೆ....

ನಮ್ಮ ಇಷ್ಟು ದಿನದ ಒಡನಾಟ, ನಾವಾಡಿದ ಮಾತುಗಳು, ನಾವು ಕಳೆದ ಕ್ಷಣಗಳು, ಇವುಗಳನ್ನೆಲ್ಲಾ ಮರೆಯುವುದಾದರೂ ಹೇಗೆ...!?! ಮನದ ಹಿತ್ತಲಲ್ಲಿ ನಮ್ಮೆಲ್ಲಾ ಭಗ್ನ ಕನಸುಗಳನ್ನು ಹೂತಿಡಬಹುದೇ...?! ಕಾಲ ಕಳೆದಂತೆ ಕನಸನ್ನು ಮರೆಯಬಹುದು, ಕಷ್ಟವಾದರೂ ನಿನ್ನನ್ನು ಕಾಣದ ನೋವನ್ನು ಸಹಿಸಬಹುದು. ಆದರೆ, ಅನುಭವ ತಂದ ಪ್ರೀತಿಯನ್ನು, ಪ್ರೀತಿ ತಂದ ನಿನ್ನನ್ನು ಹೇಗೆ ತಾನೆ ಮರೆಯಲಿ....?!!


ಒಂದಂತೂ ನಿಜ ಗೆಳತಿ, ನಾವಿಬ್ಬರೂ ಪರಿಶುದ್ದ ಮನಸ್ಸಿನಿಂದ ಪ್ರಿತಿಸಿದವರು. ದೀಪದ ಹುಳು ಬೆಳಕಿನ ಮೇಲಿನ ಮೋಹದಿಂದ ತನ್ನನ್ನೇ ತಾನು ಸುಟ್ಟುಕೊಳ್ಳುವಂತೆ ಪ್ರೀತಿಯಲ್ಲಿ ಬರೀ ನೋವು, ವೇದನೆ ಇದೆ ಅಂತ ಗೊತ್ತಿದ್ದರೂ ನಾವಿಬ್ಬರು ಪ್ರೀತಿಸಿದೆವು....ಅದುವೇ, ನಿಷ್ಕಲ್ಮಶ, ನಿಸ್ವಾರ್ಥ ಪ್ರೀತಿ ಎಂಬುದು ನನ್ನ ನಂಬಿಕೆ...

ಗೆಳತಿ, ನೀನು ನನಗೆ ಹುಟ್ಟುಹಬ್ಬದ ಶುಭಾಷಯ ತಿಳಿಸದಿರಬಹುದು, ಆದರೆ ನಿನ್ನು ಮದುವೆಗೆ ಶುಭಾಷಯಗಳನ್ನು ಮುಂಚಿತವಾಗಿಯೇ ತಿಳಿಸುತ್ತಿದ್ದೇನೆ...


ಸ್ವರ್ಗದಲ್ಲಿ ನಿಶ್ಚಯವಾಗಿರುವ ಮದುವೆ ನಿಮ್ಮದು,
ಸುಖ, ಶಾಂತಿ, ನೆಮ್ಮದಿಯ ಬಾಳು ನಿಮ್ಮದಾಗಲಿ,
ಪ್ರೀತಿ ತುಂಬಿದ ನಿಮ್ಮ ಸಂಸಾರ ಸ್ವರ್ಗವನ್ನು
ಈ ಭೂಬಿಯ ಮೇಲೆ ನಾವೆಲ್ಲ ಕಾಣುವಂತಾಗಲಿ..


-ಇಂತಿ ನಿನ್ನ ಪ್ರೀತಿಯ....

Wednesday, July 21, 2010

ಅಂದು ನೀ ಹೋದದ್ದನ್ನು ಸರಿಯಾಗಿ ವಿವರಿಸಲು ಒಂದೇ ಒಂದು ಪದ ಸಿಗಲಿಲ್ಲ...


‘ಮುಂಗಾರು ಮಳೆ’, ‘ಗಾಳಿಪಟ’, ‘ಮನಸಾರೆ’ ಚಿತ್ರಗಳ ಮೂಲಕ ಅಪ್ಪಟ ತಾಜಾತನದ, ಅದ್ಭುತ ಹಿಟ್ ಚಿತ್ರಗಳನ್ನು ಕೊಟ್ಟು ಯುವ ಜನಾಂಗವನ್ನು ಮತ್ತೆ ಕನ್ನಡ ಚಿತ್ರಗಳತ್ತ ಸೆಳೆದ ಶ್ರೇಷ್ಠ ನಿರ್ದೇಶಕ ಯೋಗರಾಜ್ ಭಟ್, ಈಗ ಅವರ ಲೇಟೆಸ್ಟ್ ಚಿತ್ರ "ಪಂಚರಂಗಿ" ಯ ಬಿಡುಗಡೆಯ ಗಡಿಬಿಡಿಯಲ್ಲಿದ್ದಾರೆ. ಅಗಾಧ ಪ್ರತಿಭೆಯ, ವಿಕ್ಷಿಪ್ತ ವ್ಯಕ್ತಿತ್ವದ, ತಮ್ಮ ಲೇವಡಿ ಮಾಡುವ ಸಂಭಾಷಣೆಯಿಂದಲೇ ಪ್ರೇಕ್ಷಕರನ್ನು ಸೆಳೆಯುವ ಯೋಗರಾಜ್ ವಿಭಿನ್ನ ಅಭಿವ್ಯಕ್ತಿಯ ಕವಿ, ಕತೆಗಾರ, ಗೀತಕಾರ ಕೂಡ. ಅವರು ಬರೆದಿರುವ ಒಂದು ಪದ್ಯ ಇಲ್ಲಿ ನಿಮಗಾಗಿ.


ಮುಂದುವರಿಯುವುದು...

ನೀನು ಆ ದಿನ ಅಲ್ಲಿ
ಕಂಡಾಗ ಅನಿಸಿದ್ದಿಷ್ಟು.


ಆ ಕಪ್ಪು ಕೈನೆಟಿಕ್ ನಿಮ್ಮಪ್ಪ ಕೊಡಿಸಿರಬೇಕು,
ಆ ನಿವೃತ್ತ ಅಪ್ಪನ ಪೆದ್ದುತನ ನಿನಗೆ ತುಂಬಾ ಇಷ್ಟವಿರಬಹುದು,


ನಿಂಗೊಬ್ಬ ಅಣ್ಣ, ಅವನಿಗೊಂದಿಷ್ಟು ಸಂಬಳ, ಕನಿಷ್ಟ ಎರಡು ಬ್ಯಾಂಕು ಸಾಲಗಳು,
ಒಂದು ಕಿತ್ತ ಅಮರ ಪ್ರೀತಿ, ಒಂದು ಗ್ಯಾಸು ಕೂರಿಸಿದ ಕಾರು ಇದ್ದಿರಬೇಕು...


ಕದ್ದು ಚಿಕನ್ ತಿನ್ನುವ, ಬಿಯರ್ ಕುಡಿವ ತಮ್ಮ ಇದ್ದಿರಬಹುದು...
ಅವನ ಕುಡಿಮೀಸೆ ಕಂಡರೆ ಅದೇನೋ ಸಣ್ಣ ರೇಜಿಗೆ ನಿನಗೆ...


ನಿನ್ನನ್ನು ಕ್ಯಾರೇ ಅನ್ನದ ಒಬ್ಬ ತಂಗಿ ಇದ್ದಾಳೇನೋ... ಅವಳು
ನಿನಗಿಂತ ಎತ್ತರ ಎಂದು ಅವಳು ನಿಂಗಾಗಲ್ಲ... ಅವಳು
ಕನ್ನಡಿ ಮುಂದಿದ್ದರೆ ಅದೇನೋ ಅಸಹನೆ ನಿನಗೆ...


ನಿಮ್ಮಪ್ಪನಿಗೆ ಇದಕ್ಕಿಂತ ಜಾಸ್ತಿ ಮಕ್ಕಳಿರಲಾರರು...
ಅಮ್ಮನಿಗೆ ಸಕ್ರೆ ಖಾಯಿಲೆ, ಇಳಿ ಹೊಟ್ಟೆ... ಹಸಿರು ಕಲರ್
ಸ್ವೆಟರ್‌ನಲ್ಲಿ ಆಕೆ ದಿನಾ ಬೆಳಗ್ಗೆ ಪಾರ್ಕೊಂದರಲ್ಲಿ ಹ್ಹಾ ಹ್ಹಾ ಎನ್ನುತ್ತಿರಬಹುದು...

ಮಗಳಿಗೆ ಅಮೆರಿಕಾ ಕೆಲಸ ಸಿಕ್ಕರೂ ಹೋಗದ ಬಗ್ಗೆ
ಅಮ್ಮ ಅಲ್ಲಿ ಇಲ್ಲಿ ಹೇಳಿದರೆ ನಿನ್ನಲ್ಲಿ ವಾಂತಿಯಂತಹ ತಿರಸ್ಕಾರ...

ಸಾನಿಯಾ ಮಿರ್ಜಾ ನಿನಗಿಷ್ಟವಿಲ್ಲ... ಅವಳಂತೆ
ಮೂಗುತಿ ಹಾಕುವ ಹುಡುಗಿಯರ ಬಗ್ಗೆ ಅಸಡ್ಡೆ ನಿನಗೆ...


ಕನ್ನಡ ಹಾಡುಗಳು ಅಷ್ಟಾಗಿ ಇಷ್ಟವಿಲ್ಲವೋ ಏನೋ...
ಯಾವುದೋ ಹಾಲಿವುಡ್ ನಟ ನಿಂಗಿಷ್ಟ - ಹೆಸರು ತಕ್ಷಣ ನೆನಪಾಗಲ್ಲ...


ಸಲ್ಮಾನ್ ಖಾನ್ ಬಗ್ಗೆ ಒಂಥರಾ ತಿಳಿ ಬೇಸರ... ಸಹೋದ್ಯೋಗಿಯೊಬ್ಬನ
ಬಟ್ಟೆ ಆಯ್ಕೆ ಇಷ್ಟ... ಅವನ ಬಕ್ಕ ಹೃದಯ ಆಗದೇನೋ...
ಯಾವುದೋ ಇಬ್ಬರು ಗಂಡಸರೂ ಅಲ್ಲದ, ಹುಡುಗರೂ ಅಲ್ಲದ,
ಕಾಫಿ ಡೇ ಕಮಂಗಿಗಳು- ಐ ಲವ್ ಯೂ - ಎಂದು ಆರ್ತನಾದ
ಮಾಡದಂತೆ ನೀ ತಡೆಹಿಡಿದಿರಬಹುದು...


ನಿನ್ನ ಪ್ರಿಪೇಯ್ಡ್ ಮೊಬೈಲಿನ ತುಂಬಾ
ಗುಡ್ ಮಾರ‍್ನಿಂಗ್ ಹಾಗೂ ಜೀವನ ಸುಂದರ-
ಎಂಬ ಗೆಳತಿಯರ ಎಸ್ಸೆಮ್ಮೆಸ್ಸುಗಳು...

ಕೆಲವು ಪೋಲಿ ಮೆಸೇಜುಗಳನ್ನು ನೆನಪಿಟ್ಟುಕೊಂಡು ನೀ
ಅಳಿಸಿ ಹಾಕಿರುವೆ...
ಮೊಬೈಲಿನ ಹೆಸರು ಪಟ್ಟಿಯಲ್ಲಿ ಗಂಡಸರಿಗೆಲ್ಲ ಆಡ್ಡನಾಮ...


ವ್ಯಾನಿಟಿಯಲ್ಲೆರಡು ಬಣ್ಣದ ಕ್ಲಿಪ್ಪುಗಳು, ತುಂಡು ಬಿಳಿ ಕರ್ಚೀಪು,
ಸ್ಟೇಫ್ರೀ, ಲಿಪ್‌ಸ್ಟಿಕ್ಕು, ಒಂದೆರಡು ಟೈಲರ್ ರಶೀತಿ,
ಯಾವುದೂಕಳೆಯಬಾರದೆಂದು ಪೇರಿಸಿದ ಚೀಟಿರಾಶಿ, ಬಿಂದಿ ಪ್ಯಾಕೆಟ್ಟು, ದುಂಡುಮುಳ್ಳಿನ
ಬಾಚಣಿಗೆ, ಎಮರ್ಜೆನ್ಸಿ ಐನೂರರ ಅನಾಥ ನೋಟುಗಳು, ಎಟಿಎಮ್ ಕಾರ್ಡು,
ಯಾವ ಖಾಯಿಲೆಗೋ ಗೊತ್ತಿಲ್ಲದ ಹಳದಿ ಬಣ್ಣದ ಮಾತ್ರೆಪಟ್ಟಿ...!


ಯಾವುದಕ್ಕೂ ಒಬ್ಬ ಜೊತೆಗಿದ್ದರೆ ಹೇಗೆಂಬ ಹುಡುಗಾಟ
ಇದೆಅವನ್ಯಾರು ಗೊತ್ತಿಲ್ಲ... ಯಾಕೋ
ಒಮ್ಮೊಮ್ಮೆಎಲ್ಲರೂ ಇಷ್ಟವಾಗಿ ಇಳಿಸಂಜೆಯಷ್ಟೊತ್ತಿಗೆ ಯಾರೂ
ಬಿಲ್‌ಕುಲ್ ಬೇಡವಾಗುವ ಸನ್ಯಾಸಿನಿಯ
ಪೂಸಿನಲ್ಲಿಅದೀನೂ ಸುಖ ಇರಬಹುದು ನಿನಗೆ...!

ನೀನಾಗಿ ಯಾರನ್ನಿಷ್ಟಪಡಲೂ ನಿಂಗಿಷ್ಟವಿಲ್ಲ...
ಯಾರಾದರೂ ನಿನ್ನಿಷ್ಟಪಟ್ಟರೆ
ಕೊಲೆಮಾಡಿಬಿಡುವ ಕೋಪ ನಿಂಗೆ...
ನೀನು ಹೇರ್‌ಬ್ಯಾಂಡ್ ಹಾಕಿಕೊಳ್ಳುವ
ಗತ್ತಿನಲ್ಲಿಮುಚ್ಕೊಂಡು ನಿಮ್ ಕೆಲ್ಸ ನೋಡ್ಕೊಳಿ
-ಎಂಬ ಮುದ್ದು ಸಂದೇಶ...


ಗಾಡಿಯ ಕಿಕ್ ಹೊಡೆವಾಗ ಸೈಬರ್
ಕೆಫೆಯಲ್ಲಿಏನನ್ನೋ ಕದ್ದು ನೋಡಿದ ನೆನಪಿನ ಮುಗ್ಧ ನಗು
ನಾನಿನ್ನೂ ನಿನ್ನ ಬಗ್ಗೆ-ಸಾಕಷ್ಟು ಕಲ್ಪಿಸಿಕೊಳ್ಳುವುದಿತ್ತು
ನಿನ್ನೆಲ್ಲದನ್ನು ಮೀರಿದ ಹೆಣ್ತನದ ನಾಜೂಕನ್ನೆಲ್ಲ
ಬೆದೆಗೆ ಬಂದಂತೆ ಬಣ್ಣಿಸುವ ತೀಟೆಯಿತ್ತು...

ಯಾಮಾರಿ- ಮಳೆನೀರ ಮುಚ್ಚಿಹಿಡಿದ
ಮುಗಿಲಿನ ಮೌನ ನಿನ್ನಲ್ಲಿ -
ಎಂದೆಲ್ಲ ಬರೆದು ನಾ ತುಂಬಾ
ಗಂಭೀರ ಕವಿಯಾಗಿ
ಬಿಡುವ ದುರಂತ ಸಾಧ್ಯತೆ ಇತ್ತು...!


ಅಷ್ಟರಲ್ಲಿ ನೀ ಕೈನೆಟಿಕ್ ಏರಿ ಹೊರಟು ಹೋದೆ.
ಅಂದು ನೀ ಹೋದದ್ದನ್ನು ಸರಿಯಾಗಿ ವಿವರಿಸಲು
ಒಂದೇ ಒಂದು ಪದ ಸಿಗಲಿಲ್ಲ...

ಈ ಕವಿತೆಯಲ್ಲದ್ದನ್ನು ಮುಗಿಸಲು
ಕೊನೆಗೂ ನನಗೊಂದು ಕೊನೆಯ ಸಾಲು ಸಿಗಲಿಲ್ಲ....


-ಯೋಗರಾಜ್ ಭಟ್